Breaking: ಸುಪ್ರೀಂಕೋರ್ಟ್ಗೆ ಮತ್ತೆ ಐವರು ಶಾಸಕರ ಅರ್ಜಿ
ಬೆಂಗಳೂರು, ಜುಲೈ 13: ರಾಜ್ಯ ರಾಜಕಾರಣದ ಹಣೆಬರಹ ಏನಾಗಲಿದೆ ಎಂಬುದು ಮಂಗಳವಾರ ನಿರ್ಧಾರವಾಗಲಿದೆ ಎಂಬ ಕುತೂಹಲದ ನಡುವೆಯೇ ಮತ್ತೊಂದು ತಿರುವು ಪಡೆದುಕೊಂಡಿದೆ.
ತಮ್ಮ ರಾಜೀನಾಮೆಗಳನ್ನು ಅಂಗೀಕರಿಸುವಲ್ಲಿ ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇನ್ನೂ ಐವರು ಅತೃಪ್ತ ಶಾಸಕರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ರಾಜೀನಾಮೆ ಸಲ್ಲಿಸಿರುವ 16 ಶಾಸಕರ ಪೈಕಿ ಹತ್ತು ಮಂದಿ ಶಾಸಕರು ಈ ಮೊದಲೇ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈಗ ಎಂಟಿಬಿ ನಾಗರಾಜ್, ರೋಷನ್ ಬೇಗ್, ಆನಂದ್ ಸಿಂಗ್, ಮುನಿರತ್ನ ಮತ್ತು ಕೆ. ಸುಧಾಕರ್ ಕೂಡ ರಾಜೀನಾಮೆ ವಿಳಂಬದ ವಿರುದ್ಧ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಐವರು ಶಾಸಕರು ಪ್ರತ್ಯೇಕವಾಗಿ ಅಫಿಡವಿಟ್ಗಳನ್ನು ಸಲ್ಲಿಸಿದ್ದಾರೆ. ಜತೆಗೆ ಈ ಮೊದಲೇ ಅರ್ಜಿ ಸಲ್ಲಿಸಿದ್ದ ಹತ್ತು ಶಾಸಕರ ಅರ್ಜಿಗಳೊಂದಿಗೆ ತಮ್ಮ ಅರ್ಜಿಯನ್ನೂ ವಿಚಾರಣೆಗೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿರುವುದಾಗಿ ವರದಿಯಾಗಿದೆ.

ರಾಜೀನಾಮೆಗೆ ವೈಯಕ್ತಿಕ ಕಾರಣ ಇಲ್ಲ
ರಾಜೀನಾಮೆ ಸಲ್ಲಿಸಿ ಇಷ್ಟ ದಿನ ಆದರೂ ಅಂಗೀಕಾರ ಮಾಡಿಲ್ಲ. ಇಷ್ಟು ದಿನ ಏಕೆ ವಿಳಂಬ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ನಾವು ಸರ್ಕಾರದ ತಾರತಮ್ಯ ಧೋರಣೆಯ ವಿರುದ್ಧ ಬೇಸರದಿಂದ ರಾಜೀನಾಮೆ ನೀಡಿದ್ದೇವೆಯೇ ಹೊರತು ವೈಯಕ್ತಿಕ ಕಾರಣಕ್ಕೆ ಅಲ್ಲ. ನಮ್ಮ ರಾಜೀನಾಮೆಗೆ ಸರ್ಕಾರದ ದುರಾಡಳಿತವೇ ಕಾರಣ. ಇದನ್ನು ಅರ್ಥ ಮಾಡಿಕೊಳ್ಳದೆ ಸ್ಪೀಕರ್ ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ನೇರ ಆರೋಪ ಮಾಡಿದ್ದಾರೆ.

ನಮಗೆ ಬೆದರಿಕೆ ಹಾಕಲಾಗುತ್ತಿದೆ
ಸರ್ಕಾರದಲ್ಲಿನ ಭ್ರಷ್ಟಾಚಾರವನ್ನು ಪ್ರಶ್ನಿಸಿದರೆ ನಾವೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದೇವೆ ಎಂದು ಅಧಿಕಾರಿಗಳನ್ನು ಬಳಸಿ ಹೆದರಿಸಲಾಗುತ್ತಿದೆ. ನಾವು ಅವರ ಭ್ರಷ್ಟಾಚಾರದ ಕೃತ್ಯಗಳಿಗೆ ಸಹಕರಿಸಲಿಲ್ಲ ಎಂದು ಕಿರುಕುಳ ನಿಡಲಾಗುತ್ತಿದೆ. ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಸರ್ಕಾರವು ಈಗಾಗಲೇ ಅಲ್ಪಮತಕ್ಕೆ ಕುಸಿದಿದೆ ಎಂದು ಅವರು ಆರೋಪಿಸಿದ್ದಾರೆ ಎನ್ನಲಾಗಿದೆ. ಈ ಅಫಿಡವಿಟ್ನಲ್ಲಿ ಜಿಂದಾಲ್ ಭೂಮಿ ವಿಚಾರ ಕೂಡ ಪ್ರಸ್ತಾಪಿಸಲಾಗಿದೆ.

ಕುತೂಹಲ ಹುಟ್ಟಿಸಿದ ಎಂಟಿಬಿ ನಡೆ
ನಿಯಮಾವಳಿಗಳಿಗೆ ಅನುಗುಣವಾಗಿ ಕ್ರಮಬದ್ಧವಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದೇವೆ. ಆದರೆ, ಈವರೆಗೂ ನಮ್ಮ ರಾಜೀನಾಮೆಯನ್ನು ಅಂಗೀಕರಿಸಿಲ್ಲ. ಕೂಡಲೇ ರಾಜೀನಾಮೆ ಅಂಗೀಕರಿಸುವಂತೆ ಸ್ಪೀಕರ್ ಅವರಿಗೆ ಸೂಚನೆ ನೀಡಿ ಎಂದು ಕೋರಿದ್ದಾರೆ. ಇದರಲ್ಲಿ ವಸತಿ ಸಚಿವ ಎಂಟಿಬಿ ನಾಗರಾಜ್ ಅವರ ನಡೆ ಕುತೂಹಲ ಹುಟ್ಟಿಸಿದೆ. ಇತ್ತ ಅವರು ಸಂಧಾನ ಸಭೆಯಲ್ಲಿ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದರೆ, ಅತ್ತ ಅಫಿಡವಿಟ್ ಕೂಡ ಸಲ್ಲಿಕೆ ಮಾಡಿದ್ದಾರೆ.

ಉಳಿದ ಶಾಸಕರ ಅರ್ಜಿ ಜತೆ ವಿಚಾರಣೆ
ಶನಿವಾರ ಅಫಿಡವಿಟ್ ಅಲ್ಲಿಸಲಾಗಿದ್ದು, ಈ ಅರ್ಜಿಯನ್ನು ಇತರೆ ಹತ್ತು ಮಂದಿ ಶಾಸಕರ ಅರ್ಜಿಯೊಂದಿಗೆ ವಿಚಾರಣೆಗೆ ಪರಿಗಣಿಸಬೇಕು ಎಂದು ಕೋರಿದ್ದಾರೆ. ಈ ಅರ್ಜಿಗಳನ್ನು ಸೋಮವಾರವೇ ವಿಚಾರಣೆ ನಡೆಸಿ ಮಂಗಳವಾರ ಉಳಿದ ಅರ್ಜಿಗಳೊಂದಿಗೆ ತೀರ್ಪು ನೀಡುವ ಸಾಧ್ಯತೆಯೂ ಇದೆ.












Click it and Unblock the Notifications