ಯಡಿಯೂರಪ್ಪ ಕಥೆ ಗೋವಿಂದಾ, ಗೋವಿಂದಾ: ಡಿಕೆ ಶಿವಕುಮಾರ್
Recommended Video
ಬೆಂಗಳೂರು, ಜುಲೈ 25: 'ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಅತೃಪ್ತ ಶಾಸಕರೂ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಯಡಿಯೂರಪ್ಪ ಅವರ ಪರಿಸ್ಥಿತಿ ಗೋವಿಂದ ಎನ್ನುವಂತೆ ಆಗುತ್ತದೆ' ಎಂದು ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದರು.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಅವರನ್ನು ಲೇವಡಿ ಮಾಡಿದರು.
ನನ್ನ, ನಿನ್ನ ಯುದ್ದ ಇನ್ನೇನಿದ್ದರೂ ರಣರಂಗದಲ್ಲಿ: ಡಿಕೆಶಿ ಓಪನ್ ಚಾಲೆಂಜ್
'ಇಲ್ಲಿ ಅತೃಪ್ತರು ಯಾರಿಲ್ಲ. ತೃಪ್ತರು, ಸಂತೃಪ್ತರು' ಎಂದು ಈ ಮೊದಲು ಹೇಳಿದ್ದ ಮಾತನ್ನು ಅವರು ಪುನರುಚ್ಚರಿಸಿದರು. 'ರಾಜ್ಯ ರಾಜಕಾರಣದ ಬಗ್ಗೆ ಏನೇನು ಹೇಳಬೇಕೋ ಅಸೆಂಬ್ಲಿಯಲ್ಲಿ ಹೇಳಿದ್ದೇನೆ. ಈಗ ಮಾತಾಡಲು ಹೋಗೊಲ್ಲ. ಸಿಎಲ್ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಇದ್ದಾರೆ. ಪಕ್ಷ ಆದೇಶದಂತೆ ಏನೇನು ಬೇಕೋ ಆ ಕೆಲಸ ಮಾಡುತ್ತಿದ್ದಾರೆ. ನಾನು ಅದರ ಬಗ್ಗೆ ಕಾಮೆಂಟ್ ಮಾಡಲು ಹೋಗುವುದಿಲ್ಲ. ಯಾರು ಏನು ಮಾತಾಡಿದ್ದಾರೋ, ಹೆಬ್ಬಾರ್ ಏನು ಮಾತಾಡಿದ್ದಾರೋ, ಇನ್ನೊಬ್ಬರು ಏನು ಮಾತಾಡಿದ್ದಾರೋ ಗೊತ್ತಿಲ್ಲ' ಎಂದು ಹೇಳಿದರು.
'ಇಷ್ಟು ಸಮಯ ನಿರಂತರ ಓಡಾಡಿ ಆರೋಗ್ಯ ಹದಗೆಟ್ಟಿದೆ. ನಮ್ಮ ಕ್ಷೇತ್ರದ ಜನರಿಗೆ ಸಮಯವನ್ನೇ ಕೊಟ್ಟಿಲ್ಲ. ಅವರಿಗೆ ಕೆಲಸ ಮಾಡಿಕೊಡುವುದು, ಆರೋಗ್ಯದ ಬಗ್ಗೆ ಗಮನ ಹರಿಸುವುದರತ್ತ ನೋಡುತ್ತೇನೆ' ಎಂದರು.
ಮೈತ್ರಿ ನಿರ್ಧರಿಸುವುದು ಹೈಕಮಾಂಡ್
'ರಾಜ್ಯದಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿದ್ದು ರಾಹುಲ್ ಗಾಂಧಿ ಅವರು. ಅವರು ಪಕ್ಷದ ಹೈಕಮಾಂಡ್. ಹೈಕಮಾಂಡ್ ಏನು ಹೇಳುತ್ತಾರೆ ಆ ರೀತಿ ಕೆಲಸ ಮಾಡುತ್ತೇವೆ. 14 ತಿಂಗಳು ಒಟ್ಟಿಗೆ ಕೆಲಸ ಮಾಡಿದ್ದೇವೆ, ಜತೆಗೆ ಹೋರಾಟ ಮಾಡಿದ್ದೇವೆ. ಯಾರೋ ಸರ್ಕಾರ ಬೀಳಿಸಿದ್ದಾರೆ ಎಂದ ತಕ್ಷಣ ಅವರ ಜತೆ ಜಗಳ ಆಡಿದರೆ ಜನ ಉಗಿಯುತ್ತಾರೆ ಅಷ್ಟೆ. ದೇವೇಗೌಡರು ದೆಹಲಿಯಲ್ಲಿರುವವರು ಒಟ್ಟಿಗೆ ಕುಳಿತು ತೀರ್ಮಾನ ಮಾಡಲಿ. ಅದನ್ನು ಬಿಟ್ಟು ಬೇರೆಯವರು ಏನಾದರೂ ಹೇಳಿಕೊಳ್ಳಲಿ. ಡಿಕೆ ಶಿವಕುಮಾರ್ ಅಭಿಪ್ರಾಯ ಇದು. ನನ್ನ ಪಕ್ಷ ಏನು ನಿಲುವು ತೆಗೆದುಕೊಳ್ಳುತ್ತದೆಯೋ ಅದಕ್ಕೆ ಬದ್ಧನಾಗಿರುತ್ತೇನೆ ಅಷ್ಟೇ' ಎಂದರು.
ಸರ್ಕಾರ ರಚಿಸಲು ಬಹುಮತ ಬೇಕಲ್ಲ?
ಯಾವುದೇ ಸರ್ಕಾರ ರಚಿಸಲು ಬಹುಮತ ಬೇಕು. ವಿಧಾನಸಭೆಯಲ್ಲಿ 224 ಸದಸ್ಯರು ಇದ್ದಾರೆ. ಸರ್ಕಾರ ರಚಿಸಲು ಬಹುಮತ ಸಾಬೀತುಪಡಿಸಲು 113 ಸದಸ್ಯರು ಬೇಕು. ಶಾಸಕರು ಅನರ್ಹರಾಗುತ್ತಾರೋ, ರಾಜೀನಾಮೆ ನೀಡಿದ್ದಾರೋ ಎನ್ನುವುದು ಸ್ಪೀಕರ್ಗೆ ಬಿಟ್ಟಿದ್ದು, ನಮಗೆ ಸಂಬಂಧಿಸಿದ್ದಲ್ಲ. ಸ್ಪೀಕರ್ಗೆ ಇರುವ ಪರಮಾಧಿಕಾರನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿಲ್ಲ ಎಂದ ಮೇಲೆ ನಾವು ಪ್ರಶ್ನಿಸಲು ಆಗುತ್ತದೆಯೇ?
'ನಾನು ಕಲಿತ ವಿದ್ಯೆ, ನೋಡಿದ ಪುಸ್ತಕದ ಜ್ಞಾನದಿಂದ ಒಂದಷ್ಟು ಹೇಳಿದ್ದೇನೆ ಅಷ್ಟೇ. ಮಿಕ್ಕಿದ್ದೆಲ್ಲ ಸಿಂಪಲ್ ಲಾಜಿಕ್. ಬ್ರಹ್ಮ ವಿದ್ಯೆ ಏನಲ್ಲ. ಸರ್ಕಾರ ರಚಿಸಲು ಬಹುಮತ ಬೇಕಷ್ಟೇ. ಸರ್ಕಾರ ರಚಿಸಿದ ಬಳಿಕ ರಾಜ್ಯಪಾಲರು ಅವರನ್ನು ಕರೆದು ನೀನು ಬಹುಮತ ಸಾಬೀತುಪಡಿಸಲು ಹೇಳಲೇಬೇಕು. ಅದು ಒಂದು ದಿನವೋ, ಒಂದು ವಾರವೋ ಅಥವಾ ಹದಿನೈದು ದಿನವೋ, ಪ್ರಮಾಣವಚನ ಬೋಧಿಸಿದ ಬಳಿಕ ಸಾಬೀತುಪಡಿಸಬೇಕು' ಎಂದು ಹೇಳಿದರು.
"ಯಶ ಗಳಿಸಲು ಕೃಷ್ಣನ ತಂತ್ರ, ಯಡಿಯೂರಪ್ಪರ ಛಲ ಇರ್ಬೇಕು": ಡಿಕೆಶಿ
ಯಡಿಯೂರಪ್ಪ ಅವರನ್ನು ಬಿಡುತ್ತಾರಾ?
ರಾಜೀನಾಮೆ ಕೊಟ್ಟು ಹೋಗಿರುವವರು ಯಡಿಯೂರಪ್ಪ ಅವರ ಜತೆ ಪ್ರಮಾಣವಚನ ಸ್ವೀಕಾರ ಮಾಡಲು ಅವಕಾಶ ನೀಡಲಿಲ್ಲವೆಂದರೆ ಬಿಡುತ್ತಾರೆಯೇ? ನಮ್ಮನ್ನೇ ಬಿಡಲಿಲ್ಲ ಅವರು. 30-40 ವರ್ಷ ಸಾಕಿ ಸಲಹಿ, ಅಷ್ಟೆಲ್ಲ ತ್ಯಾಗ ಮಾಡಿ ಬೆಳೆಸಿದ್ದೇವೆ. ಕ್ಷೇತ್ರದ ಜನರು ಎಷ್ಟೊಂದು ಸಂಕಟಪಟ್ಟಿದ್ದಾರೆ. ಹೋರಾಟ ಮಾಡಿದ್ದಾರೆ, ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಅಷ್ಟೆಲ್ಲ ತ್ಯಾಗ ಮಾಡಿ ದೊಡ್ಡವರನ್ನಾಗಿ ಮಾಡಿದವರನ್ನೇ ಬಿಡಲಿಲ್ಲ ಅವರು, ಇನ್ನು ಯಡಿಯೂರಪ್ಪ ಅವರನ್ನು ಬಿಡುತ್ತಾರೆಯೇ? ಹಂಗೇ ನುಂಗಿ ಬಿಡುತ್ತಾರೆ. ಹರ್ಕೊಂಡು ಹರ್ಕೊಂಡ್ ಹರ್ಕೊಂಡ್ ನುಂಗಿ ಬಿಡ್ತಾರೆ.
ಪ್ಯಾಂಟ್ ಶರ್ಟ್ ಎಲ್ಲ ಹರಿದುಬಿಡುತ್ತಾರೆ
ಯಡಿಯೂರಪ್ಪ ಪ್ರಮಾಣವಚನ ತೆಗೆದುಕೊಳ್ಳಬೇಕಾದರೆ 15-16 ಜನರಲ್ಲಿ ಕುಮಟಳ್ಳಿ ಒಬ್ಬ ಬಿಡಬಹುದೇನೋ. ಮಿಕ್ಕವರು ಯಾರೂ ಯಡಿಯೂರಪ್ಪ ಅವರನ್ನು ಬಿಡುವುದಿಲ್ಲ. ಪ್ಯಾಂಟ್ ಶರ್ಟ್ ಎಲ್ಲ ಹರಿದುಹಾಕಿಬಿಡುತ್ತಾರೆ. ಜೇಬು, ಪ್ಯಾಂಟು ಎಲ್ಲ ಕಿತ್ಕೊಂಡು, ಯಡಿಯೂರಪ್ಪ ಅವರ ಸುತ್ತಮುತ್ತ ಇರುವ ಮುತ್ತುರತ್ನಗಳನ್ನೆಲ್ಲ ಕಿತ್ತುಹಾಕುತ್ತಾರೆ. ಅವರಿಗೆ ಇದೆಲ್ಲ ಗೊತ್ತಿಲ್ಲ. ಒಬ್ಬನಿಗೆ ಬೆಂಗಳೂರು ಸಿಟಿ ಬೇಕು, ಒಬ್ಬನಿಗೆ ಪವರ್ ಬೇಕು, ಇನ್ನೊಬ್ಬನಿಗೆ ಇರಿಗೇಷನ್ ಬೇಕು. ಮತ್ತೊಬ್ಬರಿಗೆ ಫಾರೆಸ್ಟ್ ಬೇಕು, ಕಂದಾಯ ಬೇಕು. ಎಲ್ಲವನ್ನೂ ಹಂಚಿಕೊಂಡಿದ್ದಾರೆ. ಪಟ್ಟಿ ಸಿದ್ಧಮಾಡಿ ಇಟ್ಟಿದ್ದಾರೆ.
ಪಕ್ಷೇತರರು ನಮ್ಮ ವಿರುದ್ಧ ಹೇಗೆ ಮತ ಹಾಕುತ್ತಾರೋ ನೋಡೋಣ: ಡಿಕೆಶಿ
ಯಡಿಯೂರಪ್ಪ ಕಥೆ ಗೋವಿಂದಾ...
'ಬಿಜೆಪಿ ಮೇಲೆ ಹೈಕಮಾಂಡ್ ಕಂಟ್ರೋಲ್ ಹೇಗೆ ಇದೆಯೋ ನಮಗೆಲ್ಲ ಗೊತ್ತಿಲ್ಲ. ಆದರೆ ನಮ್ಮ ಸ್ನೇಹಿತರ ಪರಿಸ್ಥಿತಿ ಗೊತ್ತಿದೆ. ಅದನ್ನು ಮಾತ್ರ ಹೇಳುತ್ತೇನೆ. ಯಡಿಯೂರಪ್ಪ ಜತೆಗೆ ಅತೃಪ್ತ ಶಾಸಕರೂ ಪ್ರಮಾಣವಚನ ಸ್ವೀಕರಿಸಿದರೆ ಯಡಿಯೂರಪ್ಪ ಬದುಕುತ್ತಾರೆ. ಇಲ್ಲದಿದ್ದರೆ ಯಡಿಯೂರಪ್ಪ ಗೋವಿಂದಾ, ಗೋವಿಂದಾ...' ಎಂದು ವ್ಯಂಗ್ಯವಾಗಿ ಹೇಳಿದರು.