ಬಹುಮತ ಇಲ್ಲದಿದ್ದರೂ ವರ್ಗಾವಣೆ ನಿಂತಿಲ್ಲ: ಕಾರಜೋಳ ಆರೋಪ
ಬೆಂಗಳೂರು, ಜುಲೈ 20: ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಇಲ್ಲದೆ ಹೋದರೂ ವರ್ಗಾವಣೆ ಮಾಡುವ ಪ್ರಕ್ರಿಯೆಗೆ ಮಾತ್ರ ನಿರಂತರವಾಗಿ ನಡೆಯುತ್ತಿದೆ ಎಂದು ಬಿಜೆಪಿ ಶಾಸಕ ಗೋವಿಂದ ಕಾರಜೋಳ ಆರೋಪಿಸಿದರು.
ಬೆಂಗಳೂರಿನ ಯಲಹಂಕ ಸಮೀಪದ ರಮಾಡ ರೆಸಾರ್ಟ್ ಬಳಿ ಶನಿವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಆದರೂ ಈ ನಡುವೆಯೇ ಸಾವಿರಾರು ಅಧಿಕಾರಿಗಳ ವರ್ಗಾವಣೆ ಮತ್ತು ಬಡ್ತಿ ಪ್ರಕ್ರಿಯೆ ನಡೆಯುತ್ತಿದೆ. ಸಾವಿರಾರು ಫೈಲ್ಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ವರ್ಗಾವಣೆ ಮಾಡುವುದಕ್ಕೆ ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಸಮ್ಮಿಶ್ರ ಸರ್ಕಾರಕ್ಕೆ ರಾಜ್ಯದ ಬಗ್ಗೆ ಕಳಕಳಿ ಇದ್ದರೆ ಮೊದಲು ವಿಶ್ವಾಸಮತ ಯಾಚಿಸಲಿ. ಅವರಿಗೆ ಬೆಂಬಲವಿದ್ದರೆ ಅಧಿಕಾರದಲ್ಲಿ ಮುಂದುವರಿಯಲಿ. ಆದರೆ, ವಿಶ್ವಾಸಮತ ಯಾಚಿಸದೆ ಸದನದಲ್ಲಿ ಹರಿಕಥೆ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಇದು ಯಾವ ಸಂಪ್ರದಾಯ? ಎಂದು ಕಿಡಿಕಾರಿದರು.

ಸೋಮವಾರದವರೆಗೂ ರೆಸಾರ್ಟ್ನಲ್ಲಿಯೇ ಉಳಿದುಕೊಳ್ಳುವಂತೆ ಪಕ್ಷದ ನಾಯಕ ಯಡಿಯೂರಪ್ಪ ಅವರು ಬಿಜೆಪಿ ಶಾಸಕರಿಗೆ ಸೂಚನೆ ನೀಡಿದ್ದಾರೆ. ಹೊರಗೆ ಹೋಗಿರುವವರಿಗೂ ರೆಸಾರ್ಟ್ಗೆ ಬರುವಂತೆ ಅವರು ಕರೆ ಮಾಡಿದ್ದಾರೆ. ಶನಿವಾರವನ್ನು ಅವರು ರೆಸಾರ್ಟ್ನಲ್ಲಿ ಶಾಸಕರೊಂದಿಗೆ ಕಳೆಯಲಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications