ಬಿಜೆಪಿ ಶಾಸಕಾಂಗ ಸಭೆಯಲ್ಲಿ ಏನಾಯ್ತು? ವಿವರ ನೀಡಿದ ಲಿಂಬಾವಳಿ
ಬೆಂಗಳೂರು, ಜುಲೈ 09: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗಳು ಘಟಿಸುತ್ತಿರುವ ಹೊತ್ತಲ್ಲಿ ಬಿಜೆಪಿ ನಡೆಸಿದ ಶಾಸಕಾಂಗ ಸಭೆಯಲ್ಲಿ ಏನೆಲ್ಲ ಚರ್ಚೆಯಾಯಿತು ಎಬ ಕುರಿತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಅರವಿಂದ್ ಲಿಂಬಾವಳಿ ಮಾಧ್ಯಮಗಳಿಗೆ ವಿವರಣೆ ನೀಡಿದ್ದಾರೆ.
ಬಹುಮತ ಕಳೆದುಕೊಂಡಿರುವ ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿ, ನಾಳೆ 10.07.2019ರಂದು ಬೆಳಿಗ್ಗೆ 11.30ಕ್ಕೆ ಬಿಜೆಪಿಯ ಎಲ್ಲಾ ಶಾಸಕರೂ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲು ಇಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮುಖ್ಯಮಂತ್ರಿಗಳು ಬಹುಮತ ಕಳೆದುಕೊಂಡಿರುವುದರಿಂದ ಇದೇ ಸಂದರ್ಭದಲ್ಲಿ ವಿಧಾನಸಭಾ ಅಧಿವೇಶನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಉನ್ನತ ಮಟ್ಟದ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಲಿದೆ. ನಾಳೆ (10.07.2019) ಮಧ್ಯಾಹ್ನ 1ಗಂಟೆಗೆ ರಾಜ್ಯಪಾಲರ ಭೇಟಿ ಮಾಡಲಾಗುವುದು ಎಂದು ಲಿಂಬಾವಳಿ ತಿಳಿಸಿದರು.

ಸ್ಪೀಕರ್ ಭೇಟಿ ಮಾಡುತ್ತೇವೆ
ರಾಜ್ಯದ ರಾಜಕೀಯ ವಿದ್ಯಮಾನಗಳನ್ನು ಗಮನಿಸುತ್ತಿರುವುದರಿಂದ ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸುವಂತೆ ಬಿಜೆಪಿ ನಿಯೋಗವು ರಾಜ್ಯಪಾಲರಿಗೆ ಮನವಿ ಮಾಡಲಿದೆ. ನಾಳೆಯೇ ಪಕ್ಷದ ಉನ್ನತ ಮಟ್ಟದ ನಿಯೋಗವು ಮಧ್ಯಾಹ್ನ 3ಗಂಟೆಗೆ ವಿಧಾನಸಭಾ ಅಧ್ಯಕ್ಷರನ್ನು ಭೇಟಿ ಮಾಡಿ, ಈಗಾಗಲೇ ರಾಜೀನಾಮೆ ನೀಡಿರುವ ಆಡಳಿತ ಪಕ್ಷದ ಶಾಸಕರ ರಾಜೀನಾಮೆ ಪರಿಶೀಲಿಸಿ ತಕ್ಷಣವೇ ಅಂಗೀಕರಿಸುವಂತೆ ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.

ರಾಜೀನಾಮೆಯಿಂದ ಸಾಂವಿಧಾನಿಕ ಬಿಕ್ಕಟ್ಟು
ಶಾಸಕರ ರಾಜೀನಾಮೆಯು ರಾಜ್ಯದ ಹಿತದೃಷ್ಟಿಯಿಂದ ಮಹತ್ವದ ವಿಷಯವಾಗಿದೆ. ಈ ಕಾರಣದಿಂದ ಸರ್ಕಾರವೇ ಅಲ್ಪಮತಕ್ಕೆ ಕುಸಿದಿದೆ. ಆದ್ದರಿಂದ ನಾವು ಶಾಸಕರ ರಾಜೀನಾಮೆಯ ವಿಷಯವನ್ನು ಶೀಘ್ರವೇ ಇತ್ಯರ್ಥಪಡಿಸುವಂತೆ ಸಭಾಧ್ಯಕ್ಷರನ್ನು ಕೋರುತ್ತೇವೆ.
ನಾಳೆ ಮಧ್ಯಾಹ್ನ 3ಗಂಟೆಗೆ ತಾವು ಲಭ್ಯರಿರುವುದಾಗಿ ಸ್ಪೀಕರ್ ತಿಳಿಸಿದ್ದಾರೆ. ಇವತ್ತು ಭೇಟಿಗೆಂದು ಹೋಗಿದ್ದರೂ ಸ್ಪೀಕರ್ ಲಭ್ಯರಿರಲಿಲ್ಲ. ಆದರೆ ದೂರವಾಣಿಯಲ್ಲಿ ಮಾತನಾಡಿದಾಗ ನಾಳೆ ಮಧ್ಯಾಹ್ನ 3ಗಂಟೆಯ ನಂತರ ಸಿಗುವುದಾಗಿ ಸ್ಪೀಕರ್ ತಿಳಿಸಿದ್ದಾರೆ.
ರಾಜೀನಾಮೆ ನೀಡಿರುವ ಶಾಸಕರಿಗೂ ಬಿಜೆಪಿಗೂ ಸಂಬಂಧವಿಲ್ಲ ಎನ್ನುವುದು ನಿಜ. ಆದರೆ ಅವರ ರಾಜೀನಾಮೆಯಿಂದ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿರುವುದರಿಂದ ರಾಜೀನಾಮೆ ಶೀಘ್ರ ಅಂಗೀಕಾರವಾಗಬೇಕು. ಈ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಅಂತಹ ಸಂದರ್ಭದಲ್ಲಿ ಸದನ ಹೇಗೆ ನಡೆಯುತ್ತದೆ ಎನ್ನುವ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗುವುದರಿಂದ ನಾವು ರಾಜ್ಯಪಾಲರು ಮತ್ತು ಸ್ಪೀಕರ್ ಇಬ್ಬರನ್ನೂ ಭೇಟಿ ಮಾಡಲು ನಿರ್ಧರಿಸಿದ್ದೇವೆ ಎಂದರು.

ರಿವರ್ಸ್ ಆಪರೇಷನ್ ಬಗ್ಗೆ ಭಯವಿಲ್ಲ
ಸದನದಲ್ಲೇ ಬಹುಮತ ಪರೀಕ್ಷೆಗೆ ಒತ್ತಾಯಿಸಬೇಕೇ ಬೇಡವೇ ಎನ್ನುವ ಬಗ್ಗೆ ಬಿಜೆಪಿ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶ್ರೀ ಅರವಿಂದ ಲಿಂಬಾವಳಿ ಅವರು, ಈ ಕುರಿತು ನಾಳೆ ಚರ್ಚಿಸುತ್ತೇವೆ ಎಂದರು.
ನಮ್ಮ ಶಾಸಕರ ಬಗ್ಗೆ ನಮಗೆ ವಿಶ್ವಾಸವಿದೆ. ನಮಗೆ ರಿವರ್ಸ್ ಆಪರೇಷನ್ ಬಗ್ಗೆ ಭಯವಿಲ್ಲ. ನಾವು ರೆಸಾರ್ಟ್ಗೂ ಹೋಗಿಲ್ಲ. ಶಾಸಕಾಂಗ ಪಕ್ಷದ ಸಭೆಗೆ ಗೈರಾಗಲು ಕೆಲವು ಶಾಸಕರು ಅನುಮತಿ ಪಡೆದಿದ್ದರು. ಕೆಲವರು ಊರಿನಲ್ಲಿಲ್ಲದ ಕಾರಣ ಗೈರಾಗಿದ್ದಾರೆ. ನಮ್ಮೆಲ್ಲ ಶಾಸಕರೂ ಅಧ್ಯಕ್ಷರು ಮತ್ತು ಪ್ರಮುಖರ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ಬಿಜೆಪಿ ಶಾಸಕರನ್ನು ಸೆಳೆಯುವ ಯತ್ನ!
ನಮ್ಮ ಶಾಸಕರನ್ನು ಸೆಳೆಯಲು ಕಾಂಗ್ರೆಸ್-ಜೆಡಿಎಸ್ ನಾಯಕರು ಯತ್ನಿಸುತ್ತಿರುವ ಸುಳಿವು ನಮಗೆ ಇದೆ. ನಮ್ಮ ಶಾಸಕರು ಅದಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಸರ್ಕಾರವೇ ಬಹಿರಂಗವಾಗಿ ಕುದುರೆ ವ್ಯಾಪಾರಕ್ಕಿಳಿದಿದೆ. ಸ್ವತಃ ಸಚಿವ ಡಿ.ಕೆ.ಶಿವಕುಮಾರ್ ಅವರೇ, ರಾಜೀನಾಮೆ ನೀಡಿರುವ ಶಾಸಕರೂ ಮಂತ್ರಿಯಾಗಲಿ ಬಿಡಿ ಎಂದಿದ್ದಾರೆ. ಅವರಿಗೆ ಈಗ ಶಾಸಕರ ನೆನಪಾಗಿದೆ. ಆದರೆ ಶಾಸಕರು ಕೇಳುತ್ತಿರುವುದು ಮಂತ್ರಿಗಿರಿಯಲ್ಲ. ಬದಲಾಗಿ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಕೇಳುತ್ತಿದ್ದಾರೆ. ಹೀಗಾಗಿ ಸರ್ಕಾರ ಭದ್ರವಾಗಿರುವುದಿಲ್ಲ ಎನ್ನುವ ಸ್ಪಷ್ಟ ಅಭಿಪ್ರಾಯ ನಮ್ಮದಾಗಿದೆ. ಬುಧವಾರ ಸಂಜೆ ಮತ್ತೆ ಬಿಜೆಪಿ ಶಾಸಕಾಂಗ ಸಭೆಯನ್ನು ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಕರೆಯಲಾಗಿದೆ ಎಂದು ಅರವಿಂದ ಲಿಂಬಾವಳಿ ಹೇಳಿದರು.












Click it and Unblock the Notifications