Get Updates
Get notified of breaking news, exclusive insights, and must-see stories!

ಕರ್ನಾಟಕ ಮೊಬೈಲ್ ಒನ್ ರಾಜ್ಯದ ಜನರಿಗೆ ಅರ್ಪಣೆ

ಬೆಂಗಳೂರು, ಡಿ. 8 : ಕರ್ನಾಟಕದ ಹಳ್ಳಿ ಅಥವಾ ನಗರ ಮಾತ್ರವಲ್ಲ ದೇಶದ ಯಾವುದೇ ಮೂಲೆಯಲ್ಲಿರಲಿ, ವರ್ಷದ 365 ದಿನ, ದಿನದ 24 ಗಂಟೆ, ಯಾವುದೇ ಸಮಯ, ಯಾವುದೇ ಸ್ಥಳದಲ್ಲಿ ಸರಕಾರದ 4 ಸಾವಿರಕ್ಕೂ ಹೆಚ್ಚು ಸರಕಾರಿ ಮತ್ತು ಖಾಸಗಿ ಸೇವೆಗಳನ್ನು ಮೊಬೈಲಿನಲ್ಲಿ ದೊರಕಿಸಿಕೊಡುವ 'ಕರ್ನಾಟಕ ಮೊಬೈಲ್ ಒನ್' ಆಪ್ ಅನ್ನು ಕರ್ನಾಟಕದ ಜನತೆಯ ಕೈಗಿತ್ತಿದೆ ಸಿದ್ದರಾಮಯ್ಯ ಸರಕಾರ.

ಇನ್ನು ಮೇಲೆ ಎಫ್ಐಆರ್ ಸಲ್ಲಿಸಲು ಪೊಲೀಸ್ ಸ್ಟೇಷನ್ನಿಗೆ ಹೋಗಬೇಕಿಲ್ಲ, ಆದಾಯ ತೆರಿಗೆ ಪಾವತಿಸಲು ಇನ್ಕಂ ಟ್ಯಾಕ್ಸ್ ಕಚೇರಿಗೆ ಅಲೆಯಬೇಕಿಲ್ಲ. ಅಷ್ಟೇ ಏಕೆ, *161# ಬಳಸಿ ಬಸ್ ರೈಲು ಟಿಕೆಟ್ ಬುಕ್ ಮಾಡುವ, ವೈದ್ಯರ ಬಗ್ಗೆ ಮಾಹಿತಿ ಪಡೆಯುವ ಹತ್ತುಹಲವಾರು ಸೇವೆಗಳನ್ನು ಒಂದೇ ಏಕೀಕೃತ ಮಹಾದ್ವಾರದಲ್ಲಿ ಒದಗಿಸುವ ಕ್ರಾಂತಿಕಾರಿ ಹೆಜ್ಜೆಯನ್ನು ಸರಕಾರ ಇಟ್ಟಿದೆ.


ಏಕೀಕೃತ ಮೊಬೈಲ್ ಆಡಳಿತ ವೇದಿಕೆಯನ್ನು ನಾಗರಿಕರಿಗೆ ಒದಗಿಸಿದ ಮೊದಲ ರಾಜ್ಯ ಎಂಬ ಕೀರ್ತಿ ತಂದ ಈ ಯೋಜನೆಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸೋಮವಾರ, ಡಿಸೆಂಬರ್ 8ರಂದು ತುಮಕೂರು ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ರಾಜ್ಯದ ಜನತೆಯ ಕೈಗಿತ್ತಿದ್ದಾರೆ.

ಅದ್ಭುತ ತಂತ್ರಜ್ಞಾನ ಬಳಸಿ ರೂಪಿಸಿರುವ ಈ ಯೋಜನೆ ಕರ್ನಾಟಕದ ಜನರ ಗುಣಮಟ್ಟವನ್ನು ಉತ್ತಮಪಡಿಸಲಿದೆ ಎಂದು ಸಿದ್ದರಾಮಯ್ಯ ಅವರ ಈ ಪ್ರಯತ್ನವನ್ನು ಪ್ರಣಬ್ ಮುಖರ್ಜಿ ಅವರು ಶ್ಲಾಘಿಸಿದರು. ಆಡಳಿತ ನಿಜವಾದ ಪರಿವರ್ತನೆ ಕರ್ನಾಟಕದಲ್ಲಿ ನಡೆಯುತ್ತಿದೆ ಎಂದು ಸಿದ್ದರಾಮಯ್ಯ ಅವರ ಬೆನ್ನು ತಟ್ಟಿದರು ಪ್ರಣಬ್. ['ಕರ್ನಾಟಕ ಮೊಬೈಲ್ ಒನ್' ಸೇವೆ ಪಡೆಯುವುದು ಹೇಗೆ?]


ಮೊಬೈಲ್ ಒನ್ ಅಪ್ಲಿಕೇಷನ್‌ನ ರೂವಾರಿ : ಸರಕಾರದ ಈ ಮಹತ್ವಾಕಾಂಕ್ಷೆಯ ಕರ್ನಾಟಕ ಮೊಬೈಲ್ ಒನ್ ಅಪ್ಲಿಕೇಷನ್‌ನ ರೂವಾರಿ ಐಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯದರ್ಶಿ ಶ್ರೀವತ್ಸ ಕೃಷ್ಣನ್. ಅವರು ಮತ್ತು ಅವರ ತಂಡ ಸತತ ಹದಿನೆಂಟು ತಿಂಗಳುಗಳ ಕಾಲ ಯುದ್ಧೋಪಾದಿಯಲ್ಲಿ ದುಡಿದು ಆಡಳಿತ ಜನರ ಬೆರಳ ತುದಿಯಲ್ಲೇ ಸಿಗುವ ಹಾಗೆ ಮಾಡಿದೆ.

ಈ ಯೋಜನೆಯ ಹಿಂದೆ ಇರುವ ವ್ಯಕ್ತಿಗಳನ್ನು ಸ್ಮರಿಸಿದ ಶ್ರೀವತ್ಸ ಕೃಷ್ಣ ಅವರು, ಅಪ್ಲಿಕೇಷನ್ನಿನ ಉಪಯೋಗ ಮತ್ತು ಬಳಕೆಯ ವಿಧಾನವನ್ನು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮುಖಾಂತರ ವಿವರಿಸಿದರು. ಹಾಲಿವುಡ್ ಚಿತ್ರಗಳಾದ ಗಾಡ್ಜಿಲ್ಲಾ, ಸ್ಕೈಫಾಲ್, ಲೈಫ್ ಆಫ್ ಪೈ ಮುಂತಾದ ಚಿತ್ರಗಳ ಗ್ರಾಫಿಕ್ಸ್ ತಯಾರಿಸಿದ್ದು ಕೂಡ ಬೆಂಗಳೂರಿನಲ್ಲೇ ಎಂದು ಹೆಮ್ಮೆಯಿಂದ ಹೇಳಿದರು.

ಐಎಎಸ್ ಅಧಿಕಾರಿ ಗುಂಜನ್ ಕೃಷ್ಣ ಅವರು ತಮ್ಮ ಹಿಂದೆ ಬೀಳದಿದ್ದರೆ, ಒಬ್ಬ ಕಾರ್ಯದರ್ಶಿಯಿಂದ ಮತ್ತೊಬ್ಬ ಕಾರ್ಯದರ್ಶಿಯವರೆಗೆ ಅಲೆದಾಡದಿದ್ದರೆ ಇದು ಸಾಧ್ಯವೇ ಆಗುತ್ತಿರಲಿಲ್ಲ ಎಂದು ಶ್ರೀವತ್ಸ ಕೃಷ್ಣ ಅವರು ಗುಂಜನ್ ಅವರಿಗೆ ಶ್ರೇಯದ ಸಮಪಾಲು ನೀಡಲು ಮರೆಯಲಿಲ್ಲ.


ಸಿದ್ದರಾಮಯ್ಯ ಅವರನ್ನು ಹಾಡಿಹೊಗಳಿದ ರಾಜ್ಯಪಾಲ ವಜುಭಾಯ್ 'ಕರ್ನಾಟಕ ಮೊಬೈಲ್ ಒನ್' ನಂಥ ಯೋಜನೆ ಆರಂಭವಾಗಿರುವುದು ಜಗತ್ತಿನಲ್ಲಿಯೇ ಪ್ರಥಮ ಎಂದರು. ಎಲ್ಲರಲ್ಲಿಯೂ ಸಾಮರ್ಥ್ಯ ಇರುತ್ತದೆ. ಆದರೆ ಆ ಸಾಮರ್ಥ್ಯವನ್ನು ಸರಿಯಾಗಿ ಉಪಯೋಗಿಸಿಕೊಂಡವರು ಸಿದ್ದರಾಮಯ್ಯ. ಇದರ ಪ್ರತಿಫಲ ಜನರಿಗೆ ಸಿಗುವಂತಾಗಲಿ ಎಂದು ಹಾರೈಸಿದರು.

ಆಪ್ ಇನ್‌ಸ್ಟಾಲ್ ಮಾಡುವುದು ಹೇಗೆ? : ಸ್ಮಾರ್ಟ್ ಫೋನ್ ಇರುವವರು ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ, 'Karnataka Mobile-One' ಅಂತ ಹುಡುಕಿದರೆ ಈ ಅಪ್ಲಿಕೇಷನ್ ಸಿಗುತ್ತದೆ. 12 ಎಂಬಿಗಿಂತ ಸ್ವಲ್ಪ ಹೆಚ್ಚಿರುವ ಇದನ್ನು ಇನ್‌ಸ್ಟಾಲ್ ಮಾಡಿಕೊಂಡ ನಂತರ, ಸುಲಭ ವಿಧಾನಗಳಲ್ಲಿ ರಿಜಿಸ್ಟರ್ ಮಾಡಿಕೊಂಡು ಇದನ್ನು ಬಳಸಬಹುದು.

ಈ ಆಪ್‌ನ್ನು ಆಂಡ್ರಾಯ್ಡ್ ಮತ್ತು ಐಒಎಸ್ ವೇದಿಕೆಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಏರ್‌ಟೆಲ್, ಬಿಎಸ್‌ಎನ್‌ಎಲ್, ವೊಡಾಫೋನ್, ಏರ್‌ಸೆಲ್, ಐಡಿಯಾ, ರಿಲಯನ್ಸ್ ಸೇರಿದಂತೆ ಎಲ್ಲ ಪ್ರಮುಖ ಮೊಬೈಲ್ ಸೇವಾಸಂಸ್ಥೆಗಳು ಇದರೊಂದಿಗಿವೆ. ನಾಗರೀಕರು *161# ಸಂಖ್ಯೆಗೆ ಡಯಲ್ ಮಾಡಿ ಈ ವೇದಿಕೆಯ ಎಲ್ಲ ಸೇವೆಗಳನ್ನು ಬಳಕೆ ಮಾಡಿಕೊಳ್ಳಬಹುದು.

Karnataka Mobile One : E-governance at your finger tips

ಬಳಕೆ ಸುಲಭ : ಕರ್ನಾಟಕ ಮೊಬೈಲ್ ಒನ್ ವೇದಿಕೆ ಸೇವೆಗಳು ಸರಳವಾದ ಫೋನ್‌ಗಳಲ್ಲೂ ಇಂಟಿಗ್ರೆಟೆಡ್ ವಾಯ್ಸ್ ರೆಸ್ಪಾನ್ಸ್(ಐವಿಆರ್), ಎಸ್‌ಎಂಎಸ್ ಅಥವಾ ಮೊಬೈಲ್ ವೆಬ್ ಮೂಲಕ ಲಭ್ಯವಿದ್ದು ಸಾಮಾನ್ಯರು ಸುಲಭವಾಗಿ ಬಳಸಬಹುದು.

ಏನೇನು ಮಾಡಬಹುದು? : ದಿನಬಳಕೆ ಬಿಲ್‌ಗಳನ್ನು, ಆಸ್ತಿ ತೆರಿಗೆಗಳನ್ನು ಪಾವತಿಸಬಹುದು. ರೈಲ್ವೆ, ಬಸ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಆದಾಯ ತೆರಿಗೆ ಪಾವತಿ, ಎಂ-ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಮತ್ತು ಇತರೆ ಸೇವೆಗಳನ್ನು ತಮ್ಮ ಸ್ಮಾರ್ಟ್‌ಫೋನ್ ಮೂಲಕ ಪಡೆಯಬಹುದು. ಜಿ2ಸಿ, ಬಿ2ಸಿ ಮತ್ತು ಜಿ2ಬಿ ಸೇವೆಗಳು ಸೇರಿದಂತೆ 4500ಕ್ಕೂ ಅಧಿಕ ಸೇವೆಗಳು ಕರ್ನಾಟಕದ ನಾಗಿಕರಿಗೆ ಈ ವೇದಿಕೆಯಡಿ ದೊರೆಯಲಿದೆ.

ನಾಗರೀಕರು, ತಮ್ಮ ಪ್ರದೇಶದಲ್ಲಿನ ಕೆಲಸ ಮಾಡದ ಬೀದಿದೀಪ, ರಸ್ತೆಯಲ್ಲಿನ ಗುಂಡಿಗಳ ಛಾಯಾಚಿತ್ರ ತೆಗೆದು ಸಂಬಂಧಿತ ಅಧಿಕಾರಿಗಳಿಗೆ ದೂರು ನಿವಾರಣೆಗೆ ಲಗ್ಗತ್ತಿಸಬಹುದು. ಐಕೇರ್ ಎಂಬ ಈ ಸೇವೆ ಸರ್ಕಾರ ಮತ್ತು-ನಾಗರೀಕರನ್ನು ಒಂದು ರೀತಿ ಸಂಪರ್ಕದಲ್ಲಿಡುವ ಮಾದರಿ. ಅಷ್ಟು ಮಾತ್ರವಲ್ಲ, ಪುಂಡರಿಂದ ತೊಂದರೆಗೊಳಗಾದ ಮಹಿಳೆಯರು ಕೂಡಲೆ ಈ ಆಪ್ ಬಳಸಿ ಪೊಲೀಸರಿಗೆ ಅಲರ್ಟ್ ಕಳುಹಿಸಬಹುದು.

ಕರ್ನಾಟಕ ಮೊಬೈಲ್ ಒನ್ ಅತ್ಯಾಧುನಿಕ ಡಿಜಿಟಲ್ ಮಾಧ್ಯಮವಾಗಿದ್ದು ತನ್ನ ಬಲವರ್ಧನೆಗಾಗಿ ಹಾಗೂ ಕೆಲ ಸೇವೆಗಳಿಗೆ ಪಾವತಿಸಲು ಜಾಹೀರಾತುಗಳಿಗೆ ಮೊರೆ ಹೋಗಲಿದೆ. ಜಾಹೀರಾತು, ಬಳಕೆ ಶುಲ್ಕ ಮತ್ತು ಚಂದಾದಾರಿಕೆ ಮೂಲಕ ಆದಾಯ ಗಳಿಸಲಿದೆ. ಡೆಬಿಟ್‌ಕಾರ್ಡ್, ಕ್ರೆಡಿಟ್‌ಕಾರ್ಡ್, ಆನ್‌ಲೈನ್ ವ್ಯಾಲೆಟ್, ಪೇಗೌ ಮೂಲಕ ಪಾವತಿಸಬಹುದು. ಪಾವತಿಗಳನ್ನು ಆನ್‌ಲೈನ್ ಪಾವತಿ ಮಾದರಿಯಲ್ಲಿ ಬಹು ವಿಧದಲ್ಲೂ ಮಾಡಬಹುದು. ಜೊತೆಗೆ ಕರ್ನಾಟಕ ವ್ಯಾಲೆಟ್ ಎಂಬ ವಿಭಿನ್ನ ಪಾವತಿ ವ್ಯವಸ್ಥೆಯಿದೆ.

ದೇಶದ ಮೊದಲ ಮೊಬೈಲ್-ಆಡಳಿತ ವೇದಿಕೆ ಸರ್ಕಾರಿ-ಖಾಸಗಿ ಮಾದರಿಯದ್ದಾಗಿದ್ದು ಬೃಹತ್ ಮೊಬೈಲ್ ಮೌಲ್ಯಾಧಾರಿತ ಸೇವಾ ಸಂಸ್ಥೆ ಐಎಂಐ ಮೊಬೈಲ್ ಪಾಲುದಾರಿಕೆಯಲ್ಲಿ ರೂಪುಗೊಂಡಿದೆ. ಸರ್ಕಾರಿ ಘೋಷಣೆಗಳಿಗೆ ಹೊಸ ಟ್ವಿಟ್ಟರ್ ಅಲರ್ಟ್ ವ್ಯವಸ್ಥೆ ಕೂಡ ಇದೆ. ಫೇಸ್‌ಬುಕ್‌ನೊಂದಿಗೆ ಕೈಜೋಡಿಸಿ ತುರ್ತು ಪರಿಹಾರಗಳನ್ನು ಒದಗಿಸುವ ವವ್ಯಸ್ಥೆ ಕೂಡ ಪ್ರಗತಿಯಲ್ಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+