ಫುಟ್ಪಾತ್ ಒತ್ತುವರಿ ತೆರವುಗೊಳಿಸಲು ಬಿಬಿಎಂಪಿಗೆ ಹೈಕೋರ್ಟ್ ಸೂಚನೆ
ಬೆಂಗಳೂರು, ಜುಲೈ 1: ಫುಟ್ಪಾತ್ ಒತ್ತುವರಿ ತೆರವುಗೊಳಿಸುವಂತೆ ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಇಲ್ಲದಿದ್ದರೆ ಫುಟ್ಪಾತ್ ಒತ್ತುವರಿ ತೆರವು ನಾವೇ ಮಾಡಿಸುತ್ತೇವೆ ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ಹೇಳಿದೆ.
ನಗರದಲ್ಲಿ ಸಾರ್ವಜನಿಕರ ಓಡಾಟಕ್ಕೆಂದು ಫುಟ್ಪಾತ್ ನಿರ್ಮಾಣ ಮಾಡಿದ್ದರೆ, ಆ ಜಾಗಗಳಲ್ಲಿ ಹಲವು ಮಂದಿ ಆಕ್ರಮಿಸಿಕೊಂಡಿದ್ದಾರೆ, ಅಲ್ಲೇ ತಮ್ಮ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಾ ಜನರ ಓಡಾಟಕ್ಕೆ ತೊಂದರೆ ನೀಡುತ್ತಿದ್ದಾರೆ ಎನ್ನುವ ಸಾಕಷ್ಟು ದೂರುಗಳು ಹೈಕೋರ್ಟ್ ಮುಂದೆ ಬಂದಿದೆ.
ಈ ಮಧ್ಯೆ, ಫುಟ್ಪಾತ್ಗಳಲ್ಲಿ ಒತ್ತುವರಿ ತೆರವು ವಿಚಾರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ. ಅರಿವು ಮೂಡಿಸಲು ಬಿಬಿಎಂಪಿ ಕೂಡಾ ಜಾಹೀರಾತು ನೀಡಿದೆ ಎಂದು ಸರ್ಕಾರಿ ವಕೀಲರು ಹೈಕೋರ್ಟ್ಗೆ ಇಂದು ಮಾಹಿತಿ ಸಲ್ಲಿಸಿದ್ದಾರೆ.

ಫುಟ್ಪಾತ್ಗಳನ್ನು ಒತ್ತುವರಿ ಮುಕ್ತಗೊಳಿಸಬೇಕು. ಉತ್ತಮ ಸ್ಥಿತಿಯಲ್ಲಿ ಫುಟ್ಪಾತ್ ಹೊಂದುವುದು ಜನರ ಹಕ್ಕು ಎಂದು ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್ ಸೂಚನೆ ನೀಡಿದೆ. ಆದೇಶ ಪಾಲಿಸದಿದ್ದರೆ ಸ್ವತಂತ್ರ ಏಜೆನ್ಸಿ ರಚನೆ ಮಾಡಬೇಕಾಗುತ್ತದೆ. ಫುಟ್ಪಾತ್ ಒತ್ತುವರಿ ತೆರವಿಗೆ ಏಜೆನ್ಸಿ ರಚಿಸುವ ಎಚ್ಚರಿಕೆ ನೀಡಿ ವಿಚಾರಣೆಯನ್ನು ಹೈಕೋರ್ಟ್ ಆಗಸ್ಟ್ 5ಕ್ಕೆ ಮುಂದೂಡಿತು.
ನಗರದಲ್ಲಿರುವ ಬಹುತೇಕ ಫುಟ್ಪಾತ್ಗಳನ್ನು ವ್ಯಾಪಾರಸ್ಥರು ಆಕ್ರಮಿಸಿಕೊಂಡಿದ್ದಾರೆ, ಪೊಲೀಸರು ರೌಂಡ್ಸ್ಗೆ ಬರುವಾಗ ತಮ್ಮ ವಸ್ತುಗಳನ್ನು ಗಂಟುಮೂಟೆ ಕಟ್ಟುತ್ತಾರೆ, ಬಳಿಕ ಮತ್ತೆ ಬಂದು ವ್ಯಾಪಾರ ಮುಂದುವರೆಸುತ್ತಾರೆ, ಆದರೆ ಇದುವರೆಗೂ ಶಾಶ್ವತವಾಗಿ ಅವರನ್ನು ಅಲ್ಲಿಂದ ಹೋಗುವಂತೆ ಮಾಡಲು ಯಾವ ಸರ್ಕಾರಗಳಿಗೂ ಸಾಧ್ಯವಾಗಿಲ್ಲ ಎಂಬುದು ಜನರ ಅಭಿಪ್ರಾಯವಾಗಿದೆ.












Click it and Unblock the Notifications