ಬೆಂಗಳೂರಿಗರಿಗೆ ಮತ್ತೆ ಆಘಾತ: ಹಾಲು, ಬಸ್, ಆಟೋ ದರ ಏರಿಕೆ ?
ಬೆಂಗಳೂರು, ಮಾರ್ಚ್ 02: ಪೆಟ್ರೋಲ್, ಡೀಸೆಲ್ ಹಾಗೂ ಎಲ್ಪಿಜಿ ಸಿಲಿಂಡರ್ ದರಗಳು ಪ್ರತಿನಿತ್ಯ ಏರಿಕೆಯಿಂದ ಚಿಂತೆಯಲ್ಲಿ ಮುಳುಗಿದ್ದ ಬೆಂಗಳೂರಿಗರಿಗೆ ಮತ್ತೆ ಆಘಾತವಾಗಿದೆ.
ಹೌದು, ಇದೀಗ ಹಾಲು, ಆಟೋ, ಬಸ್ ಟಿಕೆಟ್ ದರ ಏರಿಕೆ ಮಾಡಿ ಒಟ್ಟೊಟ್ಟಿಗೆ ಮೂರು ಆಘಾತಗಳನ್ನು ನೀಡಲಾಗಿದೆ.
ನಗರದಲ್ಲಿ ಹಾಲು, ಆಟೋ ಹಾಗೂ ಬಸ್ ಶೀಘ್ರವೇ ದರ ಏರಿಕೆಯಾಗಲಿದೆ. ಈಗಾಗಲೇ ಆಟೋ ಮತ್ತು ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿದ್ದು, ಇದರ ನಡುವೆಯೇ ನಂದಿನ ಹಾಲಿನ ದರ ಏರಿಕೆಗೂ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ನಿರ್ಧರಿಸಿದೆ.
ಹಾಲಿನ ದರ ಕೂಡ ಏರಿಕೆಯಾಗಲಿದ್ದು, ಈ ಬಗ್ಗೆ ಕೆಎಂಎಫ್ ಕೂಡ ಮಾಹಿತಿ ನೀಡಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಹಾಲಿನ ದರ ಏರಿಕೆ ಅನಿವಾರ್ಯ ಎಂದು ಹೇಳಿರುವ ಕೆಎಂಎಫ್, ಶೀಘ್ರದಲ್ಲೇ ಈ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇವೆ.

ಈ ಹಿಂದೆ ಟ್ಯಾಕ್ಸಿಗಳ ದರ ಪರಿಷ್ಕರಣೆಯಾಗಿತ್ತು
ಕೆಲವು ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರವು ಟ್ಯಾಕ್ಸಿ ದರವನ್ನು ಪರಿಷ್ಕರಿಸಿತ್ತು. ಮೊದಲ 4 ಕಿ.ಮೀ. ಗೆ ಹವಾನಿಯಂತ್ರಿತವಲ್ಲದ ಕಾರುಗಳಗಳ ದರ 75 ರೂ. ಮತ್ತು ಹವಾನಿಯಂತ್ರಿತ ಕ್ಯಾಬ್ಗಳ ದರ 100 ರೂ. ಎಂದು ದರ ಪರಿಷ್ಕರಣೆ ಮಾಡಿತ್ತು. ಅಂತೆಯೇ ಎಸಿ ಕ್ಯಾಬ್ಗಳಿಗೆ ಪ್ರತೀ ಕಿಲೋಮೀಟರಿಗೆ 24 ರೂ. ಮತ್ತು ಎಸಿ ಅಲ್ಲದ ಟ್ಯಾಕ್ಸಿಗಳಿಗೆ 18 ರೂ. ದರ ನಿಗದಿ ಮಾಡಿತ್ತು. ಇದೀಗ ಅದೇ ರೀತಿಯಲ್ಲೇ ಆಟೋ ಮತ್ತು ಬಸ್ ಟಿಕೆಟ್ ದರ ಹೆಚ್ಚಳಕ್ಕೂ ಸರ್ಕಾರ ಮುಂದಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಹಾಲಿನ ದರವೂ ಏರಿಕೆ
ಹಾಲಿನ ದರ ಏರಿಕೆಯ ನಿಖರ ಪ್ರಮಾಣ ತಿಳಿಸುತ್ತೇವೆ ಎಂದು ಹೇಳಿದ್ದಾರೆ. ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) 14 ಹಾಲು ಒಕ್ಕೂಟಗಳನ್ನು ಹೊಂದಿದೆ ಮತ್ತು ಪ್ರತಿಯೊಂದೂ ರೈತರಿಗೆ ವಿಭಿನ್ನ ಖರೀದಿ ದರವನ್ನು ನೀಡುತ್ತದೆ.
ರೈತರಿಗೆ ಪ್ರಸ್ತುತ ಪ್ರತೀ ಲೀಟರ್ ಹಾಲಿಗೆ 31 ರೂ.ಯಿಂದ 34 ರೂ.ಗಳವರೆಗೂ ದರ ನೀಡಲಾಗುತ್ತಿದೆ. ಈ ದರವನ್ನು ಲೀಟರ್ಗೆ 40 ರೂ.ಗೆ ಏರಿಕೆ ಮಾಡಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಕೊರೊನಾದಿಂದಾಗಿ ರೈತರು ಹಾಗೂ ಒಕ್ಕೂಟಗಳು ಎರಡೂ ನಷ್ಟದಲ್ಲಿವೆ. 2020 ರಲ್ಲಿ ನಾವು ಹಾಲಿನ ಬೆಲೆಯನ್ನು ಲೀಟರ್ ಹಾಲಿಗೆ 35 ರೂ.ನಿಂದ 37 ರೂ.ಗೆ ಮತ್ತು ಮೊಸರಿಗೆ 39 ರೂ.ಗೆ 41 ರೂ.ಗೆ ಹೆಚ್ಚಿಸಿದ್ದೇವೆ.
ಸಂಘಗಳು ನಿಗದಿತ ಖರೀದಿ ಬೆಲೆಯನ್ನು ನೀಡಿದರೆ, ಸರ್ಕಾರವು ಹೆಚ್ಚುವರಿ ಪ್ರೋತ್ಸಾಹವನ್ನು ನೀಡುತ್ತದೆ. ಹಾಗೆಯೇ ಮೂಲಗಳ ಪ್ರಕಾರ ಪ್ರತೀ ಲೀಟರ್ ಹಾಲಿಗೆ 2ರಿಂದ 3ರೂ ಏರಿಕೆ ಮಾಡಲು ಕೆಎಂಎಫ್ ಚಿಂತನೆಯಲ್ಲಿದೆ ಎಂದು ಹೇಳಲಾಗಿದೆ.

ಎಸಿ ಹಾಗೂ ಎಸಿ ರಹಿತ ಬಸ್ಗಳ ಟಿಕೆಟ್ ದರ ಏರಿಕೆ
ಮೂಲಗಳ ಪ್ರಕಾರ ಎಸಿ ಮತ್ತು ಎಸಿ ರಹಿತ ಬಸ್ಗಳ ಟಿಕೆಟ್ ದರವನ್ನುಶೇ.18-20ರಷ್ಟು ಹೆಚ್ಚಿಸಲು ಸಾರಿಗೆ ನಿಗಮವು ಪ್ರಸ್ತಾಪಿಸಿದೆ ಎಂದು ಹಿರಿಯ ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಡೀಸೆಲ್ ಬೆಲೆ ಏರಿಕೆಯಾಗಿರುವುದರಿಂದ ಮತ್ತು ಕೋವಿಡ್ ಕಾರಣದಿಂದಾಗಿ ಬಿಎಂಟಿಸಿಯು ಆದಾಯ ನಷ್ಟವನ್ನು ಅನುಭವಿಸುತ್ತಿದೆ. ಹೀಗಾಗಿ ನಾವು ದರ ಹೆಚ್ಚಳವನ್ನು ಬಯಸುತ್ತಿದ್ದೇವೆ. ನಾವು ಸಾರಿಗೆ ಸಚಿವ ಮತ್ತು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರನ್ನು ಈ ಕುರಿತಾಗಿ ಸಂಪರ್ಕಿಸಿದ್ದೇವೆ. ಈ ಕುರಿತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಅವರು ದರ ಏರಿಕೆ ಕುರಿತು ಸಿಎಂ ಬಿ ಎಸ್ ಯಡಿಯೂರಪ್ಪ ಅವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಒನ್ನೊಂದು ವಾರದಲ್ಲಿ ಕರ್ನಾಟಕ ಬಜೆಟ್ ಘೋಷಣೆ
ಇನ್ನು ಇದೇ ವಾರ ರಾಜ್ಯ ಬಜೆಟ್ ಘೋಷಣೆಯಾಗಲಿದ್ದು, ಬಜೆಟ್ ಘೋಷಣೆ ಬಳಿಕ ಸರ್ಕಾರ ಈ ದರ ಏರಿಕೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರು, ಪ್ರಸ್ತುತ ಬಿಎಂಟಿಸಿ ದರವನ್ನು ಹೆಚ್ಚಿಸಲು ಸರ್ಕಾರ ಉದ್ದೇಶಿಸಿಲ್ಲ ಎಂದು ಹೇಳಿದ್ದಾರೆ.
Recommended Video

ಆಟೋರಿಕ್ಷಾ ದರ ಏರಿಕೆ ಕುರಿತು ಹೇಳುವುದೇನು?
ಇನ್ನು ಆಟೊರಿಕ್ಷಾ ದರ ಏರಿಕೆ ಕುರಿತಂತೆ ಸಾರಿಗೆ ಇಲಾಖೆಯ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಮಾತನಾಡಿ, ಎಲ್ಪಿಜಿ ಬೆಲೆ ಏರಿಕೆಯಾಗಿರುವುದರಿಂದ ಚಾಲಕರ ಸಂಘಗಳು ಮೊದಲ 2 ಕಿ.ಮೀ.ಗೆ ಪ್ರಸ್ತುತ ಶುಲ್ಕವನ್ನು 25 ರೂ.ನಿಂದ 36 ರೂ.ಗೆ ಹೆಚ್ಚಿಸಲು ಬಯಸುತ್ತಿವೆ. ಈ ಕುರಿತು ಶೀಘ್ರದಲ್ಲೇ ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದಾರೆ.












Click it and Unblock the Notifications