ಬೆಂಗಳೂರಿಗರಿಗೆ ಹೊಸ ವರ್ಷದ ಕೊಡುಗೆ ನೀಡಲಿದ್ದಾರೆ ಯಡಿಯೂರಪ್ಪ
ಬೆಂಗಳೂರು, ಡಿಸೆಂಬರ್ 17 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬೆಂಗಳೂರಿನ ಜನರಿಗೆ ಹೊಸ ವರ್ಷದ ಕೊಡುಗೆ ನೀಡಲಿದ್ದಾರೆ. ಹೊಸ ವರ್ಷದಲ್ಲಿ ಬಿಎಂಟಿಸಿ ಬಸ್ ದರಗಳನ್ನು ಕಡಿತಗೊಳಿಸಲು ಸರ್ಕಾರ ಮುಂದಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ( ಬಿಎಂಟಿಸಿ) ಬಸ್ಗಳತ್ತ ಜನರನ್ನು ಆಕರ್ಷಿಸಲು ಸರ್ಕಾರ ದರ ಕಡಿತ ಮಾಡಲು ಮುಂದಾಗಿದೆ. ಸ್ವತಃ ಯಡಿಯೂರಪ್ಪ ಅಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಿದ್ದು, ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.
ಹೆಚ್ಚಿನ ಪ್ರಮಾಣದಲ್ಲಿ ಅಲ್ಲದಿದ್ದರೂ ಕೆಲವು ಸ್ಟೇಜ್ಗಳ ದರವನ್ನು ಕಡಿತ ಮಾಡುವಂತೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಬಿಎಂಟಿಸಿಯ ಅಧಿಕಾರಿಗಳು ಯಾವ ಸ್ಟೇಜ್ ದರಗಳನ್ನು ಕಡಿಮೆ ಮಾಡಬಹುದು ಎಂದು ಪರಿಶೀಲನೆ ಮಾಡುತ್ತಿದ್ದು, ಶೀಘ್ರವೇ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಿದ್ದಾರೆ.

ವರ್ಷದಿಂದ ವರ್ಷಕ್ಕೆ ಬಿಎಂಟಿಸಿ ನಷ್ಟವನ್ನು ಅನುಭವಿಸುತ್ತಿದೆ. ಅದರಲ್ಲೂ ನಮ್ಮ ಮೆಟ್ರೋ ರೈಲುಗಳ ಸಂಚಾರ ಆರಂಭವಾದ ಬಳಿಕ ಸಂಸ್ಥೆ ಹೆಚ್ಚಿನ ನಷ್ಟ ಅನುಭವಿಸುತ್ತಿದೆ. ದರ ಕಡಿತ ಮಾಡಿದರೆ ಮತ್ತಷ್ಟು ನಷ್ಟ ಹೆಚ್ಚಾಗಲಿದೆ ಎಂಬ ವಾದವೂ ಇದೆ.
ಕರ್ನಾಟಕ ಸರ್ಕಾರವೇ ಬಿಎಂಟಿಸಿಗೆ ನಷ್ಟ ಭರಿಸಲು ಅಗತ್ಯ ನೆರವು ನೀಡುವುದಾಗಿ ಭರವಸೆಯನ್ನು ನೀಡಿ ದರ ಕಡಿತಕ್ಕೆ ಸೂಚನೆ ನೀಡುವ ಸಾಧ್ಯತೆ ಇದೆ. ದರ ಕಡಿತಗೊಳಿಸಿದರೆ ಜನರನ್ನು ಬಸ್ ಸೇವೆಯತ್ತ ಹೆಚ್ಚಾಗಿ ಆಕರ್ಷಿಸಬಹುದು ಎಂಬುದು ಸರ್ಕಾರದ ತಂತ್ರವಾಗಿದೆ.
ಬೆಂಗಳೂರು ನಗರದಲ್ಲಿ ಖಾಸಗಿ ವಾಹನಗಳ ಬಳಕೆ ಹೆಚ್ಚುತ್ತಿದೆ. ಅಪ್ಲಿಕೇಶನ್ ಆಧಾರಿತ ಕ್ಯಾಬ್, ಬಾಡಿಗೆ ಬೈಕ್ ಸೇವೆಗಳ ಬಳಿಕ ಬಿಎಂಟಿಸಿಯಿಂದ ಜನರು ದೂರವಾಗುತ್ತಿದ್ದಾರೆ. ಆದ್ದರಿಂದ, ಜನರನ್ನು ಸಾರ್ವಜನಿಕ ಸಾರಿಗೆಯತ್ತ ಆಕರ್ಷಿಸುವುದು ಅನಿವಾರ್ಯವಾಗಿದೆ.
ಬಸ್ಗಳು ಸಂಚಾರ ದಟ್ಟಣೆಯಲ್ಲಿ ಸಿಲುಕುವುದನ್ನು ತಪ್ಪಿಸಲು ಬಿಎಂಟಿಸಿ ಬಸ್ಗಳಿಗೆ ಪ್ರತ್ಯೇಕ ಪಥವನ್ನು ನಿರ್ಮಾಣ ಮಾಡಿದೆ. ಈಗ ದರವನ್ನು ಕಡಿತ ಮಾಡುವ ಮೂಲಕ ಜನರನ್ನು ಸೆಳೆಯಲು ಬಿಎಂಟಿಸಿ ಮುಂದಾಗಿದ್ದು, ಸರ್ಕಾರವೂ ಇದಕ್ಕೆ ಸಹಕಾರವನ್ನು ನೀಡಲಿದೆ.











Click it and Unblock the Notifications