ಕಾವೇರಿ ನೀರು ವಿಚಾರದಲ್ಲಿ ಸುಳ್ಳು ಹೇಳಿದ್ದಾರೋ ಗೊತ್ತಿಲ್ಲ?: ಮುಖ್ಯಮಂತ್ರಿ ಚಂದ್ರು
ರಾಮನಗರ, ಸೆಪ್ಟಂಬರ್ 13: ಡಿಸಿಎಂ ಡಿಕೆ ಶಿವಕುಮಾರ್ ಅವರು ನಮಗೆ ನೀರಿಲ್ಲ, ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾಗಿ ವರದಿ ಆಗಿದೆ. ಈ ಮಾತನ್ನು ಅವರು ನಿಜವಾಗಿಯೂ ಹೇಳಿದ್ದಾರೋ, ಅಥವಾ ನಮ್ಮ ಹೋರಾಟ ನಿಲ್ಲಿಸಲು ಹೇಳಿದ್ದಾರೋ ಎಂಬುದು ಗೊತ್ತಿಲ್ಲ. ಆದರೆ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಒತ್ತಾಯಿಸಿದರು.
ಬುಧವಾರ ರಾಮನಗರದ ಎಪಿಎಂಸಿ ಸಭಾಂಗಣದಲ್ಲಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ವತಿಯಿಂದ ನಡೆದ ಎರಡನೇ ಸಭೆಯಲ್ಲಿ ಕಾವೇರಿ ನೀರಿನ ಸಮಸ್ಯೆ ಹಾಗೂ ಮೇಕೆದಾಟು ನಿರ್ಮಾಣ ಯೋಜನೆ ಬಗ್ಗೆ 'ಚಿಂತನ ಮಂಥನ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ಮೇಲೆ ಯಾವ ರೀತಿಯ ಒತ್ತಡ ಹಾಕಬೇಕು, ಮುಂದಿನ ಹೋರಾಟ ಹೇಗಿರಬೇಕು. ಬರಿ ಹೋರಾಟದಿಂದ ಮಾತ್ರ ಕೆಲಸ ಆಗುತ್ತದೆಯಾ ಅಥವಾ ನಾವೂ ಕೂಡ ಅರ್ಜಿ ಸಲ್ಲಿಸಲು ಸಾಧ್ಯವಿದೆಯಾ ಎನ್ನುವುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ರಾಜಕಾರಣಿಗಳು ಹೇಳಿದಂತೆ ನಡೆಯಲ್ಲ
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಮಾತನಾಡಿ, ಎಲ್ಲ ರಾಜಕೀಯ ಪಕ್ಷಗಳು ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ. ಆದ್ದರಿಂದ ನಾವು ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಪಕ್ಷಗಳನ್ನು ದೂರ ಇಟ್ಟಿದ್ದೇವೆ. ನಾನು ಜೆಡಿಎಸ್ನ ಎಚ್ಡಿ ದೇವೇಗೌಡರ ಜೊತೆ ಕೂಡ ಹೋರಾಟ ಮಾಡಿದ್ದೇನೆ. ರಾಜಕಾರಣಿಗಳು ಹೇಳುವುದು ಒಂದು, ಮಾಡುವುದು ಇನ್ನೊಂದು. ಅದಕ್ಕಾಗಿ ಅವರನ್ನು ದೂರ ಇಟ್ಟಿದ್ದೇವೆ ಎಂದು ಅಸಮಾಧಾನ ಹೊರ ಹಾಕಿದರು.
ಡಿಕೆ ಶಿವಕುಮಾರ್ ಅವರು ಮೇಕೆದಾಟು ಯೋಜನೆ ಜಾರಿಗೆ ಹೋರಾಟ ಮಾಡುವಾಗ ನನ್ನನ್ನು ಕರೆದಿದ್ದರು. ಆದರೆ, ನಾನು ಹೋಗಲಿಲ್ಲ. ಆದರೆ, ಅವರೀಗ ರಾಜಕಾರಣಿಯಂತೆ ಮಾತನಾಡುತ್ತಿದ್ದಾರೆ. ಮೇಕೆದಾಟು ಹೋರಾಟ ಅವರದ್ದಲ್ಲ, ಈ ಭಾಗದ ಜನರು ಮೊದಲಿನಿಂದಲೂ ಮೇಕೆದಾಟು ಯೋಜನೆಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಅವರು ವಿವರಿಸಿದರು.

ಸರ್ಕಾರ ಆಲೋಚಿಸಿ ಸೂಕ್ತ ತೀರ್ಮಾನಿಸಿ
ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನಿಯಂತ್ರಣ ಪ್ರಾಧಿಕಾರ ನೀಡಿರುವ ಆದೇಶವನ್ನು ಸರ್ಕಾರ ಧಿಕ್ಕರಿಸಬೇಕು. ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿ ಆದೇಶ ರದ್ದು ಪಡಿಸುವಂತೆ ಮಾಡಬಹುದೇ ಎಂಬುದರ ಕುರಿತು ಸರ್ಕಾರ ಅಲೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು.
1.20 ಕೋಟಿ ಜನ ಬೆಂಗಳೂರಿನಲ್ಲಿ ಇದ್ದಾರೆ. ಇದರಲ್ಲಿ ಅರ್ಧದಷ್ಟು ಜನರು ಬೇರೆ ರಾಜ್ಯದಿಂದ ಬಂದವರಾಗಿದ್ದಾರೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆಯಾಗುವ ಆತಂಕ ಇದೆ., ಬೆಂಗಳೂರಿನ ಸಂಘ ಸಂಸ್ಥೆಗಳು ಕೂಡ ಈ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯಪಾಲರನ್ನು ಭೇಟಿ ಮಾಡಿ, ರಾಜ್ಯದ ರೈತರ ಸಂಕಷ್ಟ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡುವ ಬಗ್ಗೆ ಸಮಿತಿ ಒತ್ತಾಯಿಸುತ್ತಿದೆ ಎಂದರು.
'ಚಿಂತನ ಮಂಥನ' ಕಾರ್ಯಕ್ರಮದಲ್ಲಿ ರಂಗಕರ್ಮಿ ಕಪ್ಪಣ್ಣ, ಜಲ ತಜ್ಞ ರಾಜಾರಾಂ, ಆಮ್ ಆದ್ಮಿ ಪಕ್ಷದ ಸಂಚಿತ್ ಸೇವಾನಿ, ಸುಷ್ಮಾ ವೀರ್, ಬೈರೇಗೌಡ, ಸೋಸಲೇ ಸಿದ್ದರಾಜು, ಮಾಳವಿಕ ಸೇರಿದಂತೆ ಇನ್ನಿತರ ಕನ್ನಡಪರ ಸಂಘಟನೆಗಳ ಪ್ರಮುಖ ನಾಯಕರುಗಳು ಭಾಗವಹಿಸಿದ್ದರು.












Click it and Unblock the Notifications