ಕಾಂಗ್ರೆಸ್ ನಾಯಕರ 'ಪುತ್ರ ವ್ಯಾಮೋಹ'ಕ್ಕೆ ಬಗ್ಗುವರೇ ರಾಹುಲ್ ಗಾಂಧಿ?!
ಬೆಂಗಳೂರು, ಮಾರ್ಚ್ 28: ಒಂದು ಹಂತಕ್ಕೆ ತಲುಪಿದ ಮೇಲೆ ಈ ರಾಜಕಾರಣಿಗಳಿಗೆ ತಮ್ಮ ಮಕ್ಕಳಿಗೂ ಟಿಕೇಟ್ ಕೊಡಿಸುವ ಇರಾದೆ ಹುಟ್ಟಿಬಿಡುತ್ತದೆ. ಅದೆಷ್ಟೆಂದರೆ ಮಕ್ಕಳು ಸ್ವತಂತ್ರವಾಗಿ ಯಾವುದೋ ಪಕ್ಷದಲ್ಲಿ ನಿಂತು ಗೆಲ್ಲುವ ವಿಶ್ವಾಸವೂ ಇಲ್ಲದೆ, ತಮ್ಮದೇ ಕ್ಷೇತ್ರವನ್ನು ಅವರಿಗೆ ಬಿಟ್ಟುಕೊಡುವ ಮಟ್ಟಿನ ವ್ಯಾಮೋಹ..! ಕರ್ನಾಟಕ ವಿಧಾಸಭೆ ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಇದೆ. ಎಲ್ಲ ಪಕ್ಷಗಳೂ ಅಭ್ಯರ್ಥಿಗಳ ಆಯ್ಕೆಯಲ್ಲಿ ಬ್ಯುಸಿಯಾಗಿವೆ. ಕೆಲವು ನಾಯಕರಿಗೆ ಈಗ ಮಕ್ಕಳಿಗೆ ಟಿಕೇಟ್ ಕೊಡಿಸುವ ಚಿಂತೆ ಶುರುವಾಗಿದೆ!
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ಮೇ.12 ರಂದು ನಡೆಯಲಿದ್ದು, ಮೇ 15 ರಂದು ಫಲಿತಾಂಶ ಹೊರಬೀಳಲಿದೆ. ಟಿಕೇಟ್ ಆಕಾಂಕ್ಷಿಗಳಿಂದ ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಿದ್ದ ಕಾಂಗ್ರೆಸ್, ಸೂಕ್ತ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಕೇಂದ್ರ ಸಚಿವ ಕೆ.ಎಚ್ ಮುನಿಯಪ್ಪ ಸೇರಿದಂತೆ ಹಲವರು ತಮ್ಮ ಮಕ್ಕಳಿಗೆ ಟಿಕೇಟ್ ನೀಡುವಂತೆ ಹೈಕಮಾಂಡ್ ಗೆ ದುಂಬಾಲು ಬೀಳಲು ಸಿದ್ಧವಾಗಿದ್ದಾರೆ.
ರಾಹುಲ್ ಗಾಂಧಿ ನನಗೆ ಲೆಕ್ಕಕ್ಕೇ ಇಲ್ಲ: ಕುಮಾರಸ್ವಾಮಿ
ಈ ಪುತ್ರ ವ್ಯಾಮೋಹಕ್ಕೆ ಕಾಂಗ್ರೆಸ್ ನ ಹಲವು ನಾಯಕರು ಕೆಂಡಾಮಂಡಲವಾಗಿದ್ದರೂ, ವಿರೋಧಿಸುವುದಕ್ಕೆ ಸಾಧ್ಯವಿಲ್ಲದ ಕಾರಣ ಹಲ್ಲುಕಚ್ಚಿಕೊಂಡು ಸುಮ್ಮನಾಗಿದ್ದಾರೆ.
ವರುಣಾದಲ್ಲಿ ಯತೀಂದ್ರ ಸಿದ್ದರಾಮಯ್ಯ
2013 ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ವರುಣಾ ಕ್ಷೇತ್ರದಲ್ಲಿ ನಿಂತು ಗೆದ್ದಿದ್ದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪುತ್ರ ಯತೀಂದ್ರ ಅವರಿಗೆ ಈ ಕ್ಷೇತ್ರವನ್ನು ಬಿಟ್ಟುಕೊಡುತ್ತಾರೆ ಎಂಬ ಸುದ್ದಿ ದಟ್ಟವಾಗಿದೆ. ಅದಕ್ಕೆಂದೇ ಸಿದ್ದರಾಮಯ್ಯ ತಾವು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಇದರೊಟ್ಟಿಗೆ ಲೋಕೋಪಯೋಗಿ ಸಚಿವ ಎಚ್ ಸಿ ಮಹದೇವಪ್ಪ ತಮ್ಮ ಮಗ ಸುನಿಲ್ ಬೋಸ್ ಗೆ, ಗೃಹ ಸಚಿವ ರಾಮಲಿಂಗಾ ರೆಡ್ಡಿ ತಮ್ಮ ಪುತ್ರಿ ಸೌಮ್ಯ ರೆಡ್ಡಿ ಅವರಿಗೆ, ಮಾಜಿ ಕೇಂದ್ರ ಸಚಿವ ಕೆ.ಎಸ್.ಮುನಿಯಪ್ಪ ಅವರು ತ್ಮ ಪುತ್ರಿ ರೂಪಾ ಅವರಿಗೆ, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೋಯ್ಲಿ ತಮ್ಮ ಮಗ ಹರ್ಷಾ ಮೋಯ್ಲಿ ಅವರಿಗೆ ಟಿಕೇಟ್ ನೀಡದುವಂತೆ ಕೇಳಿದ್ದಾರೆ. ಆದರೆ ಸದ್ಯಕ್ಕೆ ಚೆಂಡು ಹೈಕಮಾಂಡ್ ಅಂಗಳದಲ್ಲಿದೆ!
ಕಾಂಗ್ರೆಸ್ ನಾಯಕರಲ್ಲೇ ಅಸಮಾಧಾನ
ಅಷ್ಟೇ ಅಲ್ಲ, ಪಟ್ಟಿ ಇಲ್ಲಿಗೇ ಮುಗಿದಿಲ್ಲ. ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವಾ ತಮ್ಮ ಮಗ ನಿವೇದಿತ್ ಆಳ್ವಾ ಅವರಿಗೆ, ಸಚಿವ ಟಿಬಿ ಜಯಚಂದ್ರ ಅವರು ತಮ್ಮ ಮಗ ಸಂತೋಷ್ ಅವರಿಗೆ ಟಿಕೇಟ್ ಸಿಗುವ ಭರವಸೆಯಲ್ಲಿದ್ದಾರೆ. ಆದರೆ ನಾಯಕರು ತಮ್ಮ ಮಕ್ಕಳಿಗೇ ಟಿಕೇಟ್ ನೀಡುವಂತೆ ಹೈಕಮಾಂಡ್ ಅನ್ನು ಅಂಗಲಾಚುತ್ತಿರುವ ಬಗ್ಗೆ ಕಾಂಗ್ರೆಸ್ ನ ಕೆಲವು ನಾಯಕರಲ್ಲೇ ಅಸಮಾಧಾನವಿದೆ. ಆದ್ದರಿಂದಲೇ ಕೆಲ ಕಾಂಗ್ರೆಸ್ಸಿಗರು ಒಳಗೊಳಗೇ ಕುದಿಯುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಪ್ರಭಾವೀ ನಾಯಕರಾಗಿರುವುದರಿಂದ ಮತ್ತು ಹೈಕಮಾಂಡ್ ಜೊತೆ ಅವರು ಉತ್ತಮ ಸಂಬಂಧ ಹೊಂದಿರುವುರಿಂದ ಎಲ್ಲವನ್ನು ನೋಡಿಯೂ ನೋಡದಂತೆ ಸುಮ್ಮನಿರಬೇಕಾದ ಸ್ಥಿತಿ ಅವರದ್ದು!
ಇಷ್ಟು ದಿನ ಪ್ರಾಮಾಣಿಕವಾಗಿ ದುಡಿದವರ ಕತೆ ಏನು?
ಅಕಸ್ಮಾತ್ ಹೈಕಮಾಂಡ್ ಈ ಎಲ್ಲರಿಗೂ ಟಿಕೇಟ್ ನೀಡಿದ್ದೇ ಆದಲ್ಲಿ, ಈ ಎಲ್ಲಾ ಕ್ಷೇತ್ರಗಳ ಟಿಕೇಟ್ ಆಕಾಂಕ್ಷಿಗಳೂ ಆಗಿದ್ದ, ಇಷ್ಟು ದಿನ ಕಾಂಗ್ರೆಸ್ಸಿಗಾಗಿ ಪ್ರಾಮಾಣಿಕವಾಗಿ ದುಡಿದಿದ್ದವರ ಪಾಡೇನು? ನಿಮ್ಮ ನಿಮ್ಮ ಕ್ಷೇತ್ರಕ್ಕೆ ನೀವು ಏನೆಲ್ಲ ಮಾಡಿದ್ದೀರಿ ಎಂಬ ವಿಡಿಯೋ ಸಮೇತ ಅರ್ಜಿ ಕಳಿಸಿ. ಸಂದರ್ಶನ ಎದುರಿಸಿ, ಪಾಸಾದರೆ ಟಿಕೇಟ್, ಇಲ್ಲವೆಂದ್ರೆ ಇಲ್ಲ ಎಂಬ ಮಾತೆಲ್ಲ ಈ ಅಭ್ಯರ್ಥಿಗಳಿಗೆ ಅನ್ವಯವಾಗುವುದಿಲ್ಲವೇ. ತಂದೆಯ ಹೆಸರು ಇಟ್ಟುಕೊಂಡು ಟಿಕೇಟ್ ಆಕಾಂಕ್ಷಿ ಎನ್ನುವುದಾದರೆ, ಪ್ರಾಮಾಣಿಕವಾಗಿ ದುಡಿದವರು ಯಾವ ಅರ್ಹತೆಯ ಮೇಲೆ ಟಿಕೇಟ್ ಕೇಳಬೇಕು ಎಂಬುದು ಹಲವರ ಪ್ರಶ್ನೆ!
ರಾಹುಲ್ ಗಾಂಧಿ ತೀರ್ಮಾನವೇ ಅಂತಿಮ!
ಒಟ್ಟಿನಲ್ಲಿ ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಕಳಿಸಲಿದೆ. ರಾಹುಲ್ ಗಾಂಧಿಯವರ ತೀರ್ಮಾನವೇ ಅಂತಿಮವಾಗಿದ್ದು, ಅವರ ಈ ಎಲ್ಲರಿಗೂ ಟಿಕೇಟ್ ನೀಡಿದ್ದೇ ಆದಲ್ಲಿ, ಉಳಿದ ಟಿಕೇಟ್ ಆಕಾಂಕ್ಷಿಗಳು ಕೆಲಕಾಲ ಬಂಡಾಯವೆದ್ದು, ಕ್ರಮೇಣ 'ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ' ಎಂದು ಹೇಳಲೇಬೇಕಾಗುತ್ತದೆ. ಒಟ್ಟಿನಲ್ಲಿ ಈಗಾಗಲೇ ನಾಲ್ಕು ಬಾರಿ ಕರ್ನಾಟಕ ಜನಾಶೀರ್ವಾದ ಯಅತ್ರೆಗೆಂದು ಬಂದು ಹೋದ ರಾಹುಲ್ ಗಾಂಧಿ, ಯಾರಿಗೆಲ್ಲ ಟಿಕೇಟ್ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕು.