ರವಿ ಕೃಷ್ಣಾರೆಡ್ಡಿ ಪರ ಎಸ್ಆರ್ ಹಿರೇಮಠ ಮತ ಯಾಚನೆ
ಬೆಂಗಳೂರು, ಏಪ್ರಿಲ್ 28 : ಜಯನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸಾಮಾಜಿಕ ಹೋರಾಟಗಾರ ರವಿ ಕೃಷ್ಣಾರೆಡ್ಡಿಯವರ ಪರವಾಗಿ ಭ್ರಷ್ಟಾಚಾರ ವಿರೋಧಿ ಹೋರಾಟಗಾರರಾದ ಎಸ್. ಆರ್. ಹಿರೇಮಠ್ ಅವರು ಶನಿವಾರ ಕ್ಷೇತ್ರಾದ್ಯಾಂತ ಬಿರುಸಿನ ಪ್ರಚಾರ ಕೈಗೊಂಡರು.
ಬೆಳಿಗ್ಗೆ 11.30ಕ್ಕೆ ಜಯನಗರ ಪೋಲಿಸ್ ಠಾಣೆಯಿಂದ ಪ್ರಚಾರ ವಾಹನದಲ್ಲಿ ಆರಂಭವಾದ rally, ಜಯನಗರ ಶಾಪಿಂಗ್ ಕಾಂಪ್ಲೆಕ್ಸ್, ತಿಲಕ್ ನಗರ, ಬಿಸ್ಮಿಲ್ಲಾ ನಗರ, ಗುರಪ್ಪನಪಾಳ್ಯ, ಜಯನಗರ 9ನೇ ಬ್ಲಾಕ್, ಜೆ.ಪಿ. ನಗರ 1ನೇ ಹಂತ, 2ನೇ ಹಂತಗಳ ಮೂಲಕ ಸಾಗಿತು.
ರವಿ ಕೃಷ್ಣಾರೆಡ್ಡಿಯರ ನಾಮಪತ್ರಕ್ಕೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್. ದೊರೆಸ್ವಾಮಿಯವರು ಪ್ರಥಮ ಸೂಚಕರಾಗಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಇಂದಿನ rallyಯಲ್ಲಿ ಅನೇಕ ಸಾಮಾಜಿಕ ಹೋರಾಟಗಾರರು ಮತ್ತು ಕಾರ್ಯಕರ್ತರು ರವಿ ಕೃಷ್ಣಾರೆಡ್ಡಿಯವರನ್ನು ಬೆಂಬಲಿಸಿ ಮತಯಾಚಿಸಿದರು.

ನಾಮಪತ್ರಕ್ಕೆ ಠೇವಣಿಯಾಗಿ, ಶಾಂತವೇರಿ ಗೋಪಾಲಗೌಡರ ಆದರ್ಶದಲ್ಲಿ ಚುನಾವಣಾ ಖರ್ಚು ವೆಚ್ಚಕ್ಕಾಗಿ ನಡೆಸುತ್ತಿರುವ "ಓಟು ಕೊಡಿ - ನೋಟು ಕೊಡಿ" ಅಭಿಯಾನದ ಮೂಲಕ ಸಂಗ್ರಹಿಸಿರುವ ದೇಣಿಗೆಯ ಹಣದಿಂದ ಭರಿಸಲಾಯಿತು. ಈ ದೇಣಿಗೆಗೂ ಕೂಡ ಎಚ್.ಎಸ್. ದೊರೆಸ್ವಾಮಿಯವರು ತಮ್ಮ ಕಾಣಿಕೆ ನೀಡಿರುತ್ತಾರೆ. ಇಲ್ಲಿಯವರೆಗೆ 6 ಲಕ್ಷ ರೂಪಾಯಿಗಳನ್ನು ಈ ಅಭಿಯಾನದ ಮೂಲಕ ಸಂಗ್ರಹಿಸಲಾಗಿದೆ.
ಜಯನಗರವನ್ನು ಮಾದರಿ ಮತ್ತು ಲಂಚಮುಕ್ತ ಕ್ಷೇತ್ರವನ್ನಾಗಿ ಮಾಡಲು ಪಣ ತೊಟ್ಟಿರುವ ರವಿ ಕೃಷ್ಣಾರೆಡ್ಡಿಯವರು ಚುನಾವಣೆಯನ್ನು ಕೂಡ ಚುನಾವಣಾ ಆಯೋಗ ನಿಗದಿಪಡಿಸಿರುವ 28 ಲಕ್ಷದ ಮಿತಿಯೊಳಗೆ ನಡೆಸಿ ಗೆಲುವು ಸಾಧಿಸುವ ವಿಶ್ವಾಸ ಹೊಂದಿದ್ದಾರೆ.

ಹಾಗೆಯೇ ತಾವು ಗೆದ್ದ ಪಕ್ಷದಲ್ಲಿ, ತಮ್ಮ ಶಾಸಕತ್ವದ ಅವಧಿಯಲ್ಲಿ ಯಾವುದೇ ಆಸ್ತಿಯನ್ನು ಕೊಳ್ಳುವುದಿಲ್ಲ, ಯಾವುದೇ ಲಾಭ ತರುವ ವ್ಯವಹಾರವನ್ನಾಗಲಿ, ಉದ್ದಿಮೆಯನ್ನಾಗಲಿ ನಡೆಸುವುದಿಲ್ಲ ಮತ್ತು ಅವರ ಮತ್ತು ಅವರ ಕುಟುಂಬದ ಖರ್ಚುವೆಚ್ಚಗಳನ್ನು ಶಾಸಕರಿಗೆ ಬರುವ ಸಂಬಳದಲ್ಲಿ ಮತ್ತು ಅವರ ಪತ್ನಿಯ ಆದಾಯದಲ್ಲಷ್ಟೇ ನಿಭಾಯಿಸುವುದಾಗಿ ಪಣತೊಟ್ಟಿದ್ದಾರೆ.












Click it and Unblock the Notifications