ಮತದಾನ ಮಾಡಲು ಕನ್ನಡ ನಟನಟಿಯರಿಂದ ಸಂದೇಶ
ಬೆಂಗಳೂರು, ಮೇ 1 : ಚುನಾವಣೆಯಲ್ಲಿ ಮತದಾನದ ಮಹತ್ವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ತಪ್ಪದೆ ಮತದಾನ ಮಾಡಿ ಎನ್ನುವ ಸಂದೇಶವನ್ನೊಳಗೊಂಡ ಕಿರುಚಿತ್ರಗಳನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು.
ಕನ್ನಡ ಸಿನಿಮಾ ಹಾಗೂ ಕಿರುತೆರೆಯ ಪ್ರಖ್ಯಾತ ನಟ-ನಟಿಯರು ಭಾಗವಹಿಸಿರುವ ಕಿರುಚಿತ್ರಗಳನ್ನು ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಬಿಡುಗಡೆ ಮಾಡಿದರು.
ಕನ್ನಡ ಚಿತ್ರರಂಗದ ಖ್ಯಾತ ನಟ ವಸಿಷ್ಠ ಎನ್. ಸಿಂಹ, ಹಾಡುಗಾರ ಹಾಗೂ ಯುವ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ, ಕಿರುತೆರೆ ನಟಿಯರಾದ ರಜನಿ ಮತ್ತು ವೈಷ್ಣವಿ ಅವರು ಮತದಾನದ ಮಹತ್ವ ಕುರಿತು ಮಾತನಾಡಿರುವ ಹಾಗೂ ತಪ್ಪದೆ ಮತದಾನ ಮಾಡಲು ಮನವಿ ಮಾಡಿಕೊಂಡಿದ್ದಾರೆ.

ಈ ಕಿರುಚಿತ್ರಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಜೊತೆಯಲ್ಲಿ ತಮ್ಮ ನಾಯಕ-ನಾಯಕಿಯರು ನೀಡಿರುವ ಕರೆಗೆ ಸಾರ್ವಜನಿಕರು ಓಗೊಟ್ಟು ಮತದಾನ ಮಾಡಿದಲ್ಲಿ ನಮ್ಮ ಶ್ರಮ ಸಾರ್ಥಕವಾಗುತ್ತದೆ ಎಂದು ಸಂಜೀವ್ ಕುಮಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ಚುನಾವಣೆ ರಂಗು-ಗಿಂಗುಗಳ ಮೀರಿ ಮತದಾನ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಬೇಕು.
ನಟ ವಸಿಷ್ಠ ಎನ್. ಸಿಂಹ ಅವರು ಮಾತನಾಡಿ, ಕಳೆದ ಚುನಾವಣೆಗಳಿಗಿಂತ ಶೇಕಡ 100ಕ್ಕೆ 100ರಷ್ಟು ಮತದಾನವಾಗಬೇಕು, ಸಾರ್ವಜನಿಕರು ಒಂದು ದಿನದ ಆಮಿಷಕ್ಕೆ ಒಳಗಾಗದೆ ಐದು ವರ್ಷಕ್ಕೆ ಸೂಕ್ತವೆನಿಸುವ ನಾಯಕನನ್ನು ಆಯ್ಕೆ ಮಾಡಬೇಕು. ಪ್ರತಿಯೊಬ್ಬರು ತಪ್ಪದೆ ಮತ ಚಲಾಯಿಸಿ ತಮ್ಮ ಹಕ್ಕನ್ನು, ಒಳ್ಳೆಯವರನ್ನು ಆಯ್ಕೆ ಮಾಡುವುದಕ್ಕಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಿರುತೆರೆ ನಟಿ ರಜನಿ ಅವರು ಮಾತನಾಡಿ, ವೋಟು ಮಾಡುವುದು ನಮ್ಮ ಕರ್ತವ್ಯ, ಪಕ್ಷ ಹಾಗೂ ಆಮಿಷಗಳಿಗೆ ಒಳಗಾಗದೆ ಒಳ್ಳೆಯ ಅಭ್ಯರ್ಥಿಗಳಿಗೆ ಮತ ಹಾಕಿ ಎಂದು ಮನವಿ ಮಾಡಿದರು. ನಟ-ನಟಿಯರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಈ ಸಮಾರಂಭದಲ್ಲಿ ಅಪರ ಮುಖ್ಯ ಚುನಾವಣಾಧಿಕಾರಿ ಡಾ: ಬಿ.ಆರ್.ಮಮತ ಅವರು ಉಪಸ್ಥಿತರಿದ್ದರು.












Click it and Unblock the Notifications