Narendra Modi: ಬೆಂಗಳೂರು ರೋಡ್ ಶೋ; ಬಜರಂಗಬಲಿಗೆ ನಮಿಸಿದ 'ನಮೋ'
2023ರ ಕರ್ನಾಟಕ ವಿಧಾನಸಭೆ ಚುನಾವಣಾ ರಣಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮೇ 10ರಂದು ನಡೆಯುವ ಮತದಾನಕ್ಕೆ ನಾಲ್ಕೇ ದಿನಗಳು ಬಾಕಿ ಉಳಿದಿವೆ. ಇದಕ್ಕೂ ಮುನ್ನ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಬ್ಬರದ ಬಹಿರಂಗ ಪ್ರಚಾರದಲ್ಲಿ ತೊಡಗಿವೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಇಂದು(ಶನಿವಾರ, ಮೇ 6) ಬೆಂಗಳೂರು ನಗರದಲ್ಲಿ ಅಬ್ಬರದ ರೋಡ್ ಶೋ ನಡೆಸಿದರು. 28 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಧಾನಿಯಲ್ಲಿ 26 ಕಿಮೀ ಬೃಹತ್ ರೋಡ್ ಶೋನಲ್ಲಿ ಬಿಜೆಪಿ ಪರ ಮತಯಾಚನೆ ಮಾಡಿದರು. ಜೆಪಿ ನಗರದಿಂದ ಆರಂಭವಾದ ರೋಡ್ ಶೋ ಮಲ್ಲೇಶ್ವಂನ ಸ್ಯಾಂಕಿ ಟ್ಯಾಂಕಿ ಬಳಿ ಕೊನೆಗೊಂಡಿತು.

ಬೆಂಗಳೂರಿನ ರೋಡ್ ಶೋ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ರಸ್ತೆ ಬದಿಯ ಆಂಜನೇಯ ಮೂರ್ತಿಗೆ ನಮಸ್ಕರಿಸಿದ್ದು ವಿಶೇಷವಾಗಿತ್ತು. ಈ ಫೋಟೋ ಇದೀಗ ಭಾರೀ ವೈರಲ್ ಆಗಿದೆ.
ಇತ್ತೀಚೆಗೆ ಕಾಂಗ್ರೆಸ್ ಬಿಡುಗಡೆ ಮಾಡಿದ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುತ್ತೇವೆ ಎಂದು ತಿಳಿಸಿದ್ದರು. ಇದಿರಿಂದ ಕಾಂಗ್ರೆಸ್ ವಿರುದ್ಧ ಬಿಜೆಪಿ ಸೇರಿದಂತೆ ಹಿಂದೂಪರ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ಇತ್ತೀಚಿಗಿನ ಚುನಾವಣಾ ಪ್ರಚಾರದ ಸಮಾವೇಶಗಳಲ್ಲಿ ಜೈ ಬಜರಂಗಬಲಿ ಎಂದು ಎಂದು ಭಾಷಣ ಆರಂಭಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್ನ ಬಜರಂಗದಳ ನಿಷೇಧ ವಿಚಾರವನ್ನು ಬಿಜೆಪಿಯು ತನ್ನ ಪ್ರಚಾರದ ರಣತಂತ್ರವಾಗಿ ಬಳಸಿಕೊಳ್ಳುತ್ತಿದೆ.
ಕರ್ನಾಟಕ ಚುನಾವಣಾ ಪ್ರಚಾರದ ಅಂತಿಮ ಹಂತ ತಲುಪುತ್ತಿದ್ದು, ರಾಜ್ಯದಲ್ಲಿ ಮತಬೇಟೆಯಾಡಲು ಪ್ರಧಾನಿ ನರೇಂದ್ರ ಮೋದಿ ವಾರಾಂತ್ಯದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.
ಜೆಪಿ ನಗರದಿಂದ ಮಲ್ಲೇಶ್ವರಂ 18ನೇ ಕ್ರಾಸ್ವರೆಗೆ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್ ಶೋ ನಡೆದಿದ್ದು, ತೆರೆದ ವಾಹನದಲ್ಲಿ ಸಾಗಿದ ಮೋದಿ, ಸಹಸ್ರಾರು ಜನರತ್ತ ಕೈಬೀಸಿದರು. ಅವರಿಗೆ ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ ಸಾಥ್ ನೀಡಿದರು.

ಹೂಮಳೆ ಸುರಿಸಿ ಸಂಭ್ರಮಿಸಿದ ಜನರು
ಇನ್ನು ಮೋದಿ ರೋಡ್ ಶೋದುದ್ದಕ್ಕೂ ಕಲಾತಂಡಗಳು ಮೆರುಗು ನೀಡಿದರು. ಬಿಜೆಪಿ ಕಾರ್ಯಕರ್ತರ ಉತ್ಸಾಹ ಮುಗಿಲು ಮುಟ್ಟಿತ್ತು. ನರೇಂದ್ರ ಮೋದಿ ಮೇಲೆ ಹೂಮಳೆ ಸುರಿಸಿ ಸಂಭ್ರಮಿಸಿದರು. ಜನರನ್ನು ಹುರಿದುಂಬಿಸಲು ಪ್ರಧಾನಿ ಮೋದಿ ಕೂಡ ಜನರ ಮೇಲೆ ಹೂ ಎಸೆದು ನಗು ಬೀರಿದರು. ರಸ್ತೆಯುದ್ದಕ್ಕೂ ಬಿಜೆಪಿ ಕಾರ್ಯಕರ್ತರು ಮೋದಿ.. ಮೋದಿ.. ಎಂಬ ಜೈಕಾರ ಕೂಗಿದೆರು. ರೋಡ್ ಶೋ ವೇಳೆ ನರೇಂದ್ರ ಮೋದಿಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಯುವಕ ಯುವತಿಯರು ಸೇರಿದ್ದರು.
ಬೆಂಗಳೂರಿನ ಇತಿಹಾಸದಲ್ಲಿ ಪ್ರಧಾನಮಂತ್ರಿಯೊಬ್ಬರು ಇಷ್ಟೊಂದು ದೊಡ್ಡ ಮಟ್ಟದ (26 ಕಿಮೀ) ರೋಡ್ ಶೋ ನಡೆಸಿರುವುದು ಇದೇ ಮೊದಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದೆ ರೋಡ್ ಶೋ ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಇದೇ ವೇಳೆ ನರೇಂದ್ರ ಮೋದಿ ರೋಡ್ ಶೋಗೆ ಬೆಂಗಳೂರು ಪೊಲೀಸರು ಭಾರೀ ಬಿಗಿ ಭದ್ರತೆಯನ್ನು ವಹಿಸಿದ್ದರು. ಟ್ರಾಫಿಕ್ ಜಾಮ್ ಬಿಟ್ಟರೆ, ದೊಡ್ಡ ತೊಂದರೆಯಾಗದಂತೆ ನಿಗಾ ವಹಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದ್ದು, ಬಳಿಕ ಯಾವ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.












Click it and Unblock the Notifications