ವಿರೋಧಗಳನ್ನು ಲೆಕ್ಕಿಸದೇ ಸಾಲಮನ್ನಾ ಮಾಡಿದ್ದೇನೆ: ನನ್ನ ಸಂಕಲ್ಪಕ್ಕೆ ಬಲ ನೀಡಿ ಎಂದು ರೈತರಿಗೆ ಪತ್ರ ಬರೆದ ಎಚ್ಡಿಕೆ
ಬೆಂಗಳೂರು, ಮಾರ್ಚ್. 23: ವಿಧಾನಸಭಾ ಚುನಾವಣೆಗೆ ಸಿದ್ಧವಾಗುತ್ತಿರುವ ಜಾತ್ಯಾತೀತ ಜನತಾದಳ ತನ್ನ ಪಂಚರತ್ನ ರಥ ಯಾತ್ರೆಗಳ ಮೂಲಕ ರಾಜ್ಯಾದ್ಯಂತ ಪ್ರಚಾರ ನಡೆಸುತ್ತಿದೆ. ಈ ಪಂಚರತ್ನ ಯೋಜನೆಗಳಲ್ಲಿ ರೈತ ಚೈತನ್ಯ ಎಂಬುದು ಕೂಡ ಸೇರಿದೆ. ರೈತರ ಪರ ಎಂದು ಪ್ರಚಾರ ನಡೆಸುತ್ತಿರುವ ಎಚ್ ಡಿ ಕುಮಾರಸ್ವಾಮಿ ರಾಜ್ಯದ ರೈತರಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.
ತಾನು ಎರಡು ಬಾರಿ ಆಕಸ್ಮಿಕವಾಗಿ ಈ ರಾಜ್ಯದ ಮುಖ್ಯಮಂತ್ರಿಯಾದರೂ ಕೂಡ ಕೊಟ್ಟ ಮಾತಿಗೆ ತಪ್ಪದೇ ರೈತರ ಸಾಲಮನ್ನಾ ಮಾಡಿದ್ದೇನೆ. ಈ ಬಾರಿಯೂ ರೈತ ಚೈತನ್ಯ ಕಾರ್ಯಕ್ರಮದ ಮೂಲಕ ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತೇನೆ. ನನ್ನ ಈ ಸಂಕಲ್ಪಕ್ಕೆ ನೀವು ಬಲ ನೀಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಎರಡು ಪುಟಗಳ ಭಾವನಾತ್ಮಕವಾಗಿ ಪತ್ರ ಬರೆದಿದ್ದಾರೆ.
*ಎಚ್ ಡಿ ಕುಮಾರಸ್ವಾಮಿ ಬರೆದಿರುವ ಪತ್ರದಲ್ಲಿ ಏನಿದೆ...?*
ಅನ್ನದಾತರ ಚರಣಗಳಿಗೆ...
ನಾಡಿನ ಸಮಸ್ತ ಅನ್ನದಾತ ಬಂಧುಗಳಿಗೆ ನನ್ನ ನಮಸ್ಕಾರಗಳು. ನಿಮ್ಮ ಮನೆ ಮಗನಾದ ನಾನು ಅನಿವಾರ್ಯ ಕಾರಣದಿಂದ ಈ ಪತ್ರ ಬರೆಯುತ್ತಿದ್ದೇನೆ. ತಮಗೆಲ್ಲರಿಗೂ ವಿಷಯ ಗೊತ್ತಿಲ್ಲ ಎಂದಲ್ಲ, ಮತ್ತೊಮ್ಮೆ ನೆನಪಿಸುವುದು ನನ್ನ ಕರ್ತವ್ಯ.

ಎರಡು ಬಾರಿ ನಾನು ಆಕಸ್ಮಿಕವಾಗಿ ಈ ರಾಜ್ಯದ ಮುಖ್ಯಮಂತ್ರಿಯಾದೆ. ಒಮ್ಮೆ ಬಿಜೆಪಿ ಜತೆ, ಇನ್ನೊಮ್ಮೆ ಕಾಂಗ್ರೆಸ್ ಜತೆ, ಎರಡೂ ಬಾರಿ ನಾನು ಆಡಳಿತ ನಡೆಸಿದ ಆ ಅವಧಿಯಲ್ಲಿ ಅನುಭವಿಸಿದ ಚಿತ್ರಹಿಂಸೆ ನನಗಷ್ಟೇ ಗೊತ್ತು. ಆದರೂ, ನಾನು ನಿಮಗೆ ಕೊಟ್ಟ ಮಾತು ತಪ್ಪಲಿಲ್ಲ. 2006ರಲ್ಲಿ ನೀವೆಲ್ಲರೂ ಅತೀವ ಸಂಕಷ್ಟಕ್ಕೆ ಸಿಲುಕಿದ್ದಿರಿ. ನಿಮ್ಮಲ್ಲಿ ಅನೇಕರು ಸಾಲಕ್ಕೆ ಸಿಲುಕಿ ಸಾವಿನ ಹೊಸ್ತಿಲಲ್ಲಿ ನಿಂತಿದ್ದಿರಿ, ಆ ದುರಿತ ಕಾಲದಲ್ಲಿ ನಿಮ್ಮ ನೆರವಿಗೆ ಧಾವಿಸುವುದು ನನ್ನ ಕರ್ತವ್ಯವಾಗಿತ್ತು. ಆಗ 2,600 ಕೋಟಿ ರೂ. ಸಾಲಮನ್ನಾ ಮಾಡಬೇಕು ಎಂದಾಗ ಅಂದಿನ ಮಿತ್ರಪಕ್ಷ ಬಿಜೆಪಿ ಸ್ಪಷ್ಟವಾಗಿ ವಿರೋಧ ಮಾಡಿತು.
ಆಗ ನನ್ನ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿ ಹಣಕಾಸು ಇಲಾಖೆ ಹೊಣೆ ಹೊತ್ತುಕೊಂಡಿದ್ದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು, ' ಸಾಲಮನ್ನಾ ಮಾಡಲು ಹಣ ಇಲ್ಲ, ನಾವೇನು ನೋಟು ಪ್ರಿಂಟ್ ಮಾಡಲು ಆಗುತ್ತದೆಯೇ?" ಎಂದು ಮೂದಲಿಸಿದ್ದರು. ಈ ಮಾತು ನನಗೆ ತೀವ್ರ ಘಾಸಿ ಉಂಟು ಮಾಡಿತ್ತು. ಆದರೂ, ಬಿಜೆಪಿ ಒತ್ತಡಕ್ಕೆ ಮಣಿಯದೆ 2,600 ಕೋಟಿ ರೂ.ಗಳಷ್ಟು ನಿಮ್ಮ ಸಾಲಮನ್ನಾ ಮಾಡಿದ್ದೆ.
ಇನ್ನು 2018, ಆ ಚುನಾವಣೆಗೆ ಮುನ್ನ 5 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಕಾಲದಲ್ಲಿ ರಾಜ್ಯದಲ್ಲಿ ನೀವೆಲ್ಲರೂ ಕಂಡೂ ಕೇಳರಿಯದಷ್ಟು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಿರಿ, ಒಂದೆಡೆ ಬರ, ಅಲ್ಪಸ್ವಲ್ಪ ಫಸಲಿಗೆ ಸಿಗದ ಬೆಲೆ, ಇನ್ನೊಂದೆಡೆ ಸಾಲ ಕೊಟ್ಟ ಬ್ಯಾಂಕುಗಳಿಂದ, ಖಾಸಗಿ ಲ್ಯಾವಾದೇವಿಗಾರರಿಂದ ಕಿರುಕುಳ, ನಿಮ್ಮಲ್ಲಿ ಅನೇಕರು ಮಾನಕ್ಕೆ ಹೆದರಿ ನೇಣಿಗೆ ಕೊರಳು ಕೊಟ್ಟರು. ಅನೇಕರು ಕಳೆನಾಶಕ ಸೇವಿಸಿ ಜೀವ ಚೆಲ್ಲಿದರು. ಮಂಡ್ಯ ಜಿಲ್ಲೆಯಲ್ಲೇ 200ಕ್ಕೂ ರೈತರು ಸಾಲಕ್ಕೆ ಹೆದರಿ ಜೀವ ಕಳೆದುಕೊಂಡರು.

ರಾಜ್ಯದ ಉದ್ದಗಲಕ್ಕೂ ಅನ್ನದಾತರ ಸಾವಿನ ಸರಣಿಯೇ ಆರಂಭವಾಯಿತು. ಇದನ್ನು ನೋಡಿ ನಿಮ್ಮಂತೆಯೇ ನನ್ನ ಮನಸ್ಸು ತಡೆಯಲಿಲ್ಲ. ಆಗ ಅಧಿಕಾರದಲ್ಲಿದ್ದ ಪೂರ್ಣ ಬಹುಮತದ ಕಾಂಗ್ರೆಸ್ ಸರಕಾರ ಸಂಕಷ್ಟದಲ್ಲಿದ್ದ ನಿಮ್ಮ ನೆರವಿಗೆ ಬರಲಿಲ್ಲ. ರಾಜ್ಯದ ಉದ್ದಗಲಕ್ಕೂ ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ ತಿರುಗಾಡಿದೆ. ಪ್ರತಿ ಸಾವಿನ ಮನೆಗೆ ಹೋದೆ. ನನ್ನ ಕೈಲಾದಷ್ಟು ಸಹಾಯ ಮಾಡಿದೆ. ಮತ್ತೆ ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಅಂಗಲಾಚಿ ಬೇಡಿಕೊಂಡೆ. ನಾನಿದ್ದೇನೆ, ನನ್ನ ಸರಕಾರ ಬಂದರೆ ನಾನು ನಿಮ್ಮ ಸಾಲಮನ್ನಾ ಮಾಡುತ್ತೇನೆ ಎಂದು ಮಾತು ಕೊಟ್ಟೆ.
ಆದರೆ, 2018ರ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಬಂದಿದ್ದು ಕೇವಲ 38 ಸ್ಥಾನ. ರೈತರ ಸಾಲಮನ್ನಾ ಮಾಡುವ ನನ್ನ ಸಂಕಲ್ಪ ಕಮರಿ ಹೋಯಿತೆಂದು ದುಃಖವಾಯಿತು. ಆದರೆ, ನನ್ನ ಸಂಕಲ್ಪ, ರೈತರ ಮೇಲಿನ ಕಾಳಜಿ ದೊಡ್ಡದು ಎನ್ನುವುದು ಪುನಹ ಸಾಬೀತಾಯಿತು, ಕಾಂಗ್ರೆಸ್ ಜತೆ ಮೈತ್ರಿ ಸರಕಾರ ರಚನೆ ಆಯಿತು.
ಸಾಲಮನ್ನಾ ಮಾಡಬೇಕು ಎಂದಾಗ, ಕಾಂಗ್ರೆಸ್ ನಿಂದಲೂ ತೀವ್ರ ವಿರೋಧ, ಸಾಲಮನ್ನಾ ಭರವಸೆ ನಿಮ್ಮದು, ನಮ್ಮದಲ್ಲ. ನಿಮಗೆ ಹೇಗೋ ಬಹುಮತ ಬಂದಿಲ್ಲ, ಸಾಲಮನ್ನಾ ಆಗಲ್ಲ ಎಂದು ಜನರಿಗೆ ಹೇಳಿಬಿಡಿ " ಎಂದು ಕಾಂಗ್ರೆಸ್ಸಿಗರು ನನ್ನ ಮೇಲೆ ಭಾರೀ ಒತ್ತಡ ಹೇರಿದರು. ಅಷ್ಟೇ ಅಲ್ಲ, " ನಮ್ಮ ಭಾಗ್ಯಗಳು ಯಾವೂ ನಿಲ್ಲುವ ಹಾಗಿಲ್ಲ. ಒಂದು ವೇಳೆ ನಿಂತರೆ ಈ ಸರಕಾರ ಇರುವುದೇ ಇಲ್ಲ" ಎನ್ನುವ ಧಮ್ಮಿ ಬೇರೆ.

ಆದರೆ, ರೈತರಿಗೆ ಕೊಟ್ಟ ಮಾತು ತಪ್ಪುವುದು ನನ್ನಿಂದ ಆಗದ ಕೆಲಸ, ನೂರಾರು ರೈತರ ಸಾವಿನ ಮನೆಗಳಿಗೆ ಹೋಗಿ ಬಂದಿದ್ದ ನಾನು ಸಾಲಮನ್ನಾ ಮಾಡುವ ದೃಢ ಸಂಕಲ್ಪ ಮಾಡಿದ್ದೆ. ಅದರಂತೆ ನಾನು ಎಲ್ಲಾ ವಿರೋಧಗಳನ್ನು ಲೆಕ್ಕಿಸದೇ 25,000 ಕೋಟಿ ರೂ. ಸಾಲಮನ್ನಾ ಮಾಡಿದೆ. ಕರ್ನಾಟಕದ ಇತಿಹಾಸದಲ್ಲಿ ಹಿಂದೆಂದೂ ಇಲ್ಲದ ಋಣಮುಕ್ತ ಕಾಯ್ದೆಯನ್ನು ರೂಪಿಸಿ ದೇಶದ ರಾಷ್ಟ್ರಪತಿ ಅವರಿಂದ ಅಂಕಿತ ಹಾಕಿಸಿಕೊಂಡು ಬಂದೆ.
ಸಾಲಮನ್ನಾ ನಂತರ ರಾಜ್ಯದಲ್ಲಿ ರೈತರ ಸಾವಿನ ಸರಣಿಗಳು ನಿಂತುಹೋದವು. ಜೀವ ಉಳಿದ ನೆಮ್ಮದಿಯಲ್ಲಿ ರೈತರು, ಮಾಂಗಲ್ಯ ಉಳಿದ ಸಂಭ್ರಮದಲ್ಲಿ ತಾಯಂದಿರು, ಅಕ್ಕ ತಂಗಿಯರು ನನ್ನನ್ನು ಆಶೀರ್ವದಿಸಿದರು. ಸುಮಾರು 27 ಲಕ್ಷ ಕುಟುಂಬಗಳಿಗೆ ಸಾಲಮನ್ನಾ ಫಲ ಸಿಕ್ಕಿತು. ಆದರೆ, ನನ್ನ ಸರಕಾರ ತೆಗೆದು ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಸುಮಾರು 2 ಲಕ್ಷ ಕುಟುಂಬಗಳ ಸಾಲಮನ್ನಾ ಹಣವನ್ನು ತಡೆ ಹಿಡಿಯಿತು. ಸುಮಾರು 15.00ರಿಂದ 2,000 ಕೋಟಿ ರೂ. ರೈತರ ಸಾಲಮನ್ನಾ ಹಣವನ್ನು ಅನ್ಯಬಾಬಿಗೆ ಬಳಕೆ ಮಾಡಿಕೊಂಡಿತು. ಸಂಕಷ್ಟದಲ್ಲಿದ್ದ ಅನ್ನದಾತರಿಗೆ ಬಿಜೆಪಿ ದ್ರೋಹ ಬಗೆಯಿತು.
ನನ್ನ ಕಳಕಳಿ ಇಷ್ಟೇ, ರೈತರು ಸಾಲಕ್ಕಾಗಿ ಯಾರಲ್ಲಿಯೂ ಕೈ ಚಾಚಬಾರದು, ಸ್ವಾಭಿಮಾನದಿಂದ ಬಾಳ್ವೆ ನಡೆಸಬೇಕು. ಅನ್ನ ಕೊಡುವ ರೈತ ಸಂತೋಷವಾಗಿ ಭೂಮಿತಾಯಿ ಸೇವೆ ಮಾಡಬೇಕು, ಅದಕ್ಕಾಗಿ ರಾಜ್ಯದ ರೈತಸಂಕುಲ ಶಾಶ್ವತವಾಗಿ ಸಾಲ ಮಾಡದಂತೆ ಪಂಚರತ್ನ ಯೋಜನೆಗಳಲ್ಲಿ 'ರೈತ ಚೈತನ್ಯ' ಎಂಬ ಕಾರ್ಯಕ್ರಮ ರೂಪಿಸಿದ್ದೇನೆ. ಪ್ರತಿ ಎಕರೆಗೆ ವರ್ಷಕ್ಕೊಮ್ಮೆ 10,000 ರೂ. ಧನ ಸಹಾಯ ಕೊಡಲಾಗುವುದು, ಗೊಬ್ಬರ, ಭಿತ್ತನೆ ಬೀಜಕ್ಕಾಗಿ ಸಾಲ ಮಾಡುವ ಅಗತ್ಯವಿಲ್ಲ. ದಿನದ 24 ಗಂಟೆಯೂ ಕೃಷಿಗೆ ಉಚಿತ ವಿದ್ಯುತ್, ಎಲ್ಲ ಬೆಳೆಗಳಿಗೆ ಅತ್ಯುತ್ತಮ ಮಾರುಕಟ್ಟೆ ವ್ಯವಸ್ಥೆ, ಬೆಳೆಗಳನ್ನು ಸಂರಕ್ಷಣೆ ಮಾಡಲು ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲೇ ಸುಸಜ್ಜಿತ ಶೀಥಲೀಕರಣ ಘಟಕಗಳನ್ನು ನಿರ್ಮಾಣ ಮಾಡಲಾಗುವುದು.

ರೈತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಉಚಿತ, ಎಲ್ ಕೆಜಿ ಯಿಂದ ದ್ವಿತೀಯ ಪಿಯುಸಿವರೆಗೆ ಕನ್ನಡ, ಇಂಗ್ಲಿಷ್ ಮಾಧ್ಯಮದಲ್ಲಿ ಉಚಿತ ಶಿಕ್ಷಣ, ಈ ಯೋಜನೆಯಿಂದ ನೀವು ಮಕ್ಕಳ ಶಿಕ್ಷಣಕ್ಕಾಗಿ ಸಾಲಕ್ಕೆ ಸಿಲುಕುವುದು ತಪ್ಪುತ್ತದೆ, ಹಾಗೆಯೇ, ಆರೋಗ್ಯಕ್ಕಾಗಿ ಜನರು ಸಾಲದ ಸುಳಿಗೆ ಬೀಳದಂತೆ ನೋಡಿಕೊಳ್ಳುತ್ತೇನೆ. ಕ್ಯಾನ್ಸರ್, ಹೃದ್ರೋಗ, ಬೋನ್ ಮ್ಯಾರೋ ಸೇರಿ ಯಾವುದೇ ಮಾರಣಾಂತಿಕ ಕಾಯಿಲೆ ಬಂದರೂ ಸರಕಾರವೇ ವೆಚ್ಚ ಭರಿಸುವ ಯೋಜನೆಯೇ 'ಆರೋಗ್ಯ ಸಂಪತ್ತು'. 5 ಲಕ್ಷ ರೂ. ವೆಚ್ಚದಲ್ಲಿ ಉಚಿತ ಮನೆ, ಹಳ್ಳಿಯ ಮಟ್ಟದಲ್ಲೇ ಆದಾಯಕ್ಕಾಗಿ ಮಹಿಳೆಯರು, ಯುವಕರಿಗೆ ಉದ್ಯೋಗ ಸೃಷ್ಟಿ, ಇನ್ನು ನೀವು ಸಾಲಕ್ಕೆ ಸಿಲುಕುವ ಮಾತೆಲ್ಲಿ?
ರೈತ ಬಂಧುಗಳೇ.. ಸಂಕಲ್ಪ ನನ್ನದು, ಅದರ ಬಲ ನಿಮ್ಮದು. ನಿಮ್ಮ ಹಾರೈಕೆ ಇದ್ದರಷ್ಟೇ ಈ ಮಹಾಸಂಕಲ್ಪ ಸಾಕಾರವಾಗಲು ಸಾಧ್ಯ ಈ ಪಂಚರತ್ನ ಯೋಜನೆಗಳು ಜಾತಿಗಳನ್ನು ಮೀರಿದ ಭಾತೃತ್ವದ, ಸೌಹಾರ್ದತೆಯ ಶಾಶ್ವತ ಕಾರ್ಯಕ್ರಮಗಳು, ಜಾತಿ, ಮತ, ಪಕ್ಷ ಭೇದ ಮೀರಿ ನನಗೊಂದು ಅವಕಾಶ ನೀಡಿ. 5 ವರ್ಷಗಳ ಪರಿಪೂರ್ಣ ಸರಕಾರ ಕೊಡಿ. ನಿಮ್ಮ ಬದುಕನ್ನು ಕಟ್ಟುವುದರ ಜತೆಗೆ ಭಾರತವೇ ಹೆಮ್ಮೆಯಿಂದ ನೋಡಬಲ್ಲ ಕರ್ನಾಟಕವನ್ನು ಕಟ್ಟುತ್ತೇನೆ.
ಇಡೀ ಕರ್ನಾಟಕದಲ್ಲಿ ಕುಮಾರಣ್ಣನೇ ಅಭ್ಯರ್ಥಿ ಎಂದು ಭಾವಿಸಿರಿ. ನಿಮ್ಮ ಬೆಂಬಲ ಜಾತ್ಯತೀತ ಜನತಾದಳ ಪಕ್ಷಕ್ಕೇ ಇರಲಿ ಎಂದು ಎಚ್.ಡಿ.ಕುಮಾರಸ್ವಾಮಿ ಬರೆದಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications