ನಕಲಿ ಸುದ್ದಿ: ಡಿಕೆ ಶಿವಕುಮಾರ್ಗೆ ಡಿಸಿಎಂ ಪಟ್ಟದೊಂದಿಗೆ 6 ಖಾತೆಗಳ ಆಫರ್ ಸುಳ್ಳು!
ಬೆಂಗಳೂರು, ಮೇ. 17: ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಆರು ಖಾತೆಗಳೊಂದಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಲಾಗಿದೆ. ಆದರೆ, ಈ ಪ್ರಸ್ತಾಪದ ಬಗ್ಗೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ ಎಂದು ಶಿವಕುಮಾರ್ ಅವರ ಕಚೇರಿ ಸ್ಪಷ್ಟಪಡಿಸಿದೆ. ರಾಜ್ಯಕ್ಕೆ ಹೊಸ ಸಿಎಂ ಘೋಷಣೆ ಬಗ್ಗೆ ಹಲವು ವದಂತಿಗಳ ನಡುವೆಯೇ ಇದೊಂದು ಸುದ್ದಿ ವೈರಲ್ ಆಗಿದ್ದು, ಇದು ಸುಳ್ಳು ಎಂದು ಕಚೇರಿ ಹೇಳಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಬಹುದು ಎಂದು ವರದಿಗಳ ನಡುವೆ ಕಾಂಗ್ರೆಸ್ ಈ ವರದಿಗಳನ್ನು ತಳ್ಳಿಹಾಕಿದ್ದು, ಕರ್ನಾಟಕ ಸಿಎಂ ಹುದ್ದೆಯ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದೆ. ಡಿಕೆ ಶಿವಕುಮಾರ್ ಇನ್ನು ಸಿಎಂ ಪಟ್ಟಕ್ಕಾಗಿ ತಮ್ ಹಠವನ್ನು ಮುಂದುವರೆಸುತ್ತಿರುವುದಾಗಿ ವರದಿಯಾಗಿದೆ.

"ಕರ್ನಾಟಕ ಸಿಎಂ ಕುರಿತು ಇನ್ನೂ ಚರ್ಚೆಗಳು ನಡೆಯುತ್ತಿವೆ. ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಊಹಾಪೋಹಗಳಿಗೆ ಅಥವಾ ಸುಳ್ಳು ಸುದ್ದಿಗಳಿಗೆ ಆಸ್ಪದ ನೀಡಬೇಡಿ. ಇಂದು ಅಥವಾ ನಾಳೆ ನಿರ್ಧಾರ ಪ್ರಕಟಿಸಲಾಗುವುದು. ಇದರ ಜೊತೆಗೆ 72 ಗಂಟೆಗಳಲ್ಲಿ ಸಂಪುಟ ಅಸ್ತಿತ್ವಕ್ಕೆ ಬರಲಿದೆ" ಎಂದು ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಬಗ್ಗೆ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಹಿರಿಯ ನಾಯಕರು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರನ್ನು ಬುಧವಾರವೂ ಭೇಟಿಯಾಗಿದ್ದಾರೆ. ಶಿವಕುಮಾರ್ ಅವರು ಬುಧವಾರ ದೆಹಲಿಯ 10 ಜನಪಥ್ನಲ್ಲಿರುವ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ಆಗಮಿಸಿ ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದಾರೆ.
ಇದಕ್ಕೂ ಮುನ್ನ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದ ಎಲ್ಲ ನೂತನ ಶಾಸಕರ ಜೊತೆಗೆ ಮಾತುಕತೆ ನಡೆಸಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚನೆ ಕುರಿತು ಚರ್ಚಿಸಲು ರಾಹುಲ್ ಗಾಂಧಿ ಅವರು ಮಂಗಳವಾರ ಖರ್ಗೆ ಅವರನ್ನು ಭೇಟಿ ಮಾಡಿದ್ದರು. ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ, ಶಾಸಕರಾದ ಜಮೀರ್ ಅಹ್ಮದ್, ಭೈರತಿ ಸುರೇಶ್, ಹಿರಿಯ ನಾಯಕ ಕೆಜೆ ಜಾರ್ಜ್ ಅವರೊಂದಿಗೆ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಆಗಮಿಸಿದ್ದರು.

ಶನಿವಾರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಭಾನುವಾರ ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಶಾಸಕರು ಸಿಎಂ ಆಯ್ಕೆ ಮಾಡಲು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿಕಾರ ನೀಡಿದ್ದಾರೆ. ಇದರ ಹಿನ್ನೆಲೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರೂ ದೆಹಲಿ ತಲುಪಿದ್ದಾರೆ. 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದುಕೊಂಡಿದೆ.












Click it and Unblock the Notifications