ಅಸಮಾಧಾನ ಜೆಡಿಎಸ್ ನಲ್ಲಿಲ್ಲ, ಕಾಂಗ್ರೆಸ್ ನಲ್ಲಿದೆ: ಎಚ್ ಡಿಕೆ
ಬೆಂಗಳೂರು, ಜೂನ್ 08: 'ಸಚಿವ ಸಂಪುಟಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ' ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
'ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯವಿದೆ. ಅದನ್ನು ಪಕ್ಷದ ಹಿರಿಯರು ಸರಿಪಡಿಸಿಕೊಳ್ಳುತ್ತಾರೆ. ಆದರೆ ಜೆಡಿಎಸ್ ನಲ್ಲಿ ಯಾವುದೇ ಅಸಮಾಧಾನವಿಲ್ಲ' ಎಂದು ಅವರು ಹೇಳಿದ್ದಾರೆ.
ಎರಡೆರಡು ಖಾತೆಗೆ ರೇವಣ್ಣ ಪಟ್ಟು ಎಚ್ಡಿಕೆಗೆ ಪೀಕಲಾಟ
ಸಚಿವ ಸಂಪುಟ ರಚನೆಯ ನಂತರ ಎದ್ದ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, "ಜೆಡಿಎಸ್ ನಲ್ಲಿ ಎಚ್ ವಿಶ್ವನಾಥ್ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂಬ ಕಾರಣಕ್ಕೆ ಬೇಸರಗೊಂದಿದ್ದಾರೆ ಎಂಬ ವದಂತಿ ಸುಳ್ಳು. ಸರ್ಕಾರ ರಚನೆಯ ಸಂದರ್ಭದಲ್ಲಿ ಹಲವರಿಗೆ ಅಸಮಾಧಾನವಾಗಬಹುದು. ಅದನ್ನು ಪಕ್ಷದ ವರಿಷ್ಟರು ಸರಿಪಡಿಸುತ್ತಾರೆ. ಜೆಡಿಎಸ್ ನಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ ಎಂದು ಅವರು ಹೇಳಿದ್ದಾರೆ.
ಜೂನ್ 6 ರಂದು ನಡೆದ ನೂತನ ಸಚಿವರ ಪ್ರಮಾಣವಚನದಲ್ಲಿ ಹಲವು ಶಾಸಕರ ಹೆಸರು ಕಾಣದಿದ್ದುದು ಅಸಮಾಧಾನಕ್ಕೆ ಕಾರಣವಾಗಿತ್ತು. ಮಾಜಿ ಜಲಸಂಪನ್ಮೂಲ ಸಚಿವ ಎಂಬಿ.ಪಾಟೀಲ್, ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಸೇರಿದಂತೆ ಪ್ರಮುಖ ನಾಯಕರು ಸಚಿವ ಸ್ಥಾನ ಸಿಗದೆ ಮೈತ್ರಿ ಸರ್ಕಾರದ ವಿರುದ್ಧ ಗರಂ ಆಗಿದ್ದರು. ಇದೀಗ ಅತೃಪ್ತರ ಮನವೊಲಿಸುವ ಕಾರ್ಯ ನಡೆಯುತ್ತಿದೆಯಾದರೂ, ಮೈತ್ರಿ ಸರ್ಕಾರದಲ್ಲಿ ಭಿನ್ನಮತ ಸ್ಫೋಟವಾಗುವ ಲಕ್ಷಣವೂ ಕಂದುಬರುತ್ತಿದೆ.