ತಿರುಗಿಯೂ ನೋಡದ ಅಂಬಿ, ಪದ್ಮಾವತಿಯೂ ನಾಪತ್ತೆ!
ಮಂಡ್ಯ, ಸೆಪ್ಟೆಂಬರ್ 09 : ಮಾಜಿ ಸಚಿವ, ಮಂಡ್ಯ ಕ್ಷೇತ್ರದ ಹಾಲಿ ಶಾಸಕ ಅಂಬರೀಶ್ ಅವರು ಕಾವೇರಿ ಚಳವಳಿಯಲ್ಲಿ ಭಾಗವಹಿಸುವುದಿರಲಿ, ಹೋರಾಟದ ಬಗ್ಗೆ ಒಂದೂ ಹೇಳಿಕೆಯನ್ನು ನೀಡದಿರುವುದು ಅವರ ಬೆಂಬಲಿಗರನ್ನು ಮತ್ತು ಮತದಾರರನ್ನು ರೊಚ್ಚಿಗೆಬ್ಬಿಸಿದೆ
ಕಾವೇರಿಗಾಗಿ ಜಿಲ್ಲೆಯ ರೈತರು, ಜನತೆ ಹಾಗೂ ವಿವಿಧ ಕನ್ನಡ ಸಂಘಟನೆಗಳು ಕಳೆದ ನಾಲ್ಕು ದಿನಗಳಿಂದ ಅನ್ನ ನೀರು ಬಿಟ್ಟು ಹೋರಾಟ ನಡೆಸುತ್ತಿದ್ದರೆ, ಕ್ಷೇತ್ರದ ಶಾಸಕರೆನಿಸಿಕೊಂಡಿರುವ ಅಂಬರೀಶ್ ಮಾತ್ರ ಇನ್ನೂ ತಿರುಗಿ ನೋಡಿಲ್ಲ. [ರಾಜಕೀಯ ಪತನ: ಅಂಬರೀಶ್ ಗೆ ಮುಳುವಾದ 5 ಅಂಶ]

ಅಮೆರಿಕಾದಲ್ಲಿ ನಡೆಯುತ್ತಿರುವ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆಂದು ತನ್ನ ಪತ್ನಿ ಸುಮಲತಾ ಜೊತೆ ಹೋಗಿರುವ ಅಂಬರೀಶ್, ಕಾವೇರಿಗೂ ನನಗೂ ಏನೂ ಸಂಬಂಧವಿಲ್ಲವೆಂಬಂತೆ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಅವರು ಕಾವೇರಿ ಹೋರಾಟದ ಪರವಾಗಿ ಅಲ್ಲಿಂದಲೇ ಹೇಳಿಕೆಯನ್ನು ನೀಡಿದ್ದರೂ ಆಗುತ್ತಿತ್ತು.
ಅಂಬರೀಶ್ ಅವರ ಈ ವರ್ತನೆಯಿಂದ ಮಂಡ್ಯ ಕ್ಷೇತ್ರದ ಜನತೆ ಸೇರಿದಂತೆ ಜಿಲ್ಲೆಯ ರೈತರು ಬೇಸತ್ತಿದ್ದು, ಯಾಕಪ್ಪ ಈತನನ್ನು ಗೆಲ್ಲಿಸಿದೋ ಎಂದು ತಮಗೆ ತಾವೇ ಬೇಸರ ವ್ಯಕ್ತಪಡುತ್ತಿದ್ದಾರೆ. ಕನ್ನಡದ ಬಗ್ಗೆ, ಕಾವೇರಿಯ ಕುರಿತು ಪೇಜುಗಟ್ಟಲೆ ಡೈಲಾಗು ಹೊಡೆಯುವ ಇವರು ಈಗೆಲ್ಲಿದ್ದಾರೆ ಎಂದು ಅಲ್ಲಿಯ ಜನತೆ ವ್ಯಂಗ್ಯವಾಡುತ್ತಿದ್ದಾರೆ. [ಗೋವಾ, ನೀರಿನ ಹೋರಾಟ ಮತ್ತು ನಿಶ್ಚಿತಾರ್ಥ: ಯಶ್ ಹೇಳಿದ 'ಕತ್ತೆ' ಕತೆ]

ಅಂಬರೀಶ್ ಅವರೊಂದಿಗೆ ಮಂಡ್ಯದವರೇ ಆದ ರಾಕಿಂಗ್ ಸ್ಟಾರ್ ಯಶ್ ಕೂಡ ಅಮೆರಿಕದ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಮನಸ್ಸು ಮಾಡಿದ್ದರೆ ಯಾವುದೇ ಸಮಯದಲ್ಲಿ ಇವರೆಲ್ಲ ವಾಪಸ್ ಬಂದು ಕಾವೇರಿ ಹೋರಾಟದಲ್ಲಿ ಧುಮುಕಬಹುದಿತ್ತು.
ಪದ್ಮಾವತಿಯೂ ನಾಪತ್ತೆ : ಸುಪ್ರೀಂ ಕೋರ್ಟ್ನ ನಿರ್ದೇಶನ ಬಂದಾಗಿನಿಂದ ಒಂದೂ ಹೇಳಿಕೆಯನ್ನು ನೀಡದೆ ಬುಧವಾರ ರಾತ್ರಿ ಪೊಲೀಸ್ ಬೆಂಗಾವಲಿನಲ್ಲಿ ಮಂಡ್ಯ ನಗರಕ್ಕೆ ಬಂದು, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಜಿ.ಮಾದೇಗೌಡ ಅವರನ್ನು ಭೇಟಿ ಮಾಡಿ ತೆರಳಿದ್ದ 'ಪದ್ಮಾವತಿ' ರಮ್ಯಾ ಇನ್ನೂ ಹೋರಾಟಕ್ಕೆ ಧುಮುಕಿಲ್ಲ. [ಗೊತ್ತಿಲ್ಲದ ವಿಷಯ ಮಾತಾಡುವ ರಮ್ಯಾಗೆ ಯಾಕ್ರೀ ಇಷ್ಟೊಂದು ಪ್ರಚಾರ?]

ಬುಧವಾರ ರಾತ್ರಿ ನಾನೂ ಸಹ ಹೋರಾಟಕ್ಕೆ ಬರುತ್ತೇನೆ, ನನ್ನ ಹೋರಾಟ ಬೇರೆ ರೀತಿಯಾಗಿರುತ್ತದೆ ಎಂದ್ಹೇಳಿ ಹೋದ ರಮ್ಯಾ, ಇನ್ನೂ ಬಂದಿಲ್ಲ. ಇತ್ತೀಚೆಗೆ ಪಾಕಿಸ್ತಾನದ ಪರವಾಗಿ ಹೇಳಿಕೆ ನೀಡಿ ಟೀಕೆಗೊಳಗಾಗಿದ್ದ ರಮ್ಯಾ, ಈಗ ಕಾವೇರಿ ಪರವಾಗಿ, ರೈತರ ಪರವಾಗಿ ಕೂಡ ಹೇಳಿಕೆ ನೀಡದೆ ಟೀಕಾಪ್ರಹಾರಕ್ಕೊಳಗಾಗಿದ್ದಾರೆ.












Click it and Unblock the Notifications