ವಿಧಾನಸಭಾ ಚುನಾವಣೆ: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪ್ರತ್ಯೇಕ ಪ್ರಜಾಧ್ವನಿ ಯಾತ್ರೆಯ ಸಂಪೂರ್ಣ ವಿವರಗಳು
ಚುನಾವಣೆಗೆ ಭರ್ಜರಿಯಾಗಿ ತಯಾರಾಗುತ್ತಿರುವಕಾಂಗ್ರೆಸ್, ಈಗಾಗಲೇ ಮೊದಲ ಹಂತದ ಪ್ರಜಾಧ್ವನಿ ಯಾತ್ರೆಯನ್ನು ಮುಗಿಸಿದೆ. ಎರಡನೇ ಹಂತದ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಪ್ರತ್ಯೇಕ ಪ್ರಜಾಧ್ವನಿ ಯಾತ್ರೆಯ ಸಂಪೂರ್ಣ ವಿವರ
ಬೆಂಗಳೂರು, ಜನವರಿ. 31: ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯಲು ಶತಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್ ಭಾರಿ ಪ್ರಚಾರವನ್ನು ನಡೆಸುತ್ತಿದೆ. ಮೊದಲ ಹಂತದ ಪ್ರಜಾಧ್ವನಿ ಯಾತ್ರೆಯನ್ನು ಮುಗಿಸಿ, ಈಗ ಎರಡನೇ ಹಂತಕ್ಕೆ ಕಾಲಿಟ್ಟಿದೆ.
ಜಿಲ್ಲಾವಾರು ನಡೆದ ಪ್ರಜಾಧ್ವನಿ ಯಾತ್ರೆಯ ಬೆನ್ನಲ್ಲೇ ಈಗ ವಿಧಾನಸಭಾ ವ್ಯಾಪ್ತಿಯಲ್ಲಿ ಎರಡನೇ ಹಂತದ ಯಾತ್ರೆಯನ್ನು ಫೆಬ್ರವರಿ ಮೂರರಂದು ಆರಂಭಿಸಲಿದೆ. ಈ ಬಾರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತ್ಯೇಕವಾಗಿ ಬಸ್ ಯಾತ್ರೆಯನ್ನು ನಡೆಸಲಿದ್ದಾರೆ.
Assembly Elections: ರಾಜ್ಯ ಚುನಾವಣಾ ಪ್ರಚಾರಕ್ಕೆ ವಾಟ್ಸಾಪ್ ಮುಖ್ಯ ಕೀಲಿ ಕೈ! ಹೇಗೆ ಇಲ್ಲಿದೆ ವಿವರ
ರಾಜ್ಯಾದ್ಯಂತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಎರಡು ತಂಡಗಳಲ್ಲಿ ಯಾತ್ರೆಯನ್ನು ಮುನ್ನಡೆಸಲಿದ್ದಾರೆ. ಫೆಬ್ರವರಿ 3 ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ಕುರುಡುಮಲೆ ದೇವಾಲಯದಿಂದ ಪ್ರಜಾಧ್ವನಿ ಬಸ್ ಯಾತ್ರೆ ಆರಂಭವಾಗಲಿದೆ.
ಕೋಲಾರದಿಂದ ಹೊರಡಲಿದೆ ಡಿ. ಕೆ. ಶಿವಕುಮಾರ್ ದಂಡಯಾತ್ರೆ
ಈ ಬಾರಿ ಹೇಗಾದರೂ ರಾಜ್ಯದಲ್ಲಿ ಅಧದಿಕಾರಕ್ಕೆ ಬರಲೇಬೇಕು ಎಂದ ಪ್ರಯತ್ನಿಸುತ್ತಿರುವ ಕಾಂಗ್ರೆಸ್ ತಮ್ಮ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ,ಶಿವಕುಮಾರ್ ನೇತೃತ್ವದಲ್ಲಿ ಎರಡು ತಂಡಗಳಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಯಾತ್ರೆ ನಡೆಸಲಿದೆ.
ಪಕ್ಷದ ಹೈಕಮಾಂಡ್ ಒಪ್ಪಿದರೆ ಮುಂದಿನ ಚುನಾವಣೆಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿ ಭಾರಿ ಕುತೂಹಲಕ್ಕೆ ಕಾರಣವಾಗಿರುವ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದಂಡಯಾತ್ರೆ ಆರಂಭಿಸಲಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ಕುರುಡುಮಲೆ ದೇವಾಲಯದಿಂದ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಉತ್ತರ ಕರ್ನಾಟಕದ 112 ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ತಂಡ, ದಕ್ಷಿಣ ಕರ್ನಾಟಕದ 112 ಕ್ಷೇತ್ರಗಳಲ್ಲಿ ಡಿ. ಕೆ. ಶಿವಕುಮಾರ್ ನೇತೃತ್ವದ ತಂಡ ಯಾತ್ರೆ ನಡೆಸಲಿದೆ.
ಅನುಭವ ಮಂಟಪದಿಂದ ಯಾತ್ರೆಗೆ ಸಿದ್ದರಾಮಯ್ಯ ಚಾಲನೆ
ಸಿದ್ದರಾಮಯ್ಯ ಸ್ಪರ್ಧಿಸಲಿರುವ ಕೋಲಾರದಲ್ಲಿ ಡಿ.ಕೆ.ಶಿವಕುಮಾರ್ ಯಾತ್ರೆಗೆ ಚಾಲನೆ ನೀಡಿದರೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೀದರ್ನ ಬಸವ ಕಲ್ಯಾಣಕ್ಕೆ ಭೇಟಿ, ಅನುಭವ ಮಂಟಪದಲ್ಲಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಸಿದ್ದರಾಮಯ್ಯ ಜೊತೆಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್, ಜಮೀರ್ ಅಹಮ್ಮದ್, ಭೈರತಿ ಸುರೇಶ್, ಹೆಚ್.ಸಿ ಮಹದೇವಪ್ಪ, ಸಂತೋಷ್ ಲಾಡ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಉಮಾಶ್ರೀ, ಅಂಜಲಿ ನಿಂಬಾಳ್ಕರ್ ಸೇರಿದಂತೆ ಒಟ್ಟು 35 ಮಂದಿ ಇರಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ವೀರಪ್ಪ ಮೊಯಿಲಿ, ಜಿ. ಪರಮೇಶ್ವರ, ದಿನೇಶ್ ಗುಂಡೂರಾವ್, ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಕೆ.ಎಚ್. ಮುನಿಯಪ್ಪ ಸೇರಿ 54 ನಾಯಕರು ಇರಲಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಸಿದ್ದರಾಮಯ್ಯ ದಂಡಯಾತ್ರೆ
ಸಿದ್ದರಾಮಯ್ಯ ಅವರ ಯಾತ್ರೆಯ ವಿವರ ಹೀಗಿದೆ. ಫರಬ್ರವರಿ ಮೂರರಂದು ಯಾಅತ್ರೆಗೆಗ ಚಾಲನೆ ನೀಡಿ ಅಲ್ಲೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ಫೆಬ್ರವರಿ 4 ರಂದು ಔರಾದ್, ಬೀದರ್ ಹಾಗೂ ಬೀದರ್ ದಕ್ಷಿಣ ಕ್ಷೇತ್ರ ಮತ್ತು ಸಂಜೆ ಹುಮ್ನಾಬಾದ್ನಲ್ಲಿ ಸಮಾವೇಶ ಬಳಿಕ ಕಲಬುರಗಿಯಲ್ಲಿ ವಾಸ್ತವ್ಯ 4. ಫೆ. 6 ರಂದು ಗುಲಬರ್ಗಾ ಗ್ರಾಮೀಣ, ಚಿಂಚೋಳಿ, ಸೇಡಂನಲ್ಲಿ ಯಾತ್ರೆ, ಫೆ. 7 ರಂದ ಆಳಂದ, ಅಫ್ಜಲಪುರ, ಯಡ್ರಾಮಿ ಜೇವರ್ಗಿ ಕ್ಷೇತ್ರದಲ್ಲಿ ಯಾತ್ರೆ ನಡೆಯಲಿದೆ.
ಫೆ. 8 ರಂದು ಚಿತ್ತಾಪುರ. ಫೆ. 10 ರಂದು ಸುರಪೂರ, ಶಹಪುರ, ಕಲಬುರ್ಗಿ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳು. ಫೆ. 11 ರಂದು ಸಿಂಧಗಿ, ಇಂಡಿ, ನಾಗಠಾಣಾ, ಫೆ. 12 ರಂದು ಬಬಲೇಶ್ವರ, ದೇವರ ಹಿಪ್ಪರಗಿ, ಬಸವನ ಬಾಗೇವಾಡಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ತಂಡ ಯಾತ್ರೆ ನಡೆಸಲಿದೆ.
ಇದೇ ರೀತಿ ಡಿ.ಕೆ ಶಿವಕುಮಾರ್ ನೇತೃತ್ವದ ತಂಡ, ಫೆ. 3 ರಂದು ಮುಳಬಾಗಿಲು, ಕೆಜಿಎಫ್ ಕ್ಷೇತ್ರಗಳಲ್ಲಿ, ಫೆ. 4ರಂದು ಮಾಲೂರು, ದೇವನಹಳ್ಳಿ, ಫೆ. 6 ಕ್ಕೆ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ಫೆ. 7 ರಂದು ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಫೆ. 8ಕ್ಕೆ ಶಿಕಾರಿಪುರ, ಸೊರಬ, ಸಾಗರ ಮತ್ತು ಫೆ. 9ರಂದು ತೀರ್ಥಹಳ್ಳಿ, ಭದ್ರಾವತಿ ಕ್ಷೇತ್ರಗಳಲ್ಲಿ ಪ್ರಜಾಧ್ವನಿ ಯಾತ್ರೆ ನಡೆಸಲಿದ್ದಾರೆ.
ಹಾಲಿ ಶಾಸಕರು, ಸೋತ 50 ನಾಯಕರಿಗೆ ಟಿಕೆಟ್ ಸಾಧ್ಯತೆ
ಪ್ರಜಾಧ್ವನಿ ಬಸ್ ಯಾತ್ರೆಯ ಮೊದಲ ಹಂತವನ್ನು ಮುಗಿಸಿರುವ ಕಾಂಗ್ರೆಸ್ ತನ್ನ ಎರಡನೇ ಹಂತದ ಯಾತ್ರೆಯ ನಂತರವೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಫೆಬ್ರವರಿ 9 ರಂದು ಈ ಬಗ್ಗೆ ತೀರ್ಮಾನವಾಗುವ ಸಾಧ್ಯತೆಯಿದ್ದು, ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಅಭ್ಯರ್ಥಿಗಳ ಪಟ್ಟಿ ತಲುಪಿವೆ.
ಎರಡನೇ ಹಂತದ ಪ್ರಜಾಧ್ವನಿ ಯಾತ್ರೆ ಪ್ರಾರಂಭಿಸುವ ಮೊದಲು, ಶಿವಕುಮಾರ್, ಸಿದ್ದರಾಮಯ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಕೆಸಿ ವೇಣುಗೋಪಾಲ್ ಸೇರಿದಂತೆ 36 ಸದಸ್ಯರ ಚುನಾವಣಾ ಸಮಿತಿ ಫೆಬ್ರವರಿ 2 ರಂದು ಟಿಕೆಟ್ ಅಂತಿಮಗೊಳಿಸಲು ಚರ್ಚೆ ನಡೆಸಲಿದೆ. ಸುಮಾರು 70 ಹಾಲಿ ಶಾಸಕರು ಹಾಗೂ 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತ 50 ಮಂದಿ ನಾಯಕರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ.