Kichcha Sudeep: ರಾಜ್ಯದಲ್ಲಿ ಚರ್ಚೆ ಹುಟ್ಟುಹಾಕಿದ ರಾಜಕೀಯ ಎಂಟ್ರಿ ಬಗ್ಗೆ ಮೌನ ಮುರಿದ ಕಿಚ್ಚ ಸುದೀಪ್
ರಾಜಕೀಯ ರಂಗಕ್ಕೆ ಸಿನಿಮಾರಂಗದ ತಾರೆ ಕಿಚ್ಚ ಸುದೀಪ್ ಎಂಟ್ರಿ ಬಗ್ಗೆ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು, ಫೆಬ್ರವರಿ. 15: ರಾಜ್ಯ ರಾಜಕೀಯಕ್ಕೂ ಚಿತ್ರರಂಗಕ್ಕೂ ಅವಿನಾಭಾವ ಸಂಬಂಧವಿದೆ. ಇಮದು ಇಲ್ಲಿರುವವರು ನಾಳೆ ಅಲ್ಲಿಗೆ ತೆರಳುವುದು ಸಾಮಾನ್ಯ. ರಾಜಕಾರಣಿಗಳು ಕೂಡ ನಿರ್ಮಾಪಕರ ಹೆಸರಿನಲ್ಲಿಯೂ, ಅತಿಥಿ ಪಾತ್ರಗಳ ಮೂಲಕ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳುಯತ್ತಾರೆ. ಹೀಗಾಗಿ ಚುನಾವಣೆ ಬಂದಾಗಲೆಲ್ಲಾ ಚಿತ್ರರಂಗದಿಂದ ಒಂದಿಬ್ಬರಾದರೂ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ.
ಸದ್ಯಕ್ಕೆ ಚಾಲ್ತಿಯಲ್ಲಿರುವ ಹೆಸರು ಕನ್ನಡದ ಬಾದ್ಶಾ ಕಿಚ್ಚ್ ಸುದೀಪ್. ಹೌದು, ಕಳೆದ ಒಂದೆರಡು ತಿಂಗಳುಗಳಿಂದ ನಟ ಸುದೀಪ್ ರಾಜಕೀಯಕ್ಕೆ ಸೇರಲಿದ್ದಾರೆ ಎಂಬ ವದಂತಿಗಳು ಶುರುವಾಗಿವೆ. ಇದಕ್ಕೆ ತಕ್ಕಂತೆ ರಾಜಕೀಯ ನಾಯಕರು ಸುದೀಪ್ ಅವರನ್ನು ಭೇಟಿ ಮಾಡುವುದು ನಡೆಯುತ್ತಿದೆ. ಈಗ ಇದರ ಬಗ್ಗೆ ಸ್ವತಃ ಸುದೀಪ್ ಮಾತನಾಡಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ್, ನಟ ಕಿಚ್ಚ ಸುದೀಪ್ ಅವರ ಬೆಂಗಳೂರಿನ ನಿವಾಸಕ್ಕೆ ದಿಢೀರ್ ಭೇಟಿ ನೀಡಿದ ನಂತರ ಸುದೀಪ್ ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿಗಳು ಆರಂಭವಾಗಿವೆ. ಇದಾಗಿ ಕೆಲವೇ ದಿನಗಳ ನಂತರ ಮೊದಲ ಬಾರಿಗೆ ಸುದೀಪ್ ಮಾತನಾಡಿದ್ದು, ರಾಜಕೀಯಕ್ಕೆ ಧುಮುಕಲು ಆಹ್ವಾನ ಬಂದಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್, ಬಿಜೆಪಿಯಿಂದ ಪಕ್ಷ ಸೇರಲು ಆಹ್ವಾನವಿದೆ
ಟಿವಿ9 ಕನ್ನಡದೊಂದಿಗೆ ಮಾತನಾಡಿರುವ ನಟ ಸುದೀಪ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆ ರಾಜಕೀಯ ಚರ್ಚೆ ನಡೆದಿದೆ ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
"ನಾನು ಕಲಾವಿದ, ಇವರೆಲ್ಲರೂ ನನ್ನ ಸ್ನೇಹಿತರು. ಹಾಗೆಂದು ಯಾವುದೇ ರಾಜಕೀಯ ಚರ್ಚೆಗಳು ನಡೆದಿಲ್ಲ ಎಂದು ನಾನು ಹೇಳುವುದಿಲ್ಲ. ನನ್ನನ್ನು ರಾಜಕೀಯಕ್ಕೆ ಬರುವಂತೆ ಆಹ್ವಾನಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಬಹಳಷ್ಟು ಬಹಳಷ್ಟು ರಾಜಕೀಯ ನಾಯಕರು ನನ್ನನ್ನು ಆಹ್ವಾನಿಸಿದ್ದಾರೆ " ಎಂದು ಹೇಳಿದ್ದಾರೆ.

'ನಾನು ಎಲ್ಲರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ'
"ನಾನು ಎಲ್ಲರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇನೆ. ಅದು ಡಿಕೆ ಶಿವಕುಮಾರ್ ಆಗಿರಬಹುದು, ಡಾ. ಕೆ ಸುಧಾಕರ್ ಆಗಿರಬಹುದು, ಬಸವರಾಜ ಬೊಮ್ಮಾಯಿ ಮಾಮಾ ಆಗಿರಬಹುದು ಅಥವಾ ನನ್ನ ಸ್ನೇಹಿತೆ ರಮ್ಯಾ ಕೂಡ ಆಗಿರಬಹುದು. ಎಲ್ಲರು ನನ್ನ ಜೊತೆಗೆ ಒಳ್ಳೆ ಸಂಬಂಧ ಹೊಂದಿದ್ದಾರೆ. ಎರಡು ಕಡೆ ಆಪ್ತರು ಇದ್ದಾರೆ" ಎಂದು ಸುದೀಪ್ ತಿಳಿಸಿದ್ದಾರೆ.
'ನೋಡೋಣ, ನಾನು ಇನ್ನೂ ರಾಜಕೀಯಕ್ಕೆ ಸೇರುವ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ. ಇನ್ನೂ ಚರ್ಚೆಗಳು ನಡೆಯುತ್ತಿದ್ದು, ನಾನು ನಿರ್ಧರಿಸಿದಾಗ ತಿಳಿಸುತ್ತೇನೆ. ಚುನಾವಣೆಯಲ್ಲಿ ಸ್ಪರ್ಧಿಸುವ ಬದಲು ಪಕ್ಷಗಳ ಅಭ್ಯರ್ಥಿಗಳನ್ನು ಬೆಂಬಲಿಸಲು ನನ್ನನ್ನು ಆಯ್ಕೆ ಮಾಡಬಹುದು" ಎಂಬ ಸುಳಿವನ್ನು ಎಂದು ಸುದೀಪ್ ನೀಡಿದ್ದಾರೆ.j

ಅಭಿಮಾನಿಗಳು ಏನು ಬಯಸುತ್ತಾರೆ ಎಂಬುದು ಮುಖ್ಯ'
"ನಾನು ಭಾವನಾತ್ಮಕ ವ್ಯಕ್ತಿ. ನನಗೆ ಸರಿಯಾದ ನಿರ್ಧಾರವನ್ನು ನಾನು ತೆಗೆದುಕೊಳ್ಳುತ್ತೇನೆ. ನನಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದ ಆಫರ್ಗಳಿವೆ ಎಂಬುದು ಒಂದು ನಿಜ. ಆದರೆ ಅಭಿಮಾನಿಗಳ ಪಕ್ಷ ಎಂಬ ಮತ್ತೊಂದು ಪಕ್ಷವಿದೆ. ನಾನು ಏನು ಮಾಡಬೇಕೆಂದು ಅವರು ನಿರೀಕ್ಷಿಸುತ್ತಾರೆ ಎಂಬುದನ್ನು ಕೂಡ ನಾನು ಗಮನಿಸಬೇಕಾಗಿದೆ" ಎಂದಿದ್ದಾರೆ.
ಇನ್ನು ರಾಜಕೀಯ ಸೇರುವ ಮೊದಲು ನಾನು ನನ್ನಲ್ಲಿಯೇ ಕೆಲವು ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಿದ್ದೇನೆ. ನಾನೇಕೆ ಸ್ಪರ್ಧಿಸಬೇಕು..? ನಾನು ಅಲ್ಲಿ ಇನ್ನೇನು ಮಾಡಬಹುದು..? ಜನರಿಗಾಗಿ ಕೆಲಸ ಮಾಡಲು ಅಧಿಕಾರ ಬೇಕಿಲ್ಲ. ನನಗೆ ಎಲ್ಲಾ ಪಕ್ಷಗಳಲ್ಲಿ ಸ್ನೇಹಿತರಿದ್ದಾರೆ. ಹೀಗಾಗಿ ನನಗೆ ಅವರನ್ನು ಬೆಂಬಲಿಸುವ ಆಯ್ಕೆಯಿದೆ. ಇದರ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಸುದೀಪ್ ಹೇಳಿದ್ದಾರೆ.

ಇತ್ತೀಚೆಗೆ ಕಾಂಗ್ರೆಸ್ ನಾಯಕ ಡಿಕೆಶಿ - ನಟ ಸುದೀಪ್ ಭೇಟಿ
ಪ್ರಧಾನಿ ಮೋದಿಯವರ ಜೊತೆಗಿನ ಸಭೆಗೆ ಸುದೀಪ್ ಗೈರಾಗಿದ್ದರು, ಈ ಬಗ್ಗೆಯೂ ಮಾತನಾಡಿರುವ ಅವರು ಅನಾರೋಗ್ಯ ಎಂದು ಕಾರಣ ನೀಡಿದ್ದಾರೆ.
'ಪ್ರಧಾನಿ ಮೋದಿಯವರ ಸಭೆಗೆ ನನ್ನನ್ನು ಆಹ್ವಾನಿಸಲಾಗಿತ್ತು. ಆಹ್ವಾನಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಆದರೆ, ಅಸ್ವಸ್ಥರಾಗಿದ್ದರೆ ಸಭೆಗೆ ಹಾಜರಾಗಬಾರದು ಎಂದು ನಿಯಮವಿತ್ತು. ನನಗೆ ಸ್ವಲ್ಪ ಜ್ವರ ಇತ್ತು, ಹಾಗಾಗಿ ಸಂಬಂಧಪಟ್ಟವರಿಗೆ ಕರೆ ಮಾಡಿ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದೆ. ನನಗೆ ಪ್ರಧಾನಿ ಮೋದಿಯವರನ್ನು ಭೇಟಿಯಾಗದಿರುವುದು ಬೇಸರವಾಗಿದೆ' ಎಂದು ಸುದೀಪ್ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ನಂತರ ಸುದೀಪ್ ಅವರು ಕಾಂಗ್ರೆಸ್ ಸೇರುವ ಆಲೋಚನೆಯಲ್ಲಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಊಹಾಪೋಹಗಳು ಹಬ್ಬಿದ್ದವು.
(ಮಾಹಿತಿ ಕೃಪೆ: ಟಿವಿ9 ಕನ್ನಡ)












Click it and Unblock the Notifications