ಬಹುಮುಖ ಪ್ರತಿಭೆಯ ಲೇಖಕಿ ಎಚ್ಎಸ್ ಪಾರ್ವತಿ ಕಣ್ಮರೆ
ಬೆಂಗಳೂರು, ನ.09: ಕನ್ನಡ ಸಾಹಿತ್ಯ ಲೋಕದ ಬಹುಮುಖ ಪ್ರತಿಭೆ, ಆಕಾಶವಾಣಿಯ ಕಾರ್ಯ ನಿರ್ವಾಹಕಿಯಾಗಿದ್ದ ಎಚ್ ಎಸ್ ಪಾರ್ವತಿ ಅವರು ಸೋಮವಾರ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಪಾರ್ವತಿ ಅವರು ಪುತ್ರಿ ವಿದ್ಯಾ ಮತ್ತು ಪುತ್ರ ರವಿ ಅವರನ್ನು ಅಗಲಿದ್ದಾರೆ.
ಎಚ್. ಶ್ರೀನಿವಾಸರಾವ್ ಹಾಗೂ ಮಹಾಲಕ್ಷ್ಮಮ್ಮ ದಂಪತಿ ಪುತ್ರಿಯಾಗಿ ಫೆಬ್ರವರಿ 3, 1934ರಂದು ಜನಿಸಿದ್ದ ಪಾರ್ವತಿ ಅವರು ಲೇಖಕಿ, ಅನುವಾದಕಿಯಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಬೆಳೆದವರು.
ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ ಓದಿದ ಪಾರ್ವತಿ ಅವರು ಬನಾರಸ್ ವಿಶ್ವವಿದ್ಯಾಲಯದಿಂದ ಎಂಎ(ಹಿಂದಿ), ಹಿಂದಿಯಲ್ಲಿ ಪ್ರವೀಣ್, ಪ್ರಚಾರಕ್, ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ 'ಜಾಣ' ಪರೀಕ್ಷೆಯಲ್ಲಿ ತೇರ್ಗಡೆ.[ಕನ್ನಡ-ಮರಾಠಿ ಸಾಹಿತ್ಯ ಸೇತುವೆ ಮೀನಾ ವಾಂಗೀಕರ್ ಇನ್ನಿಲ್ಲ]
1958ರಲ್ಲಿ ಆಲ್ ಇಂಡಿಯಾ ರೇಡಿಯೋ (AIR) ಬೆಂಗಳೂರು ವಿಭಾಗ ಸೇರಿ ನಿಲಯದ ಕಲಾವಿದೆಯಾಗಿದ್ದವರು ಕಾರ್ಯಕ್ರಮ ನಿರ್ವಾಹಕಿಯಾಗಿ ಮೈಸೂರು ಹಾಗೂ ಬೆಂಗಳೂರಿನ ಆಕಾಶವಾಣಿಯಲ್ಲಿ ಕಾರ್ಯನಿರ್ವಹಿಸಿದರು. 1990ರಲ್ಲಿ ಸ್ವಯಂ ನಿವೃತ್ತಿ ಪಡೆದರು.

ಆಕಾಶವಾಣಿಯಲ್ಲಿ
* ಕಥಾತರಂಗ ಸರಣಿಯಲ್ಲಿ 60ಕ್ಕೂ ಹೆಚ್ಚಿನ ಕಥೆಗಳನ್ನು ಬಿತ್ತರಿಸಲಾಯಿತು.
* ಕೇಳಿ ಗಿಳಿಗಳೆ- ಮಕ್ಕಳಿಗಾಗಿ ರೂಪಿಸಲಾದ ಕಾರ್ಯಕ್ರಮ.
* ಸರ್ವಜ್ಞನ ತ್ರಿಪದಿಗಳು, ಕನ್ನಡದ ಕವಿಗಳ ಬಗ್ಗೆ ಚಿಂತನ ಕಾರ್ಯಕ್ರಮ
* 20 ವರ್ಷಗಳ ಕಾಲ ಜನಪ್ರಿಯವಾಗಿದ್ದ ನಾವು ನಮ್ಮವರು ಸರಣಿಯಲ್ಲಿ ಎ.ಎಸ್ ಮೂರ್ತಿ ಅವರ ಜೊತೆ ಕಾರ್ಯ ನಿರ್ವಹಿಸಿದ್ದರು.
* ನೂರಕ್ಕೂ ಹೆಚ್ಚು ಶಬ್ದ ಚಿತ್ರಗಳನ್ನು, ನಾಟಕಗಳನ್ನು ಹಿಂದಿಯಿಂದ ಕನ್ನಡಕ್ಕೆ, ಕನ್ನಡದಿಂದ ಹಿಂದಿಗೆ ಅನುವಾದಿಸಿ ಪ್ರಸಾರ ಮಾಡಿದರು.[ಕನ್ನಡ-ಮರಾಠಿ ಸಾಹಿತ್ಯ ಸೇತುವೆ ಮೀನಾ ವಾಂಗೀಕರ್]
ಸಾಹಿತಿಯಾಗಿ:
* ಕನ್ನಡ ಸಾಹಿತ್ಯ ಚರಿತ್ರೆಯ ಸಂಕ್ಷಿಪ್ತ ಪರಿಚಯವನ್ನು ಗುಜರಾತಿ ಭಾಷೆಯ ವಿಶ್ವಕೋಶಕ್ಕಾಗಿ ಮಾಡಿದ್ದಲ್ಲದೆ ೨೫ ಕ್ಕೂ ಹೆಚ್ಚು ಪ್ರಾಚೀನ ಹಾಗೂ ಆಧುನಿಕ ಕನ್ನಡ ಸಾಹಿತಿಗಳನ್ನು ಹಿಂದಿ ಭಾಷೆಯವರಿಗೂ ಪರಿಚಯಿಸಿದರು.
ಕಾದಂಬರಿಗಳು
* ನೇಸರು ನೆಳಲು
* ಜೀವನ ಜಾಲ
* ಜಬಾಲಾ
* ಗೂಡಿನಿಂದ ಗಗನಕ್ಕೆ
* ಇದು ಬರಿ ಬೆಳಗಲ್ಲ
* ಹಾವಿ ಏಣಿ ಆಟ
* ಒಂದು ಸಂವತ್ಸರ ಚಕ್ರ
* ಮಡಿಲು
* ಯುಗಪುರುಷ
* ನಂದ ನಂದನ
ಕಥಾ ಸಂಕಲನ
* ಹೆಣ್ಣು ಹೃದಯ
* ಬದಲಾದ ಪ್ರತಿಬಿಂಬ
* ಸ್ವರ ಅಪಸ್ವರ
* ಒಂಟಿ ಮೋಡ
* ನೆನಪು ಸಾಯಲಿಲ್ಲ
* ಸುಳಿ
* ಮಹಾಭಾರತದ ಉಪಕಥೆಗಳು
ಪ್ರಬಂಧ
* ಚಿಂತನ ಮಂಥನ
* ಸಾಹಿತ್ಯ-ಮಹಿಳಾ ದೃಷ್ಟಿ
* ಸಾಹಿತ್ಯ ಲಹರಿ
* ಓದಿನಾ ಒಳಗು
ಭಾಷಾಂತರ
* ಪರಾಜಯ
* ದುರ್ಗೇಶ ನಂದಿನಿ
* ತ್ಯಾಗಪತ್ರ ಮತ್ತು ಉದಯದೆಡೆಗೆ
* ಬಿಳಿರಕ್ತ
* ಮುಚ್ಚಿದ ಬಾಗಿಲು
* ಮಾಸಿದ ಸೆರಗು
* ದರ್ಬಾರಿ ರಾಗ
* ಬಂಟೀ
* ರಣ ಹದ್ದುಗಳು
* ಮಂದಹಾಸ
* ಫಣೇಶ್ವರನಾಥ ನೇಣಿ
* ಗಂಗೂತಾಯಿ
* ಪಂಜಾಬಿ ಲೋಕಕಥೆಗಳು
* ನನಗೆ ಚಂದ್ರ ಬೇಕು.
ಸಂಪಾದನೆ
* ಕನಸು-ನನಸು
* ಭಾರತಿ ತಿರುಮಲೆ ರಾಜಮ್ಮ -ಅಭಿನಂದನಾ ಗ್ರಂಥ
* ಸುನಂದಾಭಿನಂದನ-ಅಭಿನಂದನಾ ಗ್ರಂಥ
* ಜಿ.ನಾರಾಯಣ-ವಿಚಾರ
* ಕಬೀರ್ ಮತ್ತು ಸರ್ವಜ್ಞನ ವಚನಗಳು
* ಸುರಗಿ
* ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ
* ಇಪ್ಪತ್ತನೆ ಶತಮಾನದಲ್ಲಿ ಕರ್ನಾಟಕ ಮಹಿಳೆಯರ ಸಾಧನೆ
ಜೀವನ ಚರಿತ್ರೆ
* ತಿರುಮಲೆ ರಾಜಮ್ಮ
* ಆರ್.ಕಲ್ಯಾಣಮ್ಮ ಜೀವನ
* ರೇಡಿಯೋ ನಾಟಕ
ಕಥಾ ತರಂಗ(ಸಂಗ್ರಹ)
* ಎಚ್.ಎಸ್.ಪಾರ್ವತಿಯವರಿಗೆ ಓದಿನಾ ಒಳಗು ಎನ್ನುವ ಪ್ರಬಂಧಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ದೊರೆತಿದೆ.
ಪ್ರಶಸ್ತಿ, ಪುರಸ್ಕಾರ:
* ಕರ್ನಾಟಕ ಲೇಖಕಿಯರ ಸಂಘದ ಸ್ಥಾಪಕ ಅಧ್ಯಕ್ಷೆಯಾಗಿದ್ದರು.
* ಇವರ ಅನೇಕ ಕಥೆಗಳನ್ನು ವಾರ್ತಾ ಮತ್ತು ಪ್ರಸಾರ ಇಲಾಖೆ ಸಾಕ್ಷ್ಯಚಿತ್ರ ರೂಪದಲ್ಲಿ ಹೊರತಂದಿದೆ.
* ಉತ್ತರಪ್ರದೇಶ ಸರ್ಕಾರದಿಂದ ಸಾಹಿತ್ಯ ಸೌಹಾರ್ದೆ ಪ್ರಶಸ್ತಿ.
* ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
* ಕರ್ನಾಟಕ ನಾಟಕ ಅಕಾಡೆಮಿ ಫೆಲೋಶಿಪ್.
* ಕರ್ನಾಟಕ ಅನುವಾದ ಅಕಾಡೆಮಿ ಪ್ರಶಸ್ತಿ
* ಕನ್ನಡ ರಾಜ್ಯೋತ್ಸವ ಪ್ರಶಸ್ತಿ.
ಮಾಹಿತಿ ಹಾಗೂ ಚಿತ್ರಕೃಪೆ: ಪುಣ್ಯವತಿ ಎಸ್ ಬಿ, ಬೆಂಗಳೂರು ಆಕಾಶವಾಣಿ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications