ಎಲ್ & ಟಿ ರೈನ್ಟ್ರೀ ಬೌಲೆವರ್ಡ್ ನಿವಾಸಿಗಳಿಂದ ಕನ್ನಡ ರಾಜ್ಯೋತ್ಸವ ಸಂಭ್ರಮ
ಬೆಂಗಳೂರು, ನ.3: ಕನ್ನಡ ರಾಜ್ಯೋತ್ಸವ ಕನ್ನಡಿಗರಿಗೆ ಅತಿ ದೊಡ್ಡ ಹಬ್ಬ. ಕಿರಿಯರಿಂದ ಹಿಡಿದು ಹಿರಿಯರವರೆಗೂ ಯಾವ ಭೇದ ಭಾವವಿಲ್ಲದೆ, ಜಾತಿ-ಮತಗಳ ಹಂಗಿಲ್ಲದೆ, ಬಡವ-ಬಲ್ಲಿದ ಎಂಬ ತೊಡರಿಲ್ಲದೆ ಎಲ್ಲರೂ ಸಮಾನತೆಯಿಂದ, ಸಂಭ್ರಮದಿಂದ, ಸಂತಸದಿಂದ ಆಚರಿಸುವ ಹಬ್ಬವೇ ನಮ್ಮ ಈ ಕನ್ನಡ ರಾಜ್ಯೋತ್ಸವ.
ಇಂತಹ ಮೈ-ಮನ ಪುಳಕಿತವಾಗುವ ಹಬ್ಬವನ್ನು ಎಲ್ & ಟಿ ರೈನ್ಟ್ರೀ ಬೌಲೆವರ್ಡ್'ನ ನಿವಾಸಿಗಳು ವಿಜೃಂಭಣೆಯಿಂದ ಇಡೀ ದಿನ ಹಲವಾರು ಕಾರ್ಯಕ್ರಮಗಳ ಆಯೋಜನೆಯೊಂದಿಗೆ ಉಲ್ಲಾಸದಿಂದ ಆಚರಿಸಿ ಖುಷಿ ಪಟ್ಟರು. ಎಲ್ & ಟಿ ರೈನ್ಟ್ರೀ ಬೌಲೆವರ್ಡ್ನ ಕನ್ನಡ ಬಳಗ ಹಾಗೂ ಸಾಂಸ್ಕೃತಿಕ ಸಮಿತಿ ಜಂಟಿಯಾಗಿ ಈ ಹಬ್ಬವನ್ನು ಆಯೋಜಿಸಿದ್ದವು.
ಕನ್ನಡಿಗರಷ್ಟೇ ಅಲ್ಲದೆ ಹೊರ ರಾಜ್ಯದವರೂ ಹೆಚ್ಚಾಗಿರುವ ಈ ಅಪಾರ್ಟ್ಮೆಂಟ್ ಸಮೂಹದಲ್ಲಿ ಅನ್ಯ ಭಾಷಿಕರು ಕೂಡ ನಾವೂ ಕನ್ನಡಿಗರು ಎಂಬ ಅಭಿಮಾನದಿಂದ ಗೌರವದಿಂದ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಹಾಗೂ ಮನರಂಜನೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಆಚರಣೆಯನ್ನು ಅರ್ಥಪೂರ್ಣವಾಗಿಸಿದರು.

ಕನ್ನಡ ಹಬ್ಬಕ್ಕೆ ಬಂದ ಅತಿಥಿಗಳು
ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವರಾದ ಡಾ. ಎ.ಬಿ ಪಾಟೀಲ್ ಹಾಗೂ ಹಿರಿಯ ಸಾಹಿತಿ ಆಗುಂಬೆ ನಟರಾಜ್ ಅವರು ಮುಖ್ಯ ಹಾಗೂ ವಿಶೇಷ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹಣವನ್ನು ನೆರವೇರಿಸಿದರು. ಇಬ್ಬರೂ ಅತಿಥಿಗಳು ಕಿಕ್ಕಿರಿದು ನೆರೆದಿದ್ದ ಅಪಾರ್ಟ್ಮೆಂಟ್ ನಿವಾಸಿಗಳ ಭಾಗವಹಿಸುವಿಕೆ, ಉತ್ಸಾಹ, ಕನ್ನಡ ಪ್ರೀತಿ ಮತ್ತು ಗೌರವ ಕಂಡು ಹರ್ಷ ವ್ಯಕ್ತಪಡಿಸಿ ಕನ್ನಡದ ಕೆಲಸಗಳಿಗೆ ತಮ್ಮ ಬೆಂಬಲ ಸೂಚಿಸಿದರು.
ಭುವನಗಿರಿಯಲ್ಲಿ ರಾಜ್ಯದ ಏಕೈಕ ಕನ್ನಡಾಂಬೆ ದೇಗುಲ: ಹೋಗುವ ಮಾರ್ಗ, ಇಲ್ಲಿದೆ ವಿವರ
ಈ ಅಪಾರ್ಟ್ಮೆಂಟ್ ಪ್ರತಿಭೆಗಳ ಸಾಗರ
ಈ ಅಪಾರ್ಟ್ಮೆಂಟ್ ಪ್ರತಿಭೆಗಳ ಸಾಗರ. ನವೆಂಬರ್ 1 ರಂದು ನಡೆದ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಇಲ್ಲಿರುವ ಪ್ರತಿಭೆಗಳೇ , ಕಲಾಸಕ್ತರೇ ನೃತ್ಯ, ಗಾಯನ, ಕಿರು ನಾಟಕಗಳನ್ನು ನಿರ್ವಹಿಸಿದರು. ವಿಶೇಷವಾಗಿ ಕರಾವಳಿಯ ಪ್ರಸಿದ್ಧ ಯಕ್ಷಗಾನವನ್ನು ಕೂಡ ಇಲ್ಲಿನ ರಘು ಶೆಟ್ಟಿ ಮತ್ತು ದೇವದಾಸ್ ಪೈ ಅವರು ಕಡಿಮೆ ಅವಧಿಯಲ್ಲಿ ಕಲೆತು ಅದ್ಭುತವಾಗಿ ಕಲೆಯನ್ನು ಪ್ರಸ್ತುತ ಪಡಿಸಿದರು.

ವೀರಗಾಸೆ ಕಲೆ
ಮಂಡ್ಯದಿಂದ ಬಂದಂತಹ ಲೋಕೇಶ್ ಮತ್ತು ತಂಡದವರು 2 ಗಂಟೆಗಳ ಕಾಲ ವೀರಗಾಸೆ ಕಲೆಯನ್ನು ಮನಮೋಹಕವಾಗಿ ಇಲ್ಲಿನ ಜನತೆಗಾಗಿ ಅರ್ಪಿಸಿದರು. ನೆರೆದಿದ್ದ ಜನಸ್ತೋಮ ವೀರಗಾಸೆ ಕಲೆಯನ್ನು ಕಣ್ಣತುಂಬ ತುಂಬಿಕೊಂಡು ಹೆಜ್ಜೆ ಹಾಕಿ ಸಂಭ್ರಮಿಸಿದರು. ಈ ವಿಶೇಷ ಜಾನಪದ ಕಾರ್ಯಕ್ರಮವನ್ನು ಕನ್ನಡ & ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.
ಅನೇಕ ಚಿಕ್ಕ ಮಕ್ಕಳು, ವಯಸ್ಸಿನ ಹಂಗಿಲ್ಲದೆ ಅನೇಕ ಹೆಂಗಳೆಯರೂ ಕೂಡ ಕನ್ನಡ ಹಾಡುಗಳಿಗೆ ನೃತ್ಯವನ್ನು ಮಾಡಿ ಮನರಂಜಿಸಿದರು. ಪುರುಷರು ಕೂಡ ಕನ್ನಡ ಗೀತೆಗಳನ್ನು ಹಾಡಿ ತಮ್ಮ ಪಾಲ್ಗೊಳ್ಳುವಿಕೆಯನ್ನು ಸಹ ಸಾಕ್ಷೀಕರಿಸಿದರು.
ನ್ಯಾಯಾಂಗದಲ್ಲಿ ಕನ್ನಡ ಇನ್ನೂ ಮರೀಚಿಕೆ: ಹೈಕೋರ್ಟ್ನಲ್ಲಿ ಕಡ್ಡಾಯವಾಗದ ಹೊರತು ಸಾಧ್ಯವಿಲ್ಲ!
ವಸ್ತು ಪ್ರದರ್ಶನ
ರವಿರಾಮ್ ನಾರಾಯಣ್ ಅವರ ನೇತೃತ್ವದಲ್ಲಿ ವಸ್ತು ಪ್ರದರ್ಶನವನ್ನು ಸಹ ಆರ್.ಟಿ.ಬಿ'ಯ ಹೊರಾಂಗಣದಲ್ಲಿ ಬೃಹತ್ತಾಗಿ ಆಯೋಜಿಸಲಾಗಿತ್ತು. ಸೀರೆ, ಮಕ್ಕಳ ಆಟಿಕೆ, ಕಲಾಕೃತಿಗಳು, ತಿಂಡಿ ತಿನಿಸುಗಳು ಮತ್ತು ಇನ್ನಿತರ ಗೃಹೋಪಯೋಗಿ ವಸ್ತುಗಳನ್ನು ಕೂಡ ಇಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿತ್ತು.
ಆರ್.ಟಿ.ಬಿ ಕನ್ನಡ ಬಳಗ ಕುಟುಂಬದಿಂದ ಮೂಡಿಬಂದ ಈ 67ನೇ ಕರ್ನಾಟಕ ರಾಜ್ಯೋತ್ಸವ ಆರ್.ಟಿ.ಬಿ ಅಪಾರ್ಟ್ಮೆಂಟ್ನ ನೆನಪಿನಾಳದಲ್ಲಿ ಸ್ವಾತಿ ಮುತ್ತಾಗಿ ಬಹು ಕಾಲ ಉಳಿಯಲಿದೆ. ಒಟ್ಟಿನಲ್ಲಿ ಎಲ್ & ಟಿ ರೈನ್ಟ್ರೀ ಬೌಲೆವರ್ಡ್ನ ನಿವಾಸಿಗಳು ವಿವಿಧತೆಯಲ್ಲಿ ಏಕತೆಯನ್ನು, ಕನ್ನಡ ಅಭಿಮಾನವನ್ನು ಮೆರೆದರು.
ವಿದೇಶದಲ್ಲಿ ಕರ್ನಾಟಕದ ಖಡಕ್ ರೊಟ್ಟಿ, ಬದನೆಕಾಯಿ ಪಲ್ಯ!











Click it and Unblock the Notifications