ಭುವನಗಿರಿಯಲ್ಲಿ ರಾಜ್ಯದ ಏಕೈಕ ಕನ್ನಡಾಂಬೆ ದೇಗುಲ: ಹೋಗುವ ಮಾರ್ಗ, ಇಲ್ಲಿದೆ ವಿವರ
ಕಾರವಾರ, ನವೆಂಬರ್, 01: ರಾಜ್ಯಾದ್ಯಂತ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ಮುಗಿಲು ಮುಟ್ಟಿದೆ. ಕರ್ನಾಟಕ ಏಕೀಕರಣಗೊಂಡು ಇಂದಿಗೆ 67ರ ಸಂಭ್ರಮದಲ್ಲಿದ್ದೇವೆ. ಈ ಸಂಭ್ರಮದಲ್ಲಿ ಕನ್ನಡದ ತಾಯಿ ಭುವನೇಶ್ವರಿಯ ಫೋಟೋಗಳಿಗೆ ಎಲ್ಲೆಡೆ ಪೂಜೆ, ಮೆರವಣಿಗೆ ನಡೆಯುತ್ತದೆ. ಹಾಗೆಯೇ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬೇಡ್ಕಣಿ ಸಮೀಪದ ಭುವನಗಿರಿಯ ಗುಡಿಯಲ್ಲಿ ಭುವನೇಶ್ವರಿ ತಾಯಿ ಕಂಗೊಳಿಸುತ್ತಿದ್ದಾರೆ.
ನೈಸರ್ಗಿಕ ಕೃಷಿಯಲ್ಲಿನ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಚಂದ್ರಶೇಖರ್
ಕನ್ನಡಾಂಬೆಯೆಂದೇ ಕರೆಯಲ್ಪಡುವ ಭುವನೇಶ್ವರಿಯನ್ನು ಇಲ್ಲಿ ನಿತ್ಯ ಪೂಜಿಸಲಾಗುತ್ತದೆ. ಪ್ರತಿದಿನವೂ ಸ್ಥಳೀಯರು ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಆದರೆ ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಬೇರೆ ಊರಿನವರು, ವಿವಿಧ ಜಿಲ್ಲೆಗಳ ಜನರು ಇಲ್ಲಿಗೆ ಭೇಟಿ ನೀಡಿ ತಾಯಿ ಭುವನೇಶ್ವರಿಯನ್ನು ಕಣ್ತುಂಬಿಕೊಳ್ಳುತ್ತಾರೆ. ಹಿಂದಿನ ಕಾಲದಿಂದಲೂ ಭುವನಗಿರಿಯಲ್ಲಿರುವ ಭುವನೇಶ್ವರಿ ದೇಗುಲ ಇದೆ. ಈ ದೇಗುಲಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಕನ್ನಡದ ಮೊದಲ ರಾಜ ಮನೆತನ ಕದಂಬರ ರಾಜಧಾನಿ ಇಲ್ಲಿನ ಪಕ್ಕದ ಬನವಾಸಿ ಆಗಿತ್ತು. ಈಗಿನ ಹಾವೇರಿ ಜಿಲ್ಲೆಯ ಹಾನಗಲ್ನಿಂದ ಗೋವಾದವರೆಗೆ ಇವರ ಸಾಮ್ರಾಜ್ಯ ಹರಡಿತ್ತು. ಇವರ ಆಳ್ವಿಕೆಯಲ್ಲೇ ಕನ್ನಡ ಭಾಷೆ ಪ್ರಚಲಿತದಲ್ಲಿ ಬಂದಿದ್ದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಕದಂಬರ ಕುಲದೇವಿ ಆಗಿದ್ದ ಭುವನೇಶ್ವರಿಯೇ ಕಾಲ ಕಳೆದಂತೆ ಕನ್ನಡದ ಅಧಿದೇವತೆ ಆದಳು ಎನ್ನುವ ಉಲ್ಲೇಖವಿದೆ.
ಗುಡ್ಡ ಪ್ರದೇಶದಲ್ಲಿ ದೇಗುಲ ನಿರ್ಮಾಣ
ಭುವನಗಿರಿಯನ್ನು ತಮ್ಮ ಕುಲದೇವಿಗಾಗಿ ಕದಂಬರು ತಮ್ಮ ಸಾಮ್ರಾಜ್ಯದ ಒಂದು ಭಾಗವಾಗಿ ಮೀಸಲಿಟ್ಟಿದ್ದರು. ದಿನಗಳು ಕಳೆದಂತೆ ಭುವನಗಿರಿ ಎಂದು ಕರೆಯಲ್ಪಡುವ ಗುಡ್ಡ ಪ್ರದೇಶದಲ್ಲಿ ಭುವನೇಶ್ವರಿ ದೇಗುಲ ನಿರ್ಮಾಣ ಕಾರ್ಯವನ್ನು ಆರಂಭಿಸಿದ್ದರು. ಆದರೆ ಆಗ ಇನ್ನು ದೇಗುಲ ನಿರ್ಮಾಣ ಪೂರ್ಣಗೊಂಡಿರಲಿಲ್ಲ. ಬಳಿಕ ಬಂದ ವಿಜಯನಗರದ ಅರಸರು ಕೂಡ ಭುವನೇಶ್ವರಿಯನ್ನು ಆರಾಧಿಸುತ್ತಿದ್ದರು. ಆದ ಕಾರಣ ಕದಂಬರು ಕಟ್ಟಿಸಿದ್ದ ದೇಗುಲವನ್ನು ಜೀರ್ಣೋದ್ಧಾರ ಮಾಡಿದ್ದರು. ಆದರೆ ಬೀಳಗಿಯ ಅರಸರು ಭುವನೇಶ್ವರಿ ಗುಡಿಯ ನಿರ್ಮಾಣ ಕಾರ್ಯ ಸಂಪೂರ್ಣಗೊಳಿಸಿದ್ದು ಎಂದು ಇತಿಹಾಸದ ಉಲ್ಲೇಖಗಳಲ್ಲಿ ತಿಳಿದುಬರುತ್ತದೆ. ಕ್ರಿ.ಶ. 1692ರಲ್ಲಿ ಬೀಳಗಿಯ ಕೊನೆಯ ದೊರೆ ಬಸವೇಂದ್ರ ಈ ದೇಗುಲದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿ ಕನ್ನಡ ತಾಯಿಗೆ ನೆಲೆ ನೀಡಿದ್ದಾರೆ ಎನ್ನಲಾಗಿದೆ.
ಶಿಲೆಗಳಿಂದ ಭುವನೇಶ್ವರಿ ದೇಗುಲ ನಿರ್ಮಾಣ
ಭುವನೇಶ್ವರಿಯ ದೇಗುಲವನ್ನು ಶಿಲೆಗಳಿಂದ ನಿರ್ಮಿಸಲಾಗಿದೆ. ದೇಗುಲದ ಒಳ ಕಂಬಗಳು ಆಕರ್ಷಕ ಕೆತ್ತನೆಯನ್ನು ಹೊಂದಿದ್ದು, ದೇವಾಲಯದ ಚಾವಣಿಯಲ್ಲಿ ಅಷ್ಟದಿಕ್ಕುಗಳ ಸಂಕೇತ, ಅನೇಕ ಅವತಾರಗಳ ಸನ್ನಿವೇಶ ಹಾಗೂ ಕುಸುರಿ ಕೆತ್ತನೆಗಳನ್ನು ಮಾಡಲಾಗಿದೆ. ದೇವಾಲಯದ ಅಕ್ಕಪಕ್ಕದಲ್ಲಿ ನಂದೀಶ್ವರ, ರಂಗನಾಥ ಮುಂತಾದ ವಿಗ್ರಹಗಳು ಸೂಕ್ಷ್ಮ ಕೆತ್ತನೆಗೆ ಸಾಕ್ಷಿಯಾಗಿ ಆಕರ್ಷಿಸುತ್ತವೆ. ಭುವನೇಶ್ವರಿಯ ಎದುರು ಶ್ರೀದೇವಿಯ ವಾಹನ ಸಿಂಹದ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಕದಂಬರ ಕಾಲದಿಂದಲೇ ಭುವನೇಶ್ವರಿಯನ್ನು ನಾಡಿನ ಅಧಿದೇವತೆ ಎಂದು ಕರೆಯಲಾಗುತ್ತಿದೆ.
ಅಭಿವೃದ್ಧಿಯತ್ತ ಗಮನಹರಿಸಲು ಮನವಿ
ದೇಗುಲಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದರೂ ಆಡಳಿತದ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿದೆ. ಸರ್ಕಾರ ದೇಗುಲದ ಜೀರ್ಣೋದ್ಧಾರ ಕಾರ್ಯಕ್ಕೆ ಈವರೆಗೆ ಮುಂದಾಗಿಲ್ಲ. ರಾಜ್ಯೋತ್ಸವ ಸಮೀಪಿಸುತ್ತಿದ್ದಾಗ ಮಾತ್ರ ಆಡಳಿತಕ್ಕೆ ಇಲ್ಲಿನ ಗುಡಿ ನೆನಪಾಗುತ್ತದೆಯೇ ಹೊರತು, ಉಳಿದ ದಿನಗಳಲ್ಲಿ ಸ್ಥಳೀಯರೇ ಎಲ್ಲವನ್ನೂ ಮಾಡಿಕೊಳ್ಳಬೇಕಿದೆ. ರಾಜ್ಯ ಸರ್ಕಾರಕ್ಕಂತೂ ಕನ್ನಡಾಂಬೆಗೆ ಇಲ್ಲೊಂದು ದೇಗುಲವಿದೆ ಎನ್ನುವುದೇ ನೆನಪಿದೆಯೋ ಇಲ್ಲವೋ ಎನ್ನುವಂತಾಗಿದೆ. ರಾಜ್ಯೋತ್ಸವದ ಸಂದರ್ಭದಲ್ಲಿ ಕೆಲವು ಕನ್ನಡ ಸಂಘಟನೆಗಳು ಇಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತವೆ. ಆದರೆ ದೇಗುಲ ಅಭಿವೃದ್ಧಿಯ ದೃಷ್ಟಿಯಿಂದ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈಗಲಾದರೂ ಸರ್ಕಾರ ಈ ಪ್ರದೇಶದ ಅಭಿವೃದ್ಧಿಯತ್ತ ಗಮನಹರಿಸಬೇಕಿದೆ ಎಂದು ಸ್ಥಳೀಯರು, ಕನ್ನಡಿಗರ ಆಗ್ರಹವಾಗಿದೆ.
ಭುವನಗಿರಿಗೆ ತಲುಪುವ ಮಾರ್ಗ
ಸಿದ್ದಾಪುರ ಪಟ್ಟಣದಿಂದ ಸುಮಾರು 8 ಕಿಲೋ ಮೀಟರ್ ದೂರದಲ್ಲಿರುವ ಭುವನಗಿರಿಯಲ್ಲಿ ಕನ್ನಡಿಗರ ಆರಾಧ್ಯೆ ದೇವತೆ ಕನ್ನಡಾಂಬೆ ನೆಲೆ ನಿಂತಿದ್ದಾಳೆ. ಮಲೆನಾಡಿನ ಪರಿಸರದ ನಡುವಿನ ಪ್ರದೇಶದಲ್ಲಿ ಸುಮಾರು 350 ಮೆಟ್ಟಿಲುಗಳನ್ನು ಹೊಂದಿರುವ ಬೆಟ್ಟದ ಮೇಲೆ ದೇವಿ ನೆಲೆಸಿದ್ದು, ಈ ದೇವತೆ ಕನ್ನಡಿಗರನ್ನು ತನ್ನತ್ತ ಸೆಳೆಯುತ್ತಲೇ ಇದ್ದಾಳೆ. ವಿಜಯನಗರ ಅರಸರ ಸಾಮಂತರಾಗಿದ್ದ ಬೀಳಗಿಯ ಅರಸು ವಂಶದ ಕೊನೆಯ ಅರಸ ಬಸವೇಂದ್ರ ಈ ದೇವಾಲಯವನ್ನು ನಿರ್ಮಾಣ ಮಾಡಿದ್ದರು ಎನ್ನುವ ಬಗ್ಗೆ ಉಲ್ಲೇಖವಿದೆ.