ಕಲಘಟಗಿಯಲ್ಲಿ ನೂರಾರು ಕೋಟಿ ವಂಚಿಸಿದ್ದ ಸಹೋದರರು ಅರೆಸ್ಟ್!
ಬೆಂಗಳೂರು, ಮೇ 29: ಕಲಘಟಗಿಯಲ್ಲಿ ಹರ್ಷ ಎಂಟರ್ ಪ್ರೈಸಸ್ ಹೆಸರಲ್ಲಿ ನೂರಾರು ಕೋಟಿ ರುಪಾಯಿ ವಂಚಿಸಿ ಪರಾರಿಯಾಗಿದ್ದ ಖಾಸನೀಸ ಸಹೋದರರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ ಎಂದು ಟಿವಿ 9 ವರದಿ ಮಾಡಿದೆ. ಏಪ್ರಿಲ್ ಒಂಬತ್ತರಂದು ಇವರಿಬ್ಬರು ನಾಪತ್ತೆಯಾಗಿದ್ದರು ಆ ನಂತರ ಇವರ ಪತ್ತೆಗಾಗಿ ರಾಜ್ಯ ಸರಕಾರವು ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು.
ಈ ಬಗ್ಗೆ ವರದಿ ಬಂದಿದ್ದು, ಸಿಐಡಿ ಉನ್ನತ ಮೂಲಗಳೇ ಖಚಿತಪಡಿಸಿವೆ ಎನ್ನಲಾಗಿದೆ. ಅಂದಹಾಗೆ ಹರ್ಷ ಖಾಸನೀಸ ಏಕಕಾಲದಲ್ಲೇ ಹತ್ತು ಸಿನಿಮಾಗಳ ನಿರ್ಮಾಣಕ್ಕೆ ಮುಂದಾಗಿದ್ದ. ರಿಸರ್ವ್ ಬ್ಯಾಂಕ್ ನ ನಿಯಮಗಳನ್ನು ಇವರು ಹೆಚ್ಚಿನ ಬಡ್ಡಿದರದ ಆಸೆ ತೋರಿಸಿ ನೂರಾರು ಮಂದಿಯಿಂದ ಕೋಟ್ಯಂತರ ರುಪಾಯಿ ವಸೂಲಿ ಮಾಡಿದ್ದರು.[ಚಿಟ್ ಫಂಡ್, ನೂರಾರು ಜನರಿಗೆ ಸಾವಿರಾರು ಕೋಟಿ ದೋಖಾ]
ಇದೀಗ ಖಾಸನೀಸ್ ಸಹೋದರರು ಸಿಕ್ಕಿಬಿದ್ದಿದ್ದು, ಮಂಗಳವಾರ ಬೆಳಗ್ಗೆ ಕಲಘಟಗಿ ಜೆಎಂಎಫ್ ಸಿ ಕೋರ್ಟ್ ಗೆ ಪೊಲೀಸರು ಹಾಜರುಪಡಿಸಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ಈ ಸಹೋದರರು ವ್ಯವಹಾರದಲ್ಲಿ ಎಷ್ಟು ಮಂದಿ ಹಣ ಕಳೆದುಕೊಂಡಿದ್ದಾರೆ ಹಾಗೂ ಒಟ್ಟು ಮೊತ್ತ ಎಷ್ಟು ಎಂಬ ಬಗ್ಗೆ ಇನ್ನೂ ಗೊತ್ತಾಗಬೇಕಿದೆ.