ಬೆಂಗಳೂರು ಬಂದ್: ಏನು ಇರುತ್ತೆ? ಏನು ಇರಲ್ಲ?
ಬೆಂಗಳೂರು, ಜು. 30: ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಅತ್ಯಾಚಾರ ಪ್ರಕರಣ ಮತ್ತು ಎಂಇಎಸ್ ಪುಂಡಾಟವನ್ನು ಖಂಡಿಸಿ ಕನ್ನಡ ಸಂಘಟನೆಗಳ ಒಕ್ಕೂಟ ಜು.31 ಗುರುವಾರ ಬೆಂಗಳೂರು ಬಂದ್ ಗೆ ಕರೆ ನೀಡಿವೆ.
ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ನಡೆಯಲಿದೆ. ಬೆಳಗ್ಗೆ ಪುರಭವನದಿಂದ ಮುಖ್ಯಮಂತ್ರಿಗಳ ಮನೆಯ ತನಕ ಬೃಹತ್ ಜಾಥಾ ನಡೆಸಿ ಮುಖ್ಯಮಂತ್ರಿಯವರಿಗೆ ಕನ್ನಡ ಸಂಘಟನೆಗಳು ಮನವಿ ನೀಡಲಿದೆ.
ಬಂದ್ ಸುದ್ದಿ ಕೇಳಿದೊಡನೆ ಬೆಂಗಳೂರಿನ ಜನತೆ ಸಿಕ್ಕಾಪಟ್ಟೆ ಗೊಂದಲವಾಗುವುದು ಸಹಜ. ಈ ಗೊಂದಲವನ್ನು ನಿವಾರಿಸುವುದಕ್ಕೆ ನಾಳೆ ಯಾವೆಲ್ಲ ಸಂಘಟನೆಗಳು ಬಂದ್ಗೆ ಕರೆ ನೀಡಿವೆ, ಬಿಎಂಟಿಸಿ ಬಸ್, ಮೆಟ್ರೋ ಸಂಚಾರ ಇದೆಯಾ,ಕ್ಯಾಬ್ ಸಂಚಾರ ಇದೆಯಾ ,ಐಟಿ ಬಿಟಿ ಕಂಪೆನಿಗಳು ರಜೆ ಇದೆಯಾ, ಇನ್ನಿತರ ಮಾಹಿತಿಗಳನ್ನು ಸ್ಲೈಡ್ಗಳಲ್ಲಿ ತಿಳಿಸಲಾಗಿದೆ.

ಬಂದ್ ಯಾಕೆ?
ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣ ಮತ್ತು ಎಂಇಎಸ್ ಪುಂಡಾಟವನ್ನು ಖಂಡಿಸಿ ಕನ್ನಡ ಸಂಘಟನೆಗಳ ಒಕ್ಕೂಟ ಗುರುವಾರ ಬೆಂಗಳೂರು ಬಂದ್ ಗೆ ಕರೆ ನೀಡಿವೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ನಡೆಯಲಿದೆ. ಮೊದಲು ಬಂದ್ ಅನ್ನು ಜು.26ರ ಶನಿವಾರ ನಡೆಸುವ ಬಗ್ಗೆ ತೀರ್ಮಾನಿಸಲಾಗಿತ್ತು. ಬಳಿಕ ಜು.31 ಗುರುವಾರಕ್ಕೆ ಮುಂದೂಡಲಾಗಿದೆ.

ಬಂದ್ಗೆ ಕರೆ ನೀಡಿದ ಸಂಘಟನೆಗಳು
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಅಖಿಲ ಕರ್ನಾಟಕ ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ, ಕೆಎಸ್ಆರ್ ಟಿಸಿ ಮತ್ತು ಬಿಎಂಟಿಸಿ ನೌಕರರ ಸಂಘದ ಅಧ್ಯಕ್ಷ ಅನಂತ ಸುಬ್ಬುರಾವ್, ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಂದ್ಗೆ ಕರೆ ನೀಡಿದ್ದಾರೆ.

ಬಂದ್ಗೆ ಬೆಂಬಲ ನೀಡಿರುವ ಸಂಘಟನೆಗಳು:
250ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಲಾರಿ ಮಾಲೀಕರ ಸಂಘ, ಆಟೋ ರಿಕ್ಷಾ ಚಾಲಕರ ಸಂಘ ಸೇರಿ, 35ಕ್ಕೂ ಹೆಚ್ಚು ಮಹಿಳಾ ಸಂಘಟನೆಗಳು ಬೆಂಬಲ ಸೂಚಿಸಿವೆ.

ಬಂದ್ಗೆ ಬೆಂಬಲ ನೀಡದ ಸಂಘಟನೆಗಳು:
ಕರವೇ ನಾರಾಯಣ ಗೌಡ ಬಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಂದ್ಗೆ ಬೆಂಬಲ ಸೂಚಿಸಿಲ್ಲ.
"ಬಂದ್ ಎನ್ನುವುದು ಅಂತಿಮ ಅಸ್ತ್ರ. ಬಂದಿನಿಂದಾಗಿ ದೈನಂದಿನ ಚಟುವಟಿಕೆಗಳಿಗೆ ಮತ್ತು ದಿನದ ಆದಾಯವನ್ನು ನಂಬಿರುವವರಿಗೆ ತೊಂದರೆಯಾಗುತ್ತದೆ.ಬಂದ್ಗೆ ಕರೆ ನೀಡಲೇಬೇಕಾದ ಸಂದರ್ಭದಲ್ಲಿ ಕರೆ ನೀಡಿದ್ದೇವು."
ದಿನೇಶ್ ಕುಮಾರ್,ಕರವೇ ನಾಲ್ನುಡಿ ಸಂಪಾದಕ

ಡಿ.ಇ.ಡಿ. ಪರೀಕ್ಷೆ ಶುಕ್ರವಾರಕ್ಕೆ ಮುಂದೂಡಿಕೆ:
ಗುರುವಾರ ಪ್ರಥಮ ಡಿ.ಇ.ಡಿ. ಶೈಕ್ಷಣಿಕ ಮೌಲ್ಯಾಂಕನ ಮತ್ತು ಮೌಲ್ಯಮಾಪನ ವಿಷಯದ ಪರೀಕ್ಷೆ ಬೆಳಿಗ್ಗೆ 10-00 ರಿಂದ 11-30 ರವರೆಗೆ ನಡೆಯಬೇಕಾಗಿದ್ದು, ಬಂದ್ ಪ್ರಯುಕ್ತ ಈ ಪರೀಕ್ಷೆಯನ್ನು ಆಗಸ್ಟ್ ಒಂದಕ್ಕೆ ಮೂಂದೂಡಿದೆ. ಈ ವಿಷಯದ ಪರೀಕ್ಷೆಯನ್ನು ಆಯಾ ಪರೀಕ್ಷಾ ಕೇಂದ್ರಗಳಲ್ಲಿಯೇ ಬೆಳಿಗ್ಗೆ 10-00 ರಿಂದ 11-30 ಕ್ಕೆ ನಡೆಸಲಾಗುವುದೆಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಕೃತ ಪ್ರಕಟಣೆ ತಿಳಿಸಿದೆ.

ಯಾವುದಕ್ಕೆ ವಿನಾಯಿತಿ?
ಆಂಬುಲೆನ್ಸ್, ಹಾಲು ಮತ್ತು ಔಷಧಿ ಗಳಿಗೆ ವಿನಾಯಿತಿ ನೀಡಲಾಗಿದ್ದು, ಇನ್ನುಳಿದಂತೆ ಎಲ್ಲವನ್ನು ಬಂದ್ ಮಾಡಲಾಗುವುದು ಎಂದು ವಾಟಾಳ್ ನಾಗರಾಜ್, ಸಾ.ರಾ.ಗೋವಿಂದ್ ಮತ್ತು ಕೆ.ಆರ್. ಕುಮಾರ್ ತಿಳಿಸಿದ್ದಾರೆ.

ಬಿಎಂಟಿಸಿ ಬಸ್ ಮೆಟ್ರೋ ರೈಲು ಓಡುತ್ತೆ:
ಬಿಎಂಟಿಸಿ ಬಸ್ ನಗರದಲ್ಲಿ ಸಂಚರಿಸಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಪೊಲೀಸರ ನೆರವು ಪಡೆದು ಸೇವೆ ನೀಡಲಾಗುವುದು. ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಿಎಂಟಿಸಿ ಎಂಡಿ ಅಂಜುಂ ಫರ್ವೀಜ್ ತಿಳಿಸಿದ್ದಾರೆ.
ಮೆಟ್ರೋ ಸೇವೆ ಕೂಡಾ ಎಂದಿನಂತೆ ಲಭ್ಯವಿದೆ ಎಂದು ಬಿಎಂಆರ್ಸಿಎಲ್ನ ಎಂಡಿ ಪ್ರದೀಪ್ ಸಿಂಗ್ ಖರೋಲಾ ತಿಳಿಸಿದ್ದಾರೆ.

ಥಿಯೇಟರ್ ಓಪನ್:
ಗುರುವಾರ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ಚಲನ ಚಿತ್ರ ಪ್ರದರ್ಶಕರ ಮಂಡಳಿ ಅಧ್ಯಕ್ಷ ಕೆ.ವಿ ಚಂದ್ರಶೇಖರ್ ಹೇಳಿದ್ದಾರೆ. ಅಹಿತಕರ ಘಟನೆ ಸಂಭವಿಸಿದ್ದಲ್ಲಿ ಪ್ರದರ್ಶನ ರದ್ದು ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಟ್ಯಾಕ್ಸಿಗಳು ನಗರದಲ್ಲಿ ಸಂಚರಿಸಲಿದೆ:
ಟ್ಯಾಕ್ಸಿ ಚಾಲಕರು ಬಂದ್ಗೆ ಬೆಂಬಲ ನೀಡಿಲ್ಲ. ಬಂದ್ಗೆ ಬೆಂಬಲ ಸೂಚಿಸುವುದು ಚಾಲಕರ ವೈಯಕ್ತಿಕ ವಿಚಾರ ಎಂದು ಓಕ್ಕೂಟದ ಮುಖಂಡರು ತಿಳಿಸಿದ್ದಾರೆ.

ಶಾಲಾ ಕಾಲೇಜುಗಳಿಗೆ ರಜೆ:
ಶಾಲೆಗಳಿಗೆ ರಜೆ ನೀಡುವ ಬಗ್ಗೆ ಸರ್ಕಾರ ಇದುವರೆಗೂ ಯಾವುದೇ ಸುತ್ತೊಲೆ ಕಳುಹಿಸಿಲ್ಲ. ಬೆಂಗಳೂರು ಬಂದ್ ಗೆ ನಾವು ಬೆಂಬಲ ನೀಡುವುದಿಲ್ಲ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಶಿವರಾಮೇಗೌಡ ಹೇಳಿದ್ದಾರೆ. ಮಕ್ಕಳ ಮೇಲಿನ ಅತ್ಯಾಚಾರ ಹಾಗೂ ದೌರ್ಜನ್ಯವನ್ನು ನಾವು ವಿರೋಧಿಸುತ್ತೇವೆ. ಆದರೆ, ಇದಕ್ಕೆಲ್ಲ ಬಂದ್ ಮಾಡುವ ಅಗತ್ಯವಿಲ್ಲ ಎಂದು ಹೇಳಿರುವ ಅವರು, ಪರಿಸ್ಥಿತಿ ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು .ಈ ಮಧ್ಯೆ ಕೆಲ ಈ ಖಾಸಗಿ ಶಾಲೆಗಳು ರಜೆ ಘೋಷಿಸಿದೆ.
ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ(ಕುಸ್ಮಾ) ಬಂದ್ಗೆ ಬೆಂಬಲ ನೀಡಿಲ್ಲ. ಆದರೆ ಶಾಲೆಯ ಆಡಳಿತ ಮಂಡಳಿ ಬಂದ್ಗೆ ರಜೆ ನೀಡುವ ನಿರ್ಧಾರವನ್ನು ಕೈಗೊಳ್ಳಬಹುದು ಎಂದು ಕುಸ್ಮಾ ಅಧ್ಯಕ್ಷ ವಿ.ಆರ್.ಎನ್ ರೆಡ್ಡಿ ತಿಳಿಸಿದ್ದಾರೆ.

ಐಟಿಬಿಟಿ ಕಂಪೆನಿಗಳಿಗೆ ರಜೆ ಇಲ್ಲ:
ಐಟಿ ಬಿಟಿ ಕಂಪೆನಿಗಳಿಗೆ ರಜೆ ಇಲ್ಲ. ಆಫೀಸ್ಗೆ ಬರಲು ಸಮಸ್ಯೆಯಾದಲ್ಲಿ ಮನೆಯಿಂದಲೇ ಕೆಲಸ ಮಾಡುವಂತೆ ಕಂಪೆನಿಗಳು ಉದ್ಯೋಗಿಗಳಿಗೆ ಸೂಚಿಸಿವೆ.

17 ಸಾವಿರ ಪೊಲೀಸ್:
ಗುರುವಾರ 17 ಸಾವಿರ ಪೊಲೀಸರು ನಗರದ ಬಂದೋಬಸ್ತ್ ಕಾರ್ಯದಲ್ಲಿ ತೊಡಗಿರುತ್ತಾರೆ. ಜತೆಗೆ ಕ್ಷಿಪ್ರ ಕಾರ್ಯಪಡೆಯ (ಆರ್ಎಎಫ್) ಎರಡು ಕಂಪೆನಿಗಳು, ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್ಆರ್ಪಿ) 52 ತುಕಡಿ, ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) 20 ತುಕಡಿ ಹಾಗೂ 1,000 ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಬಾಲಭವನಕ್ಕೆ ರಜೆ
ಜುಲೈ 31 ರಂದು ಕರ್ನಾಟಕ ಬಂದ್ ನಡೆಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಾಗೂ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಬಾಲಭವನಕ್ಕೆ ರಜೆ ಘೋಷಿಸಿದ್ದು ಅಂದು ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಯಾವುದೇ ಆಟಿಕೆಗಳ ಸೌಲಭ್ಯ ಇರುವುದಿಲ್ಲ ಎಂದು ಬೆಂಗಳೂರು ಬಾಲಭವನದ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಕೆ.ಆರ್ ಮಾರುಕಟ್ಟೆ ಓಪನ್
ಕೆ.ಆರ್ ಮಾರುಕಟ್ಟೆ ವರ್ತಕರು ಬಂದ್ಗೆ ಬೆಂಬಲ ನೀಡಿಲ್ಲ. ಗ್ರಾಹಕರು ಮಾರುಕಟ್ಟೆಗೆ ಹೋಗಿ ತರಕಾರಿ ಖರೀದಿಸಬಹುದು.












Click it and Unblock the Notifications