ಸುಪಾರಿ ಕೇಸ್ : ರವಿಬೆಳಗೆರೆಗೆ ಮಧ್ಯಂತರ ಜಾಮೀನು ಮಂಜೂರು
Recommended Video

ಬೆಂಗಳೂರು, ಡಿಸೆಂಬರ್ 13: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಅವರ ಹತ್ಯೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳಗೆರೆ ಅವರಿಗೆ ಸೆಷನ್ಸ್ ನ್ಯಾಯಾಲಯದಿಂದ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರಾಗಿದೆ.
ಅನಾರೋಗ್ಯ ಹಾಗೂ ಪೊಲೀಸರಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವುದರಲ್ಲಿ ಆಗಿರುವ ಲೋಪದ ಹಿನ್ನಲೆಯಲ್ಲಿ ಜಾಮೀನು ಮಂಜೂರು ಮಾಡಲಾಗಿದೆ. ಇಬ್ಬರ ಶ್ಯೂರಿಟಿ, 1 ಲಕ್ಷ ರು ಬಾಂಡ್ ಸಲ್ಲಿಸಬೇಕು, ತನಿಖೆಗೆ ಸಹಕರಿಸಬೇಕು ಎಂದು ಷರತ್ತುಗಳನ್ನು ನ್ಯಾಯಾಧೀಶ ಮದುಸೂಧನ್ ವಿಧಿಸಿದ್ದಾರೆ. ಡಿಸೆಂಬರ್ 16ರ ತನಕ ಜಾಮೀನು ನೀಡಲಾಗಿದೆ.

ರವಿ ಬೆಳಗೆರೆ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೊಳಪಡಿಸುವಂತೆ 1ನೇ ಎಸಿಎಂಎಂ ನ್ಯಾಯಾಲಯ ಆದೇಶ ನೀಡಿತ್ತು. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರವಿ ಬೆಳಗೆರೆ ಅವರನ್ನು ಅನಾರೋಗ್ಯ ನಿಮಿತ್ತ ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಯ ಮಧುಮೇಹ ವಿಭಾಗಕ್ಕೆ ಕರೆದೊಯ್ಯಲಾಗಿದೆ.
ಚೇತನಾ ಪ್ರತಿಕ್ರಿಯೆ: 'ಅಪ್ಪನ ಆರೋಗ್ಯ ತೀವ್ರ ಹದೆಗೆಟ್ಟಿತ್ತು. ಈಗ ಜಯದೇವದಲ್ಲಿ ಚಿಕಿತ್ಸೆ ಪಡೆದ ಬಳಿಕ ಬೇರೆ ಕಡೆ ಕರೆದೊಯ್ಯಲಾಗುವುದು, ಜಾಮೀನು ಸಿಕ್ಕಿರುವುದು ಸಂತಸ ತಂದಿದೆ' ಎಂದು ರವಿ ಅವರ ಪುತ್ರಿ ಚೇತನಾ ಅವರು ಪ್ರತಿಕ್ರಿಯಿಸಿದ್ದಾರೆ.
ಜಾಮೀನು ಮಂಜೂರು: ಇದಕ್ಕೂ ಮುನ್ನ ಅನಾರೋಗ್ಯ ಹಿನ್ನಲೆಯಲ್ಲಿ ರವಿ ಬೆಳಗೆರೆ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡುವಂತೆ ರವಿ ಬೆಳಗೆರೆ ಅವರ ವಕೀಲ ದಿವಾಕರ್ ಅವರು ಅರ್ಜಿ ಸಲ್ಲಿಸಿದರು. ಪ್ರತಿನಿತ್ಯ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳಬೇಕು, ಕಾಲಿಗೆ ಗಾಯವಾಗಿದ್ದು, ಹೆಚ್ಚಿನ ಆರೈಕೆ ಅಗತ್ಯವಾಗಿದೆ. ತನಿಖೆಗೆ ನನ್ನ ಕಕ್ಷಿದಾರರು ಇಲ್ಲಿ ತನಕ ಸಹಕರಿಸಿದ್ದಾರೆ, ಮುಂದೆ ಕೂಡಾ ಸಹಕರಿಸುತ್ತಾರೆ.
ಆರೋಪಿಯೊಬ್ಬನ ಹೇಳಿಕೆ ಆಧಾರ ಮೇಲೆ ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಯಾವುದೇ ಸರಿಯಾದ ಸಾಕ್ಷಿ ಇನ್ನೂ ಕಲೆ ಹಾಕಿಲ್ಲ ಎಂದು ವಾದಿಸಿದರು. ರವಿ ಪರ ವಕೀಲರ ವಾದವನ್ನು ಮನ್ನಿಸಿದ ನ್ಯಾಯಾಧೀಶರು ಡಿ.16ರ ತನಕ ಮಧ್ಯಂತರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದರು.












Click it and Unblock the Notifications