Get Updates
Get notified of breaking news, exclusive insights, and must-see stories!

ಖಾಸಗಿ ಆಸ್ಪತ್ರೆ ವೈದ್ಯರಿಗೆ ಜೋಗಿ ಬರೆದ ಆತ್ಮೀಯ ಪತ್ರ

Recommended Video

      Karnataka Private Doctors Strike on KPME Bill : ಜೋಗಿ ಅಲಿಯಾಸ್ ಗಿರೀಶ್ ರಾವ್ ವೈದ್ಯರಿಗೆ ಬರೆದ ಆತ್ಮೀಯ ಪತ್ರ

      ಡಿಯರ್ ಡಾಕ್ಟರ್ಸ್,
      ನಮಸ್ಕಾರ,
      ಹೇಗಿದ್ದೀರಿ? ನಿಮ್ಮ ಆರೋಗ್ಯ ಚೆನ್ನಾಗಿರಬೇಕು. ನೀವು ಚೆನ್ನಾಗಿದ್ದರೆ ನಾವು ಚೆನ್ನಾಗಿರುತ್ತೇವೆ ಎಂಬುದು ನಮ್ಮ ಅನಾದಿಕಾಲದ ನಂಬಿಕೆ. ಹೀಗಾಗಿ ನಿಮ್ಮ ಆರೋಗ್ಯ ವಿಚಾರಿಸಿಕೊಳ್ಳುವುದು ಕೂಡ ನಮ್ಮ ಕರ್ತವ್ಯ ಮತ್ತು ಪ್ರೀತಿ.

      In Pics:ವೈದ್ಯರ ಮುಷ್ಕರ : ಎಲ್ಲಾ ಕಡೆ ಆಸ್ಪತ್ರೆ ಬಂದ್ ಬಂದ್ ಬಂದ್

      ಇತ್ತೀಚೆಗೆ ನಿಮ್ಮ ಆರೋಗ್ಯ ಸರಿಯಿಲ್ಲ ಎಂಬುದು ಪತ್ರಿಕೆಗಳಿಂದ ಗೊತ್ತಾಗುತ್ತಿದೆ. ಅದಕ್ಕೆ ಕಾರಣಗಳಿವೆ ಎಂದು ನೀವು ವಾದಿಸುತ್ತಿದ್ದೀರಿ. ನಿಮ್ಮ ವಾದವನ್ನು ನಾನು ನಿರಾಕರಿಸುವುದಕ್ಕೆ ಹೋಗುವುದಿಲ್ಲ. ಎಲ್ಲಾ ವಾದಗಳಲ್ಲೂ ಹುರುಳಿದ್ದೇ ಇರುತ್ತದೆ. ಪ್ರತಿಯೊಂದು ವಾದವೂ ಏಕಕಾಲಕ್ಕೆ ತಪ್ಪುಗಳ ಸಮರ್ಥನೆಯೂ ಕಷ್ಟಗಳ ನಿವೇದನೆಯೂ ಆಗಿರುತ್ತದೆ. ಯಾವುದು ಎಷ್ಟೆಷ್ಟಿರುತ್ತದೆ ಎನ್ನುವುದು ಅವರವರ ಪ್ರಾಮಾಣಿಕತೆಗೆ ಬಿಟ್ಟ ವಿಚಾರ.

      ಒಂದಂತೂ ಸತ್ಯ. ನೀವೂ ಕೂಡ, ಪತ್ರಕರ್ತರಾದ ನಮಗಿಂತ ತುಂಬ ಎತ್ತರದ ಸ್ಥಾನದಲ್ಲಿ ಇಲ್ಲ. ರಾಜಕಾರಣಿ, ಪೊಲೀಸು, ವಕೀಲ, ಪತ್ರಕರ್ತ- ಈ ನಾಲ್ಕು ವೃತ್ತಿಗಳಲ್ಲಿ ಇರುವವರನ್ನು ಜನ ಸಿಟ್ಟಿನಿಂದ, ಅಸಹ್ಯದಿಂದ ನೋಡಲು ಶುರುಮಾಡಿ ಬಹಳ ಕಾಲವೇ ಆಯಿತು. ಈ ಪಟ್ಟಿಗೆ ನೀವು ಕೂಡ ಕೆಲವು ವರ್ಷಗಳ ಹಿಂದೆ ಸೇರ್ಪಡೆಯಾದಿರಿ.

      ನಾವೆಲ್ಲರೂ ಒಂದೇ ದೋಣಿಯ ಪಯಣಿಗರು. ಎದುರಿದ್ದಾಗ ದೇಹಿ ಅಂದು, ಆಚೆ ಹೋದಾಗ ದ್ರೋಹಿ ಅಂತ ಕರೆಸಿಕೊಳ್ಳುವ ವೃತ್ತಿ ನಮ್ಮಂಥವರದು. ಅದಕ್ಕೆ ನಮ್ಮನಿಮ್ಮಲ್ಲಿರುವ ಕೆಲವರು ಕಾರಣ ಹೌದಾದರೂ ಅಪವಾದ ಎಲ್ಲರ ಮೇಲೂ ಬರುವುದು ಸಹಜವೇ. ಅದು ಕಾಲಧರ್ಮ.
      ಪ್ರೀತಿಯಿಂದ
      ಜೋಗಿ

      ಇನ್ನಷ್ಟು ಮುಂದೆ ಓದಿ...

      ವೃತ್ತಿಯೇ ಶಿಕ್ಷೆಗೆ ಕಾರಣವಾಗಬಾರದು

      ವೃತ್ತಿಯೇ ಶಿಕ್ಷೆಗೆ ಕಾರಣವಾಗಬಾರದು

      ನೀವೀಗ ನಿಮ್ಮ ವಿರುದ್ಧ ಹೂಡಲಾಗಿರುವ ಕಾನೂನಾಸ್ತ್ರದ ವಿರುದ್ಧ ನಿಮ್ಮ ಬ್ರಹ್ಮಾಸ್ತ್ರ ಝಳಪಿಸುತ್ತಿದ್ದೀರಿ. ಅದು ಯುದ್ಧ ಧರ್ಮ. ನೀವೀಗ ಹೋರಾಡದೇ ಇದ್ದರೆ ಬೇರೆ ದಾರಿಯಿಲ್ಲ ಎಂದು ಗೊತ್ತಿದೆ. ರೋಗಿ ಸತ್ತರೆ ವೈದ್ಯರಿಗೆ ಶಿಕ್ಷೆ ಕೊಡಬೇಕು ಅನ್ನುವುದು ಅವಿವೇಕದ ಪರಮಾವಧಿ. ಯಾಕೆಂದರೆ ವೃತ್ತಿಯೇ ಶಿಕ್ಷೆಗೆ ಕಾರಣವಾಗಬಾರದು. ಹೊಸ ಕಾನೂನು ನಿಮ್ಮನ್ನು ಹೇಗೆಲ್ಲ ಕಂಗೆಡಿಸಲಿದೆಯೋ ಯಾರಿಗೂ ಗೊತ್ತಿಲ್ಲ. ಅದಿನ್ನೂ ಜಾರಿಗೆ ಬಂದಿಲ್ಲ.

      ಆದರೆ ನಿಮ್ಮ ಹೋರಾಟ ಇರುವುದೇ ಸರ್ಕಾರದ ಜೊತೆ. ಸರ್ಕಾರವನ್ನು ಮಣಿಸಲು ನೀವು ಗಾಯಾಳುಗಳನ್ನೂ ರೋಗಿಷ್ಟರನ್ನೂ ಒತ್ತೆಯಾಳುಗಳಾಗಿ ಇಟ್ಟುಕೊಳ್ಳುವುದು ತಪ್ಪಲ್ಲವೇ? ರೋಗಿಗಳಿಗೆ ಚಿಕಿತ್ಸೆ ನಿರಾಕರಿಸದೇ ನೀವು ಹೋರಾಟ ಮಾಡಲು ಸಾಧ್ಯವಿತ್ತಲ್ಲವೇ? ನೀವು ವಿಧಾನ ಸೌಧದ ಮುಂದೆ ಒಟ್ಟಾಗಬಹುದಾಗಿತ್ತು.

      ನೀವು ಜನರ ಸಾವಿಗೆ ಕಾರಣರಾಗುತ್ತಿದ್ದೀರಿ !

      ನೀವು ಜನರ ಸಾವಿಗೆ ಕಾರಣರಾಗುತ್ತಿದ್ದೀರಿ !

      ನಿಮಗಾದ ಅನ್ಯಾಯದ ಬಗ್ಗೆ ಹೇಳಿಕೊಳ್ಳಬಹುದಿತ್ತು. ನಿಮ್ಮ ಜೊತೆಗೆ ಆಗ ಜನರೂ ಇರುತ್ತಿದ್ದರು. ನಿಮ್ಮ ಹೋರಾಟಕ್ಕೆ ಮತ್ತಷ್ಟು ಬಲ ಬರುತ್ತಿತ್ತು.

      ಆದರೆ ಈಗೇನಾಗುತ್ತಿದೆ ನೋಡಿ. ನಿಮ್ಮನ್ನು ಅಪಾರ್ಥಮಾಡಿಕೊಳ್ಳುವುದಕ್ಕೆ ನೀವೇ ಅವಕಾಶ ಮಾಡಿಕೊಟ್ಟಿದ್ದೀರಿ. ನೀವು ಜನರ ಸಾವಿಗೆ ಕಾರಣರಾಗುತ್ತಿದ್ದೀರಿ ಎಂದು ರಾಜಕಾರಣಿಗಳೂ ಹೇಳುತ್ತಿದ್ದಾರೆ. ನಾವೂ ಹೇಳುತ್ತಿದ್ದೇವೆ. ಹಾಗೆ ಹೇಳಿಸಿಕೊಳ್ಳುವುದಕ್ಕೆ ನೀವೂ ಕಾರಣ ಅಲ್ಲವೇ?


      ಇವತ್ತು ವೈದ್ಯಕೀಯ ಸೌಲಭ್ಯ ದುಬಾರಿಯಾಗಿದೆ. ವ್ಯಾಪಾರವಾಗಿದೆ. ದಂಧೆಯಾಗಿದೆ. ಅದಕ್ಕೆ ನೀವ್ಯಾರೂ ಕಾರಣರಲ್ಲ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು ನಮ್ಮಲ್ಲಿಗೆ ಕಾಲಿಟ್ಟದ್ದೇ ಮುಂದುವರಿದ ದೇಶಗಳಿಂದ. ಆ ಕಲ್ಪನೆ ನಮ್ಮದಲ್ಲದೇ ಅಲ್ಲ. ನಾವೆಲ್ಲ ಸಾರ್ವಜನಿಕ ಆರೋಗ್ಯ ಕೇಂದ್ರಗಳನ್ನಷ್ಟೇ ಕಂಡವರು. ಅಲ್ಲಿ ಸರದಿಯ ಸಾಲಲ್ಲಿ ನಿಂತವರು.

      ನಿಮ್ಮ ಶಿಕ್ಷಣವನ್ನು ದುಬಾರಿ ಮಾಡಿದ್ದು ರಾಜಕಾರಣಿಗಳು

      ನಿಮ್ಮ ಶಿಕ್ಷಣವನ್ನು ದುಬಾರಿ ಮಾಡಿದ್ದು ರಾಜಕಾರಣಿಗಳು

      ಕ್ರಮೇಣ ಎಲ್ಲವೂ ಹೇಗೆ ಬದಲಾಯಿತು ನೋಡಿದಿರಲ್ಲ. ನಿಮ್ಮನ್ನು ಇವತ್ತು ಖಳನಾಯಕನ ಸ್ಥಾನದಲ್ಲಿ ನಿಲ್ಲಿಸಿದವರು ಇದೇ ರಾಜಕಾರಣಿಗಳು. ಇವತ್ತು ನಿಮ್ಮನ್ನು KPMe ಕಾಯಿದೆಗೆ ಸಿಲುಕಿಸಲು ನೋಡುತ್ತಿರುವ ಈ ಸರಕಾರಗಳೇ ನಿಮ್ಮ ಶಿಕ್ಷಣವನ್ನು ದುಬಾರಿ ಮಾಡಿದ್ದು. ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಅನುಮತಿ ಕೊಟ್ಟದ್ದು. ವೈದ್ಯಶಿಕ್ಷಣಕ್ಕೆ ಲಕ್ಷಾಂತರ ಖರ್ಚಾಗುವಂತೆ ಮಾಡಿದ್ದು. ಎರಡೂ ಕಡೆಯಿಂದಲೂ ಸರಕಾರವೇ ಆಟ ಆಡುತ್ತಿದೆ ಅನ್ನುವುದು ಹೊರಗಿನಿಂದ ನೋಡುವ ಯಾರಿಗೇ ಆದರೂ ಗೊತ್ತಾಗುತ್ತದೆ.


      ಸರ್ಕಾರ ತಾಕತ್ತಿದ್ದರೆ ವೈದ್ಯಶಿಕ್ಷಣವನ್ನೂ ರಾಷ್ಟ್ರೀಕರಣಗೊಳಿಸಲಿ, ಆಸ್ಪತ್ರೆಗಳನ್ನೂ ರಾಷ್ಟ್ರೀಕರಣಗೊಳಿಸಲಿ. ಅಲ್ಲಿಗೆ ಎಲ್ಲವೂ ಮುಗಿಯುತ್ತದೆ. ಆದರೆ ಸರಕಾರ ಅದನ್ನು ಮಾಡಲಾರದು.

      ಸರಕಾರಗಳು ಎಲ್ಲರ ಜೊತೆಗೂ ಆಟವಾಡುತ್ತಲೇ ಇರುತ್ತದೆ

      ಸರಕಾರಗಳು ಎಲ್ಲರ ಜೊತೆಗೂ ಆಟವಾಡುತ್ತಲೇ ಇರುತ್ತದೆ

      ಹೀಗೆ ಸರಕಾರಗಳು ಎಲ್ಲರ ಜೊತೆಗೂ ಆಟವಾಡುತ್ತಲೇ ಇರುತ್ತದೆ. ಖಾಸಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಅನುಮತಿ ಕೊಡುವುದಕ್ಕೆ, ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ಕೊಡುವುದಕ್ಕೆ ಏನೇನನ್ನು ಪಡೆದುಕೊಳ್ಳಬೇಕೋ ಅದನ್ನೆಲ್ಲ ಪಡೆದುಕೊಳ್ಳುತ್ತದೆ. ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಜನರಿಗೆ ಹತ್ತಿರವಾಗುವ ಸಲುವಾಗಿ ಇಂಥದ್ದೊಂದು ಆಟ ಆಡುತ್ತದೆ. ಇದು ನಿಮಗೆ ಮೊದಲೇ ಗೊತ್ತಾಗಬೇಕಾಗಿತ್ತು. ಯಾಕೆಂದರೆ ಈ ಆಟದಲ್ಲಿ ದಾಳಗಳಾಗಿ ಬಳಕೆಯಾಗುವವರು ರೋಗಿಗಳು. ರೋಗ ಯಾವ ವೃತ್ತಿಯಲ್ಲಿ ಇರುವವರಿಗೂ ಬರಬಹುದು, ವೈದ್ಯರಿಗೆ ಕೂಡ.

      ನಾನು ವೈದ್ಯರ ಪರ

      ನಾನು ವೈದ್ಯರ ಪರ

      ಈ ಆಟಕ್ಕೆ ಬಲಿಯಾಗದೇ, ಕೊಂಚ ಕರುಣೆಯಿಂದ, ಕೊಂಚ ಪ್ರೀತಿಯಿಂದ, ಹೆಚ್ಚು ನ್ಯಾಯದಿಂದ ವರ್ತಿಸುವ ಅಗತ್ಯ ಇದೆಯೆಂಬುದು ನನ್ನ ಅನಿಸಿಕೆ. ಇನ್ನೂ ಜಾರಿಯಾಗದ ಕಾನೂನಿಗೆ ಪುಟ್ಟ ಕಂದ, ದುಡಿಯುವ ಒಬ್ಬನೇ ಮಗ, ಆಗಷ್ಟೇ ಕೈ ಹಿಡಿದ ಹೆಂಡತಿ, ಮಗನ ಮದುವೆ ನೋಡಬೇಕಾಗಿರುವ ತಾಯಿ- ಯಾಕೆ ಬಲಿಯಾಗಬೇಕು ಅಲ್ಲವೇ.

      ನಾನು ವೈದ್ಯರ ಪರ. ನನ್ನ ಆರೋಗ್ಯವನ್ನು ಕಾಪಾಡುತ್ತಿರುವ ವೈದ್ಯರನ್ನು ನಾನು ಪ್ರೀತಿಸುತ್ತೇನೆ. ಸರ್ಕಾರ ಆಯುರ್ವೇದ ಪದ್ಧತಿ, ಯುನಾನಿ ಪದ್ಧತಿ, ಹೋಮಿಯೋಪಥಿ ಪದ್ಧತಿಯ ವೈದ್ಯರಿಗೆ ಮಾಡಿರುವ ಅನ್ಯಾಯವನ್ನೂ ನೋಡಿದ್ದೇನೆ. ಅವರಿಗೆ ಕೊಡುತ್ತಿರುವ ಕಾಟದ ಬಗ್ಗೆಯೂ ಗೊತ್ತಿದೆ.
      ನಿಮ್ಮ ಗುರಿ ಸರ್ಕಾರವಾಗಿರಲಿ, ನಮ್ಮಂಥ ನಶ್ವರರಲ್ಲ. ಬೆಂಗಳೂರು ಮತ್ತು ಕರ್ನಾಟಕ ಕಾಯಿಲೆಗಳ ಗೂಡಾಗಿದೆ. ದಿನೇದಿನೇ ಹೊಸ ಹೊಸ ಕಾಯಿಲೆಗಳು ಕಂಗೆಡಿಸುತ್ತಿವೆ. ಇಂಥ ಹೊತ್ತಲ್ಲಿ ನೀವೂ ಕೈ ಕೊಟ್ಟರೆ ಹೇಗೆ?

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+