ಶಿವಮೊಗ್ಗದಿಂದ ಬಂಗಾರಪ್ಪ ಕುಟುಂದವರ ಸ್ಪರ್ಧೆ ಖಚಿತ

ಬೆಂಗಳೂರಿನಲ್ಲಿ ಬುಧವಾರ ಪ್ರೆಸ್ ಕ್ಲಬ್ ಮತ್ತು ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಬಂಗಾರಪ್ಪ ಕುಟುಂಬದ ಸದಸ್ಯರು ಸ್ಪರ್ಧಿಸುವುದು ಖಚಿತ ಎಂದರು. ಆದರೆ, ಸ್ಪರ್ಧಿಸುವುದು ಬಂಗಾರಪ್ಪ ಪತ್ನಿಯೋ? ಪುತ್ರಿಯೋ ಎಂಬುದು ನಿರ್ಧಾರವಾಗಬೇಕಾಗಿದೆ ಎಂದರು.
ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಮತ್ತು ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಬಹಿರಂಗ ಸಮಾವೇಶದಲ್ಲಿ ಬಂಗಾರಪ್ಪ ಕುಟುಂಬದವರು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಹೇಳಿದ್ದಾರೆ. ಕ್ಷೇತ್ರದ ಜನರು ಇದನ್ನು ಬಯಸಿದ್ದು, ಬಂಗಾರಪ್ಪ ಕುಟುಂಬದ ಸದಸ್ಯರು ಈ ಬಾರಿ ಚುನಾವಣೆಯಲ್ಲಿ ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಿದರು. (ಶಿವಮೊಗ್ಗ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿದ ಜೆಡಿಎಸ್!)
ಲೋಕಸಭೆ ಚುನಾವಣೆಯಲ್ಲಿ ಕೆಜೆಪಿ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮುನಿಸಿಪಾಲಿಟಿಯಿಂದ ಬಂದವರನ್ನು ಮುನಿಸಿಪಾಲಿಟಿಗೇ ಕಳುಹಿಸುತ್ತೇವೆ. ಒಂದು ಬಾರಿ ಹಣ- ಹೆಂಡದಿಂದ ಸಂಸದರಾಗಿ ನಮ್ಮ ತಂದೆಯವರನ್ನು ಸೋಲಿಸಿದರು. ಇದೀಗ ಅಂತಹ ಪರಿಸ್ಥಿತಿ ಇಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಮತ್ತು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಹೊಸ ಸರ್ಕಾರಕ್ಕೆ ಬಂದು ಆರು ತಿಂಗಳು ಕಳೆದಿದೆ. ಕಾಂಗ್ರೆಸ್ ಸರ್ಕಾರ ಹೇಳಿಕೆಗಳಲ್ಲಿ ಮಾತ್ರ ಪ್ರಗತಿ ಸಾಧಿಸಿದೆ. ಅಧಿಕಾರಿಗಳು ಮತ್ತು ಸಚಿವರು ಆಮೆ ವೇಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಮುಂದೆ ತ್ವರಿತವಾಗಿ ಪ್ರತಿಪಕ್ಷದ ಕಾರ್ಯನಿರ್ವಹಿಸುತ್ತೇವೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತೇವೆ ಎಂದರು.
ಅಣ್ಣನೊಡನೆ ಸೇರೋಲ್ಲ : ನನ್ನ ಸಹೋದರ ಕುಮಾರ್ ಬಂಗಾರಪ್ಪ ನಮ್ಮ ಕುಟುಂಬದೊಂದಿಗೆ ಮತ್ತೆ ಸಂಬಂಧ ಬೆಳೆಸುವುದು ಅಥವಾ ಸೇರಿಕೊಳ್ಳುವುದಕ್ಕೆ ತಂದೆ ಇದ್ದಾಗ ಒಂದು ಅವಕಾಶ ಕೊಟ್ಟಿದ್ದರು. ಈಗಲೂ ನಾವು ಅವಕಾಶ ಕೊಡುತ್ತೇವೆ. ಆದರೆ, ಅವರು ಬಂಗಾರಪ್ಪ ಅವರ 'ಒಪ್ಪಿಗೆ' ತೆಗೆದುಕೊಂಡು ಬರಬೇಕು. ಅದು ಸಾಧ್ಯವಿಲ್ಲ. ಅಂತಯೇ ಅಣ್ಣನ ಜೊತೆ ಮತ್ತೆ ಸೇರುವ ಪ್ರಶ್ನೆಯೇ ಇಲ್ಲ ಎಂದು ಮಧು ಬಂಗಾರಪ್ಪ ಹೇಳಿದರು.












Click it and Unblock the Notifications