ಮುಂಬೈ, ದೆಹಲಿ ತೋರಿಸಿ 'ಚಂದಮಾಮ' ಕಥೆ ಹೇಳುತ್ತಿರುವ ಯಡಿಯೂರಪ್ಪ
ಬೆಂಗಳೂರು, ಜೂನ್ 30: ಕೋವಿಡ್-19 ನಿರ್ವಹಣೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಎಂಡ್ ಟೀಂ ಸರಿಯಾಗಿ ನಿಭಾಯಿಸುತ್ತಿಲ್ಲವೇ? ಜಾತ್ಯಾತೀತ ಜನತಾದಳ ಮಾಡಿರುವ ಟ್ವೀಟ್ ಪ್ರಕಾರ, ಸರಕಾರದ ನಿರ್ವಹಣೆ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ.
ಜೆಡಿಎಸ್ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಮಾಡಿದ ಟ್ವೀಟ್ ಹೀಗಿದೆ, "ಮುಂಬೈ, ದೆಹಲಿ ತೋರಿಸಿ ಚಂದಮಾಮ ಕಥೆ ಹೇಳುತ್ತಿರುವ @BSYBJP ಒಂದು ಕಡೆಯಾದರೆ, ಸಾರ್ವಜನಿಕ ಆರೋಗ್ಯ ನಿರ್ವಹಣೆಯಲ್ಲಿ ಶೂನ್ಯ ಜ್ಞಾನ ಉಳ್ಳ ಆರೋಗ್ಯ ಸಚಿವರು ಮತ್ತೊಂದು ಕಡೆ".
"ಇವರಿಬ್ಬರ ಮಧ್ಯೆ ಆಸ್ಪತ್ರೆ ವ್ಯವಸ್ಥೆ ಇಲ್ಲದೆ ಬೀದಿಯಲ್ಲಿ ಸಾಯುತ್ತಿರುವ ಕನ್ನಡಿಗರ ವ್ಯಥೆ" ಇದು ಜೆಡಿಎಸ್ ಮಾಡಿರುವ ಟ್ವೀಟ್. ನಗರದ ವಿವಿಧ ಹದಿನೆಂಟು ಆಸ್ಪತ್ರೆಗಳು, 52ವರ್ಷದ ವ್ಯಕ್ತಿಯನ್ನು ಆಸ್ಪತ್ರೆಗೆ ಎಡ್ಮಿಟ್ ಮಾಡದಿರುವುದರಿಂದ, ಅವರು ಮೃತಪಟ್ಟರು ಎನ್ನುವ ಲೇಖನವನ್ನು ಟ್ಯಾಗ್ ಮಾಡಿ ಜೆಡಿಎಸ್ ಈ ರೀತಿ ಟ್ವೀಟ್ ಮಾಡಿದೆ.

ಆ ವ್ಯಕ್ತಿಗೆ ಉಸಿರಾಟದ ಸಮಸ್ಯೆ ಎದುರಾದಾಗ, ಅವರ ಮಗ, ಶನಿವಾರ (ಜೂ 27) ನಗರದ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿನ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ, ಅಲ್ಲಿ ಅವರನ್ನು ಆಸ್ಪತ್ರೆಯವರು ಎಡ್ಮಿಟ್ ಮಾಡಿಕೊಳ್ಳಲಿಲ್ಲ.
ಇದಾದ ನಂತರ, ಹದಿನೆಂಟು ವಿವಿಧ ಆಸ್ಪತ್ರೆಗಳಿಗೆ, ಸತತ 36ಗಂಟೆ ಸುತ್ತಾಡಿದರೂ, ಯಾವ ಆಸ್ಪತ್ರೆಯವರೂ ಆ ವ್ಯಕ್ತಿಯನ್ನು ಎಡ್ಮಿಟ್ ಮಾಡಿಕೊಂಡಿರಲಿಲ್ಲ. ಕೊನೆಗೊಂದು ಆಸ್ಪತ್ರೆಯವರು, ಅವರನ್ನು ಎಡ್ಮಿಟ್ ಮಾಡಿಕೊಳ್ಳಲು ಒಪ್ಪಿಕೊಂಡರೂ, ಆ ವ್ಯಕ್ತಿ ಅಷ್ಟರಲ್ಲಿ ಮೃತ ಪಟ್ಟಿದ್ದರು.
ಮೃತ ಪಟ್ಟ ವ್ಯಕ್ತಿ ನಗರದ ಆಸ್ಟಿನ್ ಟೌನ್ ನಲ್ಲಿ ಗಾರ್ಮೆಂಟ್ಸ್ ಅಂಗಡಿಯನ್ನು ಹೊಂದಿದ್ದು, ನಗರತಪೇಟೆ ನಿವಾಸಿಯಾಗಿದ್ದಾರೆ. ಈ ಸುದ್ದಿಯನ್ನು ಶೇರ್ ಮಾಡಿ, ಜೆಡಿಎಸ್, ಬಿಎಸ್ವೈ ಸರಕಾರದ ವಿರುದ್ದ ಕಿಡಿಕಾರಿದೆ.












Click it and Unblock the Notifications