ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಜನತಾ ಪತ್ರಿಕೆ ಲೋಕಾರ್ಪಣೆ; ಕನ್ನಡಿಗರ ಮುಖವಾಣಿ ಎಂದ ಎಚ್ಡಿಕೆ
ಬೆಂಗಳೂರು, ನವೆಂಬರ್ 8: ಜನತಾ ಪತ್ರಿಕೆ ಜೆಡಿಎಸ್ ಪಕ್ಷದ ಮುಖವಾಣಿ ಅಲ್ಲ, ಸಮಸ್ತ ಕನ್ನಡಿಗರ ಮುಖವಾಣಿ. ಕೃಷಿ ಕಾರ್ಮಿಕರು ಮತ್ತು ಶ್ರಮಿಕರ ಮುಖವಾಣಿ ಆಗಿ ಕೆಲಸ ಮಾಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಜನತಾ ಪರ್ವ 1.Oದ ಎರಡನೇ ಹಂತದ ಸಂಘಟನಾ ಕಾರ್ಯಗಾರ "ಜನತಾ ಸಂಗಮ' ಕಾರ್ಯಕ್ರಮದಲ್ಲಿ ಸೋಮವಾರ ನಡೆದ "ಜನತಾ ಪತ್ರಿಕೆ' ಬಿಡುಗಡೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಎಚ್ಡಿಕೆ ಮಾತನಾಡಿದರು.
ಇಡೀ ರಾಜ್ಯದ, ದೇಶದ ಬೆಳವಣಿಗೆಗಳ ಬಗ್ಗೆ ಈ ಪತ್ರಿಕೆಯಲ್ಲಿ ವಿಶ್ಲೇಷಣೆ ಇರುತ್ತದೆ. ನಾಡಿನ ಹಿತದೃಷ್ಟಿಯಿಂದ ಜನರಿಗೆ ಬದ್ಧವಾಗಿ ಪತ್ರಿಕೆಯನ್ನು ರೂಪಿಸಲಾಗುವುದು ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಬೇರೆ ರಾಜ್ಯದಲ್ಲಿ ಹಲವಾರು ಪಕ್ಷಗಳು ಅವರದ್ದೇ ಆದ ಪಕ್ಷದ ಕಾರ್ಯಕ್ರಮಗಳನ್ನು ಪತ್ರಿಕೆಗಳ ಮೂಲಕ ಜನರಿಗೆ ತಲುಪಿಸಲಾಗುತ್ತಿದ್ದು, ಅವರದ್ದೇ ಆದ ಪತ್ರಿಕೆಗಳನ್ನು ಮಾಡಿಕೊಂಡಿದ್ದಾರೆ. ನಮ್ಮ ರಾಜ್ಯದಲ್ಲಿ ಮೊದಲ ಬಾರಿಗೆ ಈ ರೀತಿಯ ಪತ್ರಿಕೆ ಲೋಕಾರ್ಪಣೆ ಆಗುತ್ತಿದೆ. ಯಾವುದೇ ಕಾರಣಕ್ಕೂ"ಜನತಾ ಪತ್ರಿಕೆ' ಪಕ್ಷದ ಮುಖವಾಣಿ ಆಗುವುದಿಲ್ಲ ಎಂದು ಕುಮಾರಸ್ವಾಮಿ ಮತ್ತೆ ಮತ್ತೆ ಸ್ಪಷ್ಟಪಡಿಸಿದರು.
ಮಾಜಿ ಪ್ರಧಾನಿ ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದಾಗ ಪಿ.ರಾಮಯ್ಯರವರು ಹಿಂದು ಪತ್ರಿಕೆಯ ವರದಿಗಾರರಾಗಿದ್ದರು. ಪತ್ರಿಕಾ ರಂಗದಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದವರು. ಅಂತವರಿಂದ ಪತ್ರಿಕೆ ಲೋಕಾರ್ಪಣೆ ಆಗಿದ್ದು ಸಂತಸ ಉಂಟು ಮಾಡಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ದೇವೇಗೌಡರ ಶುಭ ಹಾರೈಕೆ
ಇದೇ ವೇಳೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರು, "ಪತ್ರಿಕೆಯನ್ನು ಹೊರತರುತ್ತಿರುವ ವಿಚಾರ ಒಳ್ಳೆಯದೇ. ಈ ಪತ್ರಿಕೆಯಿಂದ ನಾಡಿನ ಜನತೆಗೆ ಒಳ್ಳೆಯದಾಗಲಿ," ಎಂದು ಹಾರೈಸಿದರು.
ನಮ್ಮ ಪಕ್ಷದಲ್ಲಿ ಸಮರ್ಥ ನಿಷ್ಠೆ ಇರುವ ನಾಯಕರು ಕಾರ್ಯಕರ್ತರು ಇದ್ದಾರೆ. ಅವರೆಲ್ಲರ ಮನೆ ಬಾಗಿಲಿಗೆ ಈ ಪತ್ರಿಕೆ ಮುಟ್ಟಬೇಕು. ಪತ್ರಿಕೆ ಚೆನ್ನಾಗಿ ಬೆಳೆಯುತ್ತದೆ. ಇದರ ಬಗ್ಗೆ ಯಾವುದೇ ಸಂಶಯವಿಲ್ಲ ಎಂದು ಅವರು ಹೇಳಿದರು.
ಜನರಿಗೆ ಮುಟ್ಟಲಿ
ಜನತಾ ಪತ್ರಿಕೆ ಬಿಡುಗಡೆ ಮಾತನಾಡಿದ ಹಿರಿಯ ವರದಿಗಾರ ಪಿ. ರಾಮಯ್ಯ, ಇದು ಜೆಡಿಎಸ್ ಪಕ್ಷದ ಮುಖವಾಣಿಯಲ್ಲ. ಜನ ಸಾಮಾನ್ಯರ ಪತ್ರಿಕೆ ಆಗಿ ಮೂಡಿಬರಲಿದೆ. ಪತ್ರಿಕೆ ಜನ ಸಾಮಾನ್ಯರಿಗೆ ತಲುಪಬೇಕು. ಇದು ಪಾರ್ಟಿಯ ಮುಖವಾಣಿಯಲ್ಲ ಎಂದು ನನಗೆ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಹಾಗಾಗಿ ನಾನು ಇಂದು ಈ ಪತ್ರಿಕೆ ಲೋಕಾರ್ಪಣೆಗೆ ಬಂದೆ. ಈಗ ಪತ್ರಿಕೆ ನಡೆಸುವುದು ಅಷ್ಟು ಸುಲಭದ ಹಾದಿಯಲ್ಲ. ಎಲ್ಲವನ್ನೂ ದಾಟಿ ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು.
ಎರಡನೇ ಹಂತದ ಕಾರ್ಯಾಗಾರ
ಈಗಾಗಲೇ ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಏಳು ದಿನಗಳ ಕಾರ್ಯಕರ್ತರ ಕಾರ್ಯಗಾರವನ್ನು ಯಶಸ್ವಿಯಾಗಿ ಮಾಡಿದ್ದೇವೆ. ಇಂದಿನಿಂದ ಎಂಟು ದಿನಗಳ ಕಾರ್ಯಗಾರ ನಡೆಯಲಿದೆ. ಇಂದಿನಿಂದ ನಿರಂತರವಾಗಿ ಪದಾಧಿಕಾರಿಗಳ ಸಭೆಗಳು ಆರಂಭವಾಗುತ್ತಿವೆ. ಪಕ್ಷ ಸಂಘಟನೆ ಹಾಗೂ ಮುಂದಿನ ಎಲ್ಲಾ ಚುನಾವಣೆಗಳಿಗೆ ಸಿದ್ಧತೆ ನಡೆಸಲಾಗುತ್ತದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಮೊದಲಿಗೆ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಪಕ್ಷದ ಎಲ್ಲ ನಾಯಕರೂ, ಶಾಸಕರು, ಮುಂತಾದವರು ಹಾಜರಿದ್ದರು.