Siddarmaiah: ಸಮಾಜವಾದ ಅನ್ನುತ್ತಲೇ ಸಿದ್ದರಾಮಯ್ಯ ಐಷಾರಾಮಿ ಜೀವನ: ಕಾರ್ಪೋರೇಟ್ ಸಿಎಂ ಆದ್ರು: JDS
ಬೆಂಗಳೂರು, ನವೆಂಬರ್ 16: ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುತ್ತಿಲ್ಲ ಎಂದು ವಿಪಕ್ಷಗಳು, ಕೆಲವು ಬಾರಿ ಸ್ವಪಕ್ಷದ ಶಾಸಕರೇ ಹೇಳಿದ್ದಾರೆ. ಗ್ಯಾರೆಂಟಿಗಳಿಂದ ಸರ್ಕಾರದ ಭೊಕ್ಕಸ ಖಾಲಿಯಾಗಿದೆ ಎನ್ನಲಾಗಿದೆ. ಈ ಮಧ್ಯೆ ವಿಧಾನಸೌಧದಲ್ಲಿನ ಸಿಎಂ ಕಚೇರಿ ನವೀಕರಣ ವಿಚಾರವು ರಾಜಕೀಯದಲ್ಲಿ ಸಂಚಲನ ಉಂಟು ಮಾಡಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ನೇರವಾಗಿ ವಿಪಕ್ಷಗಳು ವಾಗ್ದಾಳಿ ಆರಂಭಿಸಿವೆ.
ಹೌದು, ಶನಿವಾರ ಬಿಜೆಪಿ ಬೆನ್ನಲ್ಲೆ ಜೆಡಿಎಸ್ ಸಿಎಂ ಸಿದ್ದರಾಮಯ್ಯ ಕೊಠಡೀ ನವೀಕರಣದ ವಿಡಿಯೋ ಸಮೇತ ಚಾಟಿ ಬೀಸಿತು. ಸಮಾಜವಾದಿ ಮುಖವಾಡದ "ಮಜಾವಾದಿ ಸಿದ್ದರಾಮಯ್ಯ'' ಎಂದು ಜೆಡಿಎಸ್ ಕುಟುಕಿದೆ.

ಭ್ರಷ್ಟಾಚಾರದಲ್ಲಿ "ಸಿದ್ಧ" ಹಸ್ತರಾದ ಸಿಎಂ ಸಿದ್ದರಾಮಯ್ಯ ಅವರು ಅಹಿಂದ ವೇಷತೊಟ್ಟು ರಾಜ್ಯದ ಜನರಿಗೆ ವಂಚಿಸುತ್ತಲೇ ಇದ್ದಾರೆ. ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡಲು "ಕೈಲಾಗದ" ಸಿಎಂ ಸಿದ್ದರಾಮಯ್ಯ , ವಿಧಾನಸೌಧದಲ್ಲಿರುವ ಅವರ 323ನೇ ಕೊಠಡಿ ನವೀಕರಣಕ್ಕೆ ಕೋಟಿ ಕೋಟಿ ದುಂದು ವೆಚ್ಚ ಮಾಡಿದ್ದಾರೆ ಎಂದು ಜೆಡಿಎಸ್ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದೆ.
ಕಾರ್ಪೊರೇಟ್ ಸಿಎಂ ಆಗಿ ಬದಲಾವಣೆ: ಜೆಡಿಎಸ್
ಸರಳತೆ, ಸಮಾಜವಾದ ಎನ್ನುತ್ತಲೇ ಐಷಾರಾಮಿ ಜೀವನ ನಡೆಸುವುದು ಕಾಂಗ್ರೆಸ್ ಪಕ್ಷದ ನಾಯಕರಿಗೆ ಕರಗತವಾಗಿದೆ. ಸುಮಾರು 2.5 ಕೋಟಿಗೂ ಹೆಚ್ಚು ದುಂದುವೆಚ್ಚ ಮಾಡಿ ಮುಖ್ಯಮಂತ್ರಿ ಕಚೇರಿಯನ್ನು ಕಾರ್ಪೊರೇಟ್ ಶೈಲಿಯಲ್ಲಿ ನವೀಕರಿಸಿ, ಕಾರ್ಪೊರೇಟ್ ಸಿಎಂ ಆಗಿ ಬದಲಾಗಿದ್ದಾರೆ ಎಂದು ದೂರಿದೆ.
ಸಮಾಜವಾದಿ ಎಂದು ಬಿಂಬಿಸಿಕೊಳ್ಳುವ ನಿಮಗೆ ಜನರ ತೆರಿಗೆ ಹಣದಲ್ಲಿ ಇಷ್ಟೊಂದು ಐಷಾರಾಮಿ ನವೀಕರಣ ಬೇಕಿತ್ತಾ ? ಇದಕ್ಕೆ ನಿಮ್ಮ ಆತ್ಮಸಾಕ್ಷಿ ಏನು ಹೇಳುತ್ತದೆ? ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ.
ಜೆಡಿಎಸ್ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ
ಮುಖ್ಯಮಂತ್ರಿಗಳು ತಮ್ಮ ಸಿಎಂ ಕಚೇರಿಯನ್ನು ಕೋಟಿ ಕೋಟಿ ಖರ್ಚು ಮಾಡಿ ನವೀಕರಣ ಮಾಡಿಸಿದ್ದಾರೆ. ಆದರೆ ಈ ಬಗ್ಗೆ ಮಾಧ್ಯಮಗಳಿಗಾಗಲಿ ಹೇಳಿಲ್ಲ. ಅಲ್ಲದೇ ಈ ಬಗ್ಗೆ ಅಧಿಕೃತವಾಗಿ, ಲಿಖಿತವಾಗಿ ಸೂಚಿಸದೇ, ಕೇವಲ ಮೌಖಿಕವಾಗಿ ಸೂಚಿಸಿ ನವೀಕರಣ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ಕಚೇರಿ ಕಾರ್ಪೋರೇಟ್ ಕಚೇರಿಯಂತೆ ನವೀಕರಣಗೊಂಡು ಕಂಗೊಳ್ಳಿಸುತ್ತಿದೆ. ಹೊಸ ಚೇರುಗಳು, ಬಣ್ಣ ಮುಂತಾದವುಗಳಿಂದ ನವೀಕೃತಗೊಂಡು ಹೊಳೆಯುತ್ತಿದೆ. ಹಳೆಯ ಕಚೇರಿಯಂತೆ ಕಾಣದೇ ಕಾಪೋರೇಟ್ ಕಚೇರಿಯಂತೆ ವಿಡಿಯೋದಲ್ಲಿ ಕಾಣಿಸುತ್ತಿದೆ. ಇದಕ್ಕೆ ಸುಮಾರು 2.5 ಕೋಟಿಯಿಂದ 3 ಕೋಟಿ ರೂ.ವರೆಗ ಖರ್ಚು ಮಾಡಲಾಗಿದೆ ಎಂದು ವಿಪಕ್ಷಗಳು ಮಾಹಿತಿ ನೀಡಿವೆ.
ಇಂದು ಬೆಳಗ್ಗೆ ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ಸಹ ಟೀಕಿಸಿದ್ದರು. ಇದೇ ಹಣವನ್ನು ಮಳೆ, ಬೆಳೆ ಹಾನಿ ರೈತರಿಗೆ ನೀಡಬಹುದಿತ್ತು. ಕ್ಷೇತ್ರದ ಶಾಸಕರಿಗೆ ಅನುದಾನ ನೀಡದೇ ಐಶಾರಾಮಿ ಜೀವನಕ್ಕೆ ಖರ್ಚು ಮಾಡುತ್ತಿರುವುದು ಎಷ್ಟು ಸರಿ ಎಂದು ಅವರು ಟೀಕಿಸಿದ್ದರು. ಸಿಎಂ ಕಚೇರಿ ನವೀಕರಣ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ.












Click it and Unblock the Notifications