Bengaluru Traffic: ದಶಕಗಳ ಸಮಸ್ಯೆಗೆ ಮುಕ್ತಿ! ಶೀಘ್ರದಲ್ಲೇ ಜಕ್ಕೂರು ರೈಲು ಸೇತುವೆ ಕಾಮಗಾರಿ ಪೂರ್ಣ
11 ವರ್ಷಗಳ ಹಿಂದೆ ಕಾಮಗಾರಿ ಆರಂಭಿಸಿದ್ದ ಜಕ್ಕೂರಿನಲ್ಲಿ ಅರ್ಧಕ್ಕೆ ನಿಂತಿದ್ದ ರೈಲು ಮೇಲ್ಸೇತುವೆ ಕೊನೆಗೂ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಸರ್ಕಾರ ಇತ್ತೀಚೆಗೆ ಪರಿಹಾರ ಮೊತ್ತವನ್ನು ಹೆಚ್ಚಿಸುವ ಮೂಲಕ ಬಿಬಿಎಂಪಿಯು 6,515 ಚದರ ಮೀಟರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಿದೆ, ಹೆಚ್ಚುವರಿ ಭೂಮಿ ಸ್ವಾಧೀನ ವಿಳಂಬದಿಂದ ಯೋಜನೆಗೆ ಹಿನ್ನಡೆಯಾಗಿತ್ತು.
"ಭೂ ಸ್ವಾಧೀನದಲ್ಲಿ ಸಮಸ್ಯೆ ಇದೆ. ಪರಿಹಾರದ ಮೊತ್ತವನ್ನು ಕೆಲವು ದಿನಗಳ ಹಿಂದೆ ನೀಡಲಾಯಿತು ಮತ್ತು ನಾವು ಅದನ್ನು ನ್ಯಾಯಾಲಯದಲ್ಲಿ ಠೇವಣಿ ಮಾಡಿದ್ದೇವೆ, ಅದನ್ನು ಭೂಮಾಲೀಕರಿಗೆ ನೀಡಲಾಗುವುದು. ಸೇತುವೆಗೆ ಸಂಬಂಧಿಸಿದಂತೆ ಟೆಂಡರ್ ಕರೆಯಲಾಗಿತ್ತು. ಸರ್ಕಾರದ ಒಪ್ಪಿಗೆ ಪಡೆದು ಕಾಮಗಾರಿಗೆ ಮುಂದಾಗುತ್ತೇವೆ" ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಎನ್ ಗಿರಿನಾಥ್ ಹೇಳಿರುವುದಾಗಿ ಟಿಎನ್ಐಇ ವರದಿ ಮಾಡಿದೆ.

ಸೇತುವೆ ನಿರ್ಮಾಣ ವೆಚ್ಚ ದ್ವಿಗುಣಗೊಂಡಿದೆ, 13.71 ಕೋಟಿ ರೂಪಾಯಿಗಳಲ್ಲಿ ಮುಗಿಯಬೇಕಾಗಿದ್ದ ಕಾಮಗಾರಿ 27 ಕೋಟಿ ರೂಪಾಯೊಗೆ ಹೆಚ್ಚಾಗಿದೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಗಿರಿನಾಥ್ ಅವರು ಭೂಮಿಯ ಮೌಲ್ಯವು ವರ್ಷಗಳಲ್ಲಿ ಏರಿತು, ಇದು ವೆಚ್ಚ ಹೆಚ್ಚಾಗಲು ಕಾರಣವಾಯಿತು ಎಂದು ಹೇಳಿದ್ದಾರೆ.
2021ರಲ್ಲಿ ಕಾಮಗಾರಿ ಆರಂಭ
2012ರಲ್ಲಿ ಕಾಮಗಾರಿ ಆರಂಭಿಸಿದ ರೈಲ್ವೆ ಇಲಾಖೆ ಕೆಲ ವರ್ಷಗಳ ಬಳಿಕ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಬಿಬಿಎಂಪಿಗೆ ಸಾಧ್ಯವಾಗದ ಕಾರಣ ಸ್ಥಗಿತಗೊಳಿಸಿತ್ತು. ನಾಲ್ಕು ಕುಟುಂಬಗಳು ಕರ್ನಾಟಕ ಹೈಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದು, ಪ್ರಸ್ತಾಪಿಸಿದ್ದಕ್ಕಿಂತ ಹೆಚ್ಚಿನ ಪರಿಹಾರ ನೀಡುವಂತೆ ಒತ್ತಾಯಿಸಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸೇತುವೆ ವಿನ್ಯಾಸವನ್ನು ಸಹ ಮಧ್ಯದಲ್ಲಿ ಬದಲಾಯಿಸಲಾಯಿತು, ಎರಡು-ಪಥದ ಮೇಲ್ಸೇತುವೆಯನ್ನು ನಾಲ್ಕು-ಪಥಕ್ಕೆ ವಿಸ್ತರಿಸಲಾಯಿತು, ಇದಕ್ಕೆ ಹೆಚ್ಚುವರಿ ಭೂಮಿ ಅಗತ್ಯವಾದ ಕಾರಣ ಕಾಮಗಾರಿ ಮತ್ತಷ್ಟು ವಿಳಂಬವಾಗಿದೆ.
ಜಕ್ಕೂರು ಸುತ್ತಮುತ್ತಲಿನ ನಿವಾಸಿಗಳು ಕಳೆದೊಂದು ದಶಕದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಜಕ್ಕೂರು ವೃತ್ತದಿಂದ ಯಲಹಂಕ ಮುಖ್ಯರಸ್ತೆಗೆ 10 ನಿಮಿಷಗಳಲ್ಲಿ 2 ಕಿ.ಮೀ ದೂರವನ್ನು ಪ್ರಯಾಣಿಸುವ ಬದಲು, ಪ್ರಯಾಣಿಕರು ಸುಮಾರು 5 ಕಿ.ಮೀ ಸುತ್ತುವರಿದ ಮಾರ್ಗದಲ್ಲಿ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ, ಈ ಮಾರ್ಗವನ್ನು ಕ್ರಮಿಸಲು ಜನದಟ್ಟಣೆಯಿದ್ದರೆ 25 ನಿಮಿಷದಿಂದ ಒಂದು ಗಂಟೆ ತೆಗೆದುಕೊಳ್ಳುತ್ತದೆ.
ಟ್ರಾಫಿಕ್ ಸಮಸ್ಯೆಗೆ ಮುಕ್ತಿ
ಜಕ್ಕೂರು ವೆಲ್ಫೇರ್ ಅಸೋಸಿಯೇಶನ್ ಉಪಾಧ್ಯಕ್ಷ ಎನ್.ಸುನೀಲ್ ಕುಮಾರ್ ಮಾತನಾಡಿ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೇ ಕಾಮಗಾರಿ ವಿಳಂಬಕ್ಕೆ ಕಾರಣ ಎಂದು ದೂರಿದ್ದಾರೆ. ಸ್ಥಳೀಯರು ಜಕ್ಕೂರಿನಿಂದ ಜಿಕೆವಿಕೆ ಜಂಕ್ಷನ್ಗೆ ಹೋಗಿ ನಂತರ ಅನ್ನಸಂದ್ರಪಾಳ್ಯ ಬೈಪಾಸ್ ಮೂಲಕ ಯಲಹಂಕಕ್ಕೆ ಬರಬೇಕು.
"ಬಿಬಿಎಂಪಿ ಆರು ತಿಂಗಳ ಹಿಂದೆ ಅದರ ಕೆಳಗೆ ಅಂಡರ್ಪಾಸ್ ಅನ್ನು ತೆರೆಯಿತು. ಸಣ್ಣ ಕಾರುಗಳು, ಆಟೋಗಳು ಮತ್ತು ದ್ವಿಚಕ್ರ ವಾಹನಗಳು ಇದರ ಮೂಲಕ ಹೋಗಬಹುದು. ಆದರೂ, ಶಾಲಾ ಬಸ್ಗಳು ಮತ್ತು ದೊಡ್ಡ ಕಾರುಗಳು ಇನ್ನೂ ಸುತ್ತಿ ಬಳಸಿ ಬರಬೇಕಿದೆ" ಎಂದು ಹೇಳಿದರು.
ಇಲ್ಲಿಯವರೆಗೆ, ರೈಲ್ವೆ ಹಳಿಯ ಮೇಲೆ ಸೇತುವೆ ಸಿದ್ಧವಾಗಿದೆ, ಜೊತೆಗೆ ಪಾದಚಾರಿ ಅಂಡರ್ಪಾಸ್ ಮತ್ತು ಅಪ್ರೋಚ್ ರೋಡ್ನಲ್ಲಿ ಎರಡು ಸ್ಪ್ಯಾನ್ಗಳು ಸಿದ್ಧವಾಗಬೇಕಿದ್ದು, ಆರರಿಂದ ಎಂಟು ತಿಂಗಳಲ್ಲಿ ಯೋಜನೆ ಸಿದ್ಧಗೊಳ್ಳುವ ಸಾಧ್ಯತೆ ಇದೆ.












Click it and Unblock the Notifications