ಅನ್ನಭಾಗ್ಯ ಯೋಜನೆ : ಬೆಂಗಳೂರಲ್ಲಿ ಬಡವರ ಅಕ್ಕಿಗೆ ಕನ್ನ!
ಬೆಂಗಳೂರು, ಮಾರ್ಚ್ 12 : ಬೆಂಗಳೂರಿನ ಜಯನಗರ ವಿಧಾನಸಭಾ ವ್ಯಾಪ್ತಿಗೆ ಬರುವ ತಿಲಕ್ ನಗರದ ನ್ಯಾಯಬೆಲೆ ಅಂಗಡಿಯೊಂದಕ್ಕೆ ಎಂದಿನಂತೆ ಭೇಟಿ ಕೊಟ್ಟ ಸಾಮಾಜಿಕ ಹೋರಾಟಗಾರ ರವಿ ಕೃಷ್ಣಾರೆಡ್ಡಿ ಅವರಿಗೆ ಅಂಗಡಿಗೆ ಅಕ್ಕಿ ಕೊಳ್ಳಲು ಬಂದಿದ್ದ ಬಡ ಮಹಿಳೆಯರಿಗೆ ನಡೆಯುತ್ತಿದ್ದ ಶೋಷಣೆಯ ನೈಜ ಚಿತ್ರಣ ಕಣ್ಣಿಗೆ ಕಾಣಿಸಿತು.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ, ಅಂದರೆ ಸರ್ಕಾರಿ ನ್ಯಾಯಬೆಲೆ ಅಂಗಡಿ (ಸಂಖ್ಯೆ 3026 ) ತಿಲಕ್ ನಗರ, ಜಯನಗರ, ಬೆಂಗಳೂರು ಇಲ್ಲಿ ಮಾರ್ಚ್ 9ರಂದು ಕಣ್ಣಿಗೆ ಕಂಡ ಚಿತ್ರಣವಿದಾಗಿದೆ.
ಈ ನ್ಯಾಯಬೆಲೆ ಅಂಗಡಿಯ ಸರ್ಕಾರಿ ಅಧಿಕಾರಿ ರಾಜಶೇಖರ್ ಎಂಬುವವರು ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಅಕ್ಕಿ ಕೊಳ್ಳಲು ಬರುವ ಪ್ರತಿಯೊಬ್ಬರಿಗೂ ಸುಮಾರು 19 ಕೆ.ಜಿ.ಯಷ್ಟು ಅಕ್ಕಿಯನ್ನು ರಾಜಾರೋಷವಾಗಿ ಮೋಸ ಮಾಡುತ್ತಿದ್ದದ್ದು ಕಂಡುಬಂದಿದೆ.

ಸಾರ್ವಜನಿಕರು ಈ ವಿಚಾರವಾಗಿ ಪ್ರಶ್ನೆ ಮಾಡಿದರೆ 'ನಾನು ಕೊಡುವುದೇ ಇಷ್ಟು, ಬೇಕಿದ್ದರೆ ತಗೊಳ್ಳಿ, ಇಲ್ಲವಾದ್ರೆ ಹೋಗಿ' ಎಂಬ ದುರಹಂಕಾರದ ಮಾತುಗಳನ್ನಾಡುತ್ತಾರೆ. ಸರ್ಕಾರದ ಅಣತಿಯಂತೆ ಪ್ರತಿ ಕುಟುಂಬಕ್ಕೆ ಕೊಡಬೇಕಿದ್ದ 49 ಕೆಜಿ ಅಕ್ಕಿಯ ಬದಲಿಗೆ 30 ಕೆಜಿ ಅಕ್ಕಿ ಮಾತ್ರ ನೀಡಲಾಗುತ್ತಿದೆ.
ಇದು ಕೇವಲ ಬೆಂಗಳೂರಿನ ಜಯನಗರದ ನ್ಯಾಯಬೆಲೆ ಅಂಗಡಿಯೊಂದರ ಕಥೆಯಲ್ಲ, ರಾಜ್ಯದ ಬಹುತೇಕ ಅಂಗಡಿಗಳಲ್ಲಿ ಇಂತ ಅವ್ಯವಸ್ಥೆಯ ಬಗ್ಗೆ ಅನೇಕ ಬಾರಿ ರವಿ ಕೃಷ್ಣಾರೆಡ್ಡಿ ಯಂತಹ ಹೋರಾಟಗಾರರು, ಮಾಧ್ಯಮಗಳು ಬೆಳಕು ಚೆಲ್ಲುವ ಕೆಲಸಗಳನ್ನು ಮಾಡಿದರೂ, ಸರ್ಕಾರ, ಇಲಾಖೆ, ಸಚಿವರು ಕಣ್ಮುಚ್ಚಿ ಕುಳಿತಿರುವುದು ಸೋಜಿಗದ ಸಂಗತಿ.
ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿನ ಹಗಲು ದರೋಡೆ ಹೊಸದೇನಲ್ಲ. 2013ರ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿ, ಸರ್ಕಾರ ರಚಿಸಿದ ಮರುಕ್ಷಣವೇ 'ಅನ್ನಭಾಗ್ಯ' ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.
ಕಳೆದ 4 ವರ್ಷ 10 ತಿಂಗಳಿನಲ್ಲಿ ನೂರಾರು ಬಾರಿ ಅನ್ನಭಾಗ್ಯ ಯೋಜನೆಯ ಬಗೆಗೆ ಪುಂಕಾನುಪುಂಕವಾಗಿ ಹೋದಲೆಲ್ಲಾ ಮಾತನಾಡಿ, ನೂರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಮಾಧ್ಯಮಗಳಲ್ಲಿ ದಿನಕ್ಕೆ 10 ಬಾರಿ ಜಾಹಿರಾತು ಕೊಡಿಸಿ, ಇಂತಹ ಒಳ್ಳೆಯ ಯೋಜನೆ ಹೇಗೆ ಜಾರಿಯಾಗುತ್ತಿದೆ? ಎಂದು ವಿಚಾರಿಸುವ ಗೋಜಿಗೂ ಹೋಗದ ಸಿದ್ದರಾಮಯ್ಯರ ಬಡವರ ಮೇಲಿನ ಕಾಳಜಿಯ ಬಗೆಗೆ ಸಂಶಯ ಬಾರದೇ ಇರದು.

ಇನ್ನು ಸಚಿವ ಯು.ಟಿ.ಖಾದರ್ ತಮ್ಮ ಇಲಾಖೆಯಲ್ಲಿ ನೂರಾರು ನ್ಯಾಯಬೆಲೆ ಅಂಗಡಿಗಳಲ್ಲಿ ಇಂತಹ ಅವ್ಯವಸ್ಥೆ ಹಾಗು ಭ್ರಷ್ಟಾಚಾರದ ಬೆಗ್ಗೆ ನೂರಾರು ದೂರುಗಳು ಬಂದಾಗಲಾಗಲೀ, ಮಾಧ್ಯಮಗಳಲ್ಲಿ ಇದರ ಬಗೆಗಿನ ಸುದ್ದಿಗಳು ಬಿತ್ತರವಾದಾಗಲಾದರೂ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು, ಬಡವರ ಮೇಲೆ ನಡೆಯುತ್ತಿರುವ ಶೋಷಣೆ ತಡೆಯುವ ಪ್ರಾಮಾಣಿಕ ಪ್ರಯತ್ನ ನಡೆಸಿದ್ದರೇ, ರಾಜ್ಯದ ರಾಜಧಾನಿಯ ಹೃದಯ ಭಾಗದಲ್ಲಿ ಇಂದು ಇಂತಹ ಘಟನೆ ನಡೆಯುತ್ತಿರಲಿಲ್ಲ.
ರವಿ ಕೃಷ್ಣಾರೆಡ್ಡಿ ಕೇವಲ ಚುನಾವಣಾಗಾಗಿ ಇಂತಹ ಕೆಲಸಗಳನ್ನು ಮಾಡದೇ, ಕಳೆದ ಕೆಲವು ವರ್ಷಗಳಿಂದ ಇಂತಹ ಅನೇಕ ರೀತಿಯ ಸೋಶಿಯಲ್ ಆಡಿಟಿಂಗ್ ಕೆಲಸಗಳನ್ನು ಸರ್ಕಾರದ ಅನೇಕ ಇಲಾಖೆಗಳಲ್ಲಿ ನಡೆಸಿ, ಅಲ್ಲಿ ನಡೆಯುತ್ತಿದ್ದ ದೌರ್ಜನ್ಯಕ್ಕೆ ಕಡಿವಾಣ ಹಾಕುವ ಪ್ರಯತ್ನಗಳನ್ನು ನಿರಂತರವಾಗಿ ನಡೆಸುತ್ತಿದ್ದಾರೆ.
ರವಿ ಕೃಷ್ಣಾರೆಡ್ಡಿ ನಡೆಸಿದ ಸೋಶಿಯಲ್ ಆಡಿಟಿಂಗ್ ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸುಮಾರು 3.6 ಲಕ್ಷ ಜನ ವೀಕ್ಷಿದ್ದು ಪ್ರಶಂಸೆಗೆ ಪ್ರಾತ್ರವಾಗಿದೆ.
ರವಿ ಕೃಷ್ಣಾರೆಡ್ಡಿಯವರ ದೂರೇನು? : ನ್ಯಾಯಬೆಲೆ ಅಂಗಡಿಯ ನೌಕರನಿಗೆ 25 ಸಾವಿರಕ್ಕಿಂತ ಹೆಚ್ಚಿನ ಸಂಬಳ ಇದೆ. ಆದರೆ, ಪ್ರತಿಯೊಬ್ಬ ಫಲಾನುಭವಿಗೂ ಮೋಸ ಮಾಡಿದ್ದಾನೆ. 49 ಕೆಜಿ ಕೊಡಬೇಕಾದದಲ್ಲಿ 30 ಕೆಜಿ ಕೊಡುತ್ತಾನೆ. ತಿಂಗಳಿಗೆ ಕನಿಷ್ಠವೆಂದರೂ 2 ಲಕ್ಷ ರೂಪಾಯಿಯಷ್ಟು ಬಡವರ ಅಕ್ಕಿ ಕದಿಯುತ್ತಾನೆ.
ಯಾರಿಗೆ ದೂರುವುದು? ಲೋಕಾಯುಕ್ತ ಸತ್ತಂತಿದೆ. ಸರ್ಕಾರವೇ ಲೂಟಿ ಮಾಡುತ್ತಿದೆ. ಈಗಿನ ಪ್ರಶ್ನೆ, ಸಚಿವ ಖಾದರ್ ಅವರಿಗೂ ಕಮಿಷನ್ ಸಿಗುತ್ತಿದೆಯಾ? ಇಲ್ಲವಾದಲ್ಲಿ ಕ್ರಮ ಏಕಿಲ್ಲ?.












Click it and Unblock the Notifications