ಬೆಂಗಳೂರಿನಲ್ಲಿ ಅಂಬೇಡ್ಕರ್ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ
ಬೆಂಗಳೂರು, ಜುಲೈ 8 : ಡಾ. ಬಿ.ಆರ್. ಅಂಬೇಡ್ಕರ್ ಅವರ 126ನೇ ಜನ್ಮದಿನಾಚರಣೆ ಪ್ರಯುಕ್ತ ಜುಲೈ 21ರಿಂದ 23ರವರೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಜಿಕೆವಿಕೆ ಆವರಣದಲ್ಲಿರುವ ಸಮಾವೇಶ ಕೇಂದ್ರದಲ್ಲಿ Reclaiming Social Justice, Revisiting Ambedker ಎಂಬ ವಿಷಯದ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನವನ್ನು ಏರ್ಪಡಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಮ್ಮೇಳನದ ಲಾಂಛನ ಬಿಡುಗಡೆ ಮಾಡಿ, ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ವಿವರಗಳನ್ನು ನೀಡಿದರು. ಈ ಸಮ್ಮೇಳನದಲ್ಲಿ ಸುಮಾರು 2000ಕ್ಕೂ ಹೆಚ್ಚು ಆಹ್ವಾನಿತರು ಭಾಗವಹಿಸಲಿದ್ದು, 83 ಅಂತಾರಾಷ್ಟ್ರೀಯ, 149 ರಾಷ್ಟ್ರೀಯ ಮತ್ತು 80 ರಾಜ್ಯದ ಭಾಷಣಕಾರರು ವಿಷಯ ಮಂಡಿಸಲಿದ್ದಾರೆ.

ಉದ್ಘಾಟನೆಯ ದಿನದಲ್ಲಿ ಮಾನವ ಹಕ್ಕುಗಳ ವಕೀಲ ಮತ್ತು ಕಾರ್ಯಕರ್ತ ಮಾರ್ಟಿನ್ ಲೂಥರ್ ಕಿಂಗ್-3 ಮತ್ತು ಸಂಸತ್ ಸದಸ್ಯ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.
ವಿವಿಧ ಹಂತಗಳಲ್ಲಿ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯದ ಮೇಲೆ ದಬ್ಬಾಳಿಕೆ ನಡೆಯುತ್ತಿರುವ ಸಂದರ್ಭದಲ್ಲಿ ಈ ಸಮ್ಮೇಳನವು ನಡೆಯುತ್ತಿದ್ದು, ವಿವಿಧ ಪದರಗಳಲ್ಲಿ ಮಡುಗಟ್ಟಿರುವ ಅಸಮಾನತೆ, ವೈವಿಧ್ಯತೆ, ಬಹಿಷ್ಕಾರ ಮತ್ತು ಶೋಷಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಅನ್ವೇಷಣೆ, ಸಾಮಾಜಿಕ ನ್ಯಾಯಕ್ಕಾಗಿ ಸಾಂವಿಧಾನಿಕ, ಸಾಂಸ್ಥಿಕ ಮತ್ತು ನೀತಿ ನಿರೂಪಣೆ ಮತ್ತು ಸಾಮಾಜಿಕ ನ್ಯಾಯ ಮತ್ತು ಪೂರಕ ಮಾನದಂಡಗಳು, ಕಾಳಜಿಗಳ ನಡುವಣ ಸೇತುವೆಯಾಗುವುದು ಈ ಸಮ್ಮೇಳನದ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಈ ಸಮ್ಮೇಳನವು ಸಾಮಾಜಿಕ ನ್ಯಾಯದ ಪರಿಕಲ್ಪನೆ, ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಸನ್ನಿವೇಶ, ಆರ್ಥಿಕ ನ್ಯಾಯ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಾಂಸ್ಕೃತಿ ಪ್ರಭಾವ ವಲಯ ಎಂಬ ವಿಷಯಗಳ ಕುರಿತು ಬೆಳಕು ಚೆಲ್ಲಲಿದೆ ಎಂದು ಅವರು ತಿಳಿಸಿದರು.
ಪ್ರೊ. ಕಾರ್ನೆಲ್ ವೆಸ್ಟ್, ಪ್ರೊ. ಎಸ್.ಕೆ. ಥೋರಟ್, ಲಾರ್ಡ್ ಭೀಖು ಪಾರೇಖ್, ಕೆ. ರಾಜು, ಪ್ರೊ. ರಾಜೀವ್ ಗೌಡ, ಪ್ರೊ. ದೀಪಕ್ ನಯ್ಯರ್, ಡಾ. ರಾಮಚಂದ್ರ ಗುಹ, ಪ್ರೊ. ವೆಲೇರಿಯನ್ ರಾಡ್ರಿಗಸ್, ಪ್ರೊ. ಉಪೇಂದ್ರ ಬಕ್ಷಿ, ಪ್ರೊ. ಆಶೀಷ್ ನಂದಿ, ಪ್ರೊ. ಶಿವ್ ವಿಶ್ವನಾಥನ್, ಪ್ರೊ. ಸುಧೀರ್ ಕೃಷ್ಣಸ್ವಾಮಿ, ಪ್ರೊ. ಥಾಮಸ್ ವೆಸ್ಕಾಪ್, ಡಾ. ಗ್ಯಾರಿ ಮೈಕೆಲ್ ಟಾರ್ಟಾಕೊವ್, ಪ್ರೊ. ಸುರಿಂದರ್ ಜೋಧ್ಕಾ, ಪ್ರೊ. ಕಲ್ಪನಾ ಕಣ್ಣಬೀರನ್, ಡಾ. ಶಶಿ ತರೂರ್, ಪ್ರಕಾಶ್ ಅಂಬೇಡ್ಕರ್, ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್ ಸೇರಿದಂತೆ ಹಲವಾರು ರಾಷ್ಟ್ರೀಯ ಅಂತಾರಾಷ್ಟ್ರೀಯ ಭಾಷಣಕಾರರು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ಕೃಷಿ ಸಚಿವ ಕೃಷ್ಣ ಬೈರೇಗೌಡ, ಐಟಿ ಬಿಟಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಎಂ. ಖರ್ಗೆ, ಸಂಸತ್ ಸದಸ್ಯ ಪ್ರೊ. ರಾಜೀವ್ ಗೌಡ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್ ಮೊದಲಾದವರು ಹಾಜರಿದ್ದರು.
ಸಮ್ಮೇಳನದಲ್ಲಿ ಭಾಗವಹಿಸಲು ನೋಂದಣಿಗಾಗಿ ಹಾಗೂ ಸಮ್ಮೇಳನದ ಕುರಿತ ಹೆಚ್ಚಿನ ಮಾಹಿತಿಗಾಗಿ www.questforequity.org, www.facebook.com/questforequity ಮತ್ತು ಟ್ವಿಟ್ಟರ್ ಖಾತೆ www.twitter.com/quest4equity/quest4equityಯನ್ನು ಸಂಪರ್ಕಿಸಬಹುದು.












Click it and Unblock the Notifications