ಬಿಬಿಎಂಪಿಗೆ ಹೊರೆಯಾದ ಇಂದಿರಾ ಕ್ಯಾಂಟೀನ್ ನಿರ್ವಹಣೆ
ಬೆಂಗಳೂರು, ಆಗಸ್ಟ್ 14 : ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಜನಪ್ರಿಯ ಯೋಜನೆ ಇಂದಿರಾ ಕ್ಯಾಂಟೀನ್. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಈ ಯೋಜನೆ ಈಗ ಹೊರೆಯಾಗುತ್ತಿದೆ. ಸರ್ಕಾರ ಕೂಡಾ ಯೋಜನೆಗೆ ಹಣ ನೀಡುತ್ತಿಲ್ಲ.
ಬೆಂಗಳೂರು ನಗರದ ವ್ಯಾಪ್ತಿಯಲ್ಲಿರುವ ಕ್ಯಾಂಟೀನ್ಗಳನ್ನು ಬಿಬಿಎಂಪಿ ನಿರ್ವಹಣೆ ಮಾಡುತ್ತಿದೆ. ಕ್ಯಾಂಟೀನ್ಗಳ ನಿರ್ವಹಣೆಗೆ ವಾರ್ಷಿಕ 152 ಕೋಟಿ ಬೇಕಿದೆ ಎಂದು ಪಾಲಿಕೆ ಅಂದಾಜು ಮಾಡಿದೆ. ಆದರೆ, ಅನುದಾನ ತರುವುದು ಎಲ್ಲಿಂದ?.
ಸಿದ್ದರಾಮಯ್ಯ ಮಹತ್ವದ ಯೋಜನೆ ಘೋಷಣೆ ಮಾಡಿದಾಗ ವಾರ್ಷಿಕ ಅನುದಾನವನ್ನು ಸರ್ಕಾರದಿಂದ ನೀಡುವ ಭರವಸೆ ನೀಡಿದ್ದರು. 2017ರಲ್ಲಿ ಯೋಜನೆಗಾಗಿ 100 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದರು.

ಇಂದಿರಾ ಕ್ಯಾಂಟೀನ್ಗಳ ನಿರ್ವಹಣೆ ವೆಚ್ಚ ವರ್ಷದಲ್ಲಿ 124 ಕೋಟಿಯಾಗಿತ್ತು. 2018-19ನೇ ಸಾಲಿನಲ್ಲಿ 115 ಕೋಟಿ ಬಿಡುಗಡೆ ಮಾಡಲಾಗಿತ್ತು. ಎರಡು ವರ್ಷದಲ್ಲಿ ಸರ್ಕಾರ ಬಿಡುಗಡೆ ಮಾಡಿದ ಅನುದಾನದ ಜೊತೆಗೆ ಬಿಬಿಎಂಪಿ ಹೆಚ್ಚುವರಿ ವೆಚ್ಚವನ್ನು ಮಾಡಿದೆ.
ಈ ವರ್ಷ 210 ಕೋಟಿ ರೂ. ಬಿಡುಗಡೆ ಮಾಡುವಂತೆ ಬಿಬಿಎಂಪಿ ನಗರಾಭಿವೃದ್ಧಿ ಇಲಾಖೆ ಮನವಿ ಮಾಡಿತ್ತು. ಎರಡು ಬಾರಿ ಮನವಿ ಮಾಡಿದರೂ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಇಲಾಖೆ ನೀಡಬೇಕಿರುವ ಬಾಕಿ ಮೊತ್ತ, ಪ್ರಸಕ್ತ ಸಾಲಿನ ಅನುದಾನವನ್ನು ನೀಡುವುದಿಲ್ಲ ಎಂದು ಇಲಾಖೆ ಸ್ಪಷ್ಟವಾಗಿ ಹೇಳಿದೆ.
ಸರ್ಕಾರ ಅನುದಾನ ನೀಡಲಿದೆ ಎಂಬ ನಿರೀಕ್ಷೆಯಲ್ಲಿ ಬಿಬಿಎಂಪಿ ತನ್ನ ಬಜೆಟ್ನಲ್ಲಿ ಇಂದಿರಾ ಕ್ಯಾಂಟೀನ್ಗೆ ಅನುದಾನ ನಿಗದಿ ಮಾಡಿಲ್ಲ. ಈಗ ಸರ್ಕಾರ ಅನುದಾನ ನೀಡದಿದ್ದರೆ ಕ್ಯಾಂಟೀನ್ಗಳ ನಿರ್ವಹಣೆ ಕಷ್ಟವಾಗಲಿದ್ದು, ಕ್ಯಾಂಟೀನ್ಗೆ ಬೀಗ ಬೀಳುವ ಸಾಧ್ಯತೆ ಇದೆ.
ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. "ಪಾಲಿಕೆ ಹಣದಲ್ಲಿಯೇ ಇಂದಿರಾ ಕ್ಯಾಂಟೀನ್ ನಿರ್ವಹಣೆ ಮಾಡಲಾಗುತ್ತಿದೆ. ಬಜೆಟ್ ಪರಿಷ್ಕರಣೆ ಮಾಡುವ ಸಮಯದಲ್ಲಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ" ಎಂದು ಹೇಳಿದ್ದಾರೆ.












Click it and Unblock the Notifications