ಗೊಂದಲದ ನಡುವೆ ಸಂಚಾರಕ್ಕೆ ಮುಕ್ತವಾದ ಹೊಸಕೆರೆಹಳ್ಳಿ ಮೇಲ್ಸೇತುವೆ
ಬೆಂಗಳೂರು, ಸೆ. 17: ಬೆಂಗಳೂರು ನಗರದ ಹೊಸಕೆರೆಹಳ್ಳಿಯ ಹೊರವರ್ತುಲ ರಸ್ತೆ ಕೆ.ಇ.ಬಿ ಜಂಕ್ಷನ್ ಬಳಿ ಇರುವ ಮೇಲ್ಸೇತುವೆ ಕೊನೆಗೂ ಸಂಚಾರಕ್ಕೆ ಮುಕ್ತವಾಗಿದೆ.
ಗ್ಯಾಲರಿ: ಹೊಸಕೆರೆಹಳ್ಳಿ ಫ್ಲೈಓವರ್ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಪಸ್ಥಿತಿಯಲ್ಲಿ ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್, ಮೇಯರ್ ಪದ್ಮಾವತಿ ಹಾಗೂ ಸಾರಿಗೆ ಸಚಿವ ಎಚ್ ಎಂ ರೇವಣ್ಣ ಅವರ ಉಪಸ್ಥಿತಿಯಲ್ಲಿ ತುಂತುರು ಮಳೆ ನಡುವೆ ಲೋಕಾರ್ಪಣೆಗೊಂಡಿದೆ.
ಸುಮಾರು 16 ತಿಂಗಳುಗಳ ವಿಳಂಬದ ಬಳಿಕ ಕೆ.ಇ.ಬಿ ಜಂಕ್ಷನ್ನಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಕೊನೆಗೂ ಪೂರ್ಣಗೊಂಡಿದೆ. ಸಿಲ್ಕ್ಬೋರ್ಡ್ನಿಂದ ಮೈಸೂರು ರಸ್ತೆ ಜಂಕ್ಷನ್ ತನಕದ ಹೊರ ವರ್ತುಲ ರಸ್ತೆಯ ಸಿಗ್ನಲ್ ಫ್ರೀ ಕಾರೀಡಾರ್ ನ ಭಾಗವಾಗಿರುವ ಈ ಮೇಲ್ಸೇತುವೆ ನಿರ್ಮಾಣದಿಂದಾಗಿ ಈ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಉಲ್ಬಣವಾಗಿತ್ತು.
ಮುಖ್ಯಮಂತ್ರಿ ಅವರ ನಗರೋತ್ಥಾನ ಅನುದಾನ(ಸುಮಾರು 153.8 ಕೋಟಿ ರು) ದಡಿ ಹೊರವರ್ತುಲ ರಸ್ತೆಯನ್ನು ತಡೆರಹಿತ ಸಂಚಾರದ ಯೋಜನೆಯನ್ನು ಕೈಗೊಳ್ಳಲಾಗಿತ್ತು. ಆದರೆ, ಯೋಜನೆಯ ಕಾಮಗಾರಿ ಮಾತ್ರ ಪ್ರಗತಿ ಕಾಣದೆ ಕುಂಟುತ್ತಾ ಸಾಗಿತ್ತು. ಹೊಸಕೆರೆಹಳ್ಳಿ ಸಿಗ್ನಲ್ ಬಳಿಯ ಅಂಡರ್ ಪಾಸ್ ಕಾಮಗಾರಿ ಸ್ಥಗಿತಗೊಂಡಿದ್ದು, ಸಮಸ್ಯೆ ಇನ್ನೂ ಹೆಚ್ಚಾಗುವಂತೆ ಮಾಡಿತ್ತು.

2016ರ ಮಾರ್ಚ್ 1ಕ್ಕೆ ಮುಗಿಯಬೇಕಿತ್ತು
ಹೊಸಕೆರೆ ಹಳ್ಳಿ ಜಂಕ್ಷನ್ ಫ್ಲೈ ಓವರ್ ಕಾಮಗಾರಿ 2016ರ ಮಾರ್ಚ್ 1ಕ್ಕೆ ಪೂರ್ಣಗೊಳಿಸಬೇಕಿತ್ತು. ಸುಮಾರು 17.82 ಕೋಟಿ ರು ವೆಚ್ಚದ ಸೇತುವೆ ನಿರ್ಮಾಣದ ಗುತ್ತಿಗೆಯನ್ನು ಎಂ. ವೆಂಕಟರಾವ್ ಇನ್ಫ್ರಾ ಪ್ರಾಜೆಕ್ಟ್ ಕಂಪೆನಿ ಪಡೆದುಕೊಂಡಿತ್ತು. 2015ರ ಸೆಪ್ಟೆಂಬರ್ 1ರಂದು ಕಾಮಗಾರಿಗೆ ಚಾಲನೆ ನೀಡಲಾದರೂ ಕಾಮಗಾರಿ ವಿಳಂಬವಾಗಿ ಕೊನೆಗೂ ಪೂರ್ಣಗೊಂಡಿದೆ.

ಸಂಚಾರ ದಟ್ಟಣೆ ಕಡಿಮೆ
ಕೆ.ಇ.ಬಿ ಜಂಕ್ಷನ್ನಲ್ಲಿ ಬೆಳಗಿನ ದಟ್ಟಣೆ ಅವಧಿಯಲ್ಲಿ ಗಂಟೆಗೆ ಸರಾಸರಿ 10,000 ವಾಹನಗಳು ಚಲಿಸುತ್ತವೆ. ಸಂಜೆ 6ರಿಂದ 7ರ ಅವಧಿಯಲ್ಲಿ ಸರಾಸರಿ 9,000 ವಾಹನಗಳು ಓಡಾಡುತ್ತವೆ. ಈ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾದರೆ ಬನಶಂಕರಿ, ಕತ್ರಿಗುಪ್ಪೆ, ಗಿರಿನಗರ, ಆವಲಹಳ್ಳಿ, ನಾಯಂಡಹಳ್ಳಿ ಮಾರ್ಗದ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ.

ನಾಗರೀಕರ ಅಸಮಾಧಾನ
ಮೇಲ್ಸೇತುವೆ ನಿರ್ಮಾಣಕ್ಕಾಗಿ ಕತ್ರಿಗುಪ್ಪೆಯಿಂದ ಇಲ್ಲಿ ತನಕ ಅನೇಕ ಮರಗಳು ನಾಶವಾಗಿವೆ. ಅಂಗಡಿ-ಮುಂಗಟ್ಟುಗಳ ಮುಂಭಾಗ ಒಡೆದಿದ್ದಾರೆ. ಪಕ್ಕದ ರಸ್ತೆ ವಿಸ್ತರಣೆ ಮಾಡಿಲ್ಲ. ಒಂದು ಕಡೆ ಮಾತ್ರ ಸೇತುವೆ ನಿರ್ಮಿಸಲಾಗಿದೆ. ಎರಡೂ ಕಡೆ ಸೇತುವೆ ಮಾಡಿದ್ದರೆ ಹೆಚ್ಚು ಅನುಕೂಲವಾಗುತ್ತದೆ. ಹೊಸಕೆರೆಹಳ್ಳಿ ಸಿಗ್ನಲ್ ಅಂಡರ್ ಪಾಸ್ ಆಗುವ ತನಕ ತೊಂದರೆ ತಪ್ಪಿದ್ದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಬೆಸ್ಕಾಂ ಮೇಲೆ ಆರೋಪ
ರಸ್ತೆಯ ಪಕ್ಕದಲ್ಲೇ ಹಾದು ಹೋಗಿರುವ ಹೈಟೆನ್ಷನ್ ಕಂಬಗಳನ್ನು ಸ್ಥಳಾಂತರಿಸುವ ವಿಷಯದಲ್ಲಿ ಉಂಟಾದ ಸಮಸ್ಯೆಯಿಂದ ಮೇಲ್ಸೇತುವೆ ಕಾಮಗಾರಿ ವಿಳಂಬವಾಗಿತ್ತು. ರಸ್ತೆ ಬದಿಯ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ನೆಲದಡಿ ಕೇಬಲ್ ಅಳವಡಿಸಲಾಗುತ್ತಿದೆ. ಅದೇ ರೀತಿ ನೀವೂ ನೆಲದಡಿ ಕೇಬಲ್ ಅಳವಡಿಸಬೇಕು ಎಂದು ಬೆಸ್ಕಾಂ ಅಧಿಕಾರಿಗಳು ಸೂಚಿಸಿದ್ದರು. ಇದರಿಂದ ಕಾಮಗಾರಿ ವಿಳಂಬವಾಯಿತು ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್ (ಮೂಲಸೌಕರ್ಯ) ಶ್ರೀನಿವಾಸಮೂರ್ತಿ ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡರ ನಡುವೆ ವಾಗ್ವಾದ
ಮೇಲ್ಸೇತುವೆಗೆ ಹೊಸಕೆರೆಹಳ್ಳಿ ಪಟೇಲ್ ಚಿನ್ನಪ್ಪ ಅವರ ಹೆಸರಿಡಬೇಕೆಂದು ಎಂದು ಅವರ ಪುತ್ರ ಮಂಜುನಾಥ ಪಟೇಲ್ ನೀಡಿದ ಸಲಹೆಗೆ ಆಕ್ಷೇಪ ಕೇಳಿ ಬಂದಿದೆ.
ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂಪಕಾವತಿ ಅವರು ತಮ್ಮ ಪತಿ ಪತಿ ರಂಗಸ್ವಾಮಿ ಅವರ ಹೆಸರಿಡುವುದು ಸೂಕ್ತ ಎಂದಿದ್ದಾರೆ.
ರಂಗಸ್ವಾಮಿ ಅವರಿಂದ 4 ಎಕರೆ 20 ಗುಂಟೆ ಭೂಮಿ ಖರೀದಿಸಿ ಇಲ್ಲಿ ಲೇಔಟ್ ಮಾಡಲಾಗಿದೆ. ಬಿಡಿಎ ಹೊರವರ್ತುಲ ರಸ್ತೆ ನಿರ್ಮಾಣಕ್ಕೆ ಇದರ ಸ್ವಲ್ಪ ಭಾಗವನ್ನು ಸ್ವಾಧೀನಪಡಿಸಿಕೊಂಡಿತ್ತು

ಮೇಯರ್ ಸ್ಪಷ್ಟನೆ
ಇಲ್ಲಿನ ರಸ್ತೆಗೆ ಮಾತ್ರ ಪಟೇಲ್ ಚಿನ್ನಪ್ಪ ಅವರ ಹೆಸರಿಡುವ ಪ್ರಸ್ತಾವನೆ ಬಂದಿದೆ. ಮೇಲ್ಸೇತುವೆಗೆ ಯಾರ ಹೆಸರಿಡಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಚಿನ್ನಪ್ಪ, ರಂಗಸ್ವಾಮಿ ಕುಟುಂಬದವರು ಮನವಿ ಮಾಡಿದ್ದಾರೆ. ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು ಎಂದು ಮೇಯರ್ ಪದ್ಮಾವತಿ ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರು ಅಥವಾ ಮಹಾನ್ ಸಾಧಕರ ಹೆಸರನ್ನಿಡುವುದೇ ಸೂಕ್ತ ಎಂದು ಸ್ಥಳೀಯರು ಬೇಡಿಕೆ ಇಟ್ಟಿದ್ದಾರೆ.
-
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ












Click it and Unblock the Notifications