ರಾಜಕಾಲುವೆ ಒತ್ತುವರಿ ತೆರವಿನಲ್ಲೂ ಪ್ರಭಾವದ ಒಳಸುಳಿ
ಬೆಂಗಳೂರು, ಆಗಸ್ಟ್, 08: ರಾಜಕಾಲುವೆ ಒತ್ತುವರಿ ತೆರವಿನಲ್ಲೂ ಪ್ರಭಾವಿಗಳ ಒಳಸುಳಿ ಕಂಡುಬರುತ್ತಿದೆ. ಬಿಬಿಎಂಪಿ ಮತ್ತು ಕಂದಾಯ ಇಲಾಖೆ ನಡುವಿನ ಗೊಂದಲಗಳು ಜನರಿಗೆ ಮಾರಕವಾಗಿ ಪರಿಣಮಿಸಿದೆ. ಮಹದೇವಪುರ ವಲಯದ ಕಸವನಹಳ್ಳಿಯಲ್ಲಿ ತೆರವು ಕಾರ್ಯಾಚರಣೆ ವಿರೋಧಿಸಿದವರ ಮೇಲೆ ಪೊಲೀಸರು ಸೋಮವಾರ ಲಾಠಿ ಬೀಸಿದ್ದಾರೆ.
ರಾಜಾ ಕಾಲುವೆ ಒತ್ತುವರಿ ವಿಚಾರದಲ್ಲಿ ಬಿಬಿಎಂಪಿಯಲ್ಲೇ ಗೊಂದಲಗಳಿವೆ. ಸ್ಪಷ್ಟ ನಿರ್ದೇಶನ ಇಲ್ಲದಿರುವುದು, ತೆರವಿಗೆ ಮಾರ್ಕ್ ಮಾಡಿದ ಜಾಗದಲ್ಲಿ ಬದಲಾವಣೆ, ಒಮ್ಮೆ 5 ಮೀಟರ್ ಎಂದರೆ ಇನ್ನೊಮ್ಮೆ 7.5 ಮೀಟರ್ ತೆರವು ಮಾಡುತ್ತೇವೆ ಎಂದು ಹೇಳುವುದು.. ಈ ಬಗೆಯಾಗಿ ತೆರವು ಕಾರ್ಯಾಚರಣೆಯೇ ಗೊಂದಲದ ಗೂಡಾಗಿದೆ ಆದರೆ ಜೆಸಿಬಿ ಘರ್ಜನೆ ಮಾತ್ರ ನಿಂತಿಲ್ಲ. [ರಾಜಾ ಕಾಲುವೆ ಒತ್ತುವರಿ ತೆರವು ಸಮರ್ಥಿಸಿಕೊಂಡ ಸಿದ್ದರಾಮಯ್ಯ]
ಬಣ್ಣ ಬಳಿದ ವಿಡಿಯೋ ನೋಡಿ...
ರಾಜಾ ಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಬಿಬಿಎಂಪಿ ಶನಿವಾರದಿಂದ (ಆಗಸ್ಟ್ 06 ರಿಂದ) ನಡೆಸುತ್ತಿದೆ. ಬೊಮ್ಮನಹಳ್ಳಿ ವಲಯದ ಅವನಿ ಶೃಂಗೇರಿನಗರ, ಮಹದೇವಪುರ ವಲಯದ ಕಸವನಹಳ್ಳಿ ಹಾಗೂ ಯಲಹಂಕ ವಲಯದ ಶಿವನಹಳ್ಳಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ವಾಸ್ತವಿಕ ಸ್ಥಿತಿ ಹೇಗಿದೆ?. ತಮ್ಮ ಮನೆಯನ್ನು ಉಳಿಸಿಕೊಳ್ಳಲು ಪ್ರಭಾವಿಗಳು ಶಕ್ತಿ ಬಳಕೆ ಮಾಡುತ್ತಿದ್ದಾರೆಯೇ? ಮುಂದಕ್ಕೆ ಓದಿ...

ಮಾರ್ಕೆ ಬದಲಾಯಿತು!
ಭಾನುವಾರ ಬೆಳಗ್ಗೆ ಬಂದ ಅಧಿಕಾರಿಗಳು ಕಸವನಹಳ್ಳಿಯ ರಶ್ಮಿ ಎಂಬುವರ ಮನೆಯ ಎದುರಿನ ಗೋಡೆ ಮೇಲೆ 5 ಮೀಟರ್ ಎಂದು ಕೆಂಪು ಬಣ್ಣದಲ್ಲಿ ಬರೆದಿದ್ದರು. ಆದರೆ ಸೋಮವಾರ ಬೆಳಗ್ಗೆ ಮತ್ತೆ ಆಗಮಿಸಿದ ಅಧಿಕಾರಿಗಳು 5 ಕ್ಕೆ 2.4 ಮೀಟರ್ ಸೇರಿಸಿ ಅಂದರೆ 7.4 ಮೀಟರ್ ತೆರವು ಮಾಡುತ್ತೇವೆ ಎಂದು ಹೇಳಿದರು.

ಕಂದಾಯ ಇಲಾಖೆ ಕಡೆ ಕೈ ತೋರಿಸಿ!
ಈ ಬಗ್ಗೆ ಮನೆ ಮಾಲೀಕರು ಪ್ರಶ್ನೆ ಅಧಿಕಾರಿಗಳಿಗೆ ಮಾಡಿದರೆ ' ನಮಗೇನು ಗೊತ್ತಿಲ್ಲ, ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆ ವರದಿ ನೀಡಿದದಂತೆ ಮಾಡಿದ್ದೇವೆ' ಎಂದು ಉತ್ತರ ಹೇಳಿ ನುಣುಚಿಕೊಳ್ಳುವ ಯತ್ನ ಮಾಡಿದರು.

ಬಣ್ಣ ಬಳಿದರು!
ಎರಡು ಮನೆಗಳ ನಡುವೆ ರಾಜಾಕಾಲುವೆ ಹರಿದು ಹೋಗುವಂತೆ ಮಾರ್ಕ್ ಮಾಡಲಾಗಿತ್ತು. ಆದರೆ ತೆಲಗು ಮೂಲದ ಉದ್ಯಮಿಯೊಬ್ಬರ ಮನೆ ಒಳಗಿನ ಗೋಡೆಯ ಮೇಲೆ ಮಾಡಿದ್ದ ಮಾರ್ಕ್ ಗೆ ಬಣ್ಣ ಬಳಿಯಲಾಗಿತ್ತು.

ಆರೋಪದ ಸುರಿಮಳೆ
ಭರ್ಜರಿ ಮನೆ ಕಟ್ಟಿರುವ ಉದ್ಯಮಿ ತಮ್ಮ ಮನೆಯ ಜಾಗಕ್ಕೆ ತೊಂದರೆಯಾಗದಂತೆ ಮಾಡಲು ಪ್ರಭಾವ ಬಳಸಿ 2.4 ಮೀಟರ್ ಪಕ್ಕದ ಮನೆಯವರ ಜಾಗ ನಷ್ಟವಾಗುವಂತೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂತು. ಇದಕ್ಕೆ ಅಧಿಕಾರಿಗಳ ಬಳಿ ಬೇರೆಯದೇ ಉತ್ತರವಿತ್ತು.

ಜಾಗದಲ್ಲಿರದ ಮಾಲೀಕ
ತೆರವಿಗೆ ಒಳಗಾಗುತ್ತಿರುವ ಎಲ್ಲ ಮನೆಯ ಮಾಲೀಕರು ಜಾಗದಲ್ಲಿಯೇ ಇದ್ದರು. ಆದರೆ ಆಂಧ್ರ ಮೂಲದ ಟೈಲ್ಸ್ ಉದ್ಯಮಿ ಮಾತ್ರ ಕಾಣಲೇ ಇಲ್ಲ.

ಲಾಠಿ ಚಾರ್ಜ್
ಅಂತಿಮವಾಗಿ ಸೋಮವಾರ ಸಂಜೆ 5 ಗಂಟೆ ನಂತರ ಕಾರ್ಯಾಚರಣೆ ಮುಂದುವರಿಸಿದ ಬಿಬಿಎಂಪಿ ಉದ್ಯಮಿ ಮನೆಯ ಹಿಂಭಾಗವನ್ನು ಒಡೆಯಿತು. ಪಕ್ಕದ ರಶ್ಮಿ ಎಂಬುವರ ಮನೆಯ ಕಾಂಪೌಂಡ್ ಒಡೆಯಲು ಮುಂದಾದಾಗ ಅಡ್ಡಿ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಿದರು.












Click it and Unblock the Notifications