ಬೆಂಗಳೂರು: 4 ವಲಯ ಸೇರಿ 29 ಒತ್ತುವರಿ ತೆರವು, ಎಲ್ಲೆಲ್ಲಿ ಸರ್ವೇ ಕಾರ್ಯ ಪ್ರಗತಿ?
ಬೆಂಗಳೂರು, ಸೆಪ್ಟಂಬರ್ 15: ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆಯ ಒತ್ತುವರಿಗಳ ತೆರವು ಕಾರ್ಯಾಚರಣೆ ಶುಕ್ರವಾರವು ಮುಂದುವರೆಯಿತು. ಇದರಲ್ಲಿ ದಾಸರಹಳ್ಳಿ, ಯಲಹಂಕ, ಬೊಮ್ಮನಹಳ್ಳಿ ಹಾಗೂ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಒಟ್ಟು 29 ಕಡೆಗಳಲ್ಲಿ ಒತ್ತುವರಿ ತೆರವು ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ದಾಸರಹಳ್ಳಿ ವಲಯ ನೆಲಗದರನಹಳ್ಳಿ ರಸ್ತೆ ರುಕ್ಮಿಣಿ ನಗರದಲ್ಲಿ ಒತ್ತುವರಿಯಾಗಿದ್ದ 3 ಗುಂಟೆಗೂ ಹೆಚ್ಚು ಜಾಗದಲ್ಲಿನ 11 ಒತ್ತುವರಿ ತೆರವು ಮಾಡಲಾಯಿತು. ಇದರಲ್ಲಿ 4 ತಡೆಗೋಡೆ, 1 ಮೆಟ್ಟಿಲು ಜಾಗ, 1 ಶೌಚಾಲಯ, 1 ಎಲೆಕ್ಟ್ರಿಕಲ್ ಬಾಕ್ಸ್ ಕೊಠಡಿ ಒಳಗೊಂಡಿವೆ. ಇನ್ನು ರಾಜಕಾಲುವೆಯ ಮೇಲಿದ್ದ ಮನೆಯ ಮೂಲೆ ಭಾಗಗಳ ಒತ್ತುವರಿಗಳನ್ನು 1 ಜೆಸಿಬಿ ಹಾಗೂ 1 ಹಿಟಾಚಿ ಮೂಲಕ ತೆರವು ಮಾಡಿದ್ದೇವೆ. ಅಲ್ಲಿ ಸಂಗ್ರಹವಾದ ಕಟ್ಟಡ ಭಗ್ನಾವಶೇಷಗಳನ್ನು ಟ್ರ್ಯಾಕ್ಟರ್ ಗಳ ಮೂಲಕ ಬೇರೆಡೆ ಸ್ಥಳಾಂತರಿಸಲಾಗಿದೆ.
ಯಲಹಂಕ ವಲಯಲ್ಲಿ ಎರಡು ಒತ್ತುವರಿ ಗುರುತಿಸಲಾಗಿತ್ತು. ಕುವೆಂಪುನಗರ ವಾರ್ಡ್ ಸಿಂಗಾಪುರ ಲೇಔಟ್ ನಲ್ಲಿ ಸಿಂಗಾಪುರ ಕೆರೆ ಹಿಂಭಾಗದಲ್ಲಿರುವ ಲ್ಯಾಂಡ್ಮಾರ್ಕ್ ಅಪಾರ್ಟ್ಮೆಂಟ್ ನಿಂದ 2.4ಅಡಿ ಅಗಲ, 75 ಮೀಟರ್ ಉದ್ದದ ತೂಬುಗಾಲುವೆ ಒತ್ತುವರಿ ಆಗಿತ್ತು. ತೂಬುಗಾಲವೆ ಮೇಲ್ಭಾಗದಲ್ಲಿ ನಿರ್ಮಿಸಿದ್ದ ಸೆಕ್ಯೂರಿಟಿ ಕೊಠಡಿಯನ್ನು ಸಹ ತೆರವು ಮಾಡಿದ್ದೇವೆ.
ಸಿಂಗಾಪುರ ಕೆರೆಯ ಬಳಿ ಸರ್ವೇ ಸಂಖ್ಯೆ 95 ರಲ್ಲಿ ಮಳೆ ನೀರುಗಾಲುವೆ ಒತ್ತುವರಿ ಮಾಡಿ ಲೇಔಟ್ ನಿರ್ಮಿಸಿದ್ದರು. ಆ ಪ್ರದೇಶವನ್ನು ಪಾಲಿಕೆ ವಶಕ್ಕೆ ಪಡೆದಿದೆ ಎಂದು ಅಧಿಕಾರಿಗಳು ತಿಳಿಸಿದರು.
ಬೊಮ್ಮನಹಳ್ಳಿ ವಲಯ 11 ಒತ್ತುವರಿ ತೆರವು
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕೋಣನಕುಂಟೆ ವ್ಯಾಪ್ತಿಯ ಸರ್ವೇ ಸಂಖ್ಯೆ 29 ರಲ್ಲಿ 11 ಕಡೆ ಒತ್ತುವರಿ ಮಾಡಿಕೊಳ್ಳಲಾಗಿತ್ತು. 1 ಕಮರ್ಷಿಯಲ್ ಆರ್ಸಿಸಿ ಕಟ್ಟಡದ ಭಾಗಗಳು, 8 ಶೆಡ್ ಹಾಗೂ 2 ಜಿಂಕ್ ಶೀಟ್ ಶೆಡ್, 15 ಅಡಿ ಅಗಲ ಹಾಗೂ 330 ಅಡಿ ಉದ್ದದಷ್ಟು ರಾಜಕಾಲುವೆಯನ್ನು ಒತ್ತುವರಿ ಆಗಿರುವುದು ಬೆಳಕಿಗೆ ಬಂದಿತ್ತು. ಅದೆಲ್ಲವನ್ನು ತೆರವು ಮಾಡಿದ್ದು, ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಹೊಂಗಸಂದ್ರದಲ್ಲಿ 3 ಒತ್ತುವರಿಗಳ ಪೈಕಿ, 7.5 ಮೀಟರ್ ಜಾಗದಲ್ಲಿ 160 ಚ.ಅಡಿಯಷ್ಟು 1 ಕಟ್ಟಡ, 10 ಅಡಿಯ ಕಾಂಪೌಂಡ್ ಗೋಡೆ ಹಾಗೂ ಸಣ್ಣ ಶೆಡ್ ಅನ್ನು ತೆರವುಗೊಳಿಸಲಾಗಿದೆ. ಮಹದೇವಪುರ ವ್ಯಾಪ್ತಿಯಲ್ಲಿ ಎಪ್ಸಿಲಾನ್ ಹಿಂಭಾಗ ಮುನೇಶ್ವರ ದೇವಸ್ಥಾನದ ಬಳಿ ಚರಂಡಿಯ ಮೇಲೆ ಅನಧಿಕೃತವಾಗಿ ಅಳವಡಿಸಿದ್ದ ಸ್ಲ್ಯಾಬ್, ಮುನ್ನೆನಕೊಳಲು ಶಾಂತಿನಿಕೇತನ ಲೇಔಟ್ನಲ್ಲಿದ್ದ 2 ಒತ್ತುವರಿಗಳ ಶೆಡ್ಗಳನ್ನು ತೆರವುಗೊಳಿಸಲಾಗಿದೆ.
ಸರ್ವೇ ಕಾರ್ಯ ಚುರುಕು
ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಬರುವ ವಾಗ್ದೇವಿ ಲೇಔಟ್, ಮುನ್ನೇನಕೊಳಲು, ಕಸವನಹಳ್ಳಿ ಗ್ರಾಮ, ಎಬಿಕೆ ಗ್ರಾಮ, ಪ್ರೆಸ್ಟೀಜ್ ಟೆಕ್ ಪಾರ್ಕ್, ವಿಪ್ರೋ, ಸನ್ನಿ ಬ್ರೂಕ್ಸ್ ದೊಡ್ಡಕನ್ನಹಳ್ಳಿ, ಬೆಳ್ಳತ್ತೂರು ಗ್ರಾಮ, ಸದ್ರಮಂಗಲ ಗ್ರಾಮ, ಬೊಳ್ಳೆನಿನಿ ಸಾಸಾ ಅಪಾರ್ಟ್ಮೆಂಟ್ ಒಳಭಾಗ ಹಾಗೂ ಸಾಯಿಗಾರ್ಡನ್ ಲೇಔಟ್ ನಲ್ಲಿ ಪಾಲಿಕೆಯ ಅಧಿಕಾರಿಗಳು, ಭೂಮಾಪಕ ಇಲಾಖೆಯ ಅಧಿಕಾರಿಗಳು ಸರ್ವೇ ಕಾರ್ಯ ನಡೆಸಿ ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡುವ ಸಲುವಾಗಿ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.