Karnataka Rains: ಮುಂದಿನ 48 ಗಂಟೆ ರಣಮಳೆ: ಈ 08 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ಬೆಂಗಳೂರು, ಸೆಪ್ಟಂಬರ್ 27: ಕರ್ನಾಟಕ ರಾಜ್ಯದಲ್ಲಿ ಉತ್ತಮ ಮಳೆ ಮುನ್ಸೂಚನೆ ಇದೆ. ಈ ಪೈಕಿ ಒಳನಾಡು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಧಾರಾಕಾರ ಮಳೆ ಅಬ್ಬರಿಸಲಿದೆ. ಇಲ್ಲಿ ಗರಿಷ್ಠ 200 ಮಿಲಿ ಮೀಟರ್ ವರೆಗೂ ಮಳೆ ನಿರೀಕ್ಷೆ ಇರುವ ಕಾರಣಕ್ಕೆ ಹವಾಮಾನ ಇಲಾಖೆ 'ಆರೆಂಜ್ ಅಲರ್ಟ್' ನೀಡಿದೆ. ಕರಾವಳಿ ಭಾಗದ ಜಿಲ್ಲೆಗಳಲ್ಲೂ ಸಹ ಭಾರೀ ಮಳೆ ಬರಲಿದೆ ಎಂಬ ಮುನ್ಸೂಚನೆ ಇದೆ.
ರಾಜ್ಯದಲ್ಲಿ ಸೆಪ್ಟಂಬರ್ 17ರಿಂದ ಮಳೆ ಚುರುಕಾಗಿದೆ. ಒಳನಾಡಿನಲ್ಲಿ ಮಾತ್ರವೇ ಕಂಡು ಬರುತ್ತಿದ್ದ ಮಳೆ ಕರಾವಳಿಗೂ ವ್ಯಾಪಿಸಿತು. ಇಂದಿನಿಂದ ಎರಡು ದಿನ (ಸೆ.28ರವರೆಗೆ) ಉತ್ತರ ಒಳನಾಡಿನ ಜಿಲ್ಲೆಗಳಾದ ಕಲಬುರಗಿ, ಬೀದರ್ ಮತ್ತು ಯಾದಗಿರಿಯಲ್ಲಿ ಎರಡು ದಿನ ಮತ್ತು ಬಾಗಲಕೋಟೆ, ಗದಗ, ಕೊಪ್ಪಳ, ರಾಯಚೂರು, ವಿಜಯಪುರದಲ್ಲಿ ಇವತ್ತೊಂದು ದಿನ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಆಗಲಿದೆ. ಹವಾಮಾನ ಇಲಾಖೆ 'ಆರೆಂಜ್ ಅಲರ್ಟ್' ಘೋಷಿಸಿದೆ. ಮುಂದಿನ 48 ಗಂಟೆಗಳಲ್ಲಿ ಬಳ್ಳಾರಿ, ವಿಜಯನಗರದಲ್ಲೂ ಭಾರೀ ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ.

ಸೆಪ್ಟಂಬರ್ 29ರಂದು ಕಲಬುರಗಿ, ವಿಜಯಪುರ, ಚಿಕ್ಕಮಗಳೂರು, ಶಿವಮೊಗ್ಗ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಮಾತ್ರ ಸಾಧಾರಣದಿಂದ ಭಾರೀ ಮಳೆ ಆಗಲಿದ್ದು, ಅಂದು ಯೆಲ್ಲೋ ಅಲರ್ಟ್ ನೀಡಲಾಗಿದೆ. ಸೆಪ್ಟಂಬರ್ 29ಮತ್ತು 30ರ ಹೊತ್ತಿಗಾಗಲೇ ರಾಜ್ಯದಲ್ಲಿ ಮಳೆ ಅಬ್ಬರ ತಗ್ಗಲಿದೆ.
ಇನ್ನೂ ಅಕ್ಟೋಬರ್ 1 ರಿಂದ 3 ರವರೆಗೆ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮೂರು ದಿನ ಮತ್ತೆ ಮಳೆ ಸಕ್ರಿಯವಾಗುವ ಲಕ್ಷಣಗಳು ಇವೆ. ಈ ಮೂರು ದಿನ ಕರಾವಳಿ ಭಾಗಕ್ಕೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಈ ಮೂಲಕ ಮುಂದಿನ ವಾರಪೂರ್ತಿ ಮಳೆರಾಯನ ಆರ್ಭಟ ಕಂಡು ಬರುವುದು ಬಹುತೇಕ ಖಚಿತವಾಗಿದೆ. ಇಂದು ಮತ್ತು ನಾಳೆ ಒಳನಾಡಿನ ಜಿಲ್ಲೆಗಳ ಜನರು ಹೆಚ್ಚು ಎಚ್ಚರಿಕೆ ವಹಿಸಬೇಕಿದೆ.
ಬೆಂಗಳೂರಲ್ಲಿ ಮಬ್ಬು ವಾತಾವರಣ
ಬೆಂಗಳೂರಿನಲ್ಲಿ ಆಗಾಗ ಮಬ್ಬು ವಾತಾವರಣ ಕಂಡು ಬರುತ್ತಿದೆ. ಬಿಸಿಲಿನ ದರ್ಶನ ಸಹಿತ ಕೆಲವೆಡೆ ತುಂತುರು ಮಳೆ ಆಗಬಹುದು. ಇದರ ಹೊರತು ಎಲ್ಲಿಯೂ ವ್ಯಾಪಕ ಮಳೆ ಮುನ್ಸೂಚನೆ ಇಲ್ಲ. ನಗರದಲ್ಲಿ ಅಕ್ಟೋಬರ್ 02ರವರೆಗೂ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನೆನ್ನೆ ರಾಜ್ಯದಲ್ಲಿ ಮಳೆ ಆಗಿದ್ದೆಲ್ಲಿ?
ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆಯಾಗಿದ್ದು, ಸೆಪ್ಟೆಂಬರ್ 27ರ ಬೆಳಗ್ಗೆ 5.30 ಗಂಟೆಯವರೆಗೆ ದಾಖಲಾಗಿರುವ ಮಾಹಿತಿ ಪ್ರಕಾರ, ಮಂಗಳೂರು ವಿಮಾನ ನಿಲ್ದಾಣದಲ್ಲಿ 19.6 ಮಿ.ಮೀ, ಗದಗದಲ್ಲಿ 29.6 ಮಿಮೀ, ಕಲಬುರಗಿಯಲ್ಲಿ 67.6 ಮಿಮೀ ಹಾಗೂ ಚಿತ್ರದುರ್ಗದಲ್ಲಿ 2.7 ಮಿಮೀ ಮಳೆ ಆಗಿದೆ. AWS/ARG ಕೇಂದ್ರಗಳ ಮಾಹಿತಿಯ ಪ್ರಕಾರ, ಗೋರಿಕೊಪ್ಪಳ, 2.5 ಮಿಮೀ, ರದ್ದೇವಾಡಗಿ (ಕಲಬುರಗಿ) 51.0 ಮಿಮೀ, ತಿದಗುಂಡಿ (ವಿಜಯಪುರ) 47.5 ಮಿಮೀ, ಗಾಣಗಾಪುರ (ಕಲಬುರಗಿ) 67.0 ಮಿಮೀ, ಗಂಗಾವತಿ (ಕೊಪ್ಪಳ) 37.0 ಮಿಮೀ, ದಕ್ಷಿಣ ಕನ್ನಡ (ಮಂಗಳೂರು) 3.5 ಮಿಮೀ, ತಮಕ (ಕೋಲಾರ) 5.7 ಮಿಮೀ, ಹದರನಹಳ್ಳಿ (ಚಾಮರಾಜನಗರ) 17.5 ಮಿಮೀ, ಹಾಸನ 0.5 ಮಿಮೀ, ಮೂಡಿಗೇರೆಯ (ಚಿಕ್ಕಮಗಳೂರು) 9.5 ಮಿಮೀ, ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ) 2.0 ಮಿಮೀ, ಚಿಕ್ಕಬಳ್ಳಾಪುರ (ಬೆಂಗಳೂರು ಗ್ರಾಮಾಂತರ) 1.5 ಮಿಮೀ ಹಾಗೂ ಅಗುಂಬೆ (ಶಿವಮೊಗ್ಗ) 22.0 ಮಿಮೀ ಮಳೆಯಾಗಿದೆ ಎಂದು ಐಎಂಡಿ ವರದಿ ತಿಳಿಸಿದೆ.












Click it and Unblock the Notifications