ಐಎಂಎ ಹಗರಣ; 4 ಅಧಿಕಾರಿಗಳ ಹೆಸರು ಚಾರ್ಜ್ಶೀಟ್ನಲ್ಲಿ ಇಲ್ಲ!
ಬೆಂಗಳೂರು, ಸೆಪ್ಟೆಂಬರ್ 26 : ಬಹುಕೋಟಿ ರೂಪಾಯಿ ಐಎಂಎ ಹಗರಣದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಪ್ರಕರಣದ ತನಿಖೆಯನ್ನು ಕರ್ನಾಟಕ ಸರ್ಕಾರ ಸಿಬಿಐಗೆ ವಹಿಸಿದೆ. ಸಿಬಿಐ ಈ ಕುರಿತು ಚಾರ್ಜ್ ಶೀಟ್ ಸಲ್ಲಿಕೆಗೆ ಮುಂದಾಗಿದೆ.
ಹಗರಣದ ತನಿಖೆಯನ್ನು ಆರಂಭಿಸಿದಾಗ ಸಿಬಿಐ ಎಫ್ಐಆರ್ ದಾಖಲು ಮಾಡಿತ್ತು. ಎಫ್ಐಆರ್ನಲ್ಲಿದ್ದ 4 ಅಧಿಕಾರಿಗಳ ಹೆಸರು ಈಗ ಚಾರ್ಜ್ ಶೀಟ್ನಲ್ಲಿ ಇಲ್ಲದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿದ್ದ ವಿಜಯಶಂಕರ್, ಎಸಿ ಎಲ್. ಸಿ. ನಾಗರಾಜ್, ಬಿಡಿಎ ಇಂಜಿನಿಯರ್ ಪಿ. ಡಿ. ಕುಮಾರ್, ಗ್ರಾಮ ಲೆಕ್ಕಿಗ ಮಂಜುನಾಥ್ ಹೆಸರು ದೋಷಾರೋಪ ಪಟ್ಟಿಯಲ್ಲಿ ಕಾಣೆಯಾಗಿದೆ.

ನಾಲ್ವರು ಸರ್ಕಾರಿ ಅಧಿಕಾರಿಗಳ ಮೇಲೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕು. ಸಿಬಿಐ ಇನ್ನೂ ಅನುಮತಿಯನ್ನು ಪಡೆಯದ ಕಾರಣ ನಾಲ್ವರ ಹೆಸರು ಕೈ ಬಿಡಲಾಗಿದೆ.
ವಿಜಯಶಂಕರ್ ಐಎಎಸ್ ಅಧಿಕಾರಿಯಾಗಿದ್ದು ಅವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲು ರಾಷ್ಟ್ರಪತಿ, ಯುಪಿಎಸ್ಸಿಯ ಅನುಮತಿಯನ್ನು ಪಡೆಯಬೇಕು. ಅನುಮತಿಗಾಗಿ ಸಿಬಿಐ ಮನವಿಯನ್ನು ಸಲ್ಲಿಸಿದೆ. ಇನ್ನೂ ಒಪ್ಪಿಗೆ ಸಿಕ್ಕಿಲ್ಲ.
ಎಸಿ ನಾಗರಾಜ್, ಬಿಡಿಎ ಇಂಜಿನಿಯರ್ ಪಿ. ಡಿ. ಕುಮಾರ್, ಗ್ರಾಮ ಲೆಕ್ಕಿಗ ಮಂಜುನಾಥ್ ರಾಜ್ಯ ಸರ್ಕಾರಿ ನೌಕರರು. ಇವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ರಾಜ್ಯ ಸರ್ಕಾರದ ಒಪ್ಪಿಗೆ ಪಡೆಯಬೇಕಿದೆ. ಆದರೆ, ಇನ್ನೂ ಸರ್ಕಾರ ಅನುಮತಿ ನೀಡಿಲ್ಲ.
ಐಎಂಎ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ 25 ಜನರನ್ನು ಬಂಧಿಸಿ ವಿಚಾರಣೆ ನಡೆಸಿತ್ತು. ಈಗ ಚಾರ್ಜ್ಶೀಟ್ನಲ್ಲಿ 25 ಜನರ ಹೆಸರನ್ನು ಮಾತ್ರ ಸೇರಿಸಲಾಗಿದೆ. ಪ್ರಕರಣದ ತನಿಖೆ ಇನ್ನೂ ಮುಂದುವರೆದಿದೆ.












Click it and Unblock the Notifications