ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದರೆ ಕೇಂದ್ರದ ಯೋಜನೆಗಳು ಬಂದ್: ಕನ್ನಡಿಗರಿಗೆ ಜೆಪಿ ನಡ್ಡಾ ಎಚ್ಚರಿಕೆ!?
ಬೆಂಗಳೂರು, ಮೇ. 07: ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತೆ ವಿವಾದಿತ ಹೇಳಿಕೆ ನೀಡಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಭಾನುವಾರ ವಿಜಯನಗರದಲ್ಲಿ ಮಾತನಾಡಿರುವ ಅವರು 'ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಬಂದರೆ, ಕೇಂದ್ರದ ಯೋಜನೆಗಳು ಮುಂದುವರೆಯಲಿದೆ. ಸಿದ್ದರಾಮಯ್ಯ ಸರ್ಕಾರ ಬಂದರೇ ಯೋಜನೆಗಳಿಗೆ ಬ್ರೇಕ್ ಬೀಳಲಿದೆ' ಎಂದು ಹೇಳಿದ್ದಾರೆ.
ಹರಪ್ಪನಹಳ್ಳಿ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಜಿ. ಕರುಣಾಕರ ರೆಡ್ಡಿ ಪರ ರೋಡ್ ಶೋ ನಡೆಸಿದ ಬಳಿಕ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಜೆಪಿ ನಡ್ಡಾ, "ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರವನ್ನು ಬೆಂಬಲಿಸಿ, ಸಿದ್ದರಾಮಯ್ಯ ಸರ್ಕಾರ ಬಂದರೆ 'ಕಿಸಾನ್ ಸಮ್ಮಾನ್ ಯೋಜನೆ' ಸೇರಿ ಹಲವು ಯೋಜನೆಗಳು ಬಂದ್ ಆಗಲಿವೆ" ಎಂದು ಹೇಳಿಕೆ ನೀಡಿದ್ದಾರೆ.

ಜೆಪಿ ನಡ್ಡಾ ಭಾನುವಾರ ಹರಪ್ಪನಹಳ್ಳಿ ಮತ್ತು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದಾರೆ. "ಡಬಲ್ ಎಂಜಿನ್ ಸರ್ಕಾರ ಮುಂದುವರೆದರೆ ಪ್ರಧಾನ ಮಂತ್ರಿ ಅವಾಸ್ ಯೋಜನೆ ರಾಜ್ಯದಲ್ಲಿ ಮುಂದುವರೆಯುತ್ತದೆ. ಪ್ರಧಾನ ಮಂತ್ರಿ ಗರೀಬ್ ಅನ್ನ ಕಲ್ಯಾಣ ಯೋಜನೆ ಮುಂದುವರೆಯುತ್ತದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಪ್ರಯೋಜನ ಸಿಗುತ್ತದೆ. ಪ್ರತಿದಿನ ಮಕ್ಕಳಿಗೆ ಅರ್ಧ ಲೀಟರ್ ಹಾಲು ಸಿಗುತ್ತದೆ. ಒಂದು ವೇಳೆ ಸಿದ್ದರಾಮಯ್ಯನವರ ಸರ್ಕಾರ ಬಂದರೆ ಇವುಗಳಿಗೆ ಬ್ರೇಕ್ ಬೀಳುತ್ತದೆ" ಎಂದಿದ್ದಾರೆ ಎಂದು ಕನ್ನಡ ದಿನ ಪತ್ರಿಕೆ ಪ್ರಜಾವಾಣಿ ವರದಿ ಮಾಡಿದೆ.
"ಸಿದ್ದರಾಮಯ್ಯ ಸರ್ಕಾರ ಬಂದರೆ, ಕೇಂದ್ರದ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಬಂದ್ ಆಗಲಿದೆ. ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಮನೆ ಕೊಡುವುದು, ರಸ್ತೆಗಳ ದುರಸ್ತಿ ನಿಲ್ಲುತ್ತದೆ. ಹೊಸ ರಸ್ತೆಗಳ ನಿರ್ಮಾಣ ಕೆಲಸವಂತೂ ಮುಗಿದೇ ಹೋಗುತ್ತದೆ. ನಮ ವಿಕಾಸ ಮಾಡಬೇಕಾದರೆ, ವಿಕಾಸದ ಅಗತ್ಯ ಇದೆ ಎಂದಾದರೆ ಬಿಜೆಪಿ ಗೆಲ್ಲುವುದು ಅಗತ್ಯ" ಎಂದು ಜೆಪಿ ನಡ್ಡಾ ಹೇಳಿದ್ದಾರೆ.
ಮುಂದುವರಿದು, "ಕೊಳವೆಬಾವಿ, ಅರ್ಕಾವತಿ ಡಿನೋಟಿಫಿಕೇಷನ್, ಪಿಎಫ್ಐ, ಮಲಪ್ರಭಾ ನಾಲಾ ಯೋಜನೆ, ಸ್ಟೀಲ್ ಫ್ಲೆ ಓವರ್ ಕಾಮಗಾರಿ ಹಗರಣಗಳು ಸಿದ್ದರಾಮಯ್ಯ ಅವರ ಅವಧಿಯಲ್ಲಿಯೇ ಆಗಿವೆ. ಅವರೀಗ ಬಿಜೆಪಿ ವಿರುದ್ಧ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ" ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾ:ಇ ನಡೆಸಿದ್ದಾರೆ.

"ರಾಜ್ಯ ಬಿಜೆಪಿ ಸರ್ಕಾರ ದಲಿತರಿಗೆ ಒಳಮೀಸಲಾತಿ ಕೊಟ್ಟಿದೆ. ಪರಿಶಿಷ್ಟ ಪಂಗಡ, ಲಿಂಗಾಯತರು, ಒಕ್ಕಲಿಗರ ಮೀಸಲಾತಿ ಹೆಚ್ಚಳ ಮಾಡಿದೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈಗ ಬಿಜೆಪಿ ಸರ್ಕಾರ ಹೆಚ್ಚಿಸಿರುವ ಮೀಸಲಾತಿ ರದ್ದು ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ, ಇಂತಹವರಿಗೆ ಈ ಚುನಾವಣೆಯಲ್ಲಿ ಬುದ್ದಿ ಕಲಿಸಬೇಕು" ಎಂದು ಮತದಾರರಿಗೆ ಮನವಿ ಮಾಡಿದ್ದಾರೆ.
ನಡ್ಡಾ ಅವರ ಹೇಳಿಕೆಯ ವರದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. "ಕೇಂದ್ರದ ಜನ ವಿರೋಧಿ ,ಕನ್ನಡ ವಿರೋಧಿ, ನಂದಿನಿ ವಿರೋಧಿ ನೀತಿಗಳನ್ನು ಕಾಂಗ್ರೆಸ್ ವಿರೋಧಿಸಿ ರಾಜ್ಯ ಹಿತಾಸಕ್ತಿ ಕಾಪಾಡುತ್ತಾರೆ" ಎಂದು ಟ್ವಿಟ್ಟರ್ ಬಳಕೆದಾರರು ಬರೆದಿದ್ದಾರೆ.
ಮತ್ತೊಬ್ಬರು, "ಸಿದ್ದರಾಮಯ್ಯ ಟೈಮಲ್ಲಿ ಅಭಿವೃದ್ಧಿ ಚನ್ನಾಗೇ ಇತ್ತು. ಕೇಂದ್ರದ ಮೇಲೆ ಒತ್ತಡ ಹೇರಿ, ಜುಟ್ಟು ಹಿಡಿದು ಕೇಳೋ ಧೈರ್ಯ ವಿರೋಧ ಪಕ್ಷದವರಿಗಿರುತ್ತೆ. ಬಿಜೆಪಿಯವರು ತಮ್ಮ ಧಣಿ ಮುಂದೆ ನಡು ಬಗ್ಗಿಸಿ ನಿಲ್ಲುತ್ತಾರೆ" ಎಂದು ಕಿಡಿಕಾರಿದ್ದಾರೆ.
ಇನ್ನು, ಕರ್ನಾಟಕದ ಬಿಜೆಪಿ ಘಟಕವು ಬೆಂಗಳೂರಿನಲ್ಲಿ ಯುವತಿಯರಿಗಾಗಿ ವಿವಾದಾತ್ಮಕ ಹಿಂದಿ ಚಲನಚಿತ್ರ 'ದಿ ಕೇರಳ ಸ್ಟೋರಿ' ವಿಶೇಷ ಪ್ರದರ್ಶನವನ್ನು ಏರ್ಪಡಿಸಿದೆ. ಭಾನುವಾರ ರಾತ್ರಿ ಗರುಡಾ ಮಾಲ್ನಲ್ಲಿ ನಡೆಯುವ ಈ ಸ್ಕ್ರೀನಿಂಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಬೆಂಗಳೂರಿನ ಯುವತಿಯರು ಚಿತ್ರದ ಪ್ರದರ್ಶನಕ್ಕೆ ಹಾಜರಾಗುವಂತೆ ಒತ್ತಾಯಿಸಿದ್ದಾರೆ.












Click it and Unblock the Notifications