ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಪೊಲೀಸರಿಂದ ಶಾಂತಿ ಸಭೆ
ಬೆಂಗಳೂರು, ಆಗಸ್ಟ್ 09: ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನ ವಿವಾದ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಒಂದಾದ ಮೇಲೆ ಮತ್ತೊಂದು ಬೇಡಿಕೆಗಳು ಕೇಳಿಬರುತ್ತಿವೆ. ಆಸ್ತಿಯ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿ ಕಡೆಗೇ ಕಂದಾಯ ಇಲಾಖೆಗೆ ಸೇರಿದ ಆಸ್ತಿ ಎಂದು ಬಿಬಿಎಂಪಿ ಹೇಳಿತ್ತು.
ಇದೀಗ ಹಿಂದೂ ಸಂಘಟನೆಗಳು ಗಣೇಶ ಹಬ್ಬದ ಆಚರಣೆಗೆ ಮೈದಾನವನ್ನು ಕೇಳುತ್ತಿದ್ದು ಇದರಿಂದ ಕೋಮ ಸಾಮರಸ್ಯ ಹದಗೆಡುವ ಸಾಧ್ಯತೆಯಿದೆ ಎಂದು ಅರಿತ ಪೊಲೀಸ್ ಇಲಾಖೆ ಹಿಂದೂಗಳನ್ನು ಕರೆದು ಶಾಂತಿ ಸಭೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ಬೆಂಗಳೂರು ಆಸಿಡ್ ದಾಳಿ; ಆಗಸ್ಟ್ 10ಕ್ಕೆ ಚಾರ್ಜ್ಶೀಟ್ ಸಲ್ಲಿಕೆ
ಈದ್ಗಾ ಮೈದಾನದಲ್ಲಿ ಹಿಂದೂ ಸಂಘಟನೆಗಳು ಗಣೇಶ ಹಬ್ಬ ನಡೆಸಲು ಲೇಸರ್ ಶೋ ಏರ್ಪಡಿಸಲು ಅನುಮತಿಯನ್ನು ಕೇಳುತ್ತಿದ್ದಾರೆ. ಇದರೊಂದಿಗೆ ಕಂದಾಯ ಇಲಾಖೆಗೆ ಈದ್ಗಾ ಮೈದಾನದಲ್ಲಿರುವ ಗೋಡೆ ತೆರವಿಗೆ ಮನವಿಯನ್ನು ಮಾಡಲಾಗುತ್ತಿದೆ.
ಶಾಸಕ ಜಮೀರ್ ಅಹಮದ್ ಖಾನ್ ಸಹ ಸ್ವಾತಂತ್ರ್ಯೋತ್ಸವ, ಕನ್ನಡ ರಾಜ್ಯೋತ್ಸವ ಸೇರಿದಂತೆ ರಾಷ್ಟ್ರೀಯ ಹಬ್ಬಗಳ ಹೊರತು ಧಾರ್ಮಿಕ ಹಬ್ಬಗಳ ಆಚರಣೆಗೆ ಅವಕಾಶ ಮಾಡಿಕೊಡಲಾಗುವುದಿಲ್ಲ ಎಂದಿದ್ದರು. ಇದರಿಂದ ಹಿಂದೂ ಸಂಘಟನೆಗಳು ಕೆರಳಿದ್ದವು.
ಈದ್ಗಾ ಮೈದಾನ ಈ ಎಲ್ಲಾ ಕಾರಣದಿಂದಾಗ ಬೂದಿ ಮುಚ್ಚಿದ ಕೆಂಡದಂತಾಗಿದೆ. ಚಾಮರಾಜಪೇಟೆ ಪೊಲೀಸರು ಹಗಲು ರಾತ್ರಿ ಎನ್ನದೇ ಮೈದಾನದಲ್ಲಿ ಗಸ್ತು ಕಾಯುತ್ತಿದ್ದಾರೆ. ಈ ಕಾರಣದಿಂದಲೇ ಯಾವುದೇ ಕಾರಣಕ್ಕೂ ಕೋಮು ಸಾಮರಸ್ಯ ಹದಗೆಡಬಾರದು ಎಂದು ಹಿಂದೂ, ಮುಸ್ಲಿಂ ಮುಖಂಡರು ಮಾಜಿ ಪಾಲಿಕೆ ಸದಸ್ಯರು , ಸಂಘಟನೆಗಳನ್ನು ಸೇರಿಸಿ ಶಾಂತಿ ಸಭೆಯನ್ನು ನಡೆಸಲು ಪೊಲೀಸ್ ಇಲಾಖೆ ಮುಂದಾಗಿದೆ.
ಶಾಂತಿ ಸಭೆ ನಡೆಸಿದ ಪೊಲೀಸರು; ಈದ್ಗಾ ಮೈದಾನ ವಿಷಯಕ್ಕೆ ಸಂಬಂಧಿಸಿದಂತೆ ಮಂಗಳವಾರ ಪೊಲೀಸ್ ಇಲಾಖೆಯಿಂದ ಶಾಂತಿ ಸಭೆಯನ್ನು ನಡೆಸಲಾಯಿತು. ಒಂದು ಕಡೆ ಶಾಸಕ ಜಮೀರ್ ಹೇಳಿಕೆ ಖಂಡಿಸಿ ಹಿಂದು ಸಂಘಟನೆಗಳಿಂದ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದು ಕಡೆ ಹಿಂದು ಸಂಘಟನೆಗಳಿಂದ ಗಣೇಶೋತ್ಸವ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.
ಇವೆರಡರ ನಡುವೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಜವಾಬ್ದಾರಿ ಪೊಲೀಸ್ ಇಲಾಖೆಯದ್ದು.ಈ ಹಿನ್ನೆಲೆಯಲ್ಲಿ ಇಂದು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಸಲಾಗುವುದು. ಸಂಜೆ 4.30 ಕ್ಕೆ ಶಾಂತಿ ಸಭೆಯನ್ನು ಕರೆಯಲಾಗಿತ್ತು.
ಕನ್ನಡ ಪರ ಸಂಘಟನೆಗಳು, ಹಿಂದೂಪರ ಸಂಘಟನೆಗಳು, ಚಾಮರಾಜಪೇಟೆ ನಾಗರಿಕ ವೇದಿಕೆ ಸೇರಿದಂತೆ ಹಲವು ಸಂಘಟನೆಯ ಮುಖಂಡರು ಭಾಗಿಯಾಗಿದ್ದರು. ಸಭೆ ನೇತೃತ್ವವನ್ನು ಸ್ಥಳೀಯ ಡಿಸಿಪಿ, ಎಸಿಪಿ, ಇನ್ಸ್ಪೆಕ್ಟರ್ ವಹಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಇದರ ಜೊತೆಗೆ ಸೌಹಾರ್ದದಿಂದ ಈ ಬಾರಿ ಸ್ವಾತಂತ್ರ ದಿನಚಾರಣೆ ಆಚರಿಸಲು ಶಾಂತಿ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.
ಸಭೆಯ ಬಳಿಕ ಡಿಸಿಪಿ ಹೇಳಿದ್ದೇನು?; ಚಾಮರಾಜಪೇಟೆ ಠಾಣೆಯಲ್ಲಿ ಶಾಂತಿ ಸಭೆ ಬಳಿಕ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ "ಮೈದಾನ ಕಂದಾಯ ಇಲಾಖೆಯದ್ದು ಎಂದು ಆದೇಶ ಹೊರಬಿದ್ದಿದೆ. ಈ ಸಂಬಂಧ ಎರಡೂ ಸಮುದಾಯಗಳಿಂದ ವಿಭಿನ್ನ ಹೇಳಿಕೆ ಬರುತ್ತಿದ್ದವು. ಹೀಗಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ ನಡೆದುಕೊಳ್ಳುವಂತೆ ಮನವರಿಕೆ ಮಾಡಲಾಗಿದೆ. (ಆಗಸ್ಟ್ 10ಕ್ಕೆ) ಮತ್ತೊಂದು ಸಮುದಾಯದವರನ್ನು ಕರೆದು ಶಾಂತಿ ಸಭೆ ಕರೆಯಲಾಗುವುದು. ಸಭೆಯ ವಿಚಾರವನ್ನು ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗುವುದು. ಕಿಡಿಗೇಡಿಗಳು ಕಾನೂನು ಉಲ್ಲಂಘನೆ ಮಾಡಿದರೇ ಕಠಿಣ ಕ್ರಮದ ಎಚ್ಚರಿಕೆ" ನೀಡಲಾಗಿದೆ ಎಂದು ತಿಳಿಸಿದರು.
Recommended Video