ರಸ್ತೆ ವಿನ್ಯಾಸಕ್ಕಾಗಿ ಬೆಂಗಳೂರು ಜಿಬಿಎಗೆ ICI ಅಲ್ಟ್ರಾಟೆಕ್ ಪ್ರಶಸ್ತಿ!
ಬೆಂಗಳೂರಿನಲ್ಲಿ ರಸ್ತೆಗುಂಡಿ ಸಮಸ್ಯೆ ಹಾಗೂ ಬೆಂಗಳೂರಿನಲ್ಲಿ ರಸ್ತೆಗಳ ನಿರ್ವಹಣೆಯಲ್ಲಿ ಲೋಪವಾಗುತ್ತಿದೆ ಎನ್ನುವ ಆರೋಪಗಳ ನಡುವೆಯೇ ಗ್ರೇಟರ್ ಬೆಂಗಳೂರು ಆಡಳಿತಕ್ಕೆ ಮಹತ್ವದ ಪ್ರಶಸ್ತಿ ಸಿಕ್ಕಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರವು "ಭಾರತೀಯ ಕಾಂಕ್ರೀಟ್ ಸಂಸ್ಥೆ(ICI) - ಅಲ್ಟ್ರಾಟೆಕ್ ಪ್ರಶಸ್ತಿ" ಗೆ ಭಾಜನವಾಗಿದೆ. ಬೆಂಗಳೂರು ನಗರದ ಕೊರಮಂಗಲ ಪ್ರದೇಶದ 1ನೇ ಕ್ರಾಸ್ ಎಂಪೈರ್ ರಸ್ತೆ ಮತ್ತು 7ನೇ ಕ್ರಾಸ್ ರಸ್ತೆಗಳಲ್ಲಿ ಅನುಷ್ಠಾನಗೊಳಿಸಲಾದ ಥಿನ್ ವೈಟ್ ಟಾಪಿಂಗ್ (TWT) ಕಾಮಗಾರಿ ವಿನ್ಯಾಸ ಮತ್ತು ಅನುಷ್ಠಾನಕ್ಕೆ ಈ ಗೌರವ ಸಂದಿದೆ.
ಕೋರಮಂಗಲ ಪ್ರದೇಶದ ಒಳ ವರ್ತುಲ ರಸ್ತೆ (IRR)ಯ 1ನೇ ಕ್ರಾಸ್ ಎಂಪೈರ್ ರಸ್ತೆಯಿಂದ ಗಣಪತಿ ದೇವಸ್ಥಾನದ ವರೆಗೆ 1.1 ಕಿ.ಮೀ ಹಾಗೂ ಕೋರಮಂಗಲ 7ನೇ ಕ್ರಾಸ್ ಬಿಡಿಎ ಕಾಂಪ್ಲೆಕ್ಸ್ ನಿಂದದ ವಿಪ್ರೋ ಪಾರ್ಕ್ ಸಿಗ್ನಲ್ ವರೆಗೆ 1.17 ಕಿ.ಮೀ ಉದ್ದದ ರಸ್ತೆಗೆ ಹೊಸ ವಿನ್ಯಾಸದಲ್ಲಿ 125 ಮಿಮೀ ದಪ್ಪದ ವೈಟ್ ಟಾಪಿಂಗ್ ಅನ್ನು 2023 ರಲ್ಲಿ ಅನುಷ್ಠಾನಗೊಳಿಸಲಾಗಿತ್ತು.

ಮುಂದುವರಿದು, ಸಾಮಾನ್ಯವಾಗಿ ಬೆಂಗಳೂರು ನಗರದಲ್ಲಿ ವೈಟ್ ಟಾಪಿಂಗ್ ರಸ್ತೆಗಳಿಗೆ 180 ಎಂ.ಎಂ ದಪ್ಪವಿರುವ ವಿನ್ಯಾಸ ಬಳಸಲಾಗುತ್ತಿತ್ತು. ಇದೀಗ ಹೊಸ ಯೋಜನೆಯಲ್ಲಿ, ಜಿಬಿಎಯ (ಹಿಂದಿನ ಬಿಬಿಎಂಪಿ) ಅಭಿಯಂತರರ ತಂಡವು 125 ಮಿಮೀ ದಪ್ಪದ ಹೊಸ ವಿನ್ಯಾಸವನ್ನು ಯಶಸ್ವಿಯಾಗಿ ರೂಪಿಸಿ ಜಾರಿಗೊಳಿಸಿದೆ.
ಈ ವಿನ್ಯಾಸವು ತಾಂತ್ರಿಕತೆಯಿಂದ ಕೂಡಿರುವುದಷ್ಟೇ ಅಲ್ಲದೆ, ನಗರದ ಸರ್ವತೋಮುಖ ಬೆಳವಣಿಗೆಯಲ್ಲಿ ಹಲವು ಸವಾಲುಗಳಿಗೆ ಸಮರ್ಥವಾದ ಉತ್ತರವಾಗಿದ್ದು, ರಸ್ತೆಗಳ ಎತ್ತರ, ಮಳಿಗೆಗಳು ಹಾಗೂ ನಿವಾಸಗಳ ಪ್ರವೇಶ ಮತ್ತು ಮಳೆಯ ನೀರಿನ ಹರಿವಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಇದು ಪರಿಹಾರವಾಗಿದೆ. ಜೊತೆಗೆ ಈ ಯೋಜನೆ ಅನುಷ್ಠಾನದಿಂದ ಹಣದ ಉಳಿತಾಯವೂ ಆಗಲಿದೆ.
ಭಾರತೀಯ ಕಾಂಕ್ರೀಟ್ ಸಂಸ್ಥೆ(ICI) ನೀಡಿದ ಅಲ್ಟ್ರಾಟೆಕ್ ಪ್ರಶಸ್ತಿಯಿಂದ ನಗದಲ್ಲಿರುವ ಸವಾಲುಗಳನ್ನು ನವೀನ ರೀತಿ ಪರಿಹರಿಸುವಲ್ಲಿ ಜಿ.ಬಿ.ಎ ಯು ಯಶಸ್ವಿಯಾಗಲು ಸಾಕ್ಷಿಯಾಗಿದೆ. ಈ ಪ್ರಶಸ್ತಿಯು ಬೆಂಗಳೂರಿನ ನಾಗರಿಕರಿಗೆ ಬಲಿಷ್ಠ, ಕಡಿಮೆ ಖರ್ಚಿನ, ನಾಗರೀಕ ಸ್ನೇಹಿ ರಸ್ತೆ ಹಾಗೂ ಉತ್ತಮ ಮೂಲಸೌಕರ್ಯವನ್ನು ಒದಗಿಸುವ ನಿಟ್ಟಿನಲ್ಲಿ ಜಿ.ಬಿ.ಎ ಸದಾ ಬದ್ಧವಾಗಿದೆ ಎಂದು ಗ್ರೇಟರ್ ಬೆಂಗಳೂರು ಆಡಳಿತದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಂತ್ರಜ್ಞಾನದ ನವೀನತೆಗೆ ಶ್ಲಾಘನೆ: ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾದ ತುಷಾರ್ ಗಿರಿ ನಾಥ್, ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು, TWT ಯೋಜನೆ ಅನುಷ್ಠಾನಗೊಳಿಸಿದ ಎಂಜಿನಿಯರ್ ಅವರನ್ನು ಅಭಿನಂದಿಸಿ, ಅವರ ದೃಷ್ಟಿಕೋನ ಹಾಗೂ ತಂತ್ರಜ್ಞಾನದ ನವೀನತೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಯೋಜನೆಯು ಕೆಳಕಂಡ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಜಾರಿಗೆ ಬಂದಿದೆ:
* ಎಂ. ಲೋಕೇಶ್, ಮುಖ್ಯ ಎಂಜಿನಿಯರ್, ಜಿಬಿಎ. (ಥಿನ್ ವೈಟ್ ಟಾಪಿಂಗ್ ವಿನ್ಯಾಸದ ಮುಖ್ಯ ಶಿಲ್ಪಿ)
* ಹೇಮಲತಾ ಕೆ., ಅಧೀಕ್ಷಕ ಎಂಜಿನಿಯರ್.
* ಸತ್ಯನಾರಾಯಣ ರಾಜು ಎ., ಕಾರ್ಯಪಾಲಕ ಎಂಜಿನಿಯರ್.
* ವೀಣಾ ಸಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್
ಪಶಸ್ತಿ ಸ್ವೀಕಾರ: ಇನ್ನು ICI- ಅಲ್ಟ್ರಾಟೆಕ್ ಪ್ರಶಸ್ತಿಯನ್ನು ಮುಖ್ಯ ಎಂಜಿನಿಯರ್ ಆಗಿರುವ ಎಂ.ಲೋಕೇಶ್, ಅಧೀಕ್ಷಕ ಎಂಜಿನಿಯರ್ ಆಗಿರುವ ಹೇಮಲತಾ, ಇ.ಇ ಸತ್ಯನಾರಾಯಣ ರಾಜು ಹಾಗೂ ಎಇಇ ವೀಣಾ ರವರು ಸ್ವೀಕರಿಸಿದರು.
ಈ ವೇಳೆ ಐಸಿಐ (ಬೆಂಗಳೂರು ಕೇಂದ್ರ) ನ ಅಧ್ಯಕ್ಷರಾದ ಹೆಚ್.ಆರ್ ಗಿರೀಶ್, ಅಲ್ಟ್ರಾ ಟೆಕ್ ನ ರೀಜನಲ್ಹೆಡ್ (ಮಾರ್ಕೆಟಿಂಗ್) ರಾಘವೇಂದ್ರ ದೇಸಾಯಿ, ಐಸಿಐ ಕಾರ್ಯದರ್ಶಿಯಾದ ಡಾ: ಬಿ.ಎಸ್ ಸಂತೋಶ್ ಸೇರಿದಂತೆ ಹಲವರು ಇದ್ದರು.












Click it and Unblock the Notifications