ಕೆಪಿಸಿಸಿ ಹುದ್ದೆ ಬೇಡವೆಂದು ವರಿಷ್ಠರಲ್ಲಿ ಹೇಳಿದ್ದೇನೆ: ಜಾರಕಿಹೊಳಿ
ಬೆಂಗಳೂರು, ಜೂನ್ 16: ಕೆಪಿಸಿಸಿ ಜವಾಬ್ದಾರಿ ಬೇಡವೆಂದು ಈಗಾಗಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರ ಬಳಿ ಹೇಳಿದ್ದೇನೆ ಎಂದು ಅತೃಪ್ತ ಶಾಸಕರಲ್ಲೊಬ್ಬರಾದ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಆಗಿದ್ದ ಅವರು ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಳಗಾವಿಗೆ ಎರಡನೇ ದರ್ಜೆಯ ಸಚಿವ ಸ್ಥಾನ ಬೇಡವೆಂದು ಹೇಳಿದ ಅವರು, ನಾನೀಗ ಯಾವುದೇ ರೇಸ್ನಲ್ಲಿಲ್ಲ, ಆದರೆ ನಮ್ಮನ್ನು ನಂಬಿ ಬಂದಿದ್ದ ಶಾಕರಿಗೆ ನ್ಯಾಯ ಒದಗಿಸಬೇಕಿದೆ ಅದಕ್ಕಾಗಿ ಹೊರಾಡುತ್ತೇನೆ ಎಂದರು.

ನಮ್ಮನ್ನು ನಂಬಿ ಬಣಕ್ಕೆ ಬಂದಿದ್ದ ಕಾಂಗ್ರೆಸ್ ಶಾಸಕರಿಗೆ ನಿಗಮ ಮಂಡಳಿಗಳ ಸ್ಥಾನ ಕೊಡಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ನೇರವಾಗಿ ಹೇಳಿದ ಅವರು, ಪ್ರಭಾವಿ ಅಲ್ಲದ ಸಚಿವ ಸ್ಥಾನವನ್ನು ತಾವೇ ನಿರಾಕರಿಸಿದ್ದನ್ನು ಸೂಚ್ಯವಾಗಿ ಹೇಳಿದರು.
ಜಯಮಾಲಾ ಅವರಿಗೆ ಸಚಿವ ಸ್ಥಾನ ಹಾಗೂ ಸಭಾನಾಯಕಿ ನೀಡಿರುವದರಿಂದ ಉಂಟಾಗಿರುವ ಭಿನ್ನಾಭಿಪ್ರಾಯವನ್ನು ಹಿರಿಯರು ಶೀಘ್ರವಾಗಿ ಶಮನ ಮಾಡಬೇಕು ಎಂದು ಅವರು ಇದೇ ಸಮಯದಲ್ಲಿ ಹೇಳಿದರು.
ಸಚಿವ ಸ್ಥಾನ ಸಿಗದುದ್ದಕ್ಕೆ ಅಸಮಾಧಾನಗೊಂಡಿದ್ದ ಸತೀಶ್ ಜಾರಕಿಹೊಳಿ ಅವರು ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಇದೀಗ ಕೆಪಿಸಿಸಿ ಹುದ್ದೆಯನ್ನೂ ಬೇಡವೆನ್ನುತ್ತಿದ್ದಾರೆ.












Click it and Unblock the Notifications