ಅಪಹರಣದ ಕಥೆ ಹೆಣೆದ ಪತಿಯ ಹಂತಕಿ ಈಗ ಕಂಬಿಯ ಹಿಂದೆ
ಬೆಂಗಳೂರು, ಆಗಸ್ಟ್ 19: ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿದ್ದ ಮಂಜುಳಾ ಹಾಗೂ ಆಕೆಯ ಪ್ರಿಯಕರ ಆಂಜಿ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಎಜಿಎಸ್ ಲೇಔಟ್ ನಲ್ಲಿ ಕೃತ್ಯ ನಡೆದಿದ್ದು, ಕೊಲೆಯಾದವನ ಪತ್ನಿ ಮಂಜುಳಾ, ರಾತ್ರಿ ವೇಳೆ ಮೂವರು ಅಪರಿಚಿತರು ಬಂದು, ನನ್ನ ಗಂಡನನ್ನು ಹೊಡೆದು ಅಪಹರಿಸಿದ್ದಾರೆ ಎಂದು ಕಥೆ ಹೆಣೆದು, ಪೊಲೀಸರಿಗೆ ದೂರು ನೀಡಿದ್ದಳು.
ಪೊಲೀಸರು ವಿಚಾರಣೆ ತೀವ್ರಗೊಳಿಸುತ್ತಿದ್ದಂತೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಯುಗೇಂದ್ರ ನಾಯ್ಕನ ಪತ್ನಿ ಮಂಜುಳಾಗೆ 21 ವರ್ಷ ವಯಸ್ಸು. ಆಕೆ ಆಂಧ್ರದ ಅನಂತಪುರ ಜಿಲ್ಲೆಯ ಪೆಡಪಲ್ಲಿಯವಳು. ಆಕೆಗೆ ಆಂಜಿನೇಲು ಅಲಿಯಾಸ್ ಆಂಜಿ ಎಂಬಾತನ ಜೊತೆಗೆ ಅಕ್ರಮ ಸಂಬಂಧ ಇತ್ತು. ಅದಕ್ಕೆ ತನ್ನ ಗಂಡ ಅಡ್ಡಿಯಾಗುತ್ತಾನೆ ಎಂಬ ಕಾರಣಕ್ಕೆ ಪ್ರಿಯಕರ ಆಂಜಿಯ ಸಹಾಯದಿಂದ ಕೊಲೆ ಮಾಡಿದ್ದಳು.[ಒಂದು ಕೇಸಿನ ಬೆನ್ನಟ್ಟಿದರೆ 11ರಲ್ಲಿ ತಗಲಾಕಿಕೊಂಡರು]

ಯುಗೇಂದ್ರ ನಾಯ್ಕನ ತಲೆಗೆ ದೊಣ್ಣೆಯಿಂದ ಹೊಡೆದು, ಆ ನಂತರ ಕೈ-ಕಾಲುಗಳನ್ನು ವೇಲ್ ನಿಂದ ಕಟ್ಟಿ, ಬೆಡ್ ಶೀಟ್ ನಲ್ಲಿ ಸುತ್ತಿದ್ದರು. ಇಟ್ಟಮಡು ರಸ್ತೆ ರಾಜಕಾಲುವೆ ಪಕ್ಕದ ಪೊದೆಯಲ್ಲಿ ಶವವನ್ನು ಬಚ್ಚಿಟ್ಟಿದ್ದರು. ಆ ನಂತರ ಮಂಜುಳಾ, ಅಪಹರಣದ ಕಥೆ ಕಟ್ಟಿದ್ದಳು. ಈ ಮಾತನ್ನೇ ನಂಬಿದ ಯುಗೇಂದ್ರ ನಾಯ್ಕನ ಚಿಕ್ಕಪ್ಪನ ಮಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.[ಭಾಸ್ಕರ ಶೆಟ್ಟಿ ಹತ್ಯೆ: ಜ್ಯೋತಿಷಿ ನಿರಂಜನ್ ಭಟ್ ಅನ್ನೋ ಪ್ರಳಯಾಂತಕ]

ಪೊಲೀಸ್ ವಿಚಾರಣೆ ವೇಳೆ ಮಂಜುಳಾ ಬಾಯಿ ನೀಡಿದ ಸುಳಿವಿನ ಮೇಲೆ ಆಂಜಿನೇಲು ನಾಯ್ಕನನ್ನು ಬಂಧಿಸಲಾಗಿದೆ. ಕೃತ್ಯದ ವೇಳೆ ಬಳಸಿದ್ದ ಮೊಬೈಲ್ ಫೋನ್, ದೊಣ್ಣೆ, ರಕ್ತದ ಕಲೆಯಾಗಿದ್ದ ಚಾಪೆಯನ್ನು ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications