ಕಾರ್ಯಕರ್ತರ ಕಣ್ಣಲ್ಲಿ ಅಮರನಾದ ಅನಂತ ಕುಮಾರ್
ಬೆಂಗಳೂರು, ನವೆಂಬರ್ 12: ಸಂಘಟನಾ ಸಚಿವ ಸದಾ ನಗು ಮೊಗದ ಸಾಮಾನ್ಯ ಕಾರ್ಯಕರ್ತನಿಂದ ಕೇಂದ್ರ ಸಚಿವ ಹುದ್ದೆವರೆಗೆ ಹೋರಾಟದ ಮೂಲಕವೇ ಬೆಳೆದ ಕೇಂದ್ರ ಸಚಿವ ಅನಂತ ಕುಮಾರ್ ನಿಧನ ರಾಜ್ಯದ ಸಹಸ್ರಾರು ಕಾರ್ಯಕರ್ತರಲ್ಲಿ ದಿಗ್ಭ್ರಮೆ ಉಂಟುಮಾಡಿದ್ದು, ತಮ್ಮ ನೆಚ್ಚಿನ ನಾಯಕರನ್ನು ಕಳೆದುಕೊಂಡ ಕಾರ್ಯಕರ್ತರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.
ದೂರದ ಗ್ರಾಮ ಮಟ್ಟದಿಂದ ಹಿಡಿದು ಬೆಂಗಳೂರಿನ ವಿಧಾನಸೌಧದಲ್ಲಿ ಕುಳಿತ ಶಾಸಕರ ವರೆಗೂ ಬಿಜೆಪಿಯ ಪ್ರತಿಯೊಂದು ಹಂತದ ನಾಯಕರೊಂದಿಗೆ ನೇರ ಸಂಪರ್ಕ ಹೊಂದಿದ್ದ ಅನಂತ ಕುಮಾರ್ ನೆಚ್ಚಿನ ಕಾರ್ಯಕರ್ತರಿಗೆ ಹಾಗೂ ನಾಯಕರಿಗೆ ಅನಂತ ಕುಮಾರ್ ಜೀ ಆಗಿದ್ದರು.
ಸಾಮಾನ್ಯ ಕಾರ್ಯಕರ್ತನನ್ನೂ ಕ್ಯಾಬಿನೆಟ್ ದರ್ಜೆಯ ಸಚಿವರನ್ನೂ ಒಂದೇ ದೃಷ್ಟಿಯಿಂದ ನೋಡುತ್ತಿದ್ದ ಅನಂತ ಕುಮಾರ್ ಎಲ್ಲರ ಮುಖದಲ್ಲೂ ಎಲ್ಲರ ವ್ಯಕ್ತಿತ್ವದಲ್ಲೂ ಕೇವಲ ಬಿಜೆಪಿ ಎಂಬ ಏಕತೆಯನ್ನು ಪಕ್ಷದ ವಲಯದಲ್ಲಿ ಕಾಣುತ್ತಿದ್ದರು. ಸಾರ್ವಜನಿಕ ವಲಯದಲ್ಲಿ ಪಕ್ಷಾತೀತವಾಗಿ ದಣಿವರಿಯದ ನಾಯಕನಾಗಿದ್ದ ಅನಂತ ಕುಮಾರ್, ಪಕ್ಷದ ಕಾರ್ಯಕರ್ತರೂ ಹಾಗೂ ಮುಖಂಡರೊಂದಿಗೆ ಪಕ್ಷದ ಸರ್ವಸ್ವವೇ ಆಗಿದ್ದರು.
ಅನಂತ ಕುಮಾರ್ ಹಾಗೂ ಯಡಿಯೂರಪ್ಪ ನಡುವೆ ಪಕ್ಷದ ಏಕತೆಯೂ ವೈಯಕ್ತಿಕ ಭಿನ್ನತೆ ಇದ್ದರೂ ಕಾರ್ಯಕರ್ತರು ಮಾತ್ರ ಇಬ್ಬರು ನಾಯಕರನ್ನು ಒಂದೇ ತೂಕದಲ್ಲಿ ಕಾಣುತ್ತಿದ್ದುದು ಸುಳ್ಳಲ್ಲ.
ಹೀಗಾಗಿ ಅನಂತ ಕುಮಾರ್ ಕೂಡ ಪಕ್ಷದ ಎಲ್ಲ ಕಾರ್ಯಕರ್ತರು ಹಾಗೂ ಮುಖಂಡರನ್ನು ಏಕೋಭಾವದಿಂದ ಕಾಣುತ್ತಿದ್ದರು. ನಿನ್ನೆ ಮೊನ್ನೆಯ ವರೆಗೆ ಪಕ್ಷಕ್ಕೆ ಸೇರ್ಪಡೆಯಾದ ಕಿರಿಯ ಕಾರ್ಯಕರ್ತರನ್ನೂ ಪಕ್ಷದ ಅತ್ಯಂತ ಹಿರಿಯ ನಾಯಕರನ್ನೂ ಕೂಡ ಬಿಜೆಪಿ ಎಂಬ ಒಂದೇ ಒಂದು ಸಾಮ್ಯತೆ ಎಲ್ಲ ಹಂತದಲ್ಲೂ ಅನಂತ ಕುಮಾರ್ ಜೊತೆ ಬೆಸೆದುಕೊಂಡಿತ್ತು.
ತಮ್ಮ ರಾಜಕೀಯ ಜೀವನದ ಅರ್ಧ ಭಾಗವನ್ನು ಹುಬ್ಬಳ್ಳಿಯಲ್ಲೂ ಮತ್ತರ್ಧ ಭಾಗವನ್ನು ಬೆಂಗಳೂರಿನಲ್ಲೂ ಕಳೆದ ಅನಂತ ದಕ್ಷಿಣ ಹಾಗೂ ಉತ್ತರ ಕರ್ನಾಟಕದ ಬಿಜೆಪಿಗೆ ಬಾಂಧವ್ಯದ ಕೊಂಡಿಯಾಗಿದ್ದರು. ಮಾತ್ರವಲ್ಲ ಹಳೆ ಮೈಸೂರು ಭಾಗದಿಂದ ಕರ್ನಾಟಕದವರೆಗೆ ಪ್ರತಿ ಗ್ರಾಮದಲ್ಲೂ ವೈಯಕ್ತಿಕ ಪರಿಚಯವನ್ನು ಹೊಂದಿದ್ದರು. ಇದರ ಪರಿಣಾಮವಾಗಿಯೇ ಬಿಜೆಪಿಯಿಂದ ಬೆಳೆದುಬಂದ ನಾಯಕ ದೆಹಲಿ ಮಟ್ಟದಲ್ಲಿ ಪ್ರಭಾವಿ ರಾಜಕಾರಣಿಯಾಗಿ ಬೆಳೆದುಬಂದರು.
ಪ್ರಧಾನಿ ಮೋದಿ ಸರ್ಕಾರದಲ್ಲಿ ಮೋದಿ ನಂತರದ ಇಬ್ಬರು ಮೂವರು ನಾಯಕರ ಪೈಕಿ ಅನಂತ ಕುಮಾರ್ ಮುಂಚೂಣಿಯಲ್ಲಿದ್ದರು, ಇಷ್ಟೊಂದು ಎತ್ತರಕ್ಕೆ ಬೆಳೆದರೂ ಅನಂತ ಕುಮಾರ್ ಪಕ್ಷದ ಕಾರ್ಯಕರ್ತರೊಂದಿಗೆ ಯಾವತ್ತಿಗೂ ಅಂತರವನ್ನು ಕಾಯ್ದುಕೊಂಡಿರಲಿಲ್ಲ. ಅನಂತ ಕುಮಾರ್ ನಿಧನ ನಂತರ ಕಾರ್ಯಕರ್ತರ ಕಣ್ಣಲ್ಲಿ ಕಂಬನಿಯಾಗಿ ಹರಿದುಬರುತ್ತಿದೆ. ಯಾರು ಏನು ಹೇಳಿದರು ಎನ್ನುವುದನ್ನು ತಿಳಿದುಕೊಳ್ಳಲು ಮುಂದೆ ಓದಿ...

ಅನಂತ ಕುಮಾರ್ಗೆ ಇನ್ನಷ್ಟು ಆಯುಷ್ಯ ಕೊಡಬೇಕಿತ್ತು
ಅನಂತ ಕುಮಾರ್ ಅಗಲಿಕೆ ಸುದ್ದಿ ಆಘಾತ ತಂದಿದೆ. ಶ್ರೇಷ್ಠ ನಾಯಕರಾಗಿದ್ದರು. ಬಿಜೆಪಿಯನ್ನು ಬೇರುಮಟ್ಟದಿಂದ ಕಟ್ಟಿದವರು. ದೇಶಕ್ಕೆ ಅವರ ನಿಧನದಿಂದ ಆಘಾತ ಉಂಟಾಗಿದೆ. ಇದೊಂದು ಅನಿರೀಕ್ಷಿತ ಅಗಲಿಕೆ. ಯಾರೂ ನಿರೀಕ್ಷೆ ಮಾಡಿರಲಿಲ್ಲ. ಭಗವಂತ ಇನ್ನಷ್ಟು ಆಯಸ್ಸು ಕೊಡಬೇಕಿತ್ತು. -ಬಿ.ಎನ್.ಬಚ್ಚೇಗೌಡ, ಮಾಜಿ ಶಾಸಕ

ಸಹೋದರನನ್ನು ಕಳೆದುಕೊಂಡ ನೋವು ನನ್ನನ್ನು ಕಾಡುತ್ತಿದೆ
ನನ್ನ ಸಹೋದರನನ್ನೇ ಕಳೆದುಕೊಂಡ ನೋವು ನನ್ನನ್ನು ಕಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಹೆಸರೇ ಇಲ್ಲದ ಕಾಲದಲ್ಲಿ ಬಿಜೆಪಿ ಪಕ್ಷವನ್ನು ಗ್ರಾಮಮಟ್ಟದಿಂದ ಕಟ್ಟಿ ಬೆಳೆಸಿದ ನಾಯಕರು ಅನಂತಕುಮಾರ್. ಅವರು ಒಂದು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ ಆಗಲಿಲ್ಲ ಎಂಬ ನೋವು ನಮ್ಮನ್ನು ಕಾಡುತ್ತಿದೆ. ಇಂದು ಅವರನ್ನು ಭೇಟಿ ಮಾಡುವ ಕಾರ್ಯಕ್ರಮ ಇತ್ತು. ಆದರೆ ಇಂದೇ ಅವರು ಕೊನೆಯುಸಿರೆಳೆದ ಸುದ್ದಿ ಬಂತು- ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ

ಅಭಿವೃದ್ಧಿ ವಿಚಾರದಲ್ಲಿ ಚರ್ಚಿಸಿದ್ದೆ
ಅನೇಕ ಸಂದರ್ಭದಲ್ಲಿ ನಾನು ಅವರೊಂದಿಗೆ ಅಭಿವೃದ್ಧಿ ವಿಚಾರವಾಗಿ ಚರ್ಚಿಸಿದ್ದೇನೆ. ದೇಶಕ್ಕೆ, ರಾಜ್ಯಕ್ಕೆ ಅವರ ಕೊಡುಗೆ ಅಪಾರ. ದೆಹಲಿಯಲ್ಲಿ ಕರ್ನಾಟಕದ ಅಭಿವೃದ್ಧಿ ವಿಷಯವಾಗಿ ಮೂರು ದಶಖಗಳಿಂದ ದೇವೇಗೌಡರ ಜತೆ ಅನಂತಕುಮಾರ್ ಸಾಕಷ್ಟು ಶ್ರಮಿಸಿದ್ದಾರೆ.- ಟಿ.ಎ.ಶರವಣ, ಜೆಡಿಎಸ್ ಶಾಸಕ

ಕಷ್ಟಕಾಲದಲ್ಲಿ ಬಿಜೆಪಿಯನ್ನು ಕಟ್ಟಿದವರು ಅನಂತ ಕುಮಾರ್
ಕಷ್ಟಕಾಲದಲ್ಲಿ ಒಂದು ಎರಡು ಸೀಟುಗಳಿರುವಾಗ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು ಅನಂತ ಕುಮಾರ್, 2004ರಲ್ಲಿ ಬಿಜೆಪಿ ಸೇರಿಕೊಂಡಾಗ ಅವರ ಅಧ್ಯಕ್ಷತೆಯಿತ್ತು, ಆಗ 39 ಸ್ಥಾನವಿದ್ದ ಬಿಜೆಪಿಯನ್ನು 79 ಸ್ಥಾನಗಳಿಗೆ ತಂದು ನಿಲ್ಲಿಸಿದ್ದರು. ಕುಮಾರ್ ಬಂಗಾರಪ್ಪ

ಅನಾಥರನ್ನಾಗಿ ಮಾಡಿದ್ದಾರೆ
ಧೀಮಂತ ಕಾರ್ಯಕರ್ತರು. ಅನಾಥರನ್ನಾಗಿ ಮಾಡಿದ್ದಾರೆ. ನಮ್ಮಂಥ ಅನೇಕ ಕಾರ್ಯಕರ್ತರೊಂದಿಗೆ ಕುಟುಂಬದ ಸದಸ್ಯರಂತೆ ಬೆರೆಯುತ್ತಿದ್ದರು. ಎಲ್ಲಿಯೇ ಕಂಡರೂ ವೈಯಕ್ತಿಕವಾಗಿ ಕರೆದು ಮಾತನಾಡಿಸಿ, ಪಕ್ಷದ ಪರಿಸ್ಥಿತಿ ಬಗೆಗೆ ವಿಚಾರಿಸುತ್ತಿದ್ದರು. ತುಂಬಾ ಅಂತಃಕರಣದ ವ್ಯಕ್ತಿಯಾಗಿದ್ದರು -ಕಾರ್ಯಕರ್ತ











Click it and Unblock the Notifications