ಬೆಂಗಳೂರು; ಹೋಟೆಲ್ಗಳಲ್ಲಿ ಏಪ್ರಿಲ್ 1ರಿಂದ ದರ ಏರಿಕೆ
ಬೆಂಗಳೂರು, ಮಾರ್ಚ್ 18; ಅಡುಗೆ ಎಣ್ಣೆಯ ದರ ಏರಿಕೆಯ ಬಿಸಿ ಜನರ ಜೇಬಿಗೆ ನಿಧಾನವಾಗಿ ತಟ್ಟುತ್ತಿದೆ. ಏಪ್ರಿಲ್ 1ರಿಂದ ಇದರ ಬಿಸಿ ಇನ್ನೂ ಹೆಚ್ಚಲಿದೆ. ವಡೆ, ಪೂರಿ ಸೇರಿದಂತೆ ವಿವಿಧ ಆಹಾರ ಉತ್ಪನ್ನಗಳ ದರ ಹೋಟೆಲ್ಗಳಲ್ಲಿ ಶೇ 10ರಷ್ಟು ಏರಿಕೆಯಾಗಲಿದೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾದ ಬಳಿಕ ಅಡುಗೆ ಎಣ್ಣೆಯ ದರದಲ್ಲಿ ಏರಿಕೆಯಾಗಿದೆ. ತೈಲ ದಾಸ್ತಾನು ಕುಸಿತವಾಗಿದ್ದು, ವಿವಿಧ ಕಂಪನಿಗಳ ಅಡುಗೆ ಎಣ್ಣೆಯ ದರಗಳು ಭಾರೀ ಏರಿಕೆ ಕಂಡಿವೆ.
ಹೋಟೆಲ್ ಮಾಲೀಕರು ಅಡುಗೆ ಎಣ್ಣೆಯ ಬಳಕೆ ಕಡಿಮೆ ಮಾಡಲು ಊಟಕ್ಕೆ ಪೂರಿ ಬದಲು ಚಪಾತಿ ನೀಡಲು ಆರಂಭಿಸಿದ್ದರು. ಆದರೆ ವಡೆ, ಬಜ್ಜಿಗಳಿಗೆ ಎಣ್ಣೆ ಬಳಕೆ ಮಾಡಲೇಬೇಕು. ಆದ್ದರಿಂದ ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದ್ದಾರೆ.

ಬೆಂಗಳೂರು ನಗರ ಹೋಟೆಲ್ ಮಾಲೀಕರ ಸಂಘವು ಸಭೆ ನಡೆಸಿ ಅಡುಗೆ ಎಣ್ಣೆ ದರ ಏರಿಕೆ ಕುರಿತು ಚರ್ಚೆ ನಡೆಸಿದೆ. ಸಭೆಯಲ್ಲಿ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಆಹಾರ ಉತ್ಪನ್ನಗಳ ದರ ಏರಿಕೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.
ನಗರದ ಕೆಲವು ಹೋಟೆಲ್ಗಳಲ್ಲಿ ಕಳೆದ ವಾರದಿಂದಲೇ ವಡೆ, ಬಜ್ಜಿ, ಪೂರಿಗಳ ದರದಲ್ಲಿ ಏರಿಕೆ ಮಾಡಲಾಗಿದೆ. ಏಪ್ರಿಲ್ನಿಂದ ಇನ್ನೂ ಕೆಲವು ಉತ್ಪನ್ನಗಳ ದರಗಳಲ್ಲಿ ಏರಿಕೆಯಾಗುವುದು ಖಚಿತವಾಗಿದೆ. ಆದ್ದರಿಂದ ಗ್ರಾಹಕರು ಹೋಟೆಲ್ಗೆ ಹೋಗುವ ಮುನ್ನ ಜೇಬು ನೋಡಿಕೊಳ್ಳಬೇಕು.
ದರ ಏರಿಕೆ ಸಂಭವ; ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ದ ಇನ್ನೂ ಅಂತ್ಯಗೊಂಡಿಲ್ಲ. ಮಾರ್ಚ್ ಕೊನೆಯ ವಾರದಲ್ಲಿ ಅಡುಗೆ ಎಣ್ಣೆಯ ದರದಲ್ಲಿ ಮತ್ತಷ್ಟು ಏರಿಕೆ ನಿರೀಕ್ಷೆ ಮಾಡಲಾಗಿದೆ. ಇದರಿಂದಾಗಿ ಹೋಟೆಲ್ಗಳಲ್ಲಿ ದರ ಏರಿಕೆ ಅನಿವಾರ್ಯವಾಗಿದೆ.
ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ. ಸಿ. ರಾವ್ ಈ ಕುರಿತು ಮಾತನಾಡಿ, "ಊಟಕ್ಕೆ ಪೂರಿಯೇ ಬೇಕು ಎಂದು ಗ್ರಾಹಕರು ಬೇಡಿಕೆ ಇಡುತ್ತಿದ್ದಾರೆ. ಇಡ್ಲಿ, ವಡೆಗೆ ಬೇಡಿಕೆ ಕಡಿಮೆಯಾಗಿಲ್ಲ. ಸಂಜೆ ಪಕೋಡ, ಬೋಂಡಾ, ಬಜ್ಜಿ ಕೇಳುತ್ತಿದ್ದಾರೆ. ಇವುಗಳಿಗೆ ಎಣ್ಣೆ ಬಳಕೆ ಮಾಡಲೇಬೇಕು" ಎಂದರು.
"ಇಂದಿನ ಖಾದ್ಯ ತೈಲ ಬೆಲೆ ಏರಿಕೆಗೆ ತಕ್ಕಂತೆ ಆಹಾರ ಉತ್ಪನ್ನಗಳ ಬೆಲೆ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಉತ್ಪನ್ನಗಳ ದರಗಳು ಏರಿಕೆಯಾಗುವ ಸಂಭವವಿದೆ" ಎಂದು ಹೇಳಿದ್ದಾರೆ.
ಬೀದಿ ಬದಿ ದರ ಏರಿಕೆ; ಬೆಂಗಳೂರು ನಗರದಲ್ಲಿ ಬೀದಿ ಬದಿ ಬಜ್ಜಿ, ಬೋಂಡಾ ಮಾಡುವವರು ಈಗಾಗಲೇ ದರ ಏರಿಕೆ ಮಾಡಿದ್ದಾರೆ. 10 ರೂ.ಗೆ ಮೂರು ಬಜ್ಜಿ ಸಿಗುತ್ತಿದ್ದ ಕಡೆ ಈಗ 2 ಮಾತ್ರ ಸಿಗುತ್ತಿದೆ. ಅಡುಗೆ ಎಣ್ಣೆ ದರಗಳು ಇನ್ನು ಏರಿಕೆಯಾದರೆ ಬಿಸಿ-ಬಿಸಿ ಬಜ್ಜಿಯೂ ಕೈ ಸುಡಲಿದೆ.
ಚಿಕನ್ ಕಬಾಬ್, ಮೊಟ್ಟೆ ಬೋಂಡಾ, ಗೋಬಿ ಮಂಚೂರಿ ಮುಂತಾದವುಗಳ ದರಗಳಲ್ಲೂ ಏರಿಕೆಯಾಗಿದೆ. ಅಡುಗೆ ಎಣ್ಣೆಯ ದರವು ಹತೋಟಿಗೆ ಬಾರದಿದ್ದರೆ ಮುಂದಿನ ತಿಂಗಳು ಮತ್ತಷ್ಟು ಬೆಲೆ ಏರಿಕೆಯಾಗಲಿದೆ.
ಹೋಟೆಲ್ಗಳಲ್ಲಿ ಸನ್ ಫ್ಲವರ್ ರಿಫೈನ್ಡ್ ಆಯಿಲ್ ಬಳಕೆ ಮಾಡುವುದು ಹೆಚ್ಚು. ಆದರೆ ಹೋಟೆಲ್ಗಳ ಬೇಡಿಕೆಗೆ ಅನುಗುಣವಾಗಿ ಎಣ್ಣೆ ಲಭ್ಯವಿಲ್ಲ. 10 ಟಿನ್ಗೆ ಬೇಡಿಕೆ ಇಟ್ಟರೆ 5 ಟಿನ್ ಸಿಗುತ್ತಿದೆ. ಕಾಳಸಂತೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿ ಬೇಡಿಕೆ ಸೃಷ್ಟಿ ಮಾಡುತ್ತಿದ್ದರೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.
ಖಾದ್ಯ ತೈಲದ ಬೆಲೆಗಳು ಕೆಲವು ಕಡೆ ಕೆಲವು ರೀತಿ ಇದೆ. ಎಂಆರ್ಪಿಗಿಂತ ದುಬಾರಿಗೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಕೆಲವು ಮಾಲ್ಗಳಲ್ಲಿ ಇಷ್ಟು ಲೀಟರ್ ಮಾತ್ರ ಖರೀದಿ ಮಾಡಬೇಕು ಎಂದು ನಿರ್ಬಂಧ ಸಹ ಹಾಕಲಾಗಿದೆ.












Click it and Unblock the Notifications