ಭ್ರಷ್ಟ ಪೊಲೀಸ್ ಅಧಿಕಾರಿಗಳನ್ನು ಕಳಿಸಬೇಕಾದ ಜಾಗಕ್ಕೆ ಕಳಿಸುವೆ: ಗೃಹ ಸಚಿವರ ವಾರ್ನಿಂಗ್
ಬೆಂಗಳೂರು, ಆ. 18: "ಪೊಲೀಸ್ ಇಲಾಖೆಯ ಭ್ರಷ್ಟ ಅಧಿಕಾರಿಗಳ ಮೇಲೆ ಗೃಹ ಸಚಿವರ ಕಣ್ಣು ಬಿದ್ದಿದೆ. ರೌಡಿಗಳ, ಕ್ರಿಮಿನಲ್ಗಳ ಜತೆ ಸಂಪರ್ಕ ಇಟ್ಟುಕೊಂಡಿರುವ ಭ್ರಷ್ಟ ಪೊಲೀಸ್ ಅಧಿಕಾರಿಗಳ ಪಟ್ಟಿ ತಯಾರಿದೆ. ಅವರನ್ನು ಕಳಿಸಬೇಕಾದ ಜಾಗಕ್ಕೆ ಕಳುಹಿಸುತ್ತೇನೆ. ಪ್ರಾಮಾಣಿಕವಾಗಿ, ದಕ್ಷತೆಯಿಂದ ಕೆಲಸ ಮಾಡುವ ಪೊಲೀಸರಿಗೆ ಬೆನ್ನುತಟ್ಟಿ ಪ್ರೋತ್ಸಾಹ ನೀಡುತ್ತೇನೆ. ಪೊಲೀಸರ ವರ್ಗಾವಣೆ ನೀತಿಯಲ್ಲಿ ಎಲ್ಲವೂ ಸರಿ ಇದೆ ಎಂದು ನಾನು ಹೇಳಲ್ಲ. ಪಾರದರ್ಶಕ ವರ್ಗಾವಣೆ ನೀತಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ..."
ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಬುಧವಾರ ಭ್ರಷ್ಟ ಪೊಲೀಸ್ ಅಧಿಕಾರಿಗಳಿಗೆ ಎರಡನೇ ಸಲ ನೀಡಿರುವ ಎಚ್ಚರಿಕೆ ಗಂಟೆಯಿದು. ಬುಧವಾರ ನಗರದಲ್ಲಿ ಏರ್ಪಡಿಸಿದ್ದ ಕಳವು ಮಾಲು ಪ್ರದರ್ಶನ ಹಾಗೂ ಸಾರ್ವಜನಿಕರಿಗೆ ವಿತರಣಾ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಳೆದ ಆರು ತಿಂಗಳಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 27 ಕೆ.ಜಿ. ತೂಕದ ಚಿನ್ನಾಭರಣ ಹಾಗೂ 32 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಪ್ರದರ್ಶಿಸಲಾಗಿತ್ತು. ಹದಿನೆಂಟು ವಾರಸುದಾರರಿಗೆ ಗೃಹ ಸಚಿವರು ಸಾಂಕೇತಿಕವಾಗಿ ಚಿನ್ನಾಭರಣ ಹಿಂತಿರುಗಿಸಿದರು.

ಭ್ರಷ್ಟರಿಗೆ ಖಡಕ್ ವಾರ್ನಿಂಗ್
ನನ್ನ ಪೊಲೀಸ್ ಇಲಾಖೆ ನನ್ನ ಹೆಮ್ಮೆ. ಪೊಲೀಸರು ತುಂಬಾ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಚಿನ್ನಾಭರಣ ಕಳೆದುಕೊಂಡು ವಾಪಸು ಪಡೆದವರ ಕಣ್ಣಲ್ಲಿ ಖುಷಿ ಕಂಡೆ. ಪೊಲೀಸ್ ಇಲಾಖೆಯಲ್ಲಿ ಯಾರೋ ಒಬ್ಬರು ಮಾಡುವ ತಪ್ಪಿನಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಭ್ರಷ್ಟಾಚಾರದಲ್ಲಿ ತೊಡಗಿರುವ ಪೊಲೀಸರ ಮೇಲೆ ಮುಲಾಜಿಲ್ಲದೇ ಕ್ರಮ ಜರುಗಿಸುತ್ತೇನೆ. ಭ್ರಷ್ಟರನ್ನು ನಾನು ಯಾವ ಕಾರಣಕ್ಕೂ ಕ್ಷಮಿಸುವುದಿಲ್ಲ. ಅಪರಾಧಿಗಳಿಗೆ ನೆರವು ನೀಡುವ, ಭ್ರಷ್ಟಾಚಾರದಲ್ಲಿ ತೊಡಗಿರುವ ಪೊಲೀಸ್ ಅಧಿಕಾರಿಗಳನ್ನು ಎಲ್ಲಿಗೆ ಕಳಿಸಬೇಕೋ ಅಲ್ಲಿಗೆ ಕಳಿಸುತ್ತೇನೆ. ಈ ಕುರಿತ ಪಟ್ಟಿ ತಯಾರಿದೆ. ಇನ್ನು ಪೊಲೀಸರ ವರ್ಗಾವಣೆ ನೀತಿಯಲ್ಲಿ ಎಲ್ಲವೂ ಸರಿಯಿದೆ ಎಂದು ಹೇಳುವುದಿಲ್ಲ. ವರ್ಗಾವಣೆಯಲ್ಲಿ ಪಾರದರ್ಶಕತೆ ತರಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಖಡಕ್ ವಾರ್ನಿಂಗ್ ನೀಡಿದ್ದಾರೆ. ಆದರೆ ಯಾವ ಅಧಿಕಾರಿಗಳ ಹೆಸರು ಇದೆ ಎಂಬ ಗುಟ್ಟನ್ನು ಗೃಹ ಸಚಿವರು ಬಿಟ್ಟುಕೊಡಲಿಲ್ಲ.

ಅಫ್ಘಾನ್ ವಿದ್ಯಾರ್ಥಿಗಳ ರಕ್ಷಣೆ
ಗೃಹ ಇಲಾಖೆಯ ಮಾಹಿತಿ ಪ್ರಕಾರ, ರಾಜ್ಯದಲ್ಲಿ 339 ಮಂದಿ ಅಫ್ಘಾನಿ ಪ್ರಜೆಗಳಿದ್ದಾರೆ. ಅದರಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಅವರು ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುತ್ತಿದ್ದಾರೆ. ವೀಸಾ ಅವಧಿ ಮುಗಿದಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಅವರಿಗೆ ಮಾನವೀಯ ನೆಲೆಯಲ್ಲಿ ರಕ್ಷಣೆ ನೀಡಲಾಗುವುದು. ಅವರಿಗೆ ಅಗತ್ಯ ನೆರವು ನೀಡಲು ರಾಜ್ಯದ ಬೊಮ್ಮಾಯಿ ಸರ್ಕಾರ ಸಿದ್ಧವಿದೆ. ಅವರ ವೀಸಾ, ರಕ್ಷಣೆ ಕೇಂದ್ರ ಸರ್ಕಾರ ನೋಡಿಕೊಳ್ಳುತ್ತದೆ. ಅವರು ರಾಜ್ಯದಲ್ಲಿರುವ ಕಾರಣ ಅಗತ್ಯ ರಕ್ಷಣೆ ನೀಡುತ್ತೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅಭಯ ನೀಡಿದ್ದಾರೆ.

ಸಾರ್ವಜನಿಕರಿಗೆ 40 ಕೆ.ಜಿ ಚಿನ್ನ ವಿತರಣೆ
ಕಳೆದ ಆರು ತಿಂಗಳಲ್ಲಿ ವರದಿಯಾಗಿದ್ದ ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 40 ಕೆ.ಜಿ ಚಿನ್ನಾಭರಣಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದರು. ಪೊಲೀಸರ ಈ ರಿಕವರಿ ಕೆಲಸ ನೋಡಿ ನನಗೆ ಹೃದಯ ತುಂಬಿದೆ. ಅಷ್ಟೊಂದು ಕೇಸಿನಲ್ಲಿ 36 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮರಳಿಪಡೆದಿದ್ದಾರೆ. ನಾನು ಸೈಬರ್ ಪೊಲೀಸ್ ಠಾಣೆಗೂ ಹೋಗಿ ಬಂದಿದ್ದೇನೆ. ಸೈಬರ್ ಕ್ರೈಂ ಪ್ರಕರಣ ಪತ್ತೆ ಹಚ್ಚುವುದು ನೋಡಿದ್ರೆ ಖುಷಿ ಆಗುತ್ತದೆ. ಅಂತಾರಾಷ್ಟ್ರೀಯ ಪೊಲೀಸರು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ನಮ್ಮ ಬೆಂಗಳೂರು ಪೊಲೀಸರು 32 ಕೋಟಿ ರೂ.ಮೌಲ್ಯದ ಮಾದಕ ವಸ್ತುಗಳನ್ನು ಪ್ರದರ್ಶನ ಮಾಡಿದ್ದಾರೆ. ಅಪರಾಧ ಪ್ರಕರಣ ಪತ್ತೆ ಮಾಡೋದನ್ನು ಸಿನಿಮಾದಲ್ಲಿ ನೋಡುತ್ತಿದ್ದೆವು. ಈಗ ಕಣ್ಣ ಮುಂದೆ ನೋಡಿದೆ. ಅಂಬರ್ ಗ್ರೀಸ್ ಅನ್ನೋದು ನನಗೆ ಗೊತ್ತೇ ಇರಲಿಲ್ಲ. ಒಂದು ಕೆ.ಜಿ. ಅಂಬರ್ ಗ್ರೀಸ್ ಒಂದು ಕೋಟಿಯಂತೆ ಎಂದು ಗೃಹ ಸಚಿವರು ಅಚ್ಚರಿ ವ್ಯಕ್ತಪಡಿಸಿದರು.

ಗೃಹ ಸಚಿವರಿಂದ ಪೊಲೀಸರಿಗೆ ಪ್ರಶಂಸೆ
ಕೊಲೆ, ಸುಲಿಗೆ, ಕಳ್ಳತನ ಮತ್ತಿತರ ಅಪರಾಧ ಕೃತ್ಯಗಳನ್ನು ಪತ್ತೆ ಮಾಡಿದ 400 ಪೊಲೀಸರಿಗೆ 18 ಲಕ್ಷ ರೂ. ಬಹುಮಾನವನ್ನು ನೀಡಿದರು. ಕಳೆದ ಆರು ತಿಂಗಳಲ್ಲಿ 36 ಕೆ.ಜಿ. ಮಾದಕ ವಸ್ತುಗಳನ್ನು ರಿಕವರಿ ಮಾಡಿದ್ದಾರೆ. ಡ್ರಗ್ಸ್ ಯುವ ಜನಾಂಗವನ್ನು ಹಾಳು ಮಾಡುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ನಮ್ಮ ಪೊಲೀಸರು ಮಾದಕ ಜಾಲದ ವಿರುದ್ಧ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಅಫ್ಘಾನ್ ಪ್ರಜೆಗಳಿಗೆ ತೊಂದರೆ ಆದ್ರೆ ಸ್ಟೇಷನ್ಗೆ ಭೇಟಿ
ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಕಳವು ಮಾಲು ಪ್ರದರ್ಶನದಲ್ಲಿ 30 ಕೋಟಿ ರೂಪಾಯಿಗೂ ಅಧಿಕ ವಸ್ತು ಪ್ರದರ್ಶನ ಮಾಡಲಾಗಿದೆ. ಕಳೆದ ಆರು ತಿಂಗಳಿನಿಂದ ಈವರೆಗೆ ದಾಖಲಿಸಿರುವ ಪ್ರಕರಣಗಳ ಮಾಲನ್ನು ಪ್ರದರ್ಶಿಸಿದ್ದೇವೆ. ಅಫ್ಘಾನ್ ಪ್ರಜೆಗಳಿಗೆ ರಕ್ಷಣೆ ಕೊಡಲು ಪೊಲೀಸ್ ಇಲಾಖೆ ಇದೆ. ಯಾವುದೇ ತೊಂದರೆ ಆದರೂ ಅಫ್ಘಾನ್ ಪ್ರಜೆಗಳು ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಬೇಕು ಎಂದು ನಗರ ಪೊಲೀಸ್ ಆಯುಕ್ತ ಕಮಲಪಂತ್ ಭರವಸೆ ನೀಡಿದರು.












Click it and Unblock the Notifications