ನಿವೃತ್ತ ಇನ್ಸ್ಪೆಕ್ಟರ್ನಿಂದ ಲಂಚ ಪಡೆಯುತ್ತಿದ್ದ ಹೋಂಗಾರ್ಡ್ ಬಂಧನ
ಬೆಂಗಳೂರು, ನವೆಂಬರ್ 23: ಕರ್ನಾಟಕ ಗೃಹ ಇಲಾಖೆಗೆ ಸೇರಿದ ಗೃಹ ರಕ್ಷಕರೊಬ್ಬರು ಮಂಗಳವಾರ ಮಧ್ಯಾಹ್ನ ಹೋಟೆಲ್ ಒಂದರಲ್ಲಿ ನಿವೃತ್ತ ಪೊಲೀಸ್ ಇನ್ಸ್ಪೆಕ್ಟರ್ನಿಂದ 20,000 ರೂಪಾಯಿ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಅಶೋಕ್. ಕೆ. ವಿ ನೇತೃತ್ವದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಅಂಥೋನಿ ಜಾನ್ ನೇತೃತ್ವದ ತಂಡ ಗೃಹರಕ್ಷಕ ಸತೀಶನನ್ನು ಬಂಧಿಸಿದ್ದಾರೆ. ಬಾಕಿ ಉಳಿದಿರುವ ವೈದ್ಯಕೀಯ ಮೊತ್ತವನ್ನು ತೆರವುಗೊಳಿಸಲು ಸ್ವಯಂ ನಿವೃತ್ತಿಗೆ ಆಯ್ಕೆ ಮಾಡಿದ್ದ ಪೊಲೀಸ್ ಇನ್ಸ್ಪೆಕ್ಟರ್ ಪಿ ಎನ್ ಗಣೇಶ್ ಅವರಿಗೆ ಹೋಂಗಾರ್ಡ್ ಸತೀಶ್ 20,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಕಾರ್ಗಲ್: ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ, ಹಣಕ್ಕೆ ಬೆಂಕಿಯಿಟ್ಟ ಪಟ್ಟಣ ಪಂಚಾಯಿತಿ ಸದಸ್ಯ
ಹೋಂಗಾರ್ಡ್ ಸತೀಶನು ವಿಧಾನಸೌಧದ ಗೃಹ ಇಲಾಖೆಯ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬರ ಪರವಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಲೋಕಾಯುಕ್ತ ಪೊಲೀಸರು ಅಧಿಕಾರಿಯನ್ನು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಗಣೇಶ್ ಅವರು ಕೆಲವು ವರ್ಷಗಳ ಹಿಂದೆ ಸೇವೆಯಿಂದ ಸ್ವಯಂ ನಿವೃತ್ತಿಗೆ ಆಯ್ಕೆ ಮಾಡಿಕೊಂಡಿದ್ದರು.
2017 ರಲ್ಲಿ ಗಣೇಶ್ ಕೋಮಾಗೆ ಹೋಗಿದ್ದರು. ಅವರ ವೈದ್ಯಕೀಯ ಬಿಲ್ ಸುಮಾರು 9 ಲಕ್ಷ ರೂ. ಆಗಿತ್ತು. ಅದರಲ್ಲಿ 2 ಲಕ್ಷ ಮರುಪಾವತಿಗೆ ಸರ್ಕಾರ ಅನುಮೋದನೆ ನೀಡಿತ್ತು. ಈ ಹಣ ಬಿಡುಗಡೆ ಮಾಡಲು 20 ಸಾವಿರ ಲಂಚ ನೀಡುವಂತೆ ಸತೀಶ್ ಕೇಳಿದ್ದರು. ಆಗ ಅವರು ಗೃಹರಕ್ಷಕ ದಳದಲ್ಲಿ ಉಪ ಕಮಾಂಡೆಂಟ್ ಆಗಿದ್ದರು. ಅದೇ ವರ್ಷ ಅವರು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ತಮ್ಮ ವೈದ್ಯಕೀಯ ಬಿಲ್ಗಳನ್ನು ಸಲ್ಲಿಸಿದ್ದರು. ಅಂದಿನಿಂದ ಹಣ ಬಿಡುಗಡೆ ಮಾಡಿಸಿಕೊಳ್ಳಲು ಸಾಕಷ್ಟು ಓಡುತ್ತಿದ್ದರು.
ಲಂಚ ಕೊಡಲು ಒಪ್ಪದ ಇನ್ಸ್ಪೆಕ್ಟರ್ ಗಣೇಶ್ ಲೋಕಾಯುಕ್ತ ಪೊಲೀಸರ ಮೊರೆ ಹೋಗಿದ್ದರು. ಅವರ ಸೂಚನೆಯಂತೆ ಹಣವನ್ನು ತೆಗೆದುಕೊಂಡು ಮಧ್ಯಾಹ್ನ 3.30ರ ಸುಮಾರಿಗೆ ಹೋಟೆಲ್ ಪರಾಗ್ನಲ್ಲಿ ಸತೀಶನನ್ನು ಭೇಟಿಯಾಗಿದ್ದರು. ಆ ವೇಳೆ ಹೋಂಗಾರ್ಡ್ ಸತೀಶ ಲಂಚ ಪಡೆಯುತ್ತಿದ್ದಾಗ ಪೊಲೀಸರು ಆತನನ್ನು ಬಂಧಿಸಿ ಹಣ ವಶಪಡಿಸಿಕೊಂಡಿದ್ದಾರೆ.