ಬಸ್ ನಡಿ ಸಿಲುಕಿದ್ದ ಮೃತದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ
ಬೆಂಗಳೂರು, ಫೆಬ್ರವರಿ 06 : ಕೆಎಸ್ಆರ್ ಟಿಸಿ ಬಸ್ಸಿನ ಕೆಳಭಾಗಕ್ಕೆ ಸಿಲುಕಿಕೊಂಡು ಸುಮಾರು 70 ಕಿ,ಮೀ ದೂರದವರೆಗೂ ಬಂದಿದ್ದ ಮೃತದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ.
ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಆರೋಪಿ ಚಾಲಕನನ್ನು ಚನ್ನಪಟ್ಟಣ ಮತ್ತು ರಾಮನಗರದವರೆಗೂ ಕರೆದೊಯ್ದು ಪರಿಶೀಲನೆ ನಡೆಸಿದ್ದರೂ ಮೃತ ವ್ಯಕ್ತಿಯ ಗುರುತು ಮಾತ್ರ ಪತ್ತೆಯಾಗಿಲ್ಲ. ಚನ್ನಪಟ್ಟಣದಿಂದ ಹೊರಟಿದ್ದ ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಸುಮಾರು30 ರಿಂದ 40 ವರ್ಷದೊಳಗಿನ ವ್ಯಕ್ತಿಯೊಬ್ಬನ ಮೃತದೇಹ ಬಸ್ಸಿನ ಕೆಳ ಭಾಗಕ್ಕೆ ಸಿಲುಕಿಕೊಂಡಿತ್ತು. ಅದೇ ಸ್ಥಿತಿಯಲ್ಲಿ ಬಸ್ ಸುಮಾರು 70 ಕಿ.ಮೀ ತಲುಪಿತ್ತು. ಡಿಪೋದಲ್ಲಿ ಪರಿಶೀಲನೆ ನಡೆಸಿದಾಗ ಬಸ್ಸಿನ ಆಕ್ಸೆಲ್ ಗಳ ನಡುವೆ ಮೃತದೇಹ ಸಿಕ್ಕಿಕೊಂಡಿರುವುದು ಪತ್ತೆಯಾಗಿತ್ತು.
ಶವವನ್ನು 70 ಕಿ.ಮೀ ಎಳೆದುಕೊಂಡು ಹೋದ ಬಸ್ ಚಾಲಕ
ಪ್ರಕಣ ದಾಖಲಿಸಿಕೊಂಡ ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ನಿರ್ಲಕ್ಚ್ಯ ಆರೋಪದ ಮೇಲೆ ಬಸ್ಸಿನ ಚಾಲಕ ಮೊಯಿನುದ್ದೀನ್ ನ್ನು ಬಂಧಿಸಿದ್ದಾರೆ. ಚನ್ನಪಟ್ಟಣ ಸಮೀಪ ಏನೋ ಶಬ್ದ ಕೇಳಿಸಿತು. ಆದರೆ ಬಸ್ ನಿಂದ ಕೆಳಗಿಳಿದು ಪರೀಕ್ಷಿಸಲಿಲ್ಲ. ಅದೇ ಜಾಗದಲ್ಲಿ ಮೃತದೇಹ ಸಿಕ್ಕಿಹಾಕಿಕೊಂಡಿರಬಹುದು ಎಂದು ವಿಚಾರಣೆ ವೇಳೆ ಚಾಲಕ ತಿಳಿಸಿದ್ದಾನೆ.
ಆದರೆ ಬಸ್ಸಿಗೆ ಸಿಕ್ಕಿಕೊಂಡಿದ್ದು ಮೃತದೇಹವೇ ಅಥವಾ ಜೀವಂತ ವ್ಯಕ್ತಿಗೆ ಅಪಘಾತ ಮಾಡಿ 70 ಕಿ.ಮೀ ವರೆಗೂ ಎಳದುಕೊಂಡು ಬರಲಾಗಿದೆಯೇ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ದೊರೆತಿಲ್ಲ.