ಅಲ್ಲಾಹ್ ಹು ಅಕ್ಬರ್ ಕೂಗಿದ ವಿದ್ಯಾರ್ಥಿನಿ: 'ಆಕೆ ಪ್ರಚೋದನೆಗೊಂಡಿದ್ದೇಕೆ' ಎಂದ ಶಿಕ್ಷಣ ಸಚಿವ
ಬೆಂಗಳೂರು, ಫೆಬ್ರವರಿ 09: ಕೇಸರಿ ಶಾಲು ತೊಟ್ಟ ವಿದ್ಯಾರ್ಥಿಗಳು ನಿನ್ನೆ ಜೈ ಶ್ರೀ ರಾಮ್ ಎಂದು ಕೂಗಿದಾಗ ಅದಕ್ಕೆ ಪ್ರತಿಯಾಗಿ ಬುರ್ಖಾ ತೊಟ್ಟಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಅಲ್ಲಾ ಹು ಅಕ್ಬರ್ ಎಂದು ಕೂಗಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, "ಆಕೆ ಪ್ರಚೋದನೆಗೊಂಡಿದ್ದೇಕೆ" ಎಂದು ಪ್ರಶ್ನೆ ಮಾಡಿದ್ದಾರೆ.
"ಅವರಿಗೆ ಹುಡುಗಿಯನ್ನು ಘೇರಾವ್ ಮಾಡಲು ಇಷ್ಟವಿರಲಿಲ್ಲ. ಆದರೆ ಅವಳು ಕೂಗಿದಾಗ ಅವರು ಹಾಗೆ ಮಾಡಿದ್ದಾರೆ. ಆಕೆ ಅಲ್ಲಾ-ಹು-ಅಕ್ಬರ್ ಎಂದು ಕೂಗುತ್ತಿದ್ದಾಗ, ಅವಳ ಸುತ್ತಲೂ ಒಬ್ಬ ವಿದ್ಯಾರ್ಥಿಯೂ ಇರಲಿಲ್ಲ. ಆಕೆ ಏಕೆ ಕಾಲೇಜು ಕ್ಯಾಂಪಸ್ನಲ್ಲಿ ಅಲ್ಲಾ-ಹು-ಅಕ್ಬರ್ ಎಂದು ಕೂಗಿ ಪ್ರಚೋದನೆ ನೀಡಿದ್ದು," ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕೇಳಿದ್ದಾರೆ.
"ನಾವು ಕ್ಯಾಂಪಸ್ನಲ್ಲಿ 'ಅಲ್ಲಾ-ಹು-ಅಕ್ಬರ್' ಆಗಲಿ ಅಥವಾ 'ಜೈ ಶ್ರೀ ರಾಮ್' ಆಗಲಿ, ಯಾವುದೇ ಘೋಷಣೆಯನ್ನು ಒಪ್ಪುವುದಿಲ್ಲ," ಎಂದು ಕೂಡಾ ಇದೇ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. "ಕಾನೂನು ಸುವ್ಯವಸ್ಥೆಯನ್ನು ಯಾರೂ ಕೈಗೆ ತೆಗೆದುಕೊಳ್ಳುವಂತಿಲ್ಲ, ಯಾವುದೇ ದುಷ್ಕರ್ಮಿಗಳನ್ನು ಸರಕಾರ ಬಿಡುವುದಿಲ್ಲ," ಎಂದು ಎಚ್ಚರಿಕೆಯನ್ನು ಕೂಡಾ ನೀಡಿದ್ದಾರೆ.

ವ್ಯಾಪಕ ವೈರಲ್ ಆದ ವಿಡಿಯೋ
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಬಳಕೆ ಕುರಿತು ತೀವ್ರ ಗದ್ದಲದ ನಡುವೆ ನಿನ್ನೆ ಮಂಡ್ಯದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಘರ್ಷಣೆಯ ವಿಡಿಯೊಗಳನ್ನು ವ್ಯಾಪಕವಾಗಿ ವೈರಲ್ ಆಗುತ್ತಿದೆ. ಮಂಡ್ಯದ ಪಿಇಎಸ್ ಕಾಲೇಜಿನ ಬಳಿ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಎದುರು ಕೆಲವು ಹುಡುಗರು ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದ್ದರು. ಇದಕ್ಕೆ ಪ್ರತಿರೋಧವಾಗಿ ವಿದ್ಯಾರ್ಥಿನಿಯು ಅಲ್ಲಾ ಹು ಅಕ್ಬರ್ ಎಂಬ ಘೋಷಣೆ ಕೂಗಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಆಕೆಯ ಹಿಂದಿಂದೆ ಬಂದು ಜೈ ಶ್ರೀರಾಮ್ ಘೋಷಣೆ ಕೂಗಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಆಕೆ "ಅಲ್ಲಾ-ಹು-ಅಕ್ಬರ್!" ಎಂದು ಕೂಗುತ್ತಾ ನಡೆಯುತ್ತಾ ಮುಂದೆ ಸಾಗಿದ್ದಾಳೆ.
ಕೆಲವೇ ನಿಮಿಷಗಳಲ್ಲಿ, ಕಾಲೇಜು ಅಧಿಕಾರಿಗಳು ಆಕೆಯ ಸಮೀಪಕ್ಕೆ ಬಂದಿದ್ದು, ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಮುಸ್ಕಾನ್, "ನಾನು ಬುರ್ಖಾ ಧರಿಸಿದ್ದಕ್ಕಾಗಿ ಅವರು ನಾನು ಕಾಲೇಜಿಗೆ ಪ್ರವೇಶಿಸಿದಾಗ ಅವಕಾಶ ನೀಡಿಲ್ಲ. ನನ್ನನ್ನು ನೋಡಿ ಜೈ ಶ್ರೀ ರಾಮ್ ಎಂದು ಕೂಗಲು ಪ್ರಾರಂಭಿಸಿದರು. ಹಾಗಾಗಿ ನಾನು ಅಲ್ಲಾ ಹು ಅಕ್ಬರ್ ಎಂದು ಕಿರುಚಲು ಪ್ರಾರಂಭಿಸಿದೆ. ನನಗೆ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಬೆಂಬಲ ನೀಡಿದ್ದಾರೆ. ನನ್ನನ್ನು ಅವರು ರಕ್ಷಣೆ ಮಾಡಿದ್ದಾರೆ," ಎಂದು ತಿಳಿಸಿದ್ದಾರೆ.
ಮುಸ್ಕಾನ್ಗೆ ಐದು ಲಕ್ಷ ಘೋಷಣೆ
ಇನ್ನು ತನ್ನ ಹಿಂದೆಯೇ ಜೈ ಶ್ರೀ ರಾಮ್ ಎಂದು ಕೂಗುತ್ತಾ ಬಂದವರು ಈ ಕಾಲೇಜಿನವರು ಅಲ್ಲ. ಅವರು ಹೊರಗಿನವರು ಎಂದು ಕೂಡಾ ವಿದ್ಯಾರ್ಥಿನಿ ಹೇಳಿದ್ದಾರೆ. ಆ ಗುಂಪಿನಲ್ಲಿದ್ದ ಶೇಕಡ 10 ರಷ್ಟು ಮಂದಿ ಮಾತ್ರ ಈ ಕಾಲೇಜಿನವರು ಎಂದು ಮುಸ್ಕಾನ್ ತಿಳಿಸಿದ್ದಾರೆ. ಈ ನಡುವೆ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದದ ನಡುವೆ ಮಂಡ್ಯದಲ್ಲಿ ಅಲ್ಲಾ ಹು ಅಕ್ಬರ್ ಎಂದು ಹುಡುಗರ ಮುಂದೆ ಕೂಗಿದ ಪಿಇಎಸ್ ಕಾಲೇಜು ವಿದ್ಯಾರ್ಥಿನಿ ಮುಸ್ಕಾನ್ ಖಾನ್ಗೆ ಜಮಾತ್ ಉಲೆಮಾ-ಎ-ಹಿಂದ್ 5 ಲಕ್ಷ ರೂ. ಬಹುಮಾನ ಘೋಷಿಸಿದೆ. ಮುಸ್ಕಾನ್ ಖಾನ್ ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆಗಿರುವುದರ ಮಧ್ಯೆ ಜಮಾತ್ ಉಲೆಮಾ-ಎ-ಹಿಂದ್ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಟ್ವೀಟ್ ಮಾಡಿದೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications